ನಗರ ಸರ್ವ ಜನಾಂಗದ ಶಾಂತಿಯ ತೋಟ

ದಾವಣಗೆರೆ, ಆ.20- ಸೋಮವಂಶ ಸಹ ಸ್ರಾರ್ಜುನ ಕ್ಷತ್ರಿಯ ಸಮಾಜವು ಚಿಕ್ಕ ಸಮಾ ಜವಾಗಿದ್ದರೂ ಎಲ್ಲಾ ಸಮಾಜದೊಂದಿಗೆ ಸ್ನೇಹ ಜೀವಿಯಾಗಿ ಚೊಕ್ಕದಾಗಿದೆ ಎಂದು ಆವರ ಗೊಳ್ಳ ಪುರವರ್ಗ ಹಿರೇಮಠದ ಶ್ರೀ ಓಂಕಾರ ಶಿವಾಚಾರ್ಯ ಸ್ವಾಮೀಜಿ ಪ್ರಶಂಸಿಸಿದರು.

ನಗರದ ಶಂಕರ ವಿಹಾರ ಬಡಾವಣೆಯಲ್ಲಿ ಸೋಮವಂಶ ಸಹಸ್ರಾರ್ಜುನ ಕ್ಷತ್ರಿಯ ಸಮಾಜದ ವತಿಯಿಂದ ಇಂದು ಹಮ್ಮಿಕೊಳ್ಳಲಾಗಿದ್ದ ಶ್ರೀ ಅಂಬಾಭವಾನಿ ದೇವಾಲಯ ನಿರ್ಮಾಣಕ್ಕೆ ಭೂಮಿ ಪೂಜೆಯನ್ನು ನೆರವೇರಿಸಿ, ಶ್ರೀಗಳು ಆಶೀರ್ವಚನ ನೀಡಿದರು.

ದಾವಣಗೆರೆ ನಗರವು ಸರ್ವ ಜನಾಂಗದ ಶಾಂತಿಯ ತೋಟವಾಗಿದೆ. ಇಲ್ಲಿ ದಾನ, ಧರ್ಮ, ಪರೋಪಕಾರ, ಸಹ ಜೀವನ ಮತ್ತು ಭಾವನಾತ್ಮಕ ಐಕ್ಯತೆ ನೆಲೆಸಿರುವ ಕಾರಣ ಈ ನಗರ ದೇವನಗರಿ ಎಂಬ ಹೆಸರು ಪಡೆದಿದೆ. ಇಲ್ಲಿ ಎಲ್ಲಾ ಸಮಾಜಗಳು ಕೂಡ ಸ್ವಾಸ್ಥ್ಯ ಬದುಕನ್ನು ಕಟ್ಟಿಕೊಂಡಿವೆ ಎಂದು ಶ್ರೀಗಳು ಬಣ್ಣಿಸಿದರು.

ಶಾಸಕ ಎಸ್.ಎ. ರವೀಂದ್ರನಾಥ ಮಾತನಾಡಿ, ಸಮಾಜದ ಎಲ್ಲರೂ ಆರ್ಥಿಕವಾಗಿ ಪ್ರಗತಿ ಕಂಡಿದ್ದಾರೆ. ಹೀಗಾಗಿ, ಎಲ್ಲರೂ ದೇವಾಲಯದ ಅಭಿವೃದ್ಧಿಗೆ ತಮ್ಮ ಕೈಲಾಗುವಷ್ಟು ಆರ್ಥಿಕ ಸಹಾಯ ಮಾಡಿದರೆ ದೇವಾಲಯ ಬಹುಬೇಗನೆ ಕಟ್ಟಲು ಅನುಕೂಲ ಆಗಲಿದೆ ಎಂದು ಹೇಳಿದರು.

ಮಹಾಪೌರ ಎಸ್.ಟಿ. ವೀರೇಶ್ ಮಾತನಾಡಿ,     ಪಾಲಿಕೆಯಿಂದ ಈ ದೇವಾಲಯಕ್ಕೆ ಈಗಾಗಲೇ ಕುಡಿಯುವ ನೀರಿಗಾಗಿ ಬೋರ್‍ವೆಲ್ ಕೊರೆಸಲಾಗಿದೆ. ಮುಂದೆಯೂ ಸಹ ದೇವಾಲಯದ ಅಭಿವೃದ್ಧಿಗೆ ಪಾಲಿಕೆ ಸಹಕಾರವಿರಲಿದೆ ಎಂದು ತಿಳಿಸಿದರು.

ದೂಡಾ ಅಧ್ಯಕ್ಷ ರಾಜನಹಳ್ಳಿ ಶಿವಕುಮಾರ್ ಮಾತನಾಡಿ, ಹಿಂದೂ ಧರ್ಮದ ಆಚರಣೆ ಇಂದಿಗೂ ಉಳಿಯಲು ಸಾವಿರಾರು ವರ್ಷಗಳ ಪದ್ಧತಿ, ಸಂಸ್ಕಾರ ಅನುಸರಿಸುತ್ತಿರುವ ಇಂತಹ ಸಮಾಜಗಳು ಕಾರಣವಾಗಿವೆ. ಆಧುನಿಕ ಭರಾಟೆಯಲ್ಲೂ ಪದ್ಧತಿ, ಸಂಸ್ಕೃತಿ ಆಚರಣೆಗಳನ್ನು ಅನುಸರಿಸಿದಾಗ ಹಿಂದೂ ಧರ್ಮ ಉಳಿಯಲಿದೆ. ಮಕ್ಕಳಿಗೆ ಧರ್ಮದ ಇತಿಹಾಸ, ಸಂಸ್ಕೃತಿ ತಿಳಿಸುವ ಕೆಲಸ ಮಾಡಬೇಕಿದೆ. ಆಗ ಹಿಂದೂ ಧರ್ಮ ಉಳಿಸಲು ಸಾಧ್ಯ ಅಭಿಪ್ರಾಯಪಟ್ಟರು.

ಎಸ್‍ಎಸ್‍ಕೆ ಸಮಾಜದ ಅಧ್ಯಕ್ಷ ರಮೇಶ್ ಪಿ. ಕಾಟ್ವೆ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ನಗರಪಾಲಿಕೆ ಸದಸ್ಯರಾದ ಆಶಾ ಉಮೇಶ್, ಎಬಿಎಸ್‍ಎಸ್‍ಕೆ ಕಾರ್ಯದರ್ಶಿ ತಪೋವನದ ಡಾ. ಶಶಿಕುಮಾರ್ ಮೆಹರ್‍ವಾಡೆ, ರಾಣೇಬೆನ್ನೂರು ಎಸ್‍ಎಸ್‍ಕೆ ಸಮಾಜದ ಅಧ್ಯಕ್ಷ ವಾಸುದೇವಸಾ ಲದ್ವಾ, ಮುಂಡರಗಿಯ ಅಧ್ಯಕ್ಷ ಅಶೋಕ್ ಸಿದ್ಲಿಂಗ್, ದಾವಣಗೆರೆ ಸಮಾಜದ ಕಾರ್ಯದರ್ಶಿ ಮಂಜುನಾಥ ಸಾ ಹೆಚ್. ಹಬೀಬ್, ಸಹ ಕಾರ್ಯದರ್ಶಿ ಪ್ರವೀಣ್ ಜಿ. ಕಾಟ್ವೆ, ಖಜಾಂಚಿ ವಿಜಯಕುಮಾರ್‍ ಡಿ. ಪವಾರ್, ಹುಬ್ಬಳ್ಳಿ ಅಶೋಕ ಎನ್. ಲದ್ವಾ, ಗಜಾನನ ಎಂ. ಭೂತೆ, ರಂಗನಾಥಸಾ ಎನ್. ಲದ್ವಾ, ಮಲ್ಲಾರಸ ಆರ್. ಕಾಟ್ವೆ, ಮಹಿಳಾ ಮಂಡಳಿಯ ಗೌರವಾಧ್ಯಕ್ಷೆ ರಾಧಾ ಬಾಯಿ ಡಿ. ಮೆಹರ್‍ವಾಡೆ, ಅಧ್ಯಕ್ಷರಾದ ಶುಭಾಂಜಲಿ ಆರ್. ಕಠಾರೆ, ಕಾರ್ಯದರ್ಶಿ ಗಾಯತ್ರಿ ಎಮ್. ಹಬೀಬ್, ಲಕ್ಷ್ಮಿಬಾಯಿ ಎಸ್ ಭೂತೆ, ಸೋನಾ ಬಾಯಿ ಎಂ. ಕಾಟ್ವೆ, ತರುಣ ಮಂಡಳಿಯ ಓಂಪ್ರಕಾಶ್ ಮೆಹರ್‍ವಾಡೆ, ಗಿರೀಶ್ ಎಸ್. ಮೆಹರ್‍ವಾಡೆ, ರಾಜಕಿರಣ್ ಕಾಟ್ವೆ, ಭರತ್ ಕಿಶನ್ ಲದ್ವಾ, ವಿವೇಕಾನಂದ ಎಲ್. ಬದ್ದಿ ಸೇರಿದಂತೆ ಇತರರು ಇದ್ದರು. 

ಅಶೋಕ್ ವಿ. ರಾಯಭಾಗಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಹೇಶ್ ಕೆ. ಸೋಳಂಕಿ ಕಾರ್ಯಕ್ರಮ ನಿರೂಪಿಸಿದರು.

error: Content is protected !!