ರಾಗಿ, ಶೇಂಗಾ ಖರೀದಿಗೆ ನಿರ್ಧಾರ

ಗುಣಮಟ್ಟದ ರಾಗಿಗೆ ಪ್ರತಿ ಕ್ವಿಂಟಾಲ್‍ಗೆ 3,377 ರೂ.  ಬೆಂಬಲ ಬೆಲೆ ಘೋಷಣೆ.

ಎಕರೆಗೆ 10 ಕ್ವಿಂಟಾಲ್‍ನಂತೆ, ಗರಿಷ್ಟ 20 ಕ್ವಿಂಟಾಲ್ ರಾಗಿ ಖರೀದಿಗೆ ಅವಕಾಶ.

ಗುಣಮಟ್ಟದ ಶೇಂಗಾ ಬೆಳೆಗೆ ಪ್ರತಿ ಕ್ವಿಂ.ಗೆ ರೂ. 5,550 ಗಳ ಬೆಂಬಲ ಬೆಲೆ ಘೋಷಣೆ.

ಎಕರೆಗೆ 3 ಕ್ವಿಂಟಾಲ್‍ನಂತೆ, ಗರಿಷ್ಟ 15 ಕ್ವಿಂಟಾಲ್ ಶೇಂಗಾ ಖರೀದಿಗೆ ಅವಕಾಶ.

ಫ್ರೂಟ್ಸ್ ತಂತ್ರಾಂಶದಲ್ಲಿ ನೋಂದಣಿ ಆರಂಭ: ಜಿಲ್ಲಾಧಿಕಾರಿ ಬೀಳಗಿ

ದಾವಣಗೆರೆ, ಡಿ. 17- ಜಿಲ್ಲೆಯಲ್ಲಿ ರೈತರಿಂದ ರಾಗಿ ಮತ್ತು ಶೇಂಗಾ ಖರೀದಿಗೆ ನಿರ್ಧರಿಸಲಾಗಿದ್ದು, ಫ್ರೂಟ್ಸ್ ತಂತ್ರಾಂಶದಲ್ಲಿ ನೋಂದಣಿ ಪ್ರಕ್ರಿಯೆ ಆರಂಭವಾಗಿದೆ.  ರೈತರಿಂದ ಬೆಳೆ ಖರೀದಿಗೆ ಸಂಬಂಧಿಸಿದಂತೆ ಮಧ್ಯವರ್ತಿಗಳ ಹಾವಳಿ ತಡೆಗಟ್ಟಲು ಕಠಿಣ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಹೇಳಿದ್ದಾರೆ.

ಬೆಂಬಲ ಬೆಲೆ ಯೋಜನೆಯಡಿ ರಾಗಿ ಮತ್ತು ಶೇಂಗಾ ಬೆಳೆ ಖರೀದಿ ಕುರಿತಂತೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ಜಿಲ್ಲಾ ಕಾರ್ಯಪಡೆ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.

ಮುಂಗಾರು ಹಂಗಾಮಿನಲ್ಲಿ ರಾಗಿ ಮತ್ತು ಶೇಂಗಾ ಖರೀದಿಸಲು ಸರ್ಕಾರ ಬೆಂಬಲ ಬೆಲೆ ನಿಗದಿ ಪಡಿಸಿದೆ. ಫ್ರೂಟ್ಸ್ ತಂತ್ರಾಂಶದಲ್ಲಿ ನೋಂದಣಿ ಮಾಡಿಸಿದ ರೈತರ ಬೆಳೆಯನ್ನು ಮಾತ್ರ ಬೆಂಬಲ ಬೆಲೆಯಡಿ ಖರೀದಿಸಲಾಗು ವುದು ಎಂದವರು ಹೇಳಿದ್ದಾರೆ.

ಗುಣಮಟ್ಟದ ರಾಗಿಗೆ ಪ್ರತಿ ಕ್ವಿಂಟಾಲ್‍ಗೆ ರೂ. 3,377 ಗಳ ಬೆಂಬಲ ಬೆಲೆ ಘೋಷಿಸಲಾಗಿದ್ದು, ಪ್ರತಿ ರೈತರಿಂದ ಎಕರೆಗೆ 10 ಕ್ವಿಂಟಾಲ್‍ನಂತೆ, ಗರಿಷ್ಟ 20 ಕ್ವಿಂಟಾಲ್ ರಾಗಿ ಖರೀದಿಗೆ ಅವಕಾಶವಿದೆ.  ರಾಗಿ ಬೆಳೆ ತರುವ ರೈತರಿಗೆ ಪ್ರತಿ ಚೀಲಕ್ಕೆ ರೂ. 22 ರೂ. ನೀಡಲಾಗುವುದು.  ಡಿ. 31 ರವರೆಗೂ ನೋಂದಣಿಗೆ ಅವಕಾಶವಿದೆ.  ನೋಂದಣಿ ಮಾಡಿಕೊಂಡ ರೈತರ ರಾಗಿಯನ್ನು ಎಲ್ಲಾ ತಾಲ್ಲೂಕುಗಳ ಎಪಿಎಂಸಿಗಳ ಆವರಣಗಳಲ್ಲಿರುವ ಖರೀದಿ ಕೇಂದ್ರಗಳಲ್ಲಿ ಜ. 1 ರಿಂದ ಮಾರ್ಚ್ 31 ರವರೆಗೆ ಮಾತ್ರ ಖರೀದಿಸಲಾಗುವುದು ಎಂದವರು ಹೇಳಿದ್ದಾರೆ.

ಪ್ರತಿ ಖರೀದಿ ಕೇಂದ್ರಕ್ಕೆ ಗ್ರೇಡರ್‍ಗಳನ್ನು ನೇಮಿಸಿ, ಕೇಂದ್ರದಲ್ಲಿ ರೈತರಿಗೆ ಕುಡಿಯುವ ನೀರು, ನೆರಳು ಮುಂತಾದ ಅಗತ್ಯ ಮೂಲಭೂತ ಸೌಕರ್ಯ ಒದಗಿಸಬೇಕು.  ಮಧ್ಯವರ್ತಿಗಳ ಹಾವಳಿ ತಡೆಗಟ್ಟಲು ಉಪವಿಭಾಗಾ ಧಿಕಾರಿಗಳು ಹಾಗೂ ಆಯಾ ತಹಶೀಲ್ದಾರರು, ಕೃಷಿ, ಆಹಾರ ಇಲಾಖೆ ಮತ್ತು ಎಪಿಎಂಸಿ ಅಧಿಕಾರಿಗಳು ಖರೀದಿ ಕೇಂದ್ರಗಳಿಗೆ ಆಗಾಗ್ಗೆ ಭೇಟಿ ನೀಡಿ ಪರಿಶೀಲಿಸಿ, ಕ್ರಮ ಕೈಗೊಳ್ಳಬೇಕು.  ಸರ್ಕಾರದ ಸೂಚನೆಯಂತೆ ರೈತರಿಗೆ ಖರೀದಿಯಾದ 15 ದಿನಗಳ ಒಳಗೆ ನೇರವಾಗಿ ಅವರ ಬ್ಯಾಂಕ್ ಖಾತೆಗೆ ಹಣ ಜಮಾ ಮಾಡುವ ಕ್ರಮ ಆಗಬೇಕು ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ. 

ಎಫ್‍ಎಕ್ಯೂ ಗುಣಮಟ್ಟದ ಶೇಂಗಾ ಬೆಳೆಗೆ ಪ್ರತಿ ಕ್ವಿಂಟಾಲ್ ಗೆ ರೂ. 5,550 ಗಳ ಬೆಂಬಲ ಬೆಲೆ ಘೋಷಿಸಲಾಗಿದ್ದು, ಪ್ರತಿ ರೈತರಿಂದ ಎಕರೆಗೆ 3 ಕ್ವಿಂಟಾಲ್‍ನಂತೆ, ಗರಿಷ್ಟ 15 ಕ್ವಿಂಟಾಲ್ ಶೇಂಗಾ ಖರೀದಿಗೆ ಅವಕಾಶವಿದೆ. ಜಿಲ್ಲೆಗೆ ಕರ್ನಾಟಕ ಸಹಕಾರಿ ಎಣ್ಣೆಬೀಜ ಬೆಳೆಗಾರರ ಮಹಾ ಮಂಡಳಿ ನಿಯಮಿತವನ್ನು (ಕೆಒಎಫ್) ಖರೀದಿ ಏಜೆನ್ಸಿಯಾಗಿ ಸರ್ಕಾರ ನಿಗದಿಪಡಿಸಿದೆ. ಮಾರಾಟ ಮಾಡಬಯಸುವ ರೈತರಿಂದ ಈಗಾಗಲೇ ನೋಂದಣಿ ಪ್ರಕ್ರಿಯೆ ಆರಂಭಿಸಲಾಗಿದೆ ಅಗತ್ಯವಿದ್ದರೆ ಜಗಳೂರು ತಾಲ್ಲೂಕಿನಲ್ಲಿ ಮಾತ್ರ ಖರೀದಿ ಕೇಂದ್ರ ಪ್ರಾರಂಭಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ಹೇಳಿದ್ದಾರೆ.

ಆಹಾರ ಇಲಾಖೆ ಜಂಟಿನಿರ್ದೇಶಕ ಮಂಟೇಸ್ವಾಮಿ ಅವರು, ಬೆಂಬಲ ಬೆಲೆ ಯೋಜನೆಯಡಿ ರಾಗಿ ಮತ್ತು ಶೇಂಗಾ ಖರೀದಿ ಕುರಿತಂತೆ ಸರ್ಕಾರದ ಸೂಚನೆ ಬಗ್ಗೆ ವಿವರವಾದ ವರದಿ ನೀಡಿದರು.  

ಜಂಟಿ ಕೃಷಿ ನಿರ್ದೇಶಕ ಶ್ರೀನಿವಾಸ ಚಿಂತಾಲ್ ಮಾತನಾಡಿ, ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯಲ್ಲಿ ಸುಮಾರು 16,000 ಟನ್ ರಾಗಿ, 6,000 ಟನ್ ಶೇಂಗಾ, 3,000 ಟನ್ ಜೋಳ, 3.31 ಲಕ್ಷ ಟನ್ ಭತ್ತ ಉತ್ಪಾದನೆಯ ಅಂದಾಜು ಮಾಡಲಾಗಿದೆ ಎಂದರು.

ಸಭೆಯಲ್ಲಿ ಕಾನೂನು ಮಾಪನ ಶಾಸ್ತ್ರ ಇಲಾಖೆ ಸಹಾಯಕ ನಿರ್ದೇಶಕ ರಾಜು, ಕೆಒಎಫ್ ಜಿಲ್ಲಾ ಅಧಿಕಾರಿ ಹನುಮಂತನಾಯಕ್ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

error: Content is protected !!