ಮಲ್ಲಪ್ಪನವರ ಆದರ್ಶ, ತತ್ವಗಳು ಸಮಾಜಕ್ಕೆ ದಾರಿದೀಪ

ಶ್ರದ್ಧಾಂಜಲಿ ಸಮಾರಂಭದಲ್ಲಿ ಕಾಗಿನೆಲೆ ಶ್ರೀ ನಿರಂಜನಾನಂದಪುರಿ ಸ್ವಾಮೀಜಿ ಆಶೀರ್ವಚನ

ದಾವಣಗೆರೆ, ನ. 3- ಕೆ. ಮಲ್ಲಪ್ಪನವರ ಆದರ್ಶ ತತ್ವಗಳು ಸಮಾಜಕ್ಕೆ ದಾರಿದೀಪವಾಗ ಬೇಕಿದೆ. ಸಮಾಜ ಅವರ ಹಾದಿಯಲ್ಲಿ ನಡೆದಾಗ ಮಾತ್ರ ಅವರ ಆತ್ಮಕ್ಕೆ ಶಾಂತಿ ಸಿಗಲಿದೆ ಎಂದು ಕಾಗಿನೆಲೆ ಕನಕ ಗುರು ಪೀಠದ ಜಗದ್ಗುರು ಶ್ರೀ ನಿರಂಜನಾನಂದಪುರಿ ಸ್ವಾಮೀಜಿ ಹೇಳಿದರು. 

ನಗರದ ಶ್ರೀ ಬೀರೇಶ್ವರ ಭವನದಲ್ಲಿ ಮಾಜಿ ಶಾಸಕ ಮಲ್ಲಪ್ಪನವರ ಶ್ರದ್ಧಾಂಜಲಿ ಸಮಾರಂಭದ ದಿವ್ಯ ಸಾನ್ನಿಧ್ಯ ವಹಿಸಿ ಶ್ರೀಗಳು ಆಶೀರ್ವಚನ ನೀಡಿದರು. 

ಜಿಲ್ಲೆ ಹಾಗೂ ಸಮಾಜಕ್ಕೆ ಕೆ.ಮಲ್ಲಪ್ಪ ಒಂದು ಶಕ್ತಿಯಾಗಿದ್ದರು. ಅವರ ಅಗಲಿಕೆಯಿಂದ ಸಮಾಜ ದೊಡ್ಡ ಶಕ್ತಿ ಕಳೆದುಕೊಂಡಿದೆ ಎಂದರು. 

ನಾವು ಇಂದು ಸಮಾಜಕ್ಕೆ ಸ್ವಾಮೀಜಿಯಾಗಲು ಮಲ್ಲಪ್ಪನವರೇ ಕಾರಣ. 1991ರಲ್ಲಿ ನಮ್ಮ ತಂದೆಯವರಿಗೆ ಹೇಳಿ ದತ್ತು ಪಡೆದರು. ಅಂದು ಮಲ್ಲಪ್ಪನವರು ನಮ್ಮ ತಂದೆಗೆ ಬರೆದ ಪತ್ರದಿಂದ ನಾವು ಜಗದ್ಗುರುಗಳಾಗಲು ಕಾರಣವಾಗಿದೆ ಎಂದು ನೆನಪಿಸಿಕೊಂಡರು.

ಕರ್ನಾಟಕ ಪ್ರದೇಶ ಕುರುಬರ ಸಂಘ ಹಾಗೂ ಕಾಗಿನೆಲೆ ಕನಕ ಗುರುಪೀಠದ ಸ್ಥಾಪನೆಗೆ ಮಲ್ಲಪ್ಪನವರ ಶ್ರಮ ಕೂಡ ಮರೆಯುವಂತದ್ದಲ್ಲ ಎಂದ ಶ್ರೀಗಳು,  ಹರಿಹರ ತಾಲ್ಲೂಕಿನ ಡಾ. ಕೆ.ಪಿ. ಸಿದ್ದಬಸಪ್ಪ, ಡಾ|| ವೈ ನಾಗಪ್ಪ ಅವರುಗಳ ಅಗಲಿಕೆಯಿಂದ ಸಮಾಜಕ್ಕೆ ಅನಾಥ ಪ್ರಜ್ಞೆ ಕಾಡುವಂತಾಗಿದೆ ಎಂದರು. 

ಚಂದ್ರಗಿರಿ ಅಥಣಿ ಮಠದ ಶ್ರೀ ಮುರಳೀಧರ ಸ್ವಾಮೀಜಿ ಮಾತನಾಡಿ, ಕೆ. ಮಲ್ಲಪ್ಪ ಜನ ಸೇವಕರಾಗಿ ಮುಕ್ತಿ ಹೊಂದಿದ್ದಾರೆ. ಜನ ಸೇವೆ ಸಮಾಜ ಸೇವೆ ದೇವರ ಸೇವೆಯೆಂದು ತಿಳಿದು ಕಾಯಕಯೋಗಿ ಆಗಿದ್ದರು ಎಂದರು.

ವಿಧಾನ ಪರಿಷತ್ ಮಾಜಿ ಮುಖ್ಯ ಸಚೇತಕ ಡಾ. ಎ.ಹೆಚ್. ಶಿವಯೋಗಿ ಸ್ವಾಮಿ, ಮಲ್ಲಪ್ಪನವರು ಸರಳ ಸಜ್ಜನಿಕೆಯ ವ್ಯಕ್ತಿ ಎಂದರು.

ನಗರ ಕುರುಬರ ಸಂಘದ ಪ್ರಧಾನ ಕಾರ್ಯದರ್ಶಿ ಬಳ್ಳಾರಿ ಷಣ್ಮುಖಪ್ಪ, ದೂಡ ಮಾಜಿ ಅಧ್ಯಕ್ಷ ಟಿ. ದಾಸಕರಿಯಪ್ಪ, ನಗರ ಕುರುಬ ಸಂಘದ ಉಪಾಧ್ಯಕ್ಷ  ಗೌಡ್ರು ಚನ್ನಬಸಪ್ಪ, ವಾರ್ತಾ ಇಲಾಖೆಯ ನಿವೃತ್ತ ವಾರ್ತಾಧಿಕಾರಿ ಎಂ. ಕರಿಯಪ್ಪ ಮಾತನಾಡಿದರು. 

 ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್, ಜಿಲ್ಲಾ ಕುರುಬ ಸಮಾಜದ ಅಧ್ಯಕ್ಷ ಕೆಂಗೋ ಹನುಮಂತಪ್ಪ, ಮಾಜಿ ಮೇಯರ್ ಹೆಚ್.ಬಿ. ಗೋಣೆಪ್ಪ, ಜೆ.ಕೆ. ಕೊಟ್ರಬಸಪ್ಪ,  ಕೆ ಮಲ್ಲಪ್ಪನವರ ಪುತ್ರ ಕೆ. ವಿವೇಕ್, ಅಳಿಯ ಕೆ. ಓಂಕಾರಪ್ಪ, ಜಿಪಂ ಮಾಜಿ ಅಧ್ಯಕ್ಷ ದ್ಯಾಮಣ್ಣ, ಜಿಲ್ಲಾ ಕುರುಬರ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಕುಂಬಳೂರು ವಿರೂಪಾಕ್ಷಪ್ಪ, ಕಾರ್ಯದರ್ಶಿ ಮಳಲ್ಕೆರೆ ಎಸ್.ಹೆಚ್. ಪ್ರಕಾಶ್, ಪಾಲಿಕೆ ಸದಸ್ಯರುಗಳಾದ ಜೆ.ಎನ್. ಶ್ರೀನಿವಾಸ್,  ನಾಗರಾಜ್, ದೇವರಮನೆ ಶಿವಕುಮಾರ್, ಇಟ್ಟಿಗುಡಿ ಮಂಜುನಾಥ್, ಸಮಾಜದ ಮುಖಂಡರುಗಳಾದ ದಿನೇಶ್ ಕೆ. ಶೆಟ್ಟಿ, ಕುಣೆಬೆಳಕೆರೆ ದೇವೇಂದ್ರಪ್ಪ, ಬಿ. ದಿಳ್ಳೆಪ್ಪ, ಹೆಚ್.ಜಿ. ಸಂಗಪ್ಪ, ಬಿ. ಲಿಂಗರಾಜು, ಸಾಯಿನಾಥ, ತಿರುಕಪ್ಪ, ರೇವಣ್ಣ, ಮಾಜಿ ಮೇಯರ್ ಎನ್.ಎನ್. ಗುರುನಾಥ್ ಇದ್ದರು.  

ಚಂದು, ಪ್ರಿಯ  ಪ್ರಾರ್ಥಿಸಿದರು. ಭಾನುವಳ್ಳಿ ಚಂದ್ರಪ್ಪ ನಿರೂಪಿಸಿದರು.  ಪ್ರಕಾಶ್ ಸ್ವಾಗತಿಸಿದರು. 

error: Content is protected !!