ಆಯುಷ್ಮಾನ್ ಯೋಜನೆಯಡಿ ಕೋವಿಡ್ ಚಿಕಿತ್ಸೆ ಉಚಿತ

ದಾವಣಗೆರೆ, ಜು.15- ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ (ಎಬಿ-ಎಆರ್‍ಕೆ)ಯೋಜನೆಯಡಿ ಕೋವಿಡ್-19 ರೋಗಿಗಳಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಹಾಗೂ ನೋಂದಾಯಿತ ಖಾಸಗಿ ನರ್ಸಿಂಗ್ ಹೋಂಗಳಲ್ಲಿ ಉಚಿತ ಚಿಕಿತ್ಸೆ ಲಭ್ಯವಿರುತ್ತದೆ.

ಜಿಲ್ಲೆಯ ಸಾಮಾನ್ಯ ಸೇವಾ ಸಿಂಧು ಕೇಂದ್ರಗಳು, ಗ್ರಾ.ಪಂ ವ್ಯಾಪ್ತಿಯಲ್ಲಿ ಬರುವ ಬಾಪೂಜಿ ಸೇವಾ ಕೇಂದ್ರಗಳು, ಜಿಲ್ಲಾ ಆಸ್ಪತ್ರೆ ಹಾಗೂ ಎಲ್ಲಾ ತಾಲ್ಲೂಕು ಆಸ್ಪತ್ರೆಗಳು ಮತ್ತು ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಆರೋಗ್ಯ ಕಾರ್ಡ್‍ಗಳನ್ನು ನೋಂದಾಯಿಸಿ ನೀಡಲಾಗುತ್ತಿದ್ದು, ಕಾರ್ಡ್ ಪಡೆಯಲು ಬರುವ ಸಾರ್ವಜನಿಕರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಮತ್ತು ಸಾಮಾಜಿಕ ಅಂತರ ಕಾಯ್ದುಕೊಂಡು, ಕೈಗಳಿಗೆ ಮದ್ಯಸಾರ ಆಧಾರಿತ (ಸ್ಯಾನಿಟೈಸರ್) ದ್ರಾವಣದಿಂದ ಬಯೋಮೆಟ್ರಿಕ್ ಪರೀಕ್ಷೆಗೆ ಒಳಗಾಗುವ ಮುನ್ನ ಮತ್ತು ನಂತರ ಶುಚಿಗೊಳಿಸಿಕೊಳ್ಳುವುದು ಕಡ್ಡಾಯವಾಗಿರುತ್ತದೆ.

ಈ ಯೋಜನೆಯಡಿ ನಾನ್-ಕೋವಿಡ್ ರೋಗಿಗಳಿಗೆ 1650 ಕಾಯಿಲೆಗಳಿಗೆ ಚಿಕಿತ್ಸಾ ವಿಧಾನಗಳು ಲಭ್ಯವಿದ್ದು, ಅದರಲ್ಲಿ ಸಾಮಾನ್ಯ ದ್ವಿತೀಯ ಹಂತದ 291, ಕ್ಲಿಷ್ಟಕರ ದ್ವಿತೀಯ ಹಂತದ 254 ಚಿಕಿತ್ಸೆ ವಿಧಾನಗಳು, ತೃತೀಯ ಹಂತದ 900 ಚಿಕಿತ್ಸಾ ವಿಧಾನಗಳು ಹಾಗೂ 169 ತುರ್ತು ಚಿಕಿತ್ಸೆಗಳಿಗೆ ಯಾವುದೇ ರೆಫೆರಲ್ ಚೀಟಿ ಇಲ್ಲದೇ ನೇರವಾಗಿ ನೋಂದಾಯಿತ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆಯಬಹುದಾಗಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ತಿಳಿಸಿದ್ದಾರೆ.

ಆಯುಷ್ಮಾನ್ ಯೋಜನೆಯಡಿ ಬಿಪಿಎಲ್ ಕುಟುಂಬಗಳಿಗೆ 1 ವರ್ಷಕ್ಕೆ 5 ಲಕ್ಷ ರೂ.
ವರೆಗೆ ಉಚಿತ ಚಿಕಿತ್ಸೆ ಪಡೆಯಬಹುದಾಗಿರುತ್ತದೆ. ಅದೇ ರೀತಿ ಎಪಿಎಲ್ ಕುಟುಂಬಗಳು ಚಿಕಿತ್ಸೆಗೆ ತಗುಲಿದ ಒಟ್ಟು ಬಿಲ್ಲಿನ ದರದಲ್ಲಿ ಶೇ.30 ರಷ್ಟು ವಾರ್ಷಿಕ ಪ್ರತಿ ಕುಟುಂಬಕ್ಕೆ 1.5 ಲಕ್ಷ ರೂ. ವರೆಗೆ ಉಚಿತವಾಗಿ ಸರ್ಕಾರಿ ಹಾಗೂ ನೋಂದಾಯಿತ ಖಾಸಗಿ ಆಸ್ಪತ್ರೆಗಳಲ್ಲಿ ಉಚಿತ ಆರೋಗ್ಯ ಸೇವೆಯನ್ನು ಪಡೆಯಬಹುದಾಗಿರುತ್ತದೆ.

 

error: Content is protected !!