6-8 ಆರಂಭ, ಕಲಿಕೆಗಿದೆ ಸವಾಲುಗಳ ಸರಣಿ

ಶಾಲೆ ಆರಂಭವಾದರೂ ಸದ್ಯಕ್ಕೆ ಸೇತುಬಂಧ ಮಾತ್ರ ಸಾಧ್ಯ

ದಾವಣಗೆರೆ, ಸೆ. 6 – ಆರರಿಂದ 8ನೇ ತರಗತಿಯ ಶಾಲೆಗಳು ಸೋಮವಾ ರದಿಂದ ಪುನರಾರಂಭಗೊಂಡಿದ್ದು, ಪೋಷಕರು ಉತ್ಸಾಹದಿಂದ ಮಕ್ಕಳನ್ನು ಶಾಲೆಗಳಿಗೆ ಕಳುಹಿಸಿದ್ದಾರೆ. ಮಕ್ಕಳು ಶಾಲಾರಂಭದ ಉತ್ಸಾಹದೊಂದಿಗೆ ಮತ್ತೆ ಕಲಿಕೆಯತ್ತ ಮುಖ ಮಾಡಿದ್ದಾರೆ.

ಕಳೆದ ಏಪ್ರಿಲ್ ತಿಂಗಳಲ್ಲಿ ಕೊರೊನಾ ಎರಡನೇ ಅಲೆ ಹಿನ್ನೆಲೆಯಲ್ಲಿ ನೇರ ಕಲಿಕೆಗೆ ಸಂಪೂರ್ಣ ವಿರಾಮ ಬಿದ್ದಿತ್ತು. 9ರಿಂದ 12ನೇ ತರಗತಿಯ ಶಾಲೆಗಳನ್ನು ಆಗಸ್ಟ್ 23ರಿಂದ ಪುನರಾರಂಭಿಸಲು ರಾಜ್ಯ ಸರ್ಕಾರ ಅನುಮತಿ ನೀಡಿತ್ತು. ಈಗ ಸೆಪ್ಟೆಂಬರ್ 6 ರಿಂದ ಆರರಿಂದ 8ನೇ ತರಗತಿಗಳು ಪುನರಾರಂಭಗೊಂಡಿವೆ.

ಮೊದಲ ದಿನದಂದು ಕೊರೊನಾ ಮುನ್ನೆಚ್ಚರಿಕೆಯ ನಡುವೆ, ತಳಿರು, ತೋರಣದೊಂದಿಗೆ ಶಾಲೆಗಳು ಮಕ್ಕಳನ್ನು ಬರ ಮಾಡಿಕೊಂಡಿವೆ. ಹಲವಾರು ಸರ್ಕಾರಿ ಶಾಲೆಗಳಲ್ಲಿ ಸಿಹಿ ವಿತರಣೆ ಮಾಡಲಾಗಿದೆ. ಪೋಷಕರು ತಮ್ಮ ಮಕ್ಕಳನ್ನು ಶಾಲೆಗೆ ಕಳಿಸಲು ಮುಚ್ಚಳಿಕೆ ಬರೆದು ಕೊಡುವುದು ಕಡ್ಡಾಯವಾಗಿತ್ತು. ಸೋಮವಾರ ಹಲವಾರು ಶಾಲೆಗಳಲ್ಲಿ ಪಠ್ಯಪುಸ್ತಕಗಳನ್ನೂ ವಿತರಿಸಲಾಗಿದೆ. 

ಪಾಠವಿನ್ನೂ ದೂರ : ಶಾಲೆಗಳು ಆರಂಭವಾಗಿವೆಯಾದರೂ, ಸುದೀರ್ಘ ಕಲಿಕೆ ಅಂತರದಿಂದಾಗಿ ಸಾಕಷ್ಟು ಮಕ್ಕಳು ಹಿಂದಿನ ವರ್ಷದ ಪಾಠಗಳನ್ನು ಅರಗಿಸಿಕೊಳ್ಳಲು ಆಗಿಲ್ಲ. ಹೀಗಾಗಿ ಶಾಲಾರಂಭವಾದರೂ ಹೊಸ ಪಾಠಕ್ಕಿಂತ, ಹಿಂದಿನ ವರ್ಷದ ಪಾಠಗಳನ್ನು ಮನದಟ್ಟು ಮಾಡುವ ಸೇತುಬಂಧವೇ ನಡೆಯುತ್ತಿದೆ. ಕನಿಷ್ಠ ಇನ್ನೊಂದು ತಿಂಗಳ ಕಾಲ ಮಕ್ಕಳಿಗೆ ಹಿಂದಿನ ವರ್ಷದ ಪಾಠಗಳನ್ನೇ ಕಲಿಸಲಾಗುವುದು ಎಂದು ಹಲವಾರು ಶಿಕ್ಷಕರು ತಿಳಿಸಿದ್ದಾರೆ.

ಲೈನ್‌ಗೆ ಬರದ ಆನ್‌ಲೈನ್ : ಆನ್‌ಲೈನ್‌ ಮೂಲಕ ಪಾಠ ಹೇಳಿಕೊಟ್ಟಿದ್ದು ನೆಪ ಮಾತ್ರಕ್ಕೆ ಎಂಬಂತಾಗಿದೆ. ಪರಿಸ್ಥಿತಿ ಹೇಗಾಗಿದೆ ಎಂದರೆ, ಹಲವಾರು ಆರನೇ ತರಗತಿ ಮಕ್ಕಳಿಗೆ ಇಂಗ್ಲಿಷ್ ವರ್ಣಮಾಲೆ, ವ್ಯಾಕರಣ ಹಾಗೂ ಗಣಿತಗಳನ್ನು ಮೊದಲಿನಿಂದ ಹೇಳಿಕೊಡುವ ಪರಿಸ್ಥಿತಿ ಬಂದಿದೆ ಎಂದು ಶಿಕ್ಷಕರೊಬ್ಬರು ಶಿಕ್ಷಣದ ವಾಸ್ತವಿಕ ಪರಿಸ್ಥಿತಿ ತಿಳಿಸಿದ್ದಾರೆ.

ಪಾಠ ಓದುವುದು, ಬರೆಯುವುದು ಹಾಗೂ ಮಗ್ಗಿಯನ್ನು ಹೇಳಿಕೊಟ್ಟ ನಂತರ ಪಾಠದ ಮುಂದಿನ ಭಾಗ ಸಾಧ್ಯವಾಗಲಿದೆ. ಮಕ್ಕಳ ಕಲಿಕೆಯ ಮಟ್ಟ ಸಾಕಷ್ಟು ಕುಸಿದಿರುವುದರಿಂದ, ಮೂಲ ಕಲಿಕೆಗೆ ಈಗ ಒತ್ತು ನೀಡುತ್ತಿದ್ದೇವೆ ಎಂದವರು ಹೇಳಿದ್ದಾರೆ.

ಪೋಷಕರ ಉತ್ಸಾಹ : ಮಕ್ಕಳನ್ನು ಶಾಲೆಗೆ ಸೇರಿಸಲು 6 ಹಾಗೂ 7ನೇ ತರಗತಿಯ ಪೋಷಕರು ಉತ್ಸಾಹದಿಂದ ಬಂದಿದ್ದಾರೆ. ಆನ್‌ಲೈನ್‌ ಕಲಿಕೆ ನಿಲ್ಲಿಸಿ ನಿರಂತರವಾಗಿ ಆಫ್‌ಲೈನ್ ಪಾಠ ಮಾಡಿ ಎಂಬುದೇ ಪೋಷಕರ ಒತ್ತಾಯ ಎಂದು ನಗರದ ಗುರುಬಸಮ್ಮ ವಿ. ಚಿಗಟೇರಿ ಪ್ರಾಥಮಿಕ ಶಾಲೆಯ ಹಿರಿಯ ಶಿಕ್ಷಕಿ ಸೌಭಾಗ್ಯಮ್ಮ ಹೇಳಿದ್ದಾರೆ.

ಮೂರ್ನಾಲ್ಕು ಮಕ್ಕಳನ್ನು ಬಿಟ್ಟರೆ, ಉಳಿದೆಲ್ಲರೂ ಮೊದಲ ದಿನವೇ ಶಾಲೆಗೆ ಬಂದಿದ್ದಾರೆ. ನಾಳೆ ಎಲ್ಲ ಮಕ್ಕಳು ಶಾಲೆಗೆ ಬರುವ ನಿರೀಕ್ಷೆ ಇದೆ ಎಂದವರು ಹೇಳಿದ್ದಾರೆ.

ಸರ್ಕಾರಿ ಶಾಲೆಯ ಒಲವು : ಈ ವರ್ಷ ಸರ್ಕಾರಿ ಶಾಲೆಗಳತ್ತ ಪೋಷಕರ ಒಲವು ಹೆಚ್ಚಾಗಿದೆ. ತಮ್ಮ ಶಾಲೆಗೆ  ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.20ರಷ್ಟು ಮಕ್ಕಳ ದಾಖಲಾತಿ ಹೆಚ್ಚಾಗಿದೆ. ಶಾಲಾರಂಭಕ್ಕೆ ಮುಂಚೆಯೇ ಪೋಷಕರು ಮಕ್ಕಳನ್ನು ಶಾಲೆಗೆ ಕಳಿಸುವ ಬಗ್ಗೆ ಕೇಳುತ್ತಲೇ ಇದ್ದರು ಎಂದು ನಿಟುವಳ್ಳಿಯ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ಎ.ಕೆ. ಚಂದ್ರಪ್ಪ ಹೇಳಿದ್ದಾರೆ.

15-20 ಮಕ್ಕಳಿಗೆ ಪ್ರತ್ಯೇಕ ಶಾಲಾ ಕೊಠಡಿ ರೂಪಿಸಲಾಗಿದೆ. ಮಾರ್ಗದರ್ಶಿ ಶಿಕ್ಷಕರನ್ನು ನೇಮಿಸಿಕೊಂಡು, ಸಾಮಾಜಿಕ ಅಂತರ ದಲ್ಲಿ ಕೊರೊನಾ ಮುನ್ನೆಚ್ಚರಿಕೆಯಿಂದ ಪಾಠ ಮಾಡುತ್ತಿದ್ದೇವೆ. ಪ್ರತಿದಿನ ತರಗತಿಗೆ ಮುಂಚೆ ಮಕ್ಕಳಿಗೆ ಕೊರೊನಾ ಮುನ್ನೆಚ್ಚರಿಕೆಯ ಬಗ್ಗೆ ಕಡ್ಡಾಯವಾಗಿ ತಿಳಿಸಲಿದ್ದೇವೆ ಎಂದವರು ಹೇಳಿದ್ದಾರೆ.

error: Content is protected !!