ಜಿಲ್ಲೆಯಾದ್ಯಂತ ಇಂದಿನಿಂದ `ಸಕಾಲ’ ಸಪ್ತಾಹ

ರಾಜ್ಯದ 98 ಇಲಾಖೆಗಳಲ್ಲಿ 1025 ಸೇವೆಗಳು ಸಕಾಲ ವ್ಯಾಪ್ತಿಯಲ್ಲಿವೆ. – ಡಾ.ಬಿ.ಆರ್.ಮಮತ, ನಿರ್ದೇಶಕರು, ಸಕಾಲ ಮಿಷನ್

ದಾವಣಗೆರೆ, ನ.29-  ನಾಗರಿಕರಿಗೆ ನಿಗದಿತ ಕಾಲ ಮಿತಿಯಲ್ಲಿ ಸೇವೆಗಳನ್ನು ಒದಗಿಸುವ ಉದ್ದೇಶದಿಂದ ಜಾರಿಗೆ ತರಲಾಗಿರುವ ಸಕಾಲ ಯೋಜನೆಯನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ವಿವಿಧ ಇಲಾಖೆಗಳಲ್ಲಿ ಬಾಕಿ ಉಳಿದಿರುವ ಸಕಾಲ ಅರ್ಜಿಗಳು ಹಾಗೂ ಮೇಲ್ಮನವಿಗಳನ್ನು ತ್ವರಿತ ವಿಲೇವಾರಿಗಾಗಿ ಇಂದಿ ನಿಂದ ಬರುವ ಡಿಸೆಂಬರ್ 19 ವರೆಗೆ  ಸಕಾಲ ಸಪ್ತಾಹ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ಸಕಾಲ ಮಿಷನ್ ನಿರ್ದೇಶಕರಾದ ಡಾ.ಬಿ.ಆರ್.ಮಮತ ತಿಳಿಸಿದರು.

ರಾಜ್ಯದ ಎಲ್ಲಾ ಜಿಲ್ಲೆಗಳ ಅಪರ ಜಿಲ್ಲಾಧಿಕಾರಿಗಳು ಹಾಗೂ ಸಕಾಲ ವ್ಯಾಪ್ತಿಗೆ ಒಳಪಡುವ ಇಲಾಖೆಗಳ ಅಧಿಕಾರಿಗಳೊಂ ದಿಗೆ ವಿಡಿಯೋ ಸಂವಾದ ಕಾರ್ಯ ಕ್ರಮದಲ್ಲಿ ಅವರು ಮಾತನಾಡಿದರು.

ನವೆಂಬರ್ 30 ರಿಂದ ಡಿಸೆಂಬರ್ 05 ರವರೆಗೆ ಕಂದಾಯ ಇಲಾಖೆ, ನಗರಾಭಿವೃದ್ಧಿ ಇಲಾಖೆ, ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಹಾಗೂ ಸಾರಿಗೆ ಇಲಾಖೆ ಒಳಗೊಂಡಂತೆ ನಾಲ್ಕು ಇಲಾಖೆಗಳಿಗೆ ಸಂಬಂಧಿಸಿದ ಪ್ರಕರಣಗಳ ವಿಲೇವಾರಿ,   ಡಿಸೆಂಬರ್ 07 ರಿಂದ 11 ರವರೆಗೆ  ಗ್ರಾಮೀಣಾಭಿವೃದ್ಧಿ ಇಲಾಖೆಗೆ ಸಂಬಂಧಿಸಿದಂತೆ ಪ್ರಕರಣಗಳ ವಿಲೇವಾರಿ ಹಾಗೂ ಡಿಸೆಂಬರ್ 14 ರಿಂದ 19ರವರೆಗೆ ಸಕಾಲ ವ್ಯಾಪ್ತಿಗೆ ಒಳಪಡುವ ಉಳಿದ ಎಲ್ಲ  ಇಲಾಖೆಗಳ ಪ್ರಕರಣಗಳ ಅರ್ಜಿ ವಿಲೇವಾರಿಗಳ ಕುರಿತಂತೆ ಸಪ್ತಾಹ ಆಚರಿಸಲಾಗುವುದು ಎಂದರು.

ಸಪ್ತಾಹದಲ್ಲಿ ಬಾಕಿ ಅರ್ಜಿಗಳ ವಿಲೇವಾರಿ, ಅವಧಿ ಮೀರಿ ಬಾಕಿ ಉಳಿಸಿಕೊಂಡ ಅರ್ಜಿಗಳ ವಿಲೇವಾರಿ ಮಾಡುವುದು,  ಸಕಾಲದಲ್ಲಿ ಸ್ವೀಕರಿಸಿದ ಎಲ್ಲ ಹೊಸ ಹಾಗೂ ಹಳೆಯ ಪ್ರಕರಣಗಳ ವಿಲೇವಾರಿಗೆ ಕ್ರಮ ಕೈಗೊಳ್ಳುವುದಾಗಿದೆ. ಸಂಬಂಧಿಸಿದ ಇಲಾಖೆಗಳಲ್ಲಿ ಸಕಾಲದಡಿ ಸ್ವೀಕೃತಿಯಾಗಿರುವ ಅರ್ಜಿಗಳ ವಿಲೇವಾರಿಗೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದ ಅವರು, ಸಕಾಲ ಯೋಜನೆಯಡಿ ಬರುವ ಅರ್ಜಿಗಳನ್ನು ಸಕಾಲದಡಿಯಲ್ಲಿಯೇ ಸ್ವೀಕರಿಸಬೇಕು. ಕೆಲವು ಇಲಾಖೆಗಳಲ್ಲಿ ಅರ್ಜಿಗಳನ್ನು ಸಕಾಲದಡಿ ಸ್ವೀಕರಿಸದೇ ಇರುವುದರಿಂದ ಶೂನ್ಯ ಸ್ವೀಕೃತಿ ಆಗುತ್ತಿರುವುದು ಕಂಡು ಬರುತ್ತಿದೆ.  ಆದ್ದರಿಂದ ಸಕಾಲದಲ್ಲಿ ಬರುವ ಅರ್ಜಿಗಳನ್ನು ಕಡ್ಡಾಯವಾಗಿ ನೋಂದಾಯಿಸಬೇಕು ಎಂದರು.

ಈಗಾಗಲೇ ಸ್ವೀಕರಿಸಿ ವಿಲೇಯಾಗದ ಅರ್ಜಿಗಳು ಹಾಗೂ ಹೊಸದಾಗಿ ಸ್ವೀಕರಿಸಿದ ಅರ್ಜಿಗಳನ್ನು ಈ ಸಪ್ತಾಹದಲ್ಲಿ ವಿಲೇ ಮಾಡಬೇಕು. ಸಕಾಲ ಸಪ್ತಾಹ ಕಾರ್ಯಕ್ರಮ ಕುರಿತಂತೆ ವ್ಯಾಪಕ ಪ್ರಚಾರ ಕಾರ್ಯಗಳನ್ನು ಕೈಗೊಳ್ಳಬೇಕು, ಸಕಾಲ ಯೋಜನೆ ಕುರಿತಂತೆ ಸಾರ್ವಜನಿಕರಿಗೆ ಮಾಹಿತಿ ಮತ್ತು ಜಾಗೃತಿ ಮೂಡಿಸಬೇಕು. ಆಯಾ ಇಲಾಖೆಗಳು ಕಡ್ಡಾಯವಾಗಿ ಸಪ್ತಾಹದ ಅಂಗವಾಗಿ ಇಲಾಖೆಯ ಸೇವೆಗಳು, ವಿಲೇವಾರಿ ಸಮಯ ಕುರಿತಂತೆ ಇಲಾಖೆಗಳಲ್ಲಿ ನಾಮಫಲಕ ಅಳವಡಿಸಬೇಕು. ಇದರೊಂ ದಿಗೆ ಸಪ್ತಾಹದ ಬ್ಯಾನರ್ ಅಳವಡಿಸಬೇಕು. ಕಚೇರಿಯ ಪ್ರವೇಶ ದ್ವಾರದಲ್ಲಿ ಹೆಲ್ಪ್ ಡೆಸ್ಕ್ ಸ್ಥಾಪಿಸಿ ಜನರಿಗೆ  ಮಾಹಿತಿ ನೀಡಬೇಕು ಎಂದು ಸೂಚನೆ ನೀಡಿದರು.

ವಿಡಿಯೋ ಸಂವಾದದಲ್ಲಿ ಅಪರ ಜಿಲ್ಲಾಧಿಕಾರಿ ಪೂಜಾರ್‌ ವೀರಮಲ್ಲಪ್ಪ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಾದ ನಜ್ಮಾ, ಮಹಾನಗರ ಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ, ವಾರ್ತಾಧಿಕಾರಿ ಅಶೋಕ್‌ಕುಮಾರ್‌ ಸೇರಿದಂತೆ ಇತರೆ ಇಲಾಖಾ ಅಧಿಕಾರಿಗಳು ಭಾಗವಹಿಸಿದ್ದರು.

error: Content is protected !!