ದಾವಣಗೆರೆ, ಡಿ. 4 – ರಾಜ್ಯದಲ್ಲಿ ಈಗ ಕಾಂಗ್ರೆಸ್ ಇಲ್ಲ, ಜೆಡಿಎಸ್ ಎಲ್ಲಿದೆ ಎಂದು ಹುಡುಕಬೇಕಿದೆ. ಈಗಷ್ಟೇ ಅಲ್ಲದೇ ಮುಂದಿನ 20-30 ವರ್ಷಗಳವರೆಗೆ ಬಿಜೆಪಿಯೇ ಇರಲಿದೆ ಎಂದಿರುವ ಬಿಜೆಪಿ ನಾಯಕ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ, ಕಾಂಗ್ರೆಸ್ ಬದುಕಿದೆ ಎಂದು ತೋರಿಸಲು ಅದರ ನಾಯಕರು ಪ್ರಯತ್ನ ಪಡುತ್ತಿದ್ದಾರೆ ಎಂದು ಲೇವಡಿ ಮಾಡಿದ್ದಾರೆ.
ಗ್ರಾಮ ಪಂಚಾಯ್ತಿ ಚುನಾವಣೆಗಳ ಹಿನ್ನೆಲೆಯಲ್ಲಿ ನಗರದ ಜಿಎಂಐಟಿ ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಬಿಜೆಪಿಯ ಗ್ರಾಮ ಸ್ವರಾಜ್ಯ ಸಮಾವೇಶದ ಮುಖ್ಯ ಅತಿಥಿಯಾಗಿ ಮಾತನಾಡುತ್ತಿದ್ದ ಅವರು, ಜಿಲ್ಲೆಯ 192 ಗ್ರಾಮ ಪಂಚಾಯ್ತಿಗಳಲ್ಲಿ ಶೇ.80ರಲ್ಲಿ ಗೆಲ್ಲಲು ಬಿಜೆಪಿಗೆ ಅವಕಾಶ ಇದೆ. ಈ ಗೆಲುವು ವಿಧಾನಸಭಾ ಚುನಾವಣೆಗೆ ಬುನಾದಿಯೂ ಆಗಲಿದೆ ಎಂದಿದ್ದಾರೆ.
ದೇಶದೆಲ್ಲೆಡೆ ಕಾಂಗ್ರೆಸ್ ಪಕ್ಷ ಲೆಕ್ಕವೇ ಇಲ್ಲದಂತಾಗಿದೆ. ಕಾಂಗ್ರೆಸ್ ಎಲ್ಲಿದೆ ಎಂದು ಭೂತಕನ್ನಡಿ ಹಿಡಿದು ಹುಡುಕಬೇಕಿದೆ. ಆದರೆ, ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಹಾಗೂ ರಾಜ್ಯಾಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಪಕ್ಷ ಬದುಕಿದೆ ಎಂದು ತೋರಿಸುವ ಪ್ರಯತ್ನ ನಡೆಸುತ್ತಿದ್ದಾರೆ ಎಂದು ಈಶ್ವರಪ್ಪ ಹೇಳಿದರು.
ಸಿದ್ದರಾಮಯ್ಯಗೆ ಬುದ್ಧಿ ಬರುತ್ತಾ ?… ಬರಲ್ಲ.. !
ಲವ್ ಜಿಹಾದ್ ತಡೆಯಲು ಕಾನೂನು ರೂಪಿಸುವುದನ್ನು ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ವಿರೋಧಿಸುತ್ತಿದ್ದಾರೆ. ಇಂತಹ ವಿರೋಧದ ಕಾರಣದಿಂದಾಗಿಯೇ ದೇಶದ ಹಲವು ರಾಜ್ಯಗಳಲ್ಲಿ ಕಾಂಗ್ರೆಸ್ 2-3 ಸ್ಥಾನಗಳಿಗೆ ಬಂದಿದೆ. ಇಲ್ಲೂ ಹಾಗಾದರೆ ಅವರಿಗೆ ಬುದ್ಧಿ ಬರಬಹುದೇನೋ ಎಂದು ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ.
ಆಗ ಸಭಿಕರೊಬ್ಬರು ಹಾಗಾದರೂ ಬುದ್ಧಿ ಬರಲ್ಲ ಎಂದರು. ‘ದಾವಣಗೆರೆ ಜನ ಸತ್ಯ ಹೇಳ್ತಾರೆ’ಎಂದು ಮುಂದುವರೆದ ಈಶ್ವರಪ್ಪ, ಕಳೆದ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ಗೆ ಕೇವಲ ಒಂದು ಸ್ಥಾನ ದೊರೆಯಿತು. ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಸೋತರು. ಆದರೂ ಬುದ್ಧಿ ಬರಲಿಲ್ಲ ಎಂದರು.
ಪಕ್ಕದ ಮನೆಯವರ ವೋಟು ಸಿಗುವುದಿದ್ದರೆ ಚುನಾವಣೆಗೆ ನಿಲ್ಲಿ
ಪಕ್ಕದ ಮನೆಯವರ ಮತ ಸಿಗುವ ಗ್ಯಾರಂಟಿ ಇದ್ದರೆ ಮಾತ್ರ ಗ್ರಾಮ ಪಂಚಾಯ್ತಿ ಚುನಾವಣೆಗೆ ನಿಲ್ಲಿ! ಇದು ಶಾಸಕ ಎಸ್.ಎ. ರವೀಂದ್ರನಾಥ್, ಟಿಕೆಟ್ ಆಕಾಂಕ್ಷಿಗಳಿಗೆ ನೀಡಿದ ಸಲಹೆ. ಪಕ್ಷದಿಂದ ಟಿಕೆಟ್ ಬೇಕು ಎಂದು ಕೇಳುವುದಕ್ಕೆ ಮುಂಚೆ ಮತದಾರರ ಜೊತೆ ಮಾತನಾಡಿ. ಆಗ ಪರಿಸ್ಥಿತಿ ಏನಿದೆ ಎಂಬುದು ತಿಳಿಯುತ್ತದೆ. ಗ್ರಾ.ಪಂ. ಸ್ಥಾನಗಳನ್ನು ತ್ಯಾಗ ಮಾಡಿದರೆ ಮುಂದೆ ತಾಲ್ಲೂಕು ಪಂಚಾಯ್ತಿ, ಜಿಲ್ಲಾ ಪಂಚಾಯ್ತಿ ಹಾಗೂ ಸಂಘಗಳಲ್ಲಿ ಅವಕಾಶ ಇದೆ. ಅದು ಬಿಟ್ಟು ಬಿಸಿ ಬಿಸಿದು ಬೇಕು ಎಂದು ನುಂಗಲು ಹೋದರೆ ಗಂಟಲು ಸುಟ್ಟುಕೊಳ್ಳುತ್ತೀರಿ ಎಂದು ರವೀಂದ್ರನಾಥ್ ಎಚ್ಚರಿಕೆ ನೀಡಿದರು.
ಸಿದ್ದರಾಮಯ್ಯ ‘ಕ್ರಾಸ್ಬ್ರೀಡ್’ಗೆ ತರಾಟೆ
ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಅವರು ಏನು ಹೇಳುತ್ತಿದ್ದಾರೋ ಅವರಿಗೇ ಅರ್ಥವಾಗಲ್ಲ. ಅಂತರ್ಜಾತೀಯ ವಿವಾಹ ಆಗುವವರನ್ನು ಅವರು ಕ್ರಾಸ್ಬೀಡ್ ಎಂದು ಕರೆದಿದ್ದಾರೆ. ಆದರೆ, ನಾಯಿಗಳಿಗೆ ನಾವು ಕ್ರಾಸ್ಬೀಡ್ ಎಂಬ ಪದ ಬಳಸುತ್ತೇವೆ ಎಂದು ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ.
ಸಿದ್ದರಾಮಯ್ಯ ಹೇಳುವ ಪದವನ್ನೇ ಬಳಸುವುದಾದರೆ ಫಿರೋಜ್ ಗಾಂಧಿಯವರನ್ನು ಮದುವೆಯಾದ ಇಂದಿರಾ ಗಾಂಧಿ ಏನಾಗುತ್ತಾರೆ? ರಾಜೀವ್ ಗಾಂಧಿ ಮದುವೆಯಾದ ಸೋನಿಯಾ ಗಾಂಧಿ ಏನಾಗುತ್ತಾರೆ? ರಾಬರ್ಟ್ ವಾದ್ರಾರನ್ನು ಮದುವೆಯಾದ ಪ್ರಿಯಾಂಕಾ ಗಾಂಧಿ? ಏನಾಗುತ್ತಾರೆ ಎಂದು ಈಶ್ವರಪ್ಪ ಪ್ರಶ್ನಿಸಿದ್ದಾರೆ.
ಡಿಸಿಸಿ ಬ್ಯಾಂಕ್ 4 ನಿರ್ದೇಶಕರು, ಎನ್.ಜಿ. ಪುಟ್ಟಸ್ವಾಮಿ ಬಿಜೆಪಿಗೆ
ದಾವಣಗೆರೆ ಜಿಲ್ಲಾ ಸಹಕಾರಿ ಬ್ಯಾಂಕ್ನ ನಿರ್ದೇಶಕರಾದ ಕೆಂಗಲಹಳ್ಳಿ ಷಣ್ಮುಖಪ್ಪ, ವೇಣುಗೋಪಾಲ್, ಬಣಕಾರ್ ಜಗದೀಶಪ್ಪ, ದ್ಯಾಮನ ಹಳ್ಳಿ ಬಿ. ಶೇಖರಪ್ಪ, ಹಿರಿಯ ಮುಖಂಡರಾದ ಎನ್.ಜಿ. ಪುಟ್ಟಸ್ವಾಮಿ, ಹನುಮನ ಹಳ್ಳಿ ವಿಶ್ವನಾಥ್, ಎನ್.ಜಿ. ನವೀನ್, ರಾಜಶೇಖರ್ ಮತ್ತಿತರರು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ಸಚಿವ ಕೆ.ಎಸ್. ಈಶ್ವರಪ್ಪ ಅವರು ಬಿಜೆಪಿ ಶಾಲು ಹೊದಿಸುವ ಮೂಲಕ ಇವರನ್ನು ಪಕ್ಷಕ್ಕೆ ಆಹ್ವಾನಿಸಿಕೊಂಡಿದ್ದಾರೆ.
ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಗೋವಧೆ, ಲವ್ ಜಿಹಾದ್ ಸೇರಿಸಲಿ : ಈಶ್ವರಪ್ಪ ಸವಾಲು
ಲವ್ ಜಿಹಾದ್ ಹಾಗೂ ಗೋಹತ್ಯೆ ತಡೆಯಲು ಬಿಜೆಪಿ ಕಾನೂನುಗಳನ್ನು ಜಾರಿಗೆ ತರಲಿದೆ. ಇದನ್ನು ವಿರೋಧಿಸುತ್ತಿರುವ ಕಾಂಗ್ರೆಸ್, ತನ್ನ ಗ್ರಾಮ ಪಂಚಾಯ್ತಿ ಚುನಾಣೆಯ ಪ್ರಣಾಳಿಕೆಯಲ್ಲಿ ಗೋವಧೆ ಹಾಗೂ ಯಾರು ಯಾರನ್ನು ಬೇಕಾದರೂ ಮದುವೆಯಾಗಬಹುದು ಎಂಬ ಅಂಶಗಳನ್ನು ಸೇರಿಸಲಿ ಎಂದು ಬಿಜೆಪಿ ನಾಯಕ ಹಾಗೂ ಸಚಿವ ಕೆ.ಎಸ್. ಈಶ್ವರಪ್ಪ ಸವಾಲೆಸೆದಿದ್ದಾರೆ.
ಗೋಹತ್ಯೆ ವಿರೋಧಿಸುವ ಬಿಜೆಪಿ ಹಾಗೂ ಆರ್ಎಸ್ಎಸ್ ಕಚೇರಿಗಳ ಎದುರು ಮುದಿ ಎತ್ತುಗಳನ್ನು ಇಡುವಂತೆ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. ಅವರ ತಾಯಿಗೆ ವಯಸ್ಸಾದರೆ ಅವರನ್ನೂ ಹೀಗೇ ತಂದು ಬಿಡುತ್ತಾರಾ? ನಾವು ಗೋವುಗಳನ್ನು ತಾಯಿ ಎಂದು ಭಾವಿಸಿದ್ದೇವೆ ಎಂದು ಈಶ್ವರಪ್ಪ ಹೇಳಿದರು.
ಶಿರ ಹಾಗೂ ಆರ್.ಆರ್. ನಗರ ಉಪ ಚುನಾವಣೆಗಳು ಮುಂದಿನ ವಿಧಾನಸಭಾ ಚುನಾವಣೆಯ ದಿಕ್ಸೂಚಿ ಎಂದು ಶಿವಕುಮಾರ್ ಹೇಳಿದ್ದರು. ರಾಜ್ಯದ ಜನತೆ ಈಗಾಗಲೇ ದಿಕ್ಸೂಚಿ ತೋರಿಸಿದ್ದು, ಮುಂದಿನ ಬಾರಿಯೂ ಬಿಜೆಪಿ ಬೇಕು ಎಂದು ತಿಳಿಸಿದ್ದಾರೆ ಎಂದರು.
ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ, ಗ್ರಾಮೀಣ ಪ್ರದೇಶಗಳಿಗೆ ಮೂಲಭೂತ ಸೌಲಭ್ಯ ಕಲ್ಪಿಸಲು ಗ್ರಾಮ ಪಂಚಾಯ್ತಿ ಚುನಾವಣೆಗಳಲ್ಲಿ ಗೆಲ್ಲಬೇಕಿದೆ. ಗ್ರಾಮೀಣ ಭಾಗಗಳಿಗೆ ನೀರು, ವಿದ್ಯುತ್, ರಸ್ತೆ, ಚರಂಡಿ, ಆರೋಗ್ಯ, ಕೆರೆ – ಕಟ್ಟೆಗಳ ಅಭಿವೃದ್ಧಿಯಂತಹ ಮೂಲಭೂತ ಸೌಲಭ್ಯ ಕಲ್ಪಿಸಲು ರಾಜ್ಯ ಸರ್ಕಾರ ಬದ್ಧವಾಗಿದೆ ಎಂದರು.
ಮುಖ್ಯ ಅತಿಥಿಯಾಗಿ ಮಾತನಾಡಿದ ಸಂಸದ ಜಿ.ಎಂ. ಸಿದ್ದೇಶ್ವರ, ಗ್ರಾಮ ಸ್ವರಾಜ್ಯಕ್ಕಾಗಿ ಗ್ರಾಮಗಳಲ್ಲಿ ಬಿಜೆಪಿ ಅಧಿಕಾರ ಹಿಡಿಯಬೇಕಿದೆ. ಗ್ರಾಮ ಪಂಚಾಯ್ತಿಗಳಲ್ಲಿ ಬಿಜೆಪಿ ಪೂರ್ಣ ಬಹುಮತ ಪಡೆದು ಪಂಚಾಯ್ತಿಯಿಂದ ಪಾರ್ಲಿಮೆಂಟ್ವರೆಗೆ ಬಿಜೆಪಿ ಇರಬೇಕಿದೆ. ಈ ಚುನಾವಣೆಗಳನ್ನು ಹಗುರವಾಗಿ ಭಾವಿಸಬಾರದು ಎಂದು ತಿಳಿಸಿದರು.
ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಮಾತನಾಡಿ, ಕಾಂಗ್ರೆಸ್ ಹಾಗೂ ಜೆಡಿಎಸ್ಗಳ ಕೊಡುಗೆ ಶೂನ್ಯವಾಗಿದ್ದು, ಲೂಟಿಯೇ ಅವರ ಸಾಧನೆಯಾಗಿದೆ ಎಂದು ಹೇಳಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಹನಗವಾಡಿ ವೀರೇಶ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯ ಮೇಲೆ ಶಾಸಕ ಎಸ್.ಎ. ರವೀಂದ್ರನಾಥ್, ಮಹರ್ಷಿ ವಾಲ್ಮೀಕಿ ನಿಗಮದ ಅಧ್ಯಕ್ಷರೂ ಆದ ಶಾಸಕ ಎಸ್.ವಿ. ರಾಮಚಂದ್ರ, ಲಿಡ್ಕರ್ ಅಧ್ಯಕ್ಷರೂ ಆದ ಶಾಸಕ ಪ್ರೊ. ಲಿಂಗಣ್ಣ, ಮೇಯರ್ ಅಜಯ್ ಕುಮಾರ್, ಉಪ ಮೇಯರ್ ಸೌಮ್ಯ ನರೇಂದ್ರ ಕುಮಾರ್, ಜಿ.ಪಂ. ಅಧ್ಯಕ್ಷೆ ದೀಪಾ ಜಗದೀಶ್, ಉಪಾಧ್ಯಕ್ಷೆ ಸಾಕಮ್ಮ ಗಂಗಾಧರನಾಯ್ಕ, ದೂಡಾ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್, ಮಾಜಿ ಶಾಸಕರಾದ ಬಿ.ಪಿ. ಹರೀಶ್, ಬಸವರಾಜನಾಯ್ಕ, ಪಕ್ಷದ ಮುಖಂಡರಾದ ಸುಧಾ ಜಯರುದ್ರೇಶ್, ಎಂ.ಬಿ. ನಂದೀಶ್, ತುಳಸಿ ಮುನಿರಾಜ ಗೌಡ, ಮತ್ತಿತರರು ಉಪಸ್ಥಿತರಿದ್ದರು.
ಸಹನಾ ಪ್ರಾರ್ಥಿಸಿದರು. ಬಿ.ಎಸ್. ಜಗದೀಶ್ ನಿರೂಪಿಸಿದರು.