ನಿಗಮ: ವೀರಶೈವ ಮಹಾಸಭಾ ಸಂಭ್ರಮ

ನಿಗಮಕ್ಕೆ 1000 ಕೋಟಿ ರೂ.ಗಳ ಅನುದಾನ ನೀಡಲಿ : ದೇವರಮನೆ ಶಿವಕುಮಾರ್‌

ವೀರಶೈವ-ಲಿಂಗಾಯತ ಎಲ್ಲಾ ಒಳ ಪಂಗಡಗಳಿಗೂ ಶೇ. 16 ಮೀಸಲಾತಿ ನೀಡಲಿ

ದಾವಣಗೆರೆ, ನ.17- ಕರ್ನಾಟಕ ವೀರಶೈವ – ಲಿಂಗಾಯತ ಅಭಿವೃದ್ಧಿ ನಿಗಮವನ್ನು ಸ್ಥಾಪಿಸುವ ಸರ್ಕಾರದ ನಿರ್ಧಾರದ ಹಿನ್ನೆಲೆಯಲ್ಲಿ ನಗರದಲ್ಲಿ ಇಂದು ಸಂಜೆ ವೀರಶೈವ ಮಹಾಸಭಾ ಜಿಲ್ಲಾ ಹಾಗೂ ನಗರ ಯುವ ಘಟಕದ ವತಿಯಿಂದ ಸಂಭ್ರಮಾಚರಿಸಲಾಯಿತು.

ಕಾಯಿಪೇಟೆಯ ಶ್ರೀ ಬಸವೇಶ್ವರ ದೇವಸ್ಥಾನದ ಮುಂಭಾಗ ವೀರಶೈವ ಮಹಾಸಭಾ ಜಿಲ್ಲಾಧ್ಯಕ್ಷ ದೇವರಮನೆ ಶಿವಕುಮಾರ್ ಹಾಗೂ ರಾಜ್ಯ ಯುವ ಘಟಕದ ಉಪಾಧ್ಯಕ್ಷ ಶ್ರೀನಿವಾಸ್ ಶಿವಗಂಗಾ ಅವರ ಮುಂದಾಳತ್ವದಲ್ಲಿ ಪಟಾಕಿ ಸಿಡಿಸಿ ಸಿಹಿ ಹಂಚುವ ಮೂಲಕ ಸಂಭ್ರಮಾಚರಿಸಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಧನ್ಯವಾದ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ದೇವರಮನೆ ಶಿವಕುಮಾರ್, ವೀರಶೈವ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷ  ಡಾ. ಶಾಮನೂರು ಶಿವಶಂಕರಪ್ಪ ಅವರು ಹಲವು ದಿನಗಳ ಹಿಂದೆ ನೀಡಿದ್ದ ಮನವಿಗೆ ಸ್ಪಂದಿಸಿ, ವೀರಶೈವ – ಲಿಂಗಾಯತ ಸಮಾಜದ ಸರ್ವತೋಮುಖ ಅಭಿವೃದ್ಧಿಗಾಗಿ ಕರ್ನಾಟಕ ವೀರಶೈವ -ಲಿಂಗಾಯತ ಅಭಿವೃದ್ಧಿ ನಿಗಮವನ್ನು ಸ್ಥಾಪಿಸುವ ಐತಿಹಾಸಿಕ ನಿರ್ಧಾರವನ್ನು ಕೈಗೊಂಡಿರುವ ಮುಖ್ಯಮಂತ್ರಿಗಳಿಗೆ ಧನ್ಯವಾದ. ಈ ಕೂಡಲೇ ನಿಗಮಕ್ಕೆ 1000 ಕೋಟಿ ರೂ.ಗಳ ಅನುದಾನ ಬಿಡುಗಡೆಗೊಳಿಸಬೇಕು. ರಾಜ್ಯದಲ್ಲಿರುವ ವೀರಶೈವ – ಲಿಂಗಾಯತ ಎಲ್ಲಾ ಒಳ ಪಂಗಡಗಳಿಗೂ ಶೇ. 16 ಮೀಸಲಾತಿ ನೀಡಬೇಕೆಂದು ಮನವಿ ಮಾಡಿದರು.

ಸಭಾದ ನಗರ ಯುವ ಘಟಕದ ಅಧ್ಯಕ್ಷ ಶಂಭು ಉರೇಕೊಂಡಿ ನೇತೃತ್ವ ವಹಿಸಿದ್ದರು. ನಗರ ಪಾಲಿಕೆ ಸದಸ್ಯರುಗಳಾದ ಸ್ವಾಗಿ ಶಾಂತಕುಮಾರ್, ಶಿವನಗೌಡ ಪಾಟೀಲ್, ಜಿಲ್ಲಾ ಯುವ ಘಟಕದ ಅಧ್ಯಕ್ಷ ಆರ್.ಟಿ. ಪ್ರಶಾಂತ್, ನಗರ ಘಟಕದ ಪ್ರಧಾನ ಕಾರ್ಯದರ್ಶಿ ಶ್ರೀಕಾಂತ್ ನೀಲಗುಂದ, ಅವಿನಾಶ್ ಬಂಡೋಲ್, ಉಪಾಧ್ಯಕ್ಷರುಗಳಾದ ರಾಜು ನೀಲಗುಂದ್, ಗುರು ಸೋಗಿ, ಅಭಿಷೇಕ್ ಎಳೆಹೊಳೆ, ಕಾರ್ಯದರ್ಶಿಗಳಾದ ಅಖಿಲೇಶ್ ಕೊಗುಂಡಿ, ಟಿಂಕರ್ ಮಂಜಣ್ಣ, ಅವಿನಾಶ್ ಬಂದೋಳ್, ನಾಗರಾಜ್ ಬೆಳವನೂರು, ಯೋಗೇಶ್ ದೇವರಮನಿ, ಗಂಗಾಧರ, ಜಯದೇವ, ಮಹಿಳಾ ಘಟಕದ ನಗರ ಅಧ್ಯಕ್ಷೆ ಪುಷ್ಪಾ ವಾಲಿ, ಶೋಭಾ ಕೊಟ್ರೇಶ್, ಮಂಗಳ, ಮಂಜುಳಾ ಇಟಗಿ ಸೇರಿದಂತೆ ಇತರರು ಇದ್ದರು.

error: Content is protected !!