ಕೆಮ್ಮು, ನೆಗಡಿ, ಜ್ವರ ಬಂದರೆ ಕೊರೊನಾ ಬಂದಂತೇನಾ ?

ಜಗಳೂರು, ಜೂ.26- ತಾಲ್ಲೂಕು ಪಂಚಾಯಿತಿ ಸದಸ್ಯರನ್ನು  ಇಲಾಖೆ ಕಾರ್ಯಕ್ರಮಗಳ ಸಭೆಗೆ ಕರೆಯದೆ, ಮಾಹಿತಿಯನ್ನೂ ನೀಡದೆ  ಅಧಿಕಾರಿಗಳೇ  ಕಾರ್ಯಕ್ರಮವನ್ನು ಮಾಡಿಕೊಳ್ಳುತ್ತಿದ್ದಾರೆ. ನಾವೇಕೆ  ಸಾಮಾನ್ಯ ಸಭೆಯಲ್ಲಿ ಭಾಗವಹಿಸಬೇಕು, ನೀವೇ ಮಾಡಿಕೊಳ್ಳಿ ಎಂದು ತಾಲ್ಲೂಕು ಪಂಚಾಯಿತಿ  ಸದಸ್ಯರು ಪಕ್ಷ ಭೇದ ಮರೆತು ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಇಂದು ತಾಲ್ಲೂಕು ಪಂಚಾಯಿತಿ ಅಧ್ಯಕ್ಷರಾದ ಮಂಜುಳಾ ಶಿವಾನಂದಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಇಓ ಅವರನ್ನು ಪ್ರಶ್ನಿಸಿದರು.

ಪಟ್ಟಣದ ತಾಲ್ಲೂಕು ಪಂಚಾಯಿತಿ ಆವರಣದಲ್ಲಿ ಅರಣ್ಯ ಇಲಾಖೆಯಿಂದ ಆಯೋಜನೆ ಮಾಡಿದ್ದ ವಿಶ್ವ ಪರಿಸರ ದಿನಚರಣೆಗೆ ತಾಲ್ಲೂಕು ಪಂಚಾಯಿತಿ ಸದಸ್ಯರನ್ನು ಆಹ್ವಾನಿಸದೇ, ಇಲಾಖಾ ಮಟ್ಟದ ಅಧಿಕಾರಿಗಳು ನಿರಂಕುಶ ಆಡಳಿತ ಮಾಡುತ್ತಿದ್ದಾರೆ.  ರಂಗಯ್ಯನ ದುರ್ಗ ವನ್ಯಜೀವಿ ಧಾಮದಲ್ಲಿ ಯಾರನ್ನೂ ಬಿಟ್ಟುಕೊಳ್ಳದೆ ಜೆ.ಸಿ.ಬಿ.ಯಂತ್ರದ ಮೂಲಕ ಕದ್ದು ಕಾಣದಂತೆ  ಅಧಿಕಾರಿಗಳು ಕಾಮಗಾರಿ ಮಾಡುತ್ತಿದ್ದಾರೆ ಎಂದು ಸದಸ್ಯರು ಆರೋಪಿಸಿದರು.

ಬಸವನಕೋಟೆ ಸಮೀಪ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ 100 ಲೋಡ್ ಮರಳನ್ನು ವಶಪಡಿಸಿಕೊಂಡ ಪ್ರಕರಣ ಹಲವು ಅನುಮಾನ ಗಳಿಗೆ ಎಡೆಮಾಡಿದೆ  ಎಂದು ನೇರವಾಗಿ ತಾಲ್ಲೂಕು ಪಂಚಾಯಿತಿ ಸದಸ್ಯ ಶಂಕರನಾಯ್ಕ  ಅಧಿಕಾರಿಗಳ  ಮೇಲೆ ಹರಿಹಾಯ್ದರು.

ಬಸವನಕೋಟೆ ಪ್ರಾಥಮಿಕ  ಆರೋಗ್ಯ ಕೇಂದ್ರದಲ್ಲಿ  ವೈದ್ಯರು ಮಾತ್ರ ನೆಪ ಮಾತ್ರಕ್ಕೆ ಕೆಲಸ ನಿರ್ವಹಿಸಿ, ಮಧ್ಯಾಹ್ನಕ್ಕೆ ಬಾಗಿಲು ಮುಚ್ಚಿಕೊಂಡು ಹೋಗುತ್ತಿದ್ದಾರೆ ಎಂದು ಸದಸ್ಯರು ದೂರಿದರು.

ವಲಯ ಅರಣ್ಯ ಅಧಿಕಾರಿಗಳು ಸಾಮಾನ್ಯ ಸಭೆಗೆ ಹಾಜರಾಗದೇ, ಸಹಾಯಕ ಸಿಬ್ಬಂದಿಯನ್ನು  ಸಭೆಗೆ ಕಳಿಸಿರುವುದನ್ನು ಗಮನಿಸಿದ ಸದಸ್ಯರು,  ವರದಿ ನೀಡುವುದು ಬೇಡ, ನಿಮ್ಮ ಅಧಿಕಾರಿಯನ್ನು ಕರೆಸಿ ವರದಿ ನೀಡಿ ಎಂದು ವರದಿ ಓದುವುದನ್ನು ತಡೆದು, ಸಹಾಯಕ ಸಿಬ್ಬಂದಿಯನ್ನು   ಹಿಂದಕ್ಕೆ ಕಳಿಸಿದ ಘಟನೆ ಜರುಗಿತು. 

ಈ ಹಿಂದೆ ಕೊರೊನಾ ವೈರಸ್ ಹಿನ್ನೆಲೆಯಲ್ಲಿ ಸರ್ಕಾರಿ ಪರಿಶಿಷ್ಟ ಪಂಗಡ ಪದವಿ ಪೂರ್ವ ಹಾಸ್ಟೆಲ್‍ನಲ್ಲಿ  ಕ್ವಾರಂಟೈನ್‍ನಲ್ಲಿಟ್ಟಿದ್ದ 21 ಜನರಿಗೆ  ಉಪಹಾರ ವ್ಯವಸ್ಥೆ, ಊಟ ನೀರಿನ ವ್ಯವಸ್ಥೆ  ಮಾಡಲಾಗಿದ್ದು  ಅವರು ಈಗ ಆರೋಗ್ಯವಾಗಿರುವ ಹಿನ್ನೆಲೆಯಲ್ಲಿ ಬಿಡಗಡೆ ಮಾಡಲಾಗಿದ್ದು, ಈಗ 8 ಜನರನ್ನು ಕ್ವಾರಂಟೈನ್‌ನಲ್ಲಿರಿಸಲಾಗಿದ್ದು ಅವರಿಗೂ ಸಹ ಊಟ, ಉಪಹಾರ ವ್ಯವಸ್ಥೆ ಶುದ್ಧ ನೀರು ನೀಡುವುದರ ಜೊತೆಗೆ ಪೊಲೀಸ್  ಬಂದೋಬಸ್ತ್ ನೀಡಲಾಗಿದೆ ಎಂದು ಪರಿಶಿಷ್ಟ ಪಂಗಡ ಕಲ್ಯಾಣ ಇಲಾಖೆ  ಅಧಿಕಾರಿ ಮಹೇಶ್ ಮಾಹಿತಿ ನೀಡಿದರು.

ತೋಟಗಾರಿಕೆ ಸಹಾಯಕ ನಿರ್ದೇಶಕ ವೆಂಕಟೇಶಮೂರ್ತಿ ವರದಿ ನೀಡಿ ತರಕಾರಿ, ಈರುಳ್ಳಿ, ಹೂವು ಸೇರಿದಂತೆ ತೋಟಗಾರಿಕೆ ಬೆಳೆಗಳಿಗೆ ಸರ್ಕಾರದಿಂದ ಸಹಾಯ ಧನ ಪಡೆಯಲು  ಅರ್ಜಿ ಸಲ್ಲಿಸಲು ಜೂನ್ 30 ಕೊನೆ ದಿನಾಂಕವಾಗಿದೆ.  ಹೆಚ್ಚಿನ ಮಾಹಿತಿಗಾಗಿ ಇಲಾಖೆ ಸಂಪರ್ಕಿಸಲು ತಿಳಿಸಿದರು. 

ಈ ಸಂದರ್ಭದಲ್ಲಿ ತಾಪಂ ಸದಸ್ಯ ಶಂಕರ ನಾಯ್ಕ ಮಾತನಾಡಿ, 2020ನೇ ಸಾಲಿನಲ್ಲಿ  ರೈತರಿಗೆ ಏಕೆ ತೆಂಗಿನ ಸಸಿ ನೀಡಿಲ್ಲ ಎಂದು ಪ್ರಶ್ನಿಸಿದರು. ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಲೋಕೇಶ್, ಗ್ರಾಮೀಣ ನೀರು, ನೈರ್ಮಲ್ಯ ಇಲಾಖೆ ಎಇಇ ಹೇಮೋಜಿನಾಯ್ಕ್, ಬಿಸಿಎಂ ಇಲಾಖೆ ವಿಸ್ತರಣಾಧಿಕಾರಿ ವೆಂಕಟೇಶಮೂರ್ತಿ, ತಾ.ವೈದ್ಯಾಧಿಕಾರಿ ಡಾ.ನಾಗರಾಜ್ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಪ್ರಗತಿ ವರದಿ ನೀಡಿದರು.

ಸಭೆಯಲ್ಲಿ  ತಾಪಂ ಉಪಾಧ್ಯಕ್ಷ ಮುದೇಗೌಡ್ರು ಬಸವರಾಜ, ಸ್ಥಾಯಿ ಸಮಿತಿ ಅಧ್ಯಕ್ಷ ಸಿದ್ದೇಶ್ ಮತ್ತಿತರರು ಭಾಗವಹಿಸಿದ್ದರು.

error: Content is protected !!