ರಸ್ತೆ ಬದಿ ಸಂತೆ, ಗ್ಲಾಸ್‌ ಹೌಸ್ ಪ್ರವಾಸಿ ತಾಣ

ದಾವಣಗೆರೆ, ಸೆ. 10 – ನಗರದಲ್ಲಿರುವ ತೋಟಗಾರಿಕೆ ಇಲಾಖೆಯ ಬೃಹತ್ ಗಾಜಿನ ಮನೆಗೆ ಹೆಚ್ಚಿನ ಪ್ರವಾಸಿಗರು ಬರಲು ಅಲ್ಲೊಂದು ಭೋಜನ ತಾಣ ನಿರ್ಮಿಸುವುದಾಗಿ ತೋಟಗಾರಿಕಾ ಸಚಿವ ನಾರಾಯಣ ಗೌಡ ತಿಳಿಸಿದ್ದಾರೆ.

ಇಲ್ಲಿನ ಜಿಲ್ಲಾಡಳಿತ ಭವನದಲ್ಲಿರುವ ತುಂಗಭದ್ರಾ ಸಭಾಂಗಣದಲ್ಲಿ ಇಂದು ಆಯೋ ಜಿಸಲಾಗಿದ್ದ ಇಲಾಖೆಯ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದ ಅವರು, ಇಲ್ಲೊಂದು ಭೋಜನ ತಾಣ ನಿರ್ಮಿಸಿದರೆ, ಪಿ.ಬಿ. ರಸ್ತೆಯಲ್ಲಿ ಹೋಗುವ ಪ್ರವಾಸಿಗರು ಬರಲು ಅನುಕೂಲವಾಗುತ್ತದೆ ಎಂದು ಅಭಿಪ್ರಾಯ ಪಟ್ಟರು.

ಖಾಸಗಿ ಸಹಭಾಗಿತ್ವದ ಈ ಯೋಜನೆಗಾಗಿ ಪ್ರವಾಸೋದ್ಯಮ ಸಚಿವರ ಜೊತೆ ಮಾತನಾಡುವುದಾಗಿ ಹೇಳಿದ ಅವರು, ಇಷ್ಟು ದೊಡ್ಡ ಗ್ಲಾಸ್‌ ಹೌಸ್ ಇರುವುದು ತಮ್ಮ ಗಮನಕ್ಕೇ ಬಂದಿರಲಿಲ್ಲ. ಈ ಗ್ಲಾಸ್‌ ಹೌಸ್‌ಗೆ ಇನ್ನಷ್ಟು ಪ್ರಚಾರದ ಅಗತ್ಯವಿದೆ ಎಂದು ಹೇಳಿದರು.

ಕೃಷಿ ಪ್ರವಾಸೋದ್ಯಮ : ಕೃಷಿ ಪ್ರವಾಸೋದ್ಯಮಕ್ಕೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ನೇತೃತ್ವದಲ್ಲಿ ಯೋಜನೆ ರೂಪಿಸಲಾಗಿದೆ. ಅದರ ಅನ್ವಯ ಪ್ರತಿ ಜಿಲ್ಲೆಯಲ್ಲಿ ಕೃಷಿ ಪ್ರವಾಸೋದ್ಯಮ ಅಭಿವೃದ್ಧಿಪಡಿಸಬೇಕಿದೆ ಎಂದವರು ಇದೇ ಸಂದರ್ಭದಲ್ಲಿ ತಿಳಿಸಿದರು.

ಬೆಳಿಗ್ಗೆಯಿಂದ ಸಂಜೆಯವರೆಗೆ ಕೃಷಿ ತಾಣಗಳಿಗೆ ಭೇಟಿ ನೀಡಲು ಹಾಗೂ ರಾತ್ರಿ ಹೋಂ ಸ್ಟೇ ಮಾಡಲು ಅವಕಾಶವಿರುವ ತಾಣಗಳನ್ನು ರೂಪಿಸುವಂತೆ ಅವರು ಅಧಿಕಾರಿಗಳಿಗೆ ತಿಳಿಸಿದರು.

ರಸ್ತೆ ಸಂತೆ : ರೈತರ ಬೆಳೆಗಳನ್ನು ಮಾರಾಟ ಮಾಡಲು ರಸ್ತೆ ಬದಿಗಳಲ್ಲಿ ಸಂತೆಗಳನ್ನು ರೂಪಿಸಬೇಕಿದೆ. ಇದರಿಂದ ಬೆಳೆಗಳಿಗೆ ಹೆಚ್ಚು ಬೇಡಿಕೆ ಬರಲಿದೆ. ಇದಕ್ಕಾಗಿ ನೀರು, ಶೌ ಚಾಲಯ ಮತ್ತಿತರೆ ವ್ಯವಸ್ಥೆಗಳನ್ನು ಮಾಡು ವಂತೆಯೂ ಸಚಿವರು ಹೇಳಿದರು.

ಶೀತಲೀಕರಣ ಘಟಕ : ರೈತರ ಹಣ್ಣು ಇತ್ಯಾದಿ ಉತ್ಪನ್ನಗಳನ್ನು ಶೇಖರಿಸಲು ಜಿಲ್ಲೆಯಲ್ಲಿ ಯಾವುದೇ ಶೀತಲೀಕರಣ ಘಟಕ ಇಲ್ಲದೇ ಇರುವ ಬಗ್ಗೆ ಬೇಸರ ವ್ಯಕ್ತಪಡಿಸಿದ ಸಚಿವರು, ಶೀಘ್ರದಲ್ಲೇ ಪ್ರಸ್ತಾವನೆಗಳಿಗೆ ಮಂಜೂರಾತಿ ಪಡೆದು, ಖಾಸಗಿ ಸಹಭಾಗಿತ್ವದಲ್ಲಿ ಕ್ರಮ ತೆಗೆದುಕೊಳ್ಳಬೇಕು. ಪ್ರತಿ ತಾಲ್ಲೂಕುಗಳಲ್ಲೂ ಈ ಘಟಕಗಳಾಗಬೇಕು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಲಕ್ಷ್ಮೀಕಾಂತ ಬೊಮ್ಮನ್ನರ್,  ಕೋವಿಡ್ ಹಾಗೂ ಮಳೆಯಿಂದಾಗಿ ಹಾನಿಗೀಡಾಗಿರುವ ಹೂ, ಹಣ್ಣು ಹಾಗೂ ತರಕಾರಿ ಬೆಳೆಯುವ ರೈತರಿಗೆ ಪರಿಹಾರ ಕಲ್ಪಿಸಲಾಗುತ್ತಿದೆ. ತರಕಾರಿ ಬೆಳೆಗಾರರಿಗೆ 2.76 ಕೋಟಿ ರೂ. ಹೆಚ್ಚಿನ ಪರಿಹಾರ ನೀಡಲು ಪ್ರಸ್ತಾವನೆ ಕಳಿಸಲಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಹರಿಹರ ಶಾಸಕ ರಾಮಪ್ಪ, ಅಪರ ಜಿಲ್ಲಾಧಿಕಾರಿ ಪೂಜಾರ್ ವೀರಮಲ್ಲಪ್ಪ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ನಜ್ಮ, ಜಿ.ಪಂ. ಉಪ ಕಾರ್ಯದರ್ಶಿ ಆನಂದ್, ರೇಷ್ಮೆ ಇಲಾಖೆ ಉಪ ನಿರ್ದೇಶಕಿ ನಿರ್ಮಲ, ರೇಷ್ಮೆ ಇಲಾಖೆ ಸಹಾಯಕ ನಿರ್ದೇಶಕ ಶ್ರೀಹರ್ಷ ಮತ್ತಿತರರು ಉಪಸ್ಥಿತರಿದ್ದರು.

error: Content is protected !!