ಹರಪನಹಳ್ಳಿ, ಸೆ.14- ಈರುಳ್ಳಿ ಬೆಳೆಗೆ ಪರಿಹಾರ ನೀಡುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಈರುಳ್ಳಿ ಬೆಳೆಗಾರರ ಒಕ್ಕೂಟ ಪಟ್ಟಣದ ಮಿನಿ ವಿಧಾನಸೌಧದ ಎದುರು ಪ್ರತಿಭಟನೆ ನಡೆಸಿ ತಹಶೀಲ್ದಾರ್ಗೆ ಮನವಿ ಸಲ್ಲಿಸಿದರು.
ಈ ವೇಳೆ ಕರ್ನಾಟಕ ರಾಜ್ಯ ಈರುಳ್ಳಿ ಬೆಳೆಗಾರರ ಒಕ್ಕೂಟದ ಅಧ್ಯಕ್ಷರಾದ ಶ್ರೀಮತಿ ಎಂ.ಪಿ. ವೀಣಾ ಮಹಾಂತೇಶ್ ಮಾತನಾಡಿ, ತಾಲ್ಲೂಕಿನಲ್ಲಿ ವಾಣಿಜ್ಯ ಬೆಳೆ ಈರುಳ್ಳಿಯನ್ನು ಅತಿ ಹೆಚ್ಚು ಬೆಳೆಯಲಾಗುತ್ತಿದೆ.
ಕಳೆದ ಒಂದು ತಿಂಗಳಿನಿಂದ ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಈರುಳ್ಳಿ ಬೆಳೆಯು ಕೊಳೆ ರೋಗಕ್ಕೆ ತುತ್ತಾಗಿ ಸಂಪೂರ್ಣ ಬೆಳೆ ನಾಶವಾಗಿದೆ.
ಒಂದು ಎಕರೆಗೆ ಎಂಭತ್ತರಿಂದ ತೊಂಭತ್ತು ಸಾವಿರ ರೂ. ಖರ್ಚು ತಗಲುತ್ತದೆ. ಅತಿ ಹೆಚ್ಚು ಮಳೆಯಾಗಿರುವುದರಿಂದ ಒಂದು ಎಕರೆಗೆ ಒಂದು ಕೆ.ಜಿ. ಕೂಡ ಸಿಗುತ್ತಿಲ್ಲ. ರಾಜ್ಯ ಸರ್ಕಾರ ಕೂಡಲೇ ಈರುಳ್ಳಿ ಬೆಳೆದ ರೈತರ ಕಷ್ಟಕ್ಕೆ ಸ್ಪಂದಿಸಿ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಕೆಪಿಸಿಸಿ ಮೂಲಭೂತ ಹಕ್ಕುಗಳ ಮಾಹಿತಿ ವಿಭಾಗದ ಜಿಲ್ಲಾ ಉಪಾಧ್ಯಕ್ಷ ಸಿದ್ದಲಿಂಗನಗೌಡ ಕರೇಗೌಡ್ರು, ಗ್ರಾಮ ಪಂಚಾಯ್ತಿ ಸದಸ್ಯ ಬಸವರಾಜ್, ಜೀತಾ ನಾಯ್ಕ್, ಉಮೇಶ್ ನಾಯ್ಕ, ಮಾನಸ ಬಸಯ್ಯ, ಕೃಷ್ಣ, ದಾದಾಪೀರ್ ಮಕರಬ್ಬಿ, ಸಿ. ಮಂಜುನಾಥ, ಗಾಯತ್ರಿ ದೇವಿ, ತಳವಾರ್ ಕಾರ್ತಿಕ್, ಗುರು ಬಸವರಾಜ್, ಅರುಣ್ಕುಮಾರ್, ಪ್ರಜ್ವಲ್ಕುಮಾರ್, ಹರ್ಷಿತ್, ಬಳಗನೂರು ಕರೀಂ ಸಾಬ್, ಹುಣಸೆಹಳ್ಳಿ ಸುರೇಶ್, ಸಂತೋಷ್ ಗರ್ಭಗುಡಿ, ಕೊಟ್ರೇಶ್ ಬಾಗಳಿ, ರಮೇಶ್ ಸಾಸ್ವೆಹಳ್ಳಿ, ನಾಗರಾಜ್ ಗಂಗಜ್ಜಿ, ಗೌರಿಪುರ ಮದನಪ್ಪ, ಚಿರಸ್ಥಹಳ್ಳಿ ಟಿ. ಮಲ್ಲಿಕಾರ್ಜುನ್, ಬಸವನಾಳ ಪಿ ಸಂತೋಷ್, ರೂಪ ಶೃಂಗಾರತೋಟ, ರವಿಚಂದ್ರನ್ ನಿಲುವಂಜಿ, ಬಸವಲಿಂಗಪ್ಪ, ನಾಗರಾಜ್ ಇನ್ನಿತರರಿದ್ದರು.