ಶಿಕ್ಷಣ, ಸಂಘಟನೆ, ಹೋರಾಟದಿಂದ ಸಮಾಜದಲ್ಲಿ ಯಶಸ್ಸು ಸಾಧ್ಯ

ರಾಣೇಬೆನ್ನೂರಿನಲ್ಲಿ ಐಪಿಎಸ್ ಅಧಿಕಾರಿ ರವಿ ಡಿ.ಚನ್ನಣ್ಣನವರ್ ಅಭಿಮತ

ರಾಣೇಬೆನ್ನೂರು, ಡಿ. 26- ಶಿಕ್ಷಣ, ಸಂಘಟನೆ, ಹೋರಾಟ ಇವುಗಳಿಂದ ಸಮಾಜದಲ್ಲಿ ಯಶಸ್ಸು ಗಳಿಸಲು ಸಾಧ್ಯ ಎಂದು ಐಪಿಎಸ್ ಅಧಿಕಾರಿ ರವಿ ಡಿ.ಚನ್ನಣ್ಣನವರ್ ಹೇಳಿದರು.

ನಗರದ ಶ್ರೀ ಮಹರ್ಷಿ ವಾಲ್ಮೀಕಿ ಭವನದಲ್ಲಿ ತಾಲ್ಲೂಕು ವಾಲ್ಮೀಕಿ ನಾಯಕ ಮಹಾಸಭಾದ ವತಿಯಿಂದ ಏರ್ಪಡಿಸಿದ್ದ ಸನ್ಮಾನ ಮತ್ತು ಗೌರವ ಸಮರ್ಪಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. 

ಇಡೀ ಜಗತ್ತಿನ ಸಮಸ್ಯೆಗೆ ಶಿಕ್ಷಣವೇ ಮದ್ದಾಗಿದೆ. ಈ ನಿಟ್ಟಿನಲ್ಲಿ ಸರ್ವರೂ ಮಕ್ಕಳಿಗೆ ಶಿಕ್ಷಣವನ್ನು ಕಲಿಸುವುದರ ಜೊತೆಗೆ ಮಕ್ಕಳ ಮೇಲಿನ ಜವಾಬ್ದಾರಿ ನಿಮ್ಮದಾಗಬೇಕು ಎಂದರು.

ಯಾವುದೇ ಒಂದು ಸಮಾಜ ಆರ್ಥಿಕವಾಗಿ ಗುರುತಿಸಬೇಕಾದರೆ ಶಿಕ್ಷಣದ ವ್ಯವಸ್ಥೆ ಬೇಕು. ಶಿಕ್ಷಣದ ಜೊತೆಗೆ ಸಂಸ್ಕಾರ, ಸಂಸ್ಕೃತಿ ಇವುಗಳು ಇದ್ದಾಗ ಮಾತ್ರ ಆರ್ಥಿಕವಾಗಿ ಸದೃಢರಾಗಿರಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ವೈಮನಸ್ಸು, ದ್ವೇಷ, ಅಸೂಯೆ, ಕಲಹಗಳನ್ನು ಬಿಟ್ಟು ಹೊಂದಾಣಿಕೆ, ಉತ್ತಮ ಬಾಂಧವ್ಯದ ಜೊತೆಗೆ ಬೆರೆತಾಗ ಅಲ್ಲಿರುವಂತಹ ಸುಖ, ಸಂತೋಷ ಎಲ್ಲೂ ಸಿಗುವುದಿಲ್ಲ ಎಂದರು.

ಮಹಾಸಭಾದ ತಾಲ್ಲೂಕು ಅಧ್ಯಕ್ಷ ಚಂದ್ರಣ್ಣ ಬೇಡರ ಅಧ್ಯಕ್ಷತೆ ವಹಿಸಿದ್ದರು. ಸಿ.ಕೆ.ಪಾರ್ವತೇರ, ನಾಗರಾಜಪ್ಪ ಹಳ್ಳೆಳ್ಳಪ್ಪನವರ, ಮಂಜುನಾಥ ಓಲೇಕಾರ, ಗಿರಿಜಮ್ಮ ಬ್ಯಾಲದಹಳ್ಳಿ, ಸಣ್ಣತಮ್ಮಪ್ಪ ಬಾರ್ಕಿ, ಶಶಿಧರ ಬಸೇನಾಯಕರ, ರವೀಂದ್ರಗೌಡ ಪಾಟೀಲ, ಭೀಮಣ್ಣ ಯಡಚಿ, ರಮೇಶ ತೆವರೆ, ಡಾ.ಪರಮೇಶ ಹುಬ್ಬಳ್ಳಿ, ಎಂ.ಎಚ್.ಪಾಟೀಲ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

error: Content is protected !!