ಮಲೆನಾಡು, ಪಶ್ಚಿಮ ಘಟ್ಟದಲ್ಲಿ ಮಹಾಮಳೆ

ಶಿವಮೊಗ್ಗ, ಸೆ.20- ಕಳೆದ ಎರಡು ದಿನಗಳಿಂದ ಮಲೆನಾಡು ಮತ್ತು ಪಶ್ಚಿಮ ಘಟ್ಟದಲ್ಲಿ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಜನಜೀವನ ತತ್ತರಗೊಂಡಿದೆ.

ಭದ್ರಾ ಜಲಾಶಯಕ್ಕೆ 62 ಸಾವಿರ ಕ್ಯೂಸೆಕ್ಸ್‌ ಒಳಹರಿವು ಇದ್ದು, 55 ಸಾವಿರ ಕ್ಯೂಸೆಕ್ಸ್‌ ನೀರನ್ನು ನದಿಗೆ ಬಿಡಲಾಗಿದೆ.

ಬೆಳಿಗ್ಗೆ 10 ಸಾವಿರ ಕ್ಯೂಸೆಕ್ಸ್‌ ನೀರನ್ನು ನದಿಗೆ ಬಿಡಲಾಗಿತ್ತು. ನಂತರ 30 ಸಾವಿರದಿಂದ 45 ಸಾವಿರಕ್ಕೆ, ಮಧ್ಯಾಹ್ನ 55 ಸಾವಿರಕ್ಕೆ ಹೆಚ್ಚಿಸಲಾಯಿತು. ಭದ್ರಾವತಿ ಸೇತುವೆ ಮುಳುಗಡೆ : ಭದ್ರಾ ಡ್ಯಾಂ ನಿಂದ ಭಾರೀ ಪ್ರಮಾಣದ ನೀರನ್ನು ನದಿಗೆ ಬಿಟ್ಟಿರುವುದರಿಂದ ಭದ್ರಾವತಿ ನಗರದಲ್ಲಿರುವ ಭದ್ರಾ ನದಿಯ ಹೊಸ ಸೇತುವೆ ಮುಳುಗಡೆ ಆಗಿ, ವಾಹನಗಳ ಸಂಚಾರ ಸ್ಥಗಿತಗೊಂಡಿದೆ.

ನೆರೆ ಭೀತಿ : ಭದ್ರಾ ಮತ್ತು ತುಂಗಾ ನದಿಗಳಲ್ಲಿ ನೀರಿನ ಹರಿವು ಮತ್ತಷ್ಟು ಹೆಚ್ಚಳವಾದರೆ ತುಂಗಾಭದ್ರಾ ನದಿ ಪಾತ್ರದಲ್ಲಿ ನೆರೆ ಭೀತಿ ಉಂಟಾಗುವ ಸಾಧ್ಯತೆ ಇದೆ.

ಉಡುಪಿಗೆ ಜಲ ದಿಗ್ಬಂಧನ : ಕಳೆದ 45 ವರ್ಷಗಳ ನಂತರ ಉಡುಪಿ ನಗರ ಜಲಾವೃತಗೊಂಡಿದೆ. ನೆಲಮಹಡಿ ಕಟ್ಟಡಗಳು ನೀರಿನಲ್ಲಿ ಮುಳುಗಿವೆ.

ಕೃಷ್ಣ ಮಠದ ಪಾರ್ಕಿಂಗ್ ಹಳ್ಳದಂತಾಗಿ ಪ್ರವಾಸಿಗರ ವಾಹನಗಳು ನೀರಿನಲ್ಲಿ ಮುಳುಗಿದ್ದು, ವಾಹನಗಳ ಮಾಲೀಕರು ವಾಹನಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

ಮಳೆ ಸಾಧ್ಯತೆ : ರಾಜ್ಯದಲ್ಲಿ ಇನ್ನೂ ಎರಡು ದಿನ ಮಳೆ ಬರುವ ಸಾಧ್ಯತೆ ಇದೆ. ಹವಾಮಾನ ಇಲಾಖೆ ಈ ಸೂಚನೆ ನೀಡಿದೆ.

ಮಲೆನಾಡು, ಪಶ್ಚಿಮ ಘಟ್ಟದಲ್ಲಿ ಮಹಾಮಳೆ ಆಗಿದ್ದರೆ ಮಧ್ಯ ಕರ್ನಾಟಕದಲ್ಲಿ ಸಾಧಾರಣ ಮಳೆಯಾಗಿದೆ.

error: Content is protected !!