ದಾವಣಗೆರೆ, ನ.1- ಸ್ಮಾರ್ಟ್ ಸಿಟಿ ಯೋಜನೆಯಡಿ ನಗರದಲ್ಲಿನ ಟ್ರಾಫಿಕ್ ವ್ಯವಸ್ಥೆಯನ್ನು ಸುಧಾರಿಸುವುದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ತಿಳಿಸಿದರು.
ಇಂದಿಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಟ್ರಾಫಿಕ್ ವ್ಯವಸ್ಥೆ ಸುಧಾರಣೆಗಾಗಿ ಐದು ರೀತಿಯ ಕ್ಯಾಮರಾಗಳನ್ನು ಅಳವಡಿಸಲಾಗುತ್ತಿದೆ. ಈ ಎಲ್ಲಾ ಕ್ಯಾಮರಾಗಳ ನಿಯಂತ್ರಣ ಕಾರ್ಯ ಜಿಲ್ಲಾಧಿಕಾರಿಗಳ ಕಚೇರಿ ಬಳಿ ನೂತನವಾಗಿ ನಿರ್ಮಾಣವಾಗುತ್ತಿರುವ ಕಮಾಂಡೆಂಟ್ ಕಂಟ್ರೋಲ್ ಕಚೇರಿಯಲ್ಲಿ ನಡೆಯಲಿದೆ ಎಂದು ಹೇಳಿದರು.
ಎಫ್ಟಿವಿಆರ್ ಕ್ಯಾಮರಾಗಳ ಮೂಲಕ ಸಂಚಾರಿ ನಿಯಮ ಉಲ್ಲಂಘಿಸುವ ವಾಹನಗಳ ನಂಬರ್ ಪ್ಲೇಟ್ ಗಳನ್ನು ಗುರುತಿಸಿ ಅವರ ವಿಳಾಸಕ್ಕೆ ನೋಟಿಸ್ ನೀಡುವ ಕಾರ್ಯ ಶೀಘ್ರದಲ್ಲೇ ಚಾಲನೆಗೆ ಬರಲಿದೆ.
ಸ್ಮಾರ್ಟ್ ಪಾರ್ಕಿಂಗ್ ಕೂಡ ಆರಂಭಗೊಳ್ಳಲಿದೆ. ಹೀಗೆ ಅನೇಕ ಬದಲಾವಣೆಗಳನ್ನು ಹಂತ ಹಂತವಾಗಿ ಜಾರಿಗೆ ತರುವ ಮೂಲಕ ನಗರದಲ್ಲಿ ವಾಹನ ಸಂಚಾರ ವ್ಯವಸ್ಥೆಗೆ ಹೊಸ ಆಯಾಮ ನೀಡಲಾಗುವುದು. ನಗರ ವ್ಯಾಪ್ತಿಯಲ್ಲಿ ವಾಹನಗಳ ವೇಗ ಮಿತಿ 40 ಕಿ.ಮೀ ನಿಗದಿಪಡಿಸಲಾಗಿದೆ ಎಂದರು.