ಮನರಂಜನೆ ಕಾರ್ಯಕ್ರಮದ ಅವಕಾಶಕ್ಕೆ ವಾದ್ಯ ವೃಂದ ಕಲಾವಿದರ ಆಗ್ರಹ

ದಾವಣಗೆರೆ, ಸೆ.8- ಕೊರೊನಾ ನಿಯಮದ ಅಡಿಯಲ್ಲೇ ಮನರಂಜನೆ ಕಾರ್ಯಕ್ರಮ ಮಾಡುವುದಕ್ಕೆ ಅವಕಾಶ ಕಲ್ಪಿಸುವಂತೆ ಆಗ್ರಹಿಸಿ, ಜಿಲ್ಲಾ ವಾದ್ಯ ವೃಂದ ಕಲಾವಿದರ ಸಂಘದ ನೇತೃತ್ವದಲ್ಲಿ ವಾದ್ಯ ವೃಂದ ಕಲಾವಿದರು ನಗರದಲ್ಲಿ ನಿನ್ನೆ ಪ್ರತಿಭಟನೆ ನಡೆಸಿದರು.

ಪಾಲಿಕೆ ಆವರಣದಲ್ಲಿನ ಪುಟ್ಟಣ್ಣ ಕಣಗಾಲ್ ವಾದ್ಯ ಮಂಟಪದ ಬಳಿ ಇರುವ ಪುಟ್ಟಣ್ಣರ ಪುತ್ಥಳಿಗೆ ಮಾಲಾರ್ಪಣೆ ಮಾಡಿದ ಕಲಾವಿದರು, ನಂತರ ಪ್ರತಿಭಟಿಸಿ ಸರ್ಕಾರದ ಗಮನ ಸೆಳೆದರು.

ನಂತರ ದ್ವಿಚಕ್ರ ವಾಹನಗಳ ಮೂಲಕ ಜಿಲ್ಲಾಧಿಕಾರಿಗಳ ಕಚೇರಿಗೆ ತೆರಳಿ ರಾಜ್ಯದಲ್ಲಿ ಇತರರಿಗೂ ನೀಡಿರುವಂತೆ ನಮಗೂ ಅವಕಾಶ ಕಲ್ಪಿಸಿಕೊಡಿ ಎಂದು ಆಗ್ರಹಿಸಿ ಮನವಿ ಸಲ್ಲಿಸಿದರು.

ಕಳೆದ 2 ವರ್ಷಗಳಿಂದ ಮಹಾಮಾರಿ ಕೊರೊನಾ ಸೋಂಕಿನ ಕಾರಣದಿಂದ ಆರ್ಕೆಸ್ಟ್ರಾ ಕಲಾವಿದರು ಜೀವನ ನಡೆಸು ವುದು ತುಂಬಾ ಕಷ್ಟಕರವಾಗಿದೆ. ಯಾವುದೇ ಸಾರ್ವಜನಿಕ ಜನದಟ್ಟಣೆ ಪ್ರದೇಶದಲ್ಲಿ ಮನರಂಜನೆ ನೀಡಲು ಅವಕಾಶ ಇಲ್ಲದ ಕಾರಣ ಕಲಾವಿದರು ಬೀದಿಪಾ ಲಾಗಿದ್ದಾರೆ. ಕಲಾವಿದರನ್ನು ಅವಲಂಬಿಸಿರುವ ಕುಟುಂ ಬಸ್ಥರು ಸಹ ಸಂಕಷ್ಟಕ್ಕೆ ತುತ್ತಾಗಿದ್ದಾರೆ. ಪ್ರತಿ ತಿಂಗಳು ಮನೆ ಬಾಡಿಗೆ, ಕರೆಂಟ್ ಬಿಲ್, ಮಕ್ಕಳ ಶಾಲಾ ಶುಲ್ಕ ಭರಿಸಲು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದ ವಾದ್ಯವೃಂದ ಕಲಾವಿದರಿಗೆ ರಾಜ್ಯ ಸರ್ಕಾರ ತಕ್ಷಣವೇ ಕೋವಿಡ್ ಪರಿಹಾರ ಪ್ಯಾಕೇಜ್ ಘೋಷಿಸಬೇಕೆಂದು ಕಲಾವಿದರು ಆಗ್ರಹಿಸಿದರು.

ನಗರದಲ್ಲೇ 150ಕ್ಕೂ ಹೆಚ್ಚು ವಾದ್ಯವೃಂದ ಕಲಾವಿದರಿದ್ದು, ಕೋವಿಡ್ ಕಾರಣದಿಂದ ಎಲ್ಲಾ ಕಾರ್ಯಕ್ರಮಗಳು ರದ್ದಾಗಿರುವುದರಿಂದ ಕೆಲಸ ಇಲ್ಲದ ಕಾರಣದಿಂದ ವಾದ್ಯ ವೃಂದ ಕಲಾವಿದರು ಜೀವನ ನಡೆಸುವುದು ಕಷ್ಟಕರವಾಗಿದೆ. ಕಾರಣ ಜಿಲ್ಲಾಡಳಿತ ನಮ್ಮಗಳ ಸಮಸ್ಯೆ ಯನ್ನು ಸರ್ಕಾರದ ಗಮನಕ್ಕೆ ತಂದು ನಮ್ಮ ಕಲಾವಿದರಿಗೆ ಕೊರೋನಾ ನಿಯಮದ ಅಡಿಯಲ್ಲೇ ಲಘು ಸಂಗೀತ, ಸುಗಮ ಸಂಗೀತ, ಭಾವಗೀತೆ, ಭಕ್ತಿಗೀತೆ ಹಾಡಲು ಅವಕಾಶ ನೀಡಬೇಕೆಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಹೆಚ್. ಧರ್ಮ ರಾಜ್, ಪರಮೇಶ್, ಪರಮೇಶ್ವರಪ್ಪ, ಕೆ.ಸುರೇಶ್, ಶಿವಲಿಂಗಪ್ಪ, ಹನುಮಂತ ರಾಜ್, ಅನಿಲ್ ಕುಮಾರ್, ಕೃಷ್ಣಾರ್ಜುನ, ಗುಡದಯ್ಯ, ಕೆ.ಜಿ.ಗೀತಾ, ಎ.ಎಂ. ಹರೀಶ್ ಇತರರು ಭಾಗವಹಿಸಿದ್ದರು.

error: Content is protected !!