ಸೊಸೈಟಿಯಿಂದ ಸಂಸತ್ತಿನವರೆಗಿನ ಎಲ್ಲಾ ಚುನಾವಣೆಗಳಲ್ಲೂ ವಿಜಯ ರಥ ಮುನ್ನಡೆಸಲು ಬಿಜೆಪಿ ರಾಜ್ಯ ಕಾರ್ಯಕಾರಿಣಿಯಲ್ಲಿ ಪಣ
ದಾವಣಗೆರೆ, ಸೆ. 19 – ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರಗಳ ಯೋಜನೆಗಳ ಬಗ್ಗೆ ಕಾರ್ಯಕರ್ತರು ಬೂತ್ ಮಟ್ಟದಲ್ಲಿ ಜನರಿಗೆ ತಿಳಿಸುವ ಬಿಜೆಪಿಯ ವಿಜಯ ರಥ ಮುನ್ನಡೆಸಲು ಬಿಜೆಪಿ ಕಾರ್ಯಕಾರಿಣಿಯ ಉದ್ಘಾಟನಾ ಸಭೆಯಲ್ಲಿ ಕಾರ್ಯಕರ್ತರಿಗೆ ಕರೆ ನೀಡಲಾಗಿದೆ.
ಇತ್ತೀಚೆಗೆ ನಡೆದ ಪಾಲಿಕೆ ಚುನಾವಣೆಗಳಲ್ಲಿ ಗೆದ್ದಿರುವ ರೀತಿಯಲ್ಲೇ, ಮುಂದಿನ ಒಂದು ವರ್ಷ ನಡೆಯಲಿರುವ ಪಂಚಾಯ್ತಿ, ಪರಿಷತ್ ಹಾಗೂ ವಿಧಾನಸಭಾ ಉಪ ಚುನಾವಣೆಗಳಲ್ಲಿ ಗೆಲ್ಲುವುದರೊಂದಿಗೆ, 2023ರ ವಿಧಾನಸಭಾ ಚುನಾವಣೆಯಲ್ಲಿ 150 ಸ್ಥಾನ ಗಳಿಸುವ ವಿಶ್ವಾಸವನ್ನು ನಾಯಕರು ವ್ಯಕ್ತಪಡಿಸಿದ್ದಾರೆ.
ಬರುವ ದಿನಗಳಲ್ಲಿ ಉತ್ತಮ ಆಡಳಿತ ಮಾಡಿ ಜನಪರ ಆಡಳಿತ ನೀಡುವ ಸಂಕಲ್ಪ ಹಾಗೂ ವಿಧಾನಸಭಾ ಅಧಿವೇಶನದ ನಂತರ ರಾಜ್ಯಾದ್ಯಂತ ಪ್ರವಾಸ ಮಾಡಿ ಆಡಳಿತದ ಚುಕ್ಕಾಣಿ ಚುರುಕು ಮಾಡುವ ಬಗ್ಗೆ ಇದೇ ಸಂದರ್ಭದಲ್ಲಿ ಚರ್ಚಿಸಿ ನಿರ್ಧರಿಸಲಾಗಿದೆ. ನಗರದ ತ್ರಿಶೂಲ್ ಸಭಾಭವನದಲ್ಲಿ ಕಾರ್ಯಕಾರಿಣಿ ಆಯೋಜಿಸಲಾಗಿತ್ತು.
ಕಾರ್ಯಕಾರಿಣಿಯನ್ನು ಸಾಂಕೇತಿಕವಾಗಿ ಮೆಕ್ಕೆಜೋಳವನ್ನು ರಾಶಿ ಮಾಡುವ ಮೂಲಕ ಉದ್ಘಾಟಿಸಿ ಮಾತನಾಡುತ್ತಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸೊಸೈಟಿಯಿಂದ ಸಂಸತ್ತಿನವರೆಗೆ ಎಲ್ಲ ಚುನಾವಣೆಗಳನ್ನು ಗಂಭೀರವಾಗಿ ಪರಿಗಣಿಸುತ್ತೇವೆ. ಉಪ ಚುನಾವಣೆ, ಪಂಚಾಯ್ತಿ ಚುನಾವಣೆಗಳಲ್ಲೂ ಜಯ ಗಳಿಸುತ್ತೇವೆ ಎಂದಿದ್ದಾರೆ.
ಬೆಳಗಾವಿ, ಹುಬ್ಬಳ್ಳಿ – ಧಾರವಾಡ ಹಾಗೂ ಕಲಬುರಗಿ ಪಾಲಿಕೆ ಚುನಾವಣೆಯ ರೀತಿಯಲ್ಲೇ ಬೆಂಗಳೂರು ಪಾಲಿಕೆ ಚುನಾವಣೆಯಲ್ಲೂ ಉತ್ತಮ ಸಾಧನೆ ಮಾಡಿ, ಸ್ವತಂತ್ರವಾಗಿ ಬಹುಮತ ಪಡೆಯುತ್ತೇವೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಮಾತನಾಡಿ, ಯಡಿಯೂರಪ್ಪ ನೇತೃತ್ವದಲ್ಲಿ ವಿಜಯ ರಥ ಆರಂಭವಾಗಿದೆ. ಬೊಮ್ಮಾಯಿ ಅವರ ಅವಧಿಯಲ್ಲೂ ಈ ವಿಜಯ ರಥ ನಿರಂತರವಾಗಿ ಸಾಗಬೇಕಿದೆ. ಉಪ ಚುನಾವಣೆ ಹಾಗೂ ಜಿಲ್ಲಾ ಪಂಚಾಯ್ತಿಗಳಲ್ಲಿ ಗೆಲ್ಲುವುದಷ್ಟೇ ಅಲ್ಲದೇ, 2023ರ ವಿಧಾನಸಭಾ ಚುನಾವಣೆಯಲ್ಲಿ ಮೂರನೇ ಎರಡರಷ್ಟು ಬಹಮತ ಗಳಿಸುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಕಾಂಗ್ರೆಸ್ನಲ್ಲಿ ದ್ವಂದ್ವ, ಬಿಜೆಪಿಯಲ್ಲಿ ಪರಿಪಕ್ವ ನಾಯಕತ್ವ: ಬೊಮ್ಮಾಯಿ
ಕಾಂಗ್ರೆಸ್ ಪಕ್ಷ ವೈಚಾರಿಕತೆ, ಸಿದ್ಧಾಂತ ಹಾಗೂ ದೇಶದ ಬಗ್ಗೆ ನಿಖರ ನಿರ್ಣಯ ಇಲ್ಲದೇ, ಕೇವಲ ಸ್ವಾತಂತ್ರ್ಯ ಚಳುವಳಿಯ ಹೋರಾಟದ ಅಲೆಯ ಮೇಲೆ ರಾಜಕೀಯ ಮಾಡಿದೆ. ಮಹಾತ್ಮ ಗಾಂಧೀಜಿಯವರನ್ನು ತೋರಿಕೆಗಾಗಿ ತತ್ವ ಪುರುಷರಂತೆ ಬಿಂಬಿಸಿ, ಸರ್ವಾಧಿಕಾರಿಯಾಗಿದ್ದ ಇನ್ನೊಬ್ಬ ಗಾಂಧಿಯನ್ನು ಅಪ್ಪಿಕೊಂಡಿತ್ತು.
ದಾವಣಗೆರೆ, ಸೆ. 19 – ಯಾವುದೇ ಪಕ್ಷಕ್ಕೆ ನಾಯಕತ್ವ ಮುಖ್ಯ. ಪರಿಪಕ್ವ ನಾಯಕತ್ವ ಈಗ ಬಿಜೆಪಿಯಲ್ಲಿದೆ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಇಡೀ ವಿಶ್ವದಲ್ಲೇ ಅತಿ ದೊಡ್ಡ ಪಕ್ಷವಾಗಿ ಬಿಜೆಪಿ ರೂಪುಗೊಂಡಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ನಗರದ ತ್ರಿಶೂಲ್ ಸಭಾಭವನದಲ್ಲಿ ಆಯೋಜಿಸಲಾಗಿದ್ದ ಬಿಜೆಪಿ ಕಾರ್ಯಕಾರಿಣಿ ಸಭೆ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.
ಪ್ರಾಂತೀಯ ನಾಯಕತ್ವಕ್ಕೂ ಬಿಜೆಪಿ ಮನ್ನಣೆ ನೀಡಿದೆ. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅದಕ್ಕೆ ಸಾಕ್ಷಿ. ಕಾಂಗ್ರೆಸ್ನಲ್ಲಿ ಪ್ರಾಂತೀಯ ನಾಯಕರಿಗೆ ಅವಕಾಶ ಇಲ್ಲದಂತಾಗಿ, ಪ್ರಾಂತೀಯ ಪಕ್ಷಗಳು ಬೆಳೆಯಲು ದಾರಿ ಮಾಡಿಕೊಟ್ಟಂತಾಗಿದೆ. ಕಾಂಗ್ರೆಸ್ ಈಗ ಕೇಂದ್ರ ಹಾಗೂ ರಾಜ್ಯಗಳೆರಡ ರಲ್ಲೂ ದುರ್ಬಲವಾಗಿದೆ ಎಂದವರು ಹೇಳಿದರು.
ಲಾಲ್ ಬಹದ್ದೂರ್ ಶಾಸ್ತ್ರಿ ಅವರು ಒಂದು ಹೊತ್ತು ಊಟ ಬಿಡಲು ಕರೆ ನೀಡಿದಾಗ, ಇಡೀ ದೇಶದ ಜನರು ಸ್ಪಂದಿಸಿದ್ದರು. ಅದೇ ರೀತಿ ಪ್ರಧಾನಿ ಮೋದಿ ಅವರು ಅನಿಲ ಸಬ್ಸಿಡಿ ಬಿಡುವಂತೆ ಕೇಳಿದಾಗ ದೇಶದ ಜನರು ತ್ಯಾಗ ಮಾಡಿದ್ದಾರೆ. ರೈತರಿಗಾಗಿ ಪ್ರಧಾನಿ ಹಲವಾರು ಯೋಜನೆ ರೂಪಿಸಿದ್ದಾರೆ. ರೈತರ ಆದಾಯ ದ್ವಿಗುಣಗೊಳಿಸುವ ಬದ್ಧತೆಯ ಸವಾಲು ಸ್ವೀಕರಿಸಿದ್ದಾರೆ ಎಂದವರು ತಿಳಿಸಿದರು.
ಕಾಂಗ್ರೆಸ್ ಪಕ್ಷ ವೈಚಾರಿಕತೆ, ಸಿದ್ಧಾಂತ ಹಾಗೂ ದೇಶದ ಬಗ್ಗೆ ನಿಖರ ನಿರ್ಣಯ ಇಲ್ಲದೇ ಕೇವಲ ಸ್ವಾತಂತ್ರ್ಯ ಚಳುವಳಿಯ ಹೋರಾಟದ ಅಲೆಯ ಮೇಲೆ ರಾಜಕೀಯ ಮಾಡಿದೆ. ಮಹಾತ್ಮ ಗಾಂಧೀಜಿಯವರನ್ನು ತೋರಿಕೆಗಾಗಿ ತತ್ವ ಪುರುಷರಂತೆ ಬಿಂಬಿಸಿ, ಸರ್ವಾಧಿಕಾರಿಯಾಗಿದ್ದ ಇನ್ನೊಬ್ಬ ಗಾಂಧಿಯನ್ನು ಅಪ್ಪಿಕೊಂಡಿತ್ತು ಎಂದವರು ತರಾಟೆಗೆ ತೆಗೆದುಕೊಂಡರು.
ಇಂತಹ ವಿರೋಧಾಭಾಸ ಹಾಗೂ ದ್ವಂದ್ವದಿಂಂದ ದೇಶವನ್ನು ಆಳಿದ ಕಾರಣ, ಸಮಸ್ಯೆಗಳನ್ನು ಬಳುವಳಿಯಾಗಿ ಪಡೆಯುವಂತಾಯಿತು. ರಾಷ್ಟ್ರೀಕರಣ, ಸರ್ಕಾರಿ ಉದ್ಯಮಗಳು, ಸಮಾಜವಾದ ಸೇರಿದಂತೆ ಹಲವು ವಿಷಯಗಳಲ್ಲಿ ಕಾಂಗ್ರೆಸ್ನದ್ದು ದ್ವಂದ್ವ ನಿಲುವು. ಹೀಗಾಗಿ ದೇಶಕ್ಕೆ ಸ್ಪಷ್ಟತೆ ತರುವ ಜವಾಬ್ದಾರಿ ಬಿಜೆಪಿ ಮೇಲಿದೆ ಎಂದು ಬೊಮ್ಮಾಯಿ ತಿಳಿಸಿದರು.
ಬಿಜೆಪಿಯ ಹಿರಿಯ ನಾಯಕರಾದ ಅಟಲ್ ಬಿಹಾರಿ ವಾಜಪೇಯಿ, ಎಲ್.ಕೆ. ಅದ್ವಾನಿ ಹಾಗೂ ಮುರಳಿ ಮನೋಹರ ಜೋಷಿ ಅವರು ಸೇರಿಕೊಂಡು ದೇಶವನ್ನು ದ್ವಂದ್ವದಿಂದ ಪಾರು ಮಾಡಲು ಬಿಜೆಪಿ ಪಕ್ಷ ಕಟ್ಟಿದರು. ತುಷ್ಟೀಕರಣದಿಂದ ದೂರವಿದ್ದು ಬಹುಸಂಖ್ಯಾತರ ಭಾವನೆ ಗೌರವಿಸುವ ಉದ್ದೇಶದಿಂದ ಬಿಜೆಪಿ ರೂಪುಗೊಂಡಿದೆ. ಜನರ ನಾಡಿ ಮಿಡಿತ ಅರಿತು, ಸವಾಲು – ಸಮಸ್ಯೆಗಳನ್ನು ಕೈಗೆತ್ತಿಕೊಂಡು ಜನಪರವಾಗಿದ್ದರಿಂದ ಬಿಜೆಪಿ ಕಳೆದ 40 ವರ್ಷಗಳಲ್ಲಿ ಬೆಳೆದಿದೆ ಎಂದವರು ಹೇಳಿದರು.
ತಮ್ಮ ಸರ್ಕಾರದ ಆರಂಭದಲ್ಲೇ ಎಲ್ಲ ರೈತರ ಮಕ್ಕಳಿಗೆ ಪಿಯುಸಿಯಿಂದ ಪಿ.ಜಿ.ವರೆಗೆ ಶಿಷ್ಯವೇತನ ನೀಡಲು ನಿರ್ಧರಿಸಲಾಗಿದೆ. ಸಂಧ್ಯಾಸುರಕ್ಷ ಸೇರಿದಂತೆ ಹಲವು ಸಾಮಾಜಿಕ ನೆರವುಗಳನ್ನು ಹೆಚ್ಚಿಸಲಾಗಿದೆ. ಐದು ಲಕ್ಷ ಮನೆಗಳ ನಿರ್ಮಾಣ, ಸ್ತ್ರೀಶಕ್ತಿ ಸೇರಿದಂತೆ ಹಲವು ಸಂಸ್ಥೆಗಳ ಸಬಲೀಕರಣಕ್ಕೆ ಕ್ರಮ ತೆಗೆದುಕೊಳ್ಳಲಾಗುತ್ತಿದೆ ಎಂದು ಬೊಮ್ಮಾಯಿ ಇದೇ ಸಂದರ್ಭದಲ್ಲಿ ತಿಳಿಸಿದರು.
ನಂಜನಗೂಡು ದೇವಾಲಯ ಮತ್ತೆ ತಲೆ ಎತ್ತಲಿದೆ: ಕಟೀಲ್
ಶಾಂತಿ ಕದಡುವ ಘಟನೆಗಳಿಗೆ ಪೂರ್ಣ ವಿರಾಮ : ಬೊಮ್ಮಾಯಿ
ದಾವಣಗೆರೆ, ಸೆ. 19 – ನಂಜನಗೂಡಿನಲ್ಲಿ ದೇವಾಲಯ ಕೆಡವಿದ ವಿಷಯ ಬಿಜೆಪಿ ಕಾರ್ಯ ಕಾರಿಣಿಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಪ್ರಸ್ತಾಪಿಸಿದ್ದು, ದೇವಾಲ ಯವನ್ನು ಮತ್ತೆ ನಿರ್ಮಿಸಲಾಗುವುದು ಎಂದಿದ್ದಾರೆ.
ಮುಖ್ಯಮಂತ್ರಿ ಬೊಮ್ಮಾಯಿ ಮಾತನಾಡಿ, ಅಧಿಕಾರಿಗಳು ಪರಿಣಾಮ ಯೋಚಿಸದೇ ನಂಜನಗೂಡಿನ ದೇವಾಲಯ ಕೆಡವುವ ಮೂಲಕ ಶಾಂತಿ ಕದಡುವ ವಾತಾವರಣ ಉಂಟಾಗಿದೆ ಎಂದು ಹೇಳಿದರು. ನಂಜನಗೂಡು ದೇವಾಲಯ ಘಟನೆಯ ಬಗ್ಗೆ ಪಕ್ಷ ಹಾಗೂ ಸಂಘಟನೆಯ ಜೊತೆ ಚರ್ಚಿಸಿದ್ದೇನೆ. ಶಾಂತಿ ಕದಡುವ ಇಂತಹ ಘಟನೆಗಳಿಗೆ ಪೂರ್ಣ ವಿರಾಮ ಹಾಕಲಾಗುವುದು. ಕೂಡಲೇ ಆಡಳಿತಾತ್ಮಕ, ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು. ಭಕ್ತರಿಗೆ ಆಗಿರುವ ಘಾಸಿ ತುಂಬುವ ಕೆಲಸ ಮಾಡುತ್ತೇವೆ ಎಂದವರು ಭರವಸೆ ನೀಡಿದ್ದಾರೆ.
ಯಡಿಯೂರಪ್ಪ ಅವರು ಮಾತನಾಡಿ, ಮಂದಿರ ಕೆಡವುವುದನ್ನು ತಡೆಯಬೇಕಿದೆ. ಅಗತ್ಯವಾದರೆ ಸುಪ್ರೀಂ ಕೋರ್ಟ್ನಲ್ಲಿ ಈ ಬಗ್ಗೆ ಮೇಲ್ಮನವಿ ಸಲ್ಲಿಸಬೇಕು ಎಂದು ತಿಳಿಸಿದರು.
ನಳಿನ್ ಕುಮಾರ್ ಕಟೀಲ್ ಮಾತನಾಡಿ, ನಂಜನಗೂಡು ದೇವಾಲಯ ಮತ್ತೆ ತಲೆ ಎತ್ತಲಿದೆ. ದೇವಾಲಯ ಕೆಡವಿದ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.
ನಂಜನಗೂಡು ದೇವಾಲಯ ಕೆಡವಿದ ಬಗ್ಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾತನಾಡಲು ಯಾವುದೇ ನೈತಿಕ ಹಕ್ಕು ಹೊಂದಿಲ್ಲ ಎಂದು ಕಟೀಲ್ ಹೇಳಿದ್ದಾರೆ.
ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಗಳಾಗಿದ್ದಾಗ 24 ಹಿಂದೂ ಕಾರ್ಯಕರ್ತರ ಹತ್ಯೆ ನಡೆದಿತ್ತು. ದೇವಸ್ಥಾನಗಳನ್ನು ಧ್ವಂಸಗೊಳಿಸಿದ ಟಿಪ್ಪು ಸುಲ್ತಾನ್ ಜಯಂತಿ ಆಚರಿಸಲಾಗಿತ್ತು. ಲಿಂಗಾಯತ ಸಮಾಜವನ್ನು ಒಡೆಯಲಾಗಿತ್ತು. ಸಿದ್ದರಾಮಯ್ಯನವರಿಗೆ ಹಿಂದೂಗಳ ಬಗ್ಗೆ ಮಾತನಾಡಲು ನೈತಿಕ ಹಕ್ಕಿಲ್ಲ ಎಂದವರು ಹೇಳಿದರು.
ಅಭಿನಂದನಾ ನಿರ್ಣಯಗಳು
ದಾವಣಗೆರೆ, ಸೆ.19- ನಗರದಲ್ಲಿಂದು ನಡೆದ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಅಭಿನಂದಿಸುವ ಎರಡು ನಿರ್ಣಯಗಳನ್ನು ತೆಗೆದುಕೊಳ್ಳಲಾಗಿದೆ.
ಕಾರ್ಯಕಾರಿಣಿ ಸಭೆಯಲ್ಲಿನ ನಿರ್ಣಯಗಳ ಬಗ್ಗೆ ಬಿಜೆಪಿಯ ರಾಜ್ಯ ವಕ್ತಾರ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಪತ್ರಕರ್ತರಿಗೆ ವಿವರಿಸಿದರು.
ಕೇಂದ್ರ ಸರ್ಕಾರವು ಹಿಂದುಳಿದ ವರ್ಗಗಳ ಜಾತಿಗಳನ್ನು ಗುರುತಿಸುವ ಮತ್ತು ಸೇರ್ಪಡೆಗೊಳಿಸುವ ಅಧಿಕಾರವನ್ನು ರಾಜ್ಯ ಸರ್ಕಾರಗಳಿಗೆ ನೀಡಿರುವುದರಿಂದ ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಸರ್ಕಾರವನ್ನು ಅಭಿನಂದಿಸಲಾಗಿದೆ.
ಬಸವರಾಜ ಬೊಮ್ಮಾಯಿ ಅವರ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಜಾರಿಗೆ ತಂದಿರುವ ಯೋಜನೆಗಳಿಗೆ ಅಭಿನಂದಿಸಲಾಗಿದೆ.
ಜನಾನುರಾಗಿ ಹಾಗೂ ದೂರದೃಷ್ಟಿಯುಳ್ಳ, ಅಭಿವೃದ್ಧಿ ಹಾಗೂ ರಾಷ್ಟ್ರೀಯತೆಯ ವಿಚಾರಧಾರೆಯ ಮಾರ್ಗದಲ್ಲಿ ಸಾಗುತ್ತಿರುವುದು, ಅಖಂಡ ಕರ್ನಾಟಕದ ಜನಮಾನಸದಲ್ಲಿ ಭರವಸೆಯನ್ನು ಮೂಡಿಸುವಲ್ಲಿ ಪ್ರಾರಂಭದಲ್ಲಿಯೇ ಯಶಸ್ವಿಯಾಗಿದೆ ಎಂದು ನಿರ್ಣಯದಲ್ಲಿ ತಿಳಿಸಲಾಗಿದೆ.
ವಿಶಾಲ ದೇಶಕ್ಕೊಂದು ದಿಕ್ಸೂಚಿಯಾಗಬಲ್ಲ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ಬಂದಿದ್ದು, ಇದನ್ನು ಜಾರಿಗೆ ತಂದ ಮೊದಲ ಸರ್ಕಾರ ಹಾಗೂ ಮೊದಲ ರಾಜ್ಯ ಎಂಬ ಹಿರಿಮೆಗೆ ಕರ್ನಾಟಕ ಪಾತ್ರವಾಗಿದೆ ಎಂದು ನಿರ್ಣಯದಲ್ಲಿ ಉಲ್ಲೇಖಿಸಲಾಗಿದೆ.
ದೇಗುಲಗಳನ್ನು ಆತುರದಲ್ಲಿ ಕೆಡವುವ ನಿರ್ಧಾರಕ್ಕೆ ಬ್ರೇಕ್, ಕಡತಗಳ ವಿಲೇವಾರಿಗೆ ಸರ್ಕಾರಿ ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ, ಝೀರೋ ಟ್ರಾಫಿಕ್ ತೊರೆದು ಸಹಜ ಸಂಚಾರಕ್ಕೆ ಆದ್ಯತೆ. ಇಂತಹ ಹಲವು ನಿರ್ಧಾರಗಳನ್ನು ತೆಗೆದುಕೊಂಡು ಜನರ ವಿಶ್ವಾಸ ಗಳಿಸಿ ಬೊಮ್ಮಾಯಿ ಸರ್ಕಾರಕ್ಕೆ ಅಭಿನಂದಿಸುವ ಬಗ್ಗೆ ನಿರ್ಣಯದಲ್ಲಿದೆ.
ಸಭೆಯಲ್ಲಿನ ವಿಷಯಗಳ ಬಗ್ಗೆ ಪ್ರಸ್ತಾಪಿಸಿದ ಕಾರ್ಣಿಕ್ ಅವರು, ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ಗೆ ಆಯ್ಕೆ ಮಾಡಿ ಕಳುಹಿಸುವ ಸಂಖ್ಯೆಯನ್ನು ಹೆಚ್ಚಿಸುವ ಬಗ್ಗೆ ಚರ್ಚೆ ನಡೆದಿದೆ. ಅಲ್ಲದೆ ಪದವೀಧರ ಹಾಗೂ ಶಿಕ್ಷಕರ ಕ್ಷೇತ್ರದಲ್ಲಿ ಬೂತ್ ಮಟ್ಟದಲ್ಲಿ ನೋಂದಣಿ ಮಾಡಿ ಪಕ್ಷವನ್ನು ಸಂಘಟಿಸುವ ಬಗ್ಗೆ ರಾಜ್ಯಾಧ್ಯಕ್ಷರು ತೀರ್ಮಾನ ತೆಗೆದುಕೊಳ್ಳಬೇಕೆಂಬ ಬಗ್ಗೆ ಚರ್ಚೆ ನಡೆದಿದೆ.
ಮುಂದಿನ ಕಾರ್ಯಕಾರಿಣಿಯಲ್ಲಿ ಮುಖ್ಯಮಂತ್ರಿಗಳ ಜೊತೆ ಸಮಾಲೋಚನೆಗೆ ಹೆಚ್ಚಿನ ಸಮಯ ನಿಗದಿ ಮಾಡುವಂತೆ ಕೋರಲಾಗಿದೆ. ಸುಮಾರು 18 ಪ್ರಶ್ನೆಗಳನ್ನು ಅಪೇಕ್ಷಿತರು ಕೇಳಿದ್ದಾರೆ., ಅದರಲ್ಲಿ ಅಕ್ರಮ ಗಣಿಗಾರಿಕೆ ಬಗ್ಗೆ ನಿಲುವು. ಕಾರ್ಯಕರ್ತರ ಮೇಲಿನ ಕೇಸುಗಳು, ಮಹಿಳೆಯರ ಸುರಕ್ಷತೆ ಹಾಗೂ ಸಬಲೀಕರಣ, ಕಡತ ವಿಲೇವಾರಿಗೆ ತಂತ್ರಜ್ಞಾನ ಬಳಕೆ, ಮಳೆ ನೀರಿನ ಕೊಯ್ಲಿಗೂ ನರೇಗಾದಲ್ಲಿ ಅವಕಾಶ ಕಲ್ಪಿಸುವ ಬಗ್ಗೆ, ಬಸ್ ನಿಲ್ದಾಣದಲ್ಲಿ ಶೌಚಾಲಯಗಳನ್ನು ನಿರ್ಮಿಸುವ ಬಗ್ಗೆ ಪ್ರಶ್ನೆಗಳನ್ನು ಕೇಳಲಾಗಿದೆ ಎಂದು ವಿವರಿಸಿದರು.
ಸಭೆಗೆ 574 ಅಪೇಕ್ಷಿತರ ಬಗ್ಗೆ 509 ಅಪೇಕ್ಷಿತರು ಹಾಜರಾಗಿದ್ದು, ಶೇ.81.48ರಷ್ಟು ಹಾಜರಾತಿಯಾಗಿರುವುದು ದಾಖಲೆಯಾಗಿದೆ. ಕಾರ್ಯಕಾರಿಣಿಯನ್ನು ಅಚ್ಚುಕಟ್ಟಾಗಿ ನಡೆಸಿಕೊಟ್ಟ ಜಿಲ್ಲಾ ಸಂಸದರು, ಉಸ್ತುವಾರಿ ಸಚಿವರು ಹಾಗೂ ಅಧ್ಯಕ್ಷರು, ಪದಾಧಿಕಾರಿಗಳಿಗೆ ಇದೇ ವೇಳೆ ಅವರು ಅಭಿನಂದಿಸಿದರು.
ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮಾತನಾಡಿ, ಮುಂದಿನ ತಿಂಗಳು ನಾನೊಬ್ಬನೇ ಅಲ್ಲ ಶಾಸಕರು ಹಾಗೂ ಸಂಸದರು ಜೊತೆಯಾಗಿ ರಾಜ್ಯ ಪ್ರವಾಸ ಕೈಗೊಳ್ಳಲಿದ್ದೇವೆ. ಮೈಸೂರಿನಲ್ಲಿ ನಡೆಸಲಾದ ಮೋದಿ ಯುಗ ಉತ್ಸವ ರೀತಿಯ ಕಾರ್ಯಕ್ರಮಗಳನ್ನು ರಾಜ್ಯಾದ್ಯಂತ ನಡೆಸಬೇಕಿದೆ ಎಂದು ತಿಳಿಸಿದರು.
ಬರುವ ವರ್ಷ ಚುನಾವಣಾ ವರ್ಷವಾಗಿದೆ. ಹಾನಗಲ್ ಹಾಗೂ ಸಿಂಧಗಿ ಉಪ ಚುನಾವಣೆಗಳು ಅಗ್ನಿಪರೀಕ್ಷೆಗಳಾಗಿವೆ. ಈ ಚುನಾವಣೆಗಳನ್ನು ಬಿಜೆಪಿ ಗೆಲ್ಲುವುದು ಕಾಂಗ್ರೆಸ್ಗೆ ಪಾಠವಾಗಬೇಕು ಎಂದವರು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮಾತನಾಡಿ, ಅಕ್ಟೋಬರ್ ಮೊದಲ ವಾರದಲ್ಲಿ ನಾಲ್ಕು ತಂಡಗಳನ್ನು ರಚಿಸಿ ಪಂಚಾಯತ್ ಸದಸ್ಯರ ಸಮ್ಮೇಳನ ನಡೆಸಲಾಗುವುದು. ಸೇವೆ – ಸಮರ್ಪಣೆ ಕಾರ್ಯಕ್ರಮಗಳಲ್ಲಿ ಕಾರ್ಯಕರ್ತರು ಸಂಪೂರ್ಣವಾಗಿ ಭಾಗಿಯಾಗಬೇಕು. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ 150ಕ್ಕೂ ಹೆಚ್ಚು ಸ್ಥಾನಗಳಲ್ಲಿ ಗೆಲ್ಲುವ ಪಣ ತೊಡಬೇಕು ಎಂದು ಕರೆ ನೀಡಿದರು.
ವೇದಿಕೆಯ ಮೇಲೆ ಕೇಂದ್ರ ಸಚಿವರಾದ ಎ.ನಾರಾಯಣಸ್ವಾಮಿ, ಶೋಭ ಕರಂದ್ಲಾಜೆ, ಪ್ರಹ್ಲಾದ್ ಜೋಷಿ, ಭಗವಂತ ಖೂಬಾ, ರಾಜ್ಯ ಸಹ ಉಸ್ತುವಾರಿ ಡಿ.ಕೆ. ಅರುಣ್, ಸಂಸದ ಜಿ.ಎಂ.ಸಿದ್ದೇಶ್ವರ, ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಮಾಜಿ ಕೇಂದ್ರ ಸಚಿವ ಸದಾನಂದ ಗೌಡ ಉಪಸ್ಥಿತರಿದ್ದರು.
ಇದಕ್ಕೂ ಮುಂಚೆ ಕಟೀಲ್ ಅವರು ಬಿಜೆಪಿ ಪಕ್ಷದ ಧ್ವಜಾರೋಹಣ ನೆರವೇರಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಭೈರತಿ ಬಸವರಾಜ್ ಸ್ವಾಗತಿಸಿದರು. ಬಿಜೆಪಿ ಜಿಲ್ಲಾಧ್ಯಕ್ಷ ಎಸ್.ಎಂ. ವೀರೇಶ್ ಹನಗವಾಡಿ ವಂದಿಸಿದರು.