ಖರೀದಿ ಕೇಂದ್ರದತ್ತ ರೈತರ ನೀರಸ ಚಿತ್ತ

ದಾವಣಗೆರೆ, ಡಿ.17- ಜಿಲ್ಲೆಯಲ್ಲಿ ಖರೀದಿ ಕೇಂದ್ರಗಳನ್ನು ತೆರೆಯಬೇಕೆಂಬ ಕೂಗಿನ ನಡುವೆ ಈಗಾಗಲೇ ತೆರೆದಿರುವ ಖರೀದಿ ಕೇಂದ್ರಗಳಲ್ಲಿ ದಾಸ್ತಾನು ಮಾರಾಟ ಮಾಡಲು ರೈತರು ಹಿಂದೇಟು ಹಾಕುತ್ತಿದ್ದಾರೆ.

ಸಾಮಾನ್ಯ ಭತ್ತ ಪ್ರತಿ ಕ್ವಿಂಟಾಲ್‍ಗೆ 1,868 ರೂ.ಹಾಗೂ ಗ್ರೇಡ್-ಎ ಭತ್ತಕ್ಕೆ 1,888 ರೂ. ಬೆಂಬಲ ಬೆಲೆ ಘೋಷಿಸಲಾಗಿದೆ.  ಸಾಮಾನ್ಯ ಭತ್ತ ಪ್ರತಿ ರೈತರಿಂದ ಗರಿಷ್ಟ 40 ಕ್ವಿಂ. (ಪ್ರತಿ ಎಕರೆಗೆ 16 ಕ್ವಿಂ. ನಂತೆ) ಖರೀದಿಗೆ ಅವಕಾಶ ಕಲ್ಪಿಸಲಾಗಿದೆ.

ಜಿಲ್ಲೆಯ 66,450 ಹೆಕ್ಟೇರ್ ಪ್ರದೇಶ ದಲ್ಲಿ ಭತ್ತ ಬೆಳೆಯಲಾಗಿದ್ದು, ಸುಮಾರು 3.30 ಲಕ್ಷ ಟನ್ ಭತ್ತ ಉತ್ಪಾದನೆಯಾಗುವ ನಿರೀಕ್ಷೆ ಇದೆ. ಆದರೆ ಸರ್ಕಾರದ ಬಿಗಿ ಮಾನದಂ ಡಗಳು, ಪ್ರಚಾರದ ಕೊರತೆ ಮುಂತಾದ ಕಾರಣಗಳಿಂದಾಗಿ ಖರೀದಿ ಕೇಂದ್ರಗಳು ಬಣಗುಡುತ್ತಿವೆ.

ಕೃಷಿ ಇಲಾಖೆಯಿಂದ ರೈತರು  (ಫ್ರೂಟ್ಸ್) ಗುರುತಿನ  ಸಂಖ್ಯೆಯಯನ್ನು ಕಡ್ಡಾಯವಾಗಿ ಖರೀದಿ ಕೇಂದ್ರಕ್ಕೆ ಹಾಜರುಪಡಿಸಬೇಕಿದೆ. ಈ ಸಂಖ್ಯೆಯ ಆಧಾರದಲ್ಲಿ ನೋಂದಣಿ ಸಾಧ್ಯವಾ ಗುತ್ತದೆ.  ಆದರೆ ಫ್ರೂಟ್ಸ್ ತಂತ್ರಾಂಶದ ಬಗ್ಗೆ ರೈತರಿಗೆ ಸಮರ್ಪಕ ಮಾಹಿತಿ ಲಭ್ಯವಾಗಿಲ್ಲ. 

ಜಿಲ್ಲೆಯಲ್ಲಿ ಡಿ.30 ರಿಂದ  ಭತ್ತ ಖರೀದಿ ಪ್ರಕ್ರಿಯೆ ಆರಂಭವಾಗಿದ್ದು, ಇಲ್ಲಿಯವರೆಗೆ 1832.73 ಕ್ವಿಂಟಾಲ್ ಭತ್ತವನ್ನು ಮಾತ್ರ ಮಾರಾಟ ಮಾಡಲು ಕೇವಲ 371 ಜನರು ಹೆಸರು ನೋಂದಾಯಿಸಿಕೊಂಡಿದ್ದಾರೆ.

ದಾವಣಗೆರೆ ತಾಲ್ಲೂಕಿನಲ್ಲಿ 50 ರೈತರು  2582.68 ಕ್ವಿಂಟಾಲ್, ಹರಿಹರ 107 ರೈತರು, 6100.66 ಕ್ವಿಂಟಾಲ್ ಹಾಗೂ ಹೊನ್ನಾಳಿ ತಾಲ್ಲೂಕಿನಲ್ಲಿ 214 ರೈತರು 9640.39 ಕ್ವಿಂಟಾಲ್ ಭತ್ತ ಮಾರಾಟ ಮಾಡಲು ಹೆಸರು ನೋಂದಾಯಿಸಿಕೊಂಡಿ ದ್ದಾರೆ. ಕಳೆದ ಬಾರಿ  ಜಿಲ್ಲೆಯಲ್ಲಿ ಬೆಂಬಲ ಬೆಲೆ ಯೋಜನೆಯಡಿ ಸುಮಾರು 40 ಸಾವಿರ ಕ್ವಿಂ. ನಷ್ಟು ಭತ್ತ ಖರೀದಿ ಮಾಡಲಾಗಿತ್ತು.

ರಾಗಿ ಖರೀದಿ ನೀರಸ: ಇನ್ನೂ ರಾಗಿ ಖರೀದಿಗಾಗಿಯೂ ರೈತರು ದಾಖಲಾತಿಗಳೊಂದಿಗೆ ಹೆಸರು ನೋಂದಣಿ ಮಾಡಿಸಿಕೊಳ್ಳಬೇಕಾಗಿದ್ದು, ದಾವಣಗೆರೆ ತಾಲ್ಲೂಕಿನಲ್ಲಿ ಗುರುವಾರ ಕೇವಲ 3 ಜನ ರೈತರು ಹೆಸರು ನೋಂದಾಯಿಸಿದ್ದಾರೆ.

ಜಿಲ್ಲೆಯ ಹರಿಹರ ತಾಲ್ಲೂಕಿನಲ್ಲಿ ಬುಧವಾರ ಸಂಜೆಯವರೆಗೆ 50 ಜನ  ರೈತರು 1559.49 ಕ್ವಿಂಟಾಲ್ ರಾಗಿ ಮಾರಾಟಕ್ಕೆ ಹೆಸರು ನೋಂದಾಯಿಸಿದ್ದರೆ, ಜಗಳೂರು ತಾಲ್ಲೂಕಿನ 3 ರೈತರು 141 ಕ್ವಿಂಟಾಲ್ ರಾಗಿ ಕೊಡಲು ಹೆಸರು ಕೊಟ್ಟಿದ್ದಾರೆ.

ಚುನಾವಣೆ ಬ್ಯುಸಿ: ಸದ್ಯ ಗ್ರಾಮ ಪಂಚಾಯ್ತಿ ಚುನಾವಣೆ ನಡೆಯುತ್ತಿದ್ದು, ಹಳ್ಳಿಗರು ಚುನಾವಣಾ ಪ್ರಕ್ರಿಯೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಕಾರಣದಿಂದಾಗಿ ರೈತರ ಆಗಮನ ತುಸು ತಡವಾಗಬಹುದು ಎನ್ನುತ್ತಾರೆ ಅಧಿಕಾರಿಗಳು.

ಮಧ್ಯವರ್ತಿಗಳಿಗೆ ಲಾಭ: ಈಗಾಗಲೇ ಅರ್ಧಕ್ಕಿಂತ ಹೆಚ್ಚು ರೈತರು ರಾಗಿ ಮಾರಾಟ ಮಾಡಿದ್ದಾರೆ.  ಸರ್ಕಾರ ತಡವಾಗಿ ಖರೀದಿ ಕೇಂದ್ರ ಆರಂಭಿಸಿದ್ದು, ಇದರ ಲಾಭವನ್ನು ಮಧ್ಯವರ್ತಿಗಳು ಪಡೆದುಕೊಳ್ಳಲಿದ್ದಾರೆ ಎಂಬುದು ರೈತರ ಆರೋಪ.

ರೈತರೇ ನೇರವಾಗಿ ಖರೀದಿ ಕೇಂದ್ರಕ್ಕೆ ಬಂದು ಆಧಾರ್ ಕಾರ್ಡ್, ಬ್ಯಾಂಕ್ ಮಾಹಿತಿ ಮುಂತಾದ   ದಾಖಲಾತಿ ನೀಡಿ ಹೆಸರು ನೋಂ ದಾಯಿಸಿಕೊಳ್ಳಬೇಕು. ರೈತರ ಖಾತೆಗೆ ನೇರ ವಾಗಿ ಹಣ ಸಂದಾಯವಾಗುತ್ತದೆ ಎಂಬುದು ಅಧಿಕಾರಗಳ ಮಾತು. ಆದರೆ ದಲ್ಲಾಳಿಗಳೇ ರೈತರ ದಾಖಲೆಗಳನ್ನು ತಮ್ಮಲ್ಲಿಟ್ಟುಕೊಂಡು ಖರೀದಿ ಕೇಂದ್ರಕ್ಕೆ ಹೆಸರು ನೋಂದಾಯಿಸು ತ್ತಾರೆ. ರೈತನ ಖಾತೆಗೆ ಹಣ ಜಮೆಯಾದ ನಂತರ ರೈತರಿಂದ ಪಡೆಯುತ್ತಾರೆ. ಇದರಿಂದ ರೈತನಿಗೆ ಅನುಕೂಲವಾಗದು ಎನ್ನುವುದು ರೈತ ಮುಖಂಡರ ಆರೋಪವಾಗಿದೆ.

error: Content is protected !!