ಪಾಲಿಕೆ ಕಂದಾಯಕ್ಕೆ ಕನ್ನ: ಮೂವರ ಬಂಧನ

ದಾವಣಗೆರೆ, ಅ. 14- ಮಹಾನಗರ ಪಾಲಿಕೆಯ ನಕಲಿ ಸೀಲು, ಸಹಿ ಬಳಸಿ ಜನತೆಗೆ ವಂಚಿಸಿ, ಪಾಲಿಕೆಗೆ ಕೋಟ್ಯಾಂತರ ರೂ. ನಷ್ಟ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಈ ಸಂಬಂಧ ಮೂವರನ್ನು ಬಂಧಿಸಿದ್ದು, ತನಿಖೆ ನಡೆಯುತ್ತಿದೆ.

ಮಹಾನಗರ ಪಾಲಿಕೆ ಸಭಾಂಗಣದಲ್ಲಿ ಬುಧವಾರ ಸಂಜೆ ಪತ್ರಿಕಾಗೋಷ್ಠಿ ನಡೆಸಿ ಈ ವಿಷಯ ತಿಳಿಸಿದ ಮೇಯರ್ ಬಿ.ಜಿ. ಅಜಯ್ ಕುಮಾರ್, ಮೇಯರ್ ಆಗಿ ಅಧಿಕಾರ ವಹಿಸಿಕೊಂಡು 8 ತಿಂಗಳಿನಿಂದ ಜನತೆಗೆ ವಂಚಿಸುವವರ ಮೇಲೆ ಕಣ್ಣಿಟ್ಟಿದ್ದು, ಅವರನ್ನು ಹಿಡಿಯುವಲ್ಲಿ ಈಗ ಸಫಲರಾಗಿದ್ದೇವೆ ಎಂದರು.

ಶಾಮನೂರಿನ ಸರ್ವೇ ನಂ.208ರಲ್ಲಿ 20×30 ಅಳತೆಯ ನಿವೇಶನವನ್ನು ಆರ್.ನೇತ್ರಾವತಿ ಕೋಂ ಹನುಮಂತಪ್ಪ ಹಾಗೂ ರಾಜೇಶ್ವರಿ ಕೋಂ ವಿಜಯಕುಮಾರ್ ಇವರ ಹೆಸರಿಗೆ ನಕಲಿ ಮೊಹರು ಹಾಗೂ ನಕಲಿ ಕಂದಾಯ ಅಧಿಕಾರಿಗಳ  ಸಹಿ ಮಾಡಿ ವಂಚನೆ ಮಾಡಲಾಗಿದೆ. ಈ ಬಗ್ಗೆ ಪಾಲಿಕೆ ನೀಡಿದ ದೂರಿನನ್ವಯ ಪೊಲೀಸರು, ಮಹೇಶ್  ಹಾಗೂ ಆತನಿಗೆ ಸಹಾಯಕರಾಗಿದ್ದ ಗುರುರಾಜ್ ಹಾಗೂ ವೆಂಕಟೇಶ್ ಎನ್ನುವವರನ್ನು ಬಂಧಿಸಿದ್ದಾರೆ ಎಂದು ವಿವರಿಸಿದರು.

ಕೆಲವು ಸರ್ಕಾರಿ ನೌಕರರು ಸೇರಿದಂತೆ ಅನೇಕರು  ಈ ವಂಚನೆಯ ಜಾಲದಲ್ಲಿ ಶಾಮೀಲಾಗಿರುವ ಬಗ್ಗೆ ಮತ್ತು  ಹಲವಾರು ವರ್ಷಗಳಿಂದ  ಈ ರೀತಿ ಜನತೆಗೆ ವಂಚಿಸಿರುವ  ಅನುಮಾನಗಳಿದ್ದು, ಪೊಲೀಸರ ತನಿಖೆಗೆ ಸಂಪೂರ್ಣ ಸಹಕಾರ ನೀಡಲಾಗುವುದು ಎಂದರು.

ನಗರದ ಜನತೆ ತಾವು ಕಂದಾಯ ಕಟ್ಟಿದ ರಶೀದಿ ಹಾಗೂ ಖಾತೆ ಎಕ್ಸ್ ಟ್ರಾಕ್ಟ್‌ಗಳನ್ನು ಪಾಲಿಕೆ ಕಚೇರಿಗೆ ತಂದು ಪರಿಶೀಲಿಸಿಕೊಳ್ಳಬೇಕು. ಯಾವುದೇ ಮಧ್ಯವರ್ತಿ ಗಳಿಗೆ ಹಣ ನೀಡದೆ ನೇರ ಕಚೇರಿಯಲ್ಲಿ ಹಣ ಪಾವತಿಸ ಬೇಕು ಎಂದು ಅಜಯ್ ಕುಮಾರ್ ಮನವಿ ಮಾಡಿದ್ದಾರೆ. ಪಾಲಿಕೆಯಲ್ಲಿ ಭ್ರಷ್ಟಾಚಾರ ಹಾಗೂ ಮಧ್ಯವರ್ತಿಗಳ ಹಾವಳಿ ತಡೆಯಲು ಎಲ್ಲಾ ಶಾಖೆಗಳಲ್ಲೂ ಸರ್ಕಾರಕ್ಕೆ ತಗಲುವ ಶುಲ್ಕ ಹಾಗೂ ಅಗತ್ಯವಾದ ದಾಖಲಾತಿಗಳ ವಿವರವನ್ನು ಜನರಿಗೆ ತಿಳಿಸಲು ನೋಟಿಸ್ ಬೋರ್ಡ್‌ನಲ್ಲಿ ಪ್ರಚಾರ ಪಡಿಸಲು ಕ್ರಮ ಕೈಗೊಳ್ಳಲಾಗಿದೆ. ಇನ್ನು ಮುಂದೆ ಪಾಲಿಕೆಯಲ್ಲಿ ಯಾವುದೇ ಮಧ್ಯವರ್ತಿಗಳಿಗೆ ಅವಕಾಶ ಕೊಡುವುದಿಲ್ಲ. ಸಾರ್ವಜನಿಕರಿಗೆ ವಂಚನೆಯಾಗಲು ಬಿಡುವುದಿಲ್ಲ ಎಂದು ಗುಡುಗಿದರು.

ಕಂದಾಯದ ಹಣದಲ್ಲಿಯೇ ಮಹಾನಗರ ಪಾಲಿಕೆಯು ಜನತೆಗೆ ಮೂಲ ಸೌಲಭ್ಯಗಳನ್ನು ಕಲ್ಪಿಸುತ್ತದೆ. ಈ ವಂಚಕರು ಪಾಲಿಕೆ ಕಂದಾಯಕ್ಕೆ ಕನ್ನ ಹಾಕಿದ್ದು, ಇದರಿಂದ ಅಭಿವೃದ್ಧಿ ಹೇಗೆ ಸಾಧ್ಯ? ಎಂದು ಪ್ರಶ್ನಿಸಿದರು. ಮುಂದಿನ ದಿನಗಳಲ್ಲಿ ಪಾಲಿಕೆಯ ಪೂರ್ತಿ ಆಡಳಿತ ವ್ಯವಸ್ಥೆಯನ್ನು ಕಂಪ್ಯೂಟರೀಕರಣಗೊಳಿಸುವ ಉದ್ದೇಶವಿದೆ ಎಂದು ಮೇಯರ್  ತಿಳಿಸಿದರು.

error: Content is protected !!