ಪಾಲಿಕೆಯಲ್ಲಿನ ಕೆಲಸಕ್ಕೆ ಬ್ರೋಕರ್ ವಾಸಿ !

ದಾವಣಗೆರೆ, ಸೆ. 16 – ನನ್ನ ಮಗ ಖರೀದಿಸಿದ ಆಸ್ತಿಯ ಖಾತೆ ಬದಲಾವಣೆ ಕೆಲಸ ಬ್ರೋಕರ್‌ಗೆ ಕೊಟ್ಟಿದ್ದರೆ 15 ದಿನಗಳಲ್ಲಿ ಆಗುತ್ತಿತ್ತು. ಆದರೆ, ಲಂಚ ಕೊಡದೇ ನಾನೇ ನೇರವಾಗಿ ಕೆಲಸ ಮಾಡಿಸಿಕೊಳ್ಳಲು ಹೋಗಿದ್ದಕ್ಕೆ ಆರು ತಿಂಗಳಾದರೂ ಕೆಲಸ ಆಗಿಲ್ಲ. ಪಾಲಿಕೆಯ ಕಂದಾಯ ಇಲಾಖೆಯಲ್ಲಿ ಲಂಚ `ಮಾಮೂಲಿ’ ಆಗಿದೆ ಎಂದು ಪಾಲಿಕೆ ಸದಸ್ಯ ಚಮನ್ ಸಾಬ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕೊರೊನಾ ಹಿನ್ನೆಲೆಯಲ್ಲಿ ಸುದೀರ್ಘ ಕಾಲದ ವಿಳಂಬದ ನಂತರ ಬುಧವಾರ ನಡೆದ ನಗರ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಲಂಚಾವತಾರದ ಸಮಸ್ಯೆಗಳನ್ನು ಚಮನ್ ಸಾಬ್ ದೀರ್ಘವಾಗಿ ವಿವರಿಸಿದರು.

`ಛಲ ಬೇಕು ಶರಣಂಗೆ, ಪರಧನವನೊಲ್ಲೆನೆಂಬ’ ಎಂಬ ಬಸವಣ್ಣನವರ ವಚನದೊಂದಿಗೆ ಮಾತು ಆರಂಭಿಸಿದ ಅವರು ಶರಣರ, ದಾರ್ಶನಿಕರ ಇಂತಹ ವಿಚಾರಗಳನ್ನು ಅಧಿಕಾರಿಗಳು ಪಾಲಿಸುತ್ತಿಲ್ಲ. ಲಂಚವನ್ನು ಮಾಮೂಲಿ ಎಂಬಂತೆ ಮಾಡಿಕೊಂಡಿದ್ದಾರೆ ಎಂದು ಹೇಳಿದರು.

ಕಂದಾಯ ವಿಭಾಗದಲ್ಲಿ ಆಂತರಿಕ ಬದಲಾವಣೆ ಮಾಡುವುದಾಗಿ ಮೇಯರ್ ಅಜಯ್ ಕುಮಾರ್ ಹೇಳಿದ್ದರು. ಆದರೆ, ತಿಂಗಳಾಗುತ್ತಾ ಬಂದರೂ ಎಷ್ಟು ಬದಲಾಗಿದೆ? ನಿಮ್ಮ ಕೈಯಲ್ಲಿ ಕೆಲಸ ಆಗುವುದಿಲ್ಲ ಎಂದರೆ ಶಾಸಕರಿಗೆ ಹೇಳಿ ಸರ್ಕಾರದಿಂದ ಮಾಡಿಸಿಕೊಳ್ಳಿ ಎಂದು ಹೇಳಿದರು.

ಕಾರ್ಪೊರೇಟರ್ ಮಗನ ಖಾತೆಯೇ ಬದಲಾಗುವುದಿಲ್ಲ ಎಂದರೆ ಹೇಗೆ? ಈ ವಿಷಯದಿಂದ ನನಗೆ ಬೇಸರವಾಗಿದೆ. ಕಂದಾಯ ವಿಭಾಗದಲ್ಲಿ 10ರಿಂದ 50 ಸಾವಿರ ರೂ.ಗಳವರೆಗೆ ಲಂಚ ಕೇಳುತ್ತಿದ್ದಾರೆ. ಕಾರ್ಪೊರೇಟರ್‌ಗಳೂ ಲಂಚದಲ್ಲಿ ಪಾಲು ಪಡೆಯುತ್ತಿದ್ದಾರೆ ಎಂದು ನಮಗೆಲ್ಲಾ ಕೆಟ್ಟ ಹೆಸರು ಬಂದಿದೆ ಎಂದು ಹೇಳಿದರು.

ಅಲ್ಪ ಸ್ವಲ್ಪ ಓದಿದವರಿಗೆ ಕಂದಾಯ ಇಲಾಖೆಯ ಕೆಲಸ ವಹಿಸಿದ್ದಾರೆ. ಇವರು  ಕಡತದಲ್ಲಿ ತಪ್ಪು ಮಾಡಿದರೆ ತಿದ್ದಿಕೊಳ್ಳಲು ಜನ ಅಲೆದಾಡಬೇಕಿದೆ ಎಂದು ಹೇಳಿದರು.

ಈ ಬಗ್ಗೆ ಮಾತನಾಡಿದ ವಿಪಕ್ಷದ ನಾಯಕ ಎ. ನಾಗರಾಜ್, 50 ವರ್ಷದ ಹಳೆ ಖಾತೆಯೊಂದಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳೇ ತಪ್ಪು ಮಾಡಿದ್ದಾರೆ. ಈ ತಪ್ಪು ಸರಿ ಮಾಡಿಸಲು ಖಾತೆದಾರರನ್ನು ಎಂಟು ತಿಂಗಳಿನಿಂದ ಅಲೆದಾಡಿಸುತ್ತಿದ್ದಾರೆ. ಇಂಥವರಿಂದ ಪಾಲಿಕೆ, ಮೇಯರ್ ಹಾಗೂ ಶಾಸಕರಿಗೆ ಕೆಟ್ಟ ಹೆಸರು ಬರುತ್ತಿದೆ ಎಂದರು.

ಈ ಬಗ್ಗೆ ಉತ್ತರಿಸಿದ ಮೇಯರ್ ಬಿ.ಜಿ. ಅಜಯ್ ಕುಮಾರ್, ಇ – ಆಸ್ತಿ ಯೋಜನೆ ಜಾರಿಗೆ ತರಲಾಗುತ್ತಿದೆ. ಎರಡು ವಲಯಗಳ ಆಸ್ತಿಗಳ ವಿವರ ಕಂಪ್ಯೂಟರೀಕರಣಗೊಂಡಿದೆ. ಇನ್ನೊಂದು ತಿಂಗಳಲ್ಲಿ ಈ ಪ್ರಕ್ರಿಯೆ ಪೂರ್ಣಗೊಳ್ಳಲಿದೆ. ನಂತರ ಸಮಸ್ಯೆ ನೀಗಲಿದೆ ಎಂದರು.

ಆಂತರಿಕ ಬದಲಾವಣೆಗೆ ಕಳೆದ ತಿಂಗಳೇ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಹೇಳಿದ ಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ, ಮೂವರು ಅಧಿಕಾರಿಗಳು ಮಾತ್ರ ಸೂಚಿಸಿದ ಜಾಗಕ್ಕೆ ಹೋಗಿಲ್ಲ. ಅವರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.

ವಿದ್ಯುತ್ ಚಿತಾಗಾರ : ಶಾಮನೂರು ರುದ್ರಭೂಮಿಯಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಡಿ ಒಂದು ವಿದ್ಯುತ್ ಚಿತಾಗಾರ ನಿರ್ಮಾಣವಾಗಲಿದೆ. ಗಾಂಧಿನಗರ ಹಾಗೂ ಎಸ್‌ಒಜಿ ಕಾಲೋನಿಗಳಲ್ಲೂ ಸಹ ವಿದ್ಯುತ್ ಚಿತಾಗಾರವನ್ನು ಪಾಲಿಕೆಯಿಂದ ರೂಪಿಸುವ ಪ್ರಸ್ತಾವನೆ ಇದೆ ಎಂದು ಮೇಯರ್ ಅಜಯ್ ಕುಮಾರ್ ಸಭೆಗೆ ತಿಳಿಸಿದರು.

ನೀರಿನ ಸಮಸ್ಯೆ : ನೀರು ಶುದ್ಧೀಕರಣಕ್ಕೆ ಬಳಸಲಾಗುತ್ತಿರುವ ಆಲಂ ಹಾಗೂ ಬ್ಲೀಚಿಂಗ್ ಪೌಡರ್ ಗುಣಮಟ್ಟದ್ದಿಲ್ಲ. ಈ ವರ್ಷ ಆಲಂಗೆ 38 ಲಕ್ಷ ರೂ. ಟೆಂಡರ್ ಕರೆಯಲಾಗುತ್ತಿದೆ. ಆದರೆ, ಶುದ್ಧೀಕರಣ ಕಳಪೆಯಾಗಿದೆ ಎಂದು ಕಾಂಗ್ರೆಸ್ ಸದಸ್ಯ ದೇವರಮನಿ ಶಿವಕುಮಾರ್ ಕಿಡಿ ಕಾರಿದರು.

ಅಧಿಕಾರಿಗಳು ಪಾಲಿಕೆ ಸದಸ್ಯರಿಗೆ ಸ್ಪಂದಿಸುತ್ತಿಲ್ಲ. ಸಭೆಗೂ ಸಮರ್ಪಕ ಮಾಹಿತಿಯೊಂದಿಗೆ ಬರುತ್ತಿಲ್ಲ. ಇದು ಆಡಳಿತದಲ್ಲಿನ ಲೋಪವನ್ನು ತೋರಿಸುತ್ತಿದೆ ಎಂದವರು ಹೇಳಿದರು.

ಸಭೆಯಲ್ಲಿ ಶಾಸಕ ಎಸ್.ಎ. ರವೀಂದ್ರನಾಥ್, ಉಪ ಮೇಯರ್ ಸೌಮ್ಯ ನರೇಂದ್ರ, ಪಾಲಿಕೆ ಸದಸ್ಯರು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.

error: Content is protected !!