ಕಲಾವಿದರಲ್ಲಿ ಶ್ರದ್ಧೆ, ಭಕ್ತಿ, ಶಿಸ್ತು ಮುಖ್ಯ

ಜಾನಪದ ಅಕಾಡೆಮಿ ಅಧ್ಯಕ್ಷೆ ಪದ್ಮಶ್ರೀ ಮಾತಾ ಮಂಜಮ್ಮ ಜೋಗತಿ 

ಬಳ್ಳಾರಿಗೆ ಬಯಲಾಟ ಅಕಾಡೆಮಿ ಅಧ್ಯಕ್ಷ ಸ್ಥಾನ ಲಭಿಸಲಿ

ಬಯಲಾಟ ಕಲಾ ಪ್ರದರ್ಶನದಲ್ಲಿ ಮುಂಚೂ ಣಿಯಲ್ಲಿರುವ ಮತ್ತು ಬಯಲಾಟ, ದೊಡ್ಡಾಟ ಕಲೆಗಳ ಬೀಡಾಗಿರುವ ಬಳ್ಳಾರಿ ಜಿಲ್ಲೆಗೆ ಬಯಲಾಟ ಅಕಾಡೆಮಿ ಅಧ್ಯಕ್ಷ ಸ್ಥಾನ ಲಭಿಸಲಿ ಎಂದು ಜಾನಪದ ಅಕಾಡೆಮಿ ಅಧ್ಯಕ್ಷೆ ಮಾತಾ ಮಂಜವ್ವ ಜೋಗುತಿ ಆಶಯ ವ್ಯಕ್ತಪಡಿಸಿದರು.

ಬಳ್ಳಾರಿ ಜಿಲ್ಲೆಯ ಹೂವಿನಹಡಗಲಿಯಲ್ಲಿ ಬಯಲಾಟ ಕಲೆಗೆ ಸಂಬಂಧಿಸಿದಂತೆ ಹೆಚ್ಚು ಶ್ರಮವಹಿಸಿ ಕೆಲಸ ಮಾಡುತ್ತಿರುವ ಅಕಾಡೆಮಿ ಸದಸ್ಯ ಡಾ. ಕೆ. ರುದ್ರಪ್ಪ ಅವರಿಗೆ ಅಧ್ಯಕ್ಷ ಸ್ಥಾನವನ್ನು ನೀಡುವಂತೆ ಸರ್ಕಾರಕ್ಕೆ ಮನವಿ ಮಾಡುವುದಾಗಿ ತಿಳಿಸಿದರು.

ದಾವಣಗೆರೆ, ಸೆ.1- ಯಕ್ಷಗಾನ ಕಲಾವಿದರಲ್ಲಿರುವ ಶ್ರದ್ಧೆ, ಭಕ್ತಿ, ಶಿಸ್ತು, ಸಮಯ ಪ್ರಜ್ಞೆ, ಬದ್ಧತೆಯನ್ನಿ ಟ್ಟುಕೊಂಡರೆ ಬಯಲಾಟ ಕಲೆಯನ್ನು ಯಕ್ಷಗಾನ ಕಲೆಯನ್ನು ಮೀರಿ ಬೆಳೆಸಲು ಸಾಧ್ಯವಿದೆ ಎಂದು ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷೆ  ಪದ್ಮಶ್ರೀ ಮಾತಾ ಮಂಜಮ್ಮ ಜೋಗತಿ ಹೇಳಿದರು. 

ನಗರದ ಕುವೆಂಪು ಕನ್ನಡ ಭವನದಲ್ಲಿ ಗಾಂಧೀಜಿ ಸೇವಾ ಸಂಸ್ಥೆ ಕೊಂಬಳಿ, ರಂಗ ಚೈತನ್ಯ ಬಯಲಾಟ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ ಹೂವಿನಹಡಗಲಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಸಂಸ್ಕಾರ ಭಾರತಿ ದಾವಣಗೆರೆ ಜಿಲ್ಲಾ ಶಾಖೆ ಇವರ ಸಂಯುಕ್ತಾಶ್ರಯದಲ್ಲಿ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಏರ್ಪಡಿಸಿದ್ದ ಬಯ ಲಾಟ ಮೂಡಲಪಾಯ ಸಂಗೀತ ರಾಜ್ಯ ಮಟ್ಟದ ವಿಚಾರ ಸಂಕಿರಣ ದಲ್ಲಿ `ಬಯಲಾಟ-ತಿರುಗಾಟ’ ಗೋಷ್ಠಿಯಲ್ಲಿ ಕಲಾವಿದರಿಗೆ ಕಿರೀಟ ಧಾರಣೆ ಮಾಡಿ, ಉದ್ಘಾಟಿಸಿ ಮಾತನಾಡಿದರು.

ಯಕ್ಷಗಾನ ಕಲೆ ವಿಶ್ವಮಟ್ಟದಲ್ಲಿ ಗುರುತಿಸುವಂತಾಗಿದೆ. ಅದಕ್ಕೆ ಕಾರಣ ಆ ಕಲಾವಿದರಲ್ಲಿ ಇರುವ ಶ್ರದ್ಧೆ, ಭಕ್ತಿ, ಬದ್ಧತೆ, ಸಮಯ ಪ್ರಜ್ಞೆ, ಶಿಸ್ತು. ಇವುಗಳನ್ನು ಬಯಲಾಟದ ಕಲಾವಿದರು ಕೂಡ ಮೈಗೂಡಿಸಿ ಕೊಂಡರೆ ವಿಶ್ವಮಟ್ಟದಲ್ಲಿ ಖ್ಯಾತಿ ಗಳಿಸಲು ಸಾಧ್ಯವಿದೆ ಎಂದರು.

ಇತ್ತೀಚಿನ ದಿನಗಳಲ್ಲಿ ಬಯಲಾಟದ ಬಗ್ಗೆ ಕಲಾವಿದರಲ್ಲಿ ಆಸಕ್ತಿ, ಶ್ರದ್ಧೆ, ಭಕ್ತಿ ಕಡಿಮೆಯಾಗುತ್ತಾ ಬಂದಿದೆ. ಬಯಲಾಟ ಕಲೆ ಇನ್ನೂ ಸುಧಾರಣೆ ಯಾಗಬೇಕಿದೆ. ಗುರುಗಳನ್ನು ಗೌರವಿಸುವ ಪರಿಪಾಠವನ್ನು ನಾವುಗಳು ಬೆಳೆಸಿಕೊಳ್ಳಬೇಕಾಗಿದೆ ಎಂಬುದನ್ನು ತಾವು ಚಿಕ್ಕವರಿದ್ದಾಗ ದಾವಣಗೆರೆಯಲ್ಲಿ ಭಿಕ್ಷಾಟನೆ ಮಾಡಿ ಜೀವಿಸುತ್ತಿದ್ದುದನ್ನು ನೆನಪು ಮಾಡಿಕೊಂಡರು.

ಹೂವಿನಹಡಗಲಿ ಮೊರಾರ್ಜಿ ವಸತಿ ಶಾಲೆಯ ಶಿಕ್ಷಕ ಯುವರಾಜ, ಸಂಸ್ಕಾರ ಭಾರತಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಪ.ರಾ. ಕೃಷ್ಣಮೂರ್ತಿ, ಗದಗ ಪಂಡಿತ್ ಪುಟ್ಟರಾಜ ಗವಾಯಿಗಳ ಸಂಗೀತ ಕಾಲೇಜಿನ ವಾಯೋಲಿನ್ ವಾದಕ ಎ. ನಾರಾಯಣ, ಬಯಲಾಟ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಎನ್. ರಂಗನಾಥ್ ಮತ್ತಿತರರು ಉಪಸ್ಥಿತರಿದ್ದರು.

error: Content is protected !!