ಮೀಸಲಾತಿ : ಪಂಚಮಸಾಲಿಯಿಂದ ವಾದ ಮಂಡನೆ

ನಿವೃತ್ತ ನ್ಯಾ|| ಸುಭಾಷ್‌ ಆಡಿ ನೇತೃತ್ವದ ಮೀಸಲಾತಿ ಸಮಿತಿ ಮುಂದೆ ದಾಖಲೆ ಸಲ್ಲಿಕೆ

ಬೆಂಗಳೂರು, ಡಿ. 7- ಪಂಚಮಸಾಲಿ ಸಮುದಾಯ, ಪ್ರವರ್ಗ 2 (ಎ) ಹಾಗೂ ಓಬಿಸಿ ಮೀಸಲಾತಿ ಪಡೆಯಲು ಎಲ್ಲಾ ರೀತಿಯ ಅರ್ಹತೆಗಳನ್ನು ಹೊಂದಿದ್ದು, ನಿವೃತ್ತ ನ್ಯಾಯಮೂರ್ತಿ ಸುಭಾಷ್‌ ಆಡಿ ಅವರ ನೇತೃತ್ವದ ಸಮಿತಿ ಈ ನಿಟ್ಟಿನಲ್ಲಿ ಸಕಾರಾತ್ಮಕವಾಗಿ ಸ್ಪಂದಿಸುವ ವಿಶ್ವಾಸವಿದೆ ಎಂದು ಹರಿಹರ ಪಂಚಮಸಾಲಿ ಜಗದ್ಗುರು ಪೀಠದ ಜಗದ್ಗುರು ಶ್ರೀ ವಚನಾನಂದ ಮಹಾಸ್ವಾಮಿಗಳು ಭರವಸೆ ವ್ಯಕ್ತಪಡಿಸಿದರು. 

 ಬೆಂಗಳೂರಿನ ವಿಕಾಸಸೌಧದಲ್ಲಿ  ನಿವೃತ್ತ ನ್ಯಾಯಮೂರ್ತಿ ಸುಭಾಷ್‌ ಆಡಿ ಅವರ ಮೀಸಲಾತಿ ಪರಾಮರ್ಶಿಸುವ ಉನ್ನತ ಮಟ್ಟದ ಸಮಿತಿಯ ಮುಂದೆ ವಾದ ಮಂಡಿಸಿ ಪತ್ರಕರ್ತರೊಂದಿಗೆ ಶ್ರೀ ವಚನಾನಂದ ಸ್ವಾಮೀಜಿ  ಮಾತನಾಡುತ್ತಿದ್ದರು. 

ಮೀಸಲಾತಿ ಪರಾಮರ್ಶಿಸುವ ಉನ್ನತ ಸಮಿತಿ ನಮ್ಮ ವಾದವನ್ನು ಮಂಡಿಸುವಂತೆ ಆಹ್ವಾನ ನೀಡಿತ್ತು. ಈ ನಿಟ್ಟಿನಲ್ಲಿ ರಾಜ್ಯದ ಪಂಚಮಸಾಲಿ ಮಠಾಧೀಶರ ಒಕ್ಕೂಟದ ಮಠಾಧೀಶರುಗಳು, ಬಬಲೇಶ್ವರದ ಶ್ರೀ ಷ.ಬ್ರ.ಡಾ. ಮಹಾದೇವ ಶಿವಾಚಾರ್ಯ ಮಹಾಸ್ವಾಮಿಗಳು, ಮನಗೂಳಿಯ ಶ್ರೀ ಷ.ಬ್ರ.ಸಂಗನಬಸವ ಶಿವಾಚಾರ್ಯ ಮಹಾಸ್ವಾಮಿಗಳು, ಪಂಚಮಸಾಲಿ ಸಮುದಾಯದ ಹಿರಿಯರ ನೇತೃತ್ವದ ನಿಯೋಗ ಇಂದು ಭೇಟಿ ನೀಡಿ, ಸೂಕ್ತ ದಾಖಲೆಗಳನ್ನು ಆಯೋಗಕ್ಕೆ ಸಲ್ಲಿಸಿದ್ದೇವೆ ಎಂದರು.

ಲಿಂಗಾಯತ ಸಮುದಾಯದ ಇತರೆ ಉಪಪಂಗಡಗಳಿಗೆ ಮೀಸಲಾತಿಯನ್ನು ನೀಡಲಾಗಿದೆ. ಸಾಮಾಜಿಕವಾಗಿ ಹಾಗೂ ಆರ್ಥಿಕವಾಗಿ ಹಿಂದುಳಿದ ಸಮುದಾಯಕ್ಕೆ ಓಬಿಸಿ ಮೀಸಲಾತಿ ನೀಡಬೇಕು ಎನ್ನುವುದು ನಮ್ಮ ಪ್ರಮುಖ ಬೇಡಿಕೆಯಾಗಿದೆ ಎಂದು ಶ್ರೀ ವಚನಾನಂದ ಸ್ವಾಮೀಜಿಗಳು ತಿಳಿಸಿದರು. 

ಹಿರಿಯ ವಕೀಲ ಬಿ.ಎಸ್‌ ಪಾಟೀಲ್‌ ಮಾತನಾಡಿ, 1871 ರಿಂದ ಇಲ್ಲಿಯವರೆಗಿನ ಸುಮಾರು 35 ಕ್ಕೂ ಹೆಚ್ಚು ದಾಖಲೆಗಳನ್ನು ನಾವು ನಿವೃತ್ತ ನ್ಯಾಯಮೂರ್ತಿ ಅವರ ನೇತೃತ್ವದ ಸಮಿತಿಗೆ ನೀಡಿದ್ದೇವೆ. ಹಲವಾರು ದಶಕಗಳ ಬೇಡಿಕೆಯ ಫಲವಾಗಿ ಸರಕಾರ ಇಂದು ಸಮಿತಿಯನ್ನು ರಚನೆ ಮಾಡಿದೆ. 

ಅಲ್ಲದೆ, ಕೇಂದ್ರ ಸರ್ಕಾರದ ಓಬಿಸಿ ಪಟ್ಟಿಗೆ ಪಂಚಮಸಾಲಿ ಸಮುದಾಯವನ್ನು ಸೇರ್ಪಡೆಗೊಳಿಸುವಂತೆ ಹಲವಾರು ಅರ್ಜಿಗಳನ್ನು ಸಲ್ಲಿಸಲಾಗಿತ್ತು. ಕೆಲವು ದಿನಗಳ ಹಿಂದೆ ಕೇಂದ್ರ ಸರ್ಕಾರವು ಸಂವಿಧಾನಕ್ಕೆ ತಿದ್ದುಪಡಿ ತಂದು, ಓಬಿಸಿ ಪಟ್ಟಿಗೆ ಸೇರ್ಪಡೆಯ ಅಧಿಕಾರವನ್ನು ರಾಜ್ಯಗಳಿಗೆ ನೀಡಿದೆ. ಈ ನಿಟ್ಟಿನಲ್ಲಿ ನಮ್ಮ ಅರ್ಜಿಗಳು ರಾಜ್ಯ ಸರ್ಕಾರಕ್ಕೆ ವರ್ಗಾವಣೆ ಆಗಿದ್ದು, ಓಬಿಸಿ ಮೀಸಲಾತಿ ಸಿಗುವ ವಿಶ್ವಾಸ ಹೊಂದಿದ್ದೇವೆ ಎಂದು ವಕೀಲರು ವಿವರಿಸಿದರು.  

ರಾಜ್ಯದ ಪಂಚಮಸಾಲಿ ಸಮುದಾಯವನ್ನು ಪ್ರತಿನಿಧಿಸುವ ಸುಮಾರು 15 ಕ್ಕೂ ಹೆಚ್ಚು ಸ್ವಾಮೀಜಿಗಳು ನಿಯೋಗದಲ್ಲಿ ಪಾಲ್ಗೊಂಡಿದ್ದರು. ಬಸವರಾಜ ದಿಂಡೂರ, ಸೋಮನಗೌಡ ಪಾಟೀಲ, ಚಂದ್ರಶೇಖರ ಪೂಜಾರ, ವಸಂತ ಹುಲ್ಲತ್ತಿ ಸಭೆಯಲ್ಲಿ ಪಾಲ್ಗೊಂಡಿದ್ದರು.  

error: Content is protected !!