ದಾವಣಗೆರೆ ಅರ್ಬನ್ ಬ್ಯಾಂಕ್‌ : ಶೇ. 1ರ ಬಡ್ಡಿ ರಿಯಾಯ್ತಿ ವಿಸ್ತರಣೆ

ದಾವಣಗೆರೆ ಅರ್ಬನ್ ಬ್ಯಾಂಕ್‌ : ಶೇ. 1ರ ಬಡ್ಡಿ ರಿಯಾಯ್ತಿ ವಿಸ್ತರಣೆ - Janathavaniದಾವಣಗೆರೆ, ಆ. 20- ತನ್ನಲ್ಲಿ ಸಾಲ ಪಡೆದ ಗ್ರಾಹಕರಿಗೆ ಮೂರು ತಿಂಗಳುಗಳ ಅವಧಿಗೆ ಬಡ್ಡಿಯಲ್ಲಿ ಶೇ.1ರಂತೆ ರಿಯಾಯಿತಿ ನೀಡಿದ್ದು, ದಾವಣಗೆರೆ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್, ಮತ್ತೆ ಮೂರು ತಿಂಗಳ ಅವಧಿಗೆ ವಿಸ್ತರಿಸಿದೆ. 

ಪ್ರಸ್ತುತ ಆಗಸ್ಟ್ ಮತ್ತು ಬರುವ ಸೆಪ್ಟೆಂಬರ್ ಹಾಗೂ ಅಕ್ಟೋಬರ್ ಮಾಹೆಗಳ ಮೂರು ತಿಂಗಳ ಕಾಲ ಅಸಲು ಮತ್ತು ಬಡ್ಡಿಯನ್ನು ಆಯಾ ತಿಂಗಳ 10ನೇ ತಾರೀಖಿನೊಳಗೆ ಕಟ್ಟಿದ ಗ್ರಾಹಕರಿಗೆ ಮಾತ್ರ ವಿಶೇಷವಾಗಿ ಬಡ್ಡಿಯಲ್ಲಿ ಶೇ.1ರಂತೆ ರಿಯಾಯಿತಿ ನೀಡಲಾಗುತ್ತದೆ. 

 ಕೊರೊನಾ ಸೋಂಕು ಕಾರಣದಿಂದ ಆಗಿದ್ದ ಲಾಕ್ ಡೌನ್ ಪರಿಣಾಮ ವ್ಯವಹಾರಗಳು ಸ್ಥಗಿತಗೊಂಡಿದ್ದವು. ಇದರಿಂದಾಗಿ ಸಾಲ ಪಡೆದ ಗ್ರಾಹಕರು ಪರದಾಡುವಂತಾಗಿ ಆ ಗ್ರಾಹಕರಿಗೆ ಸಹಕಾರ ಮತ್ತು ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.

ಬ್ಯಾಂಕಿನ ಸಭಾಂಗಣದಲ್ಲಿ ನಿನ್ನೆ ನಡೆದ ಬ್ಯಾಂಕಿನ ಆಡಳಿತ ಮಂಡಳಿಯ ಸಭೆಯಲ್ಲಿ, ಸಭೆಯ ಅಧ್ಯಕ್ಷತೆ ವಹಿಸಿದ್ದ ಬ್ಯಾಂಕಿನ ಆಡಳಿತ ಮಂಡಳಿ ಅಧ್ಯಕ್ಷ ಕೋಗುಂಡಿ ಬಕ್ಕೇಶಪ್ಪ ಅವರು ಮಹತ್ವದ ಈ  ವಿಷಯವನ್ನು ಪ್ರಕಟಿಸಿದಾಗ, ಸಭೆಯಲ್ಲಿದ್ದ ಆಡಳಿತ ಮಂಡಳಿಯ ಎಲ್ಲಾ ಸದಸ್ಯರು ಹರ್ಷದಿಂದ ಸ್ವಾಗತಿಸುವುದರ ಮೂಲಕ ಒಮ್ಮತ ವ್ಯಕ್ತಪಡಿಸಿದರು. 

ಸಾಲ ಪಡೆದ ಗ್ರಾಹಕರು ಲಿಖಿತ ಮೂಲಕ ಮಾಡಿಕೊಂಡಿದ್ದ ಮನವಿ ಮೇರೆಗೆ ಬ್ಯಾಂಕಿಗೆ ತನ್ನ ಲಾಭದಲ್ಲಿ ಪ್ರತಿ ತಿಂಗಳು ಆಗಬಹುದಾದ ಸುಮಾರು 20 ಲಕ್ಷ ರೂ.ಗಳಷ್ಟು ನಷ್ಟವನ್ನು ಪರಿಗಣಿಸುವುದರ ಜೊತೆಗೆ, ಸಂದಿಗ್ಧ ಪರಿಸ್ಥಿತಿಯಲ್ಲಿರುವ ಸಾಲ ಪಡೆದ ಗ್ರಾಹಕರ ಹಿತವನ್ನು ಕಾಪಾಡುವ ಸದುದ್ಧೇಶದಿಂದ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಬಕ್ಕೇಶಪ್ಪ ತಿಳಿಸಿದ್ದಾರೆ.

ಕಳೆದ ವರ್ಷ ಲಾಕ್ ಡೌನ್ ಸಂದರ್ಭದಲ್ಲೂ ಇದೇ ರೀತಿ ಗ್ರಾಹಕರಿಗೆ ವಿಶೇಷ ರಿಯಾಯಿತಿ ನೀಡಿದ್ದನ್ನು ಮೆಲುಕು ಹಾಕಿದ ಅವರು, ಸಾಲ ಪಡೆದ ಗ್ರಾಹಕರಿಗೆ ಸ್ಪಂದಿಸುತ್ತಿರುವುದು ಬಹುಶಃ ಮಧ್ಯ ಕರ್ನಾಟಕದ ಸಹಕಾರಿ ಬ್ಯಾಂಕುಗಳಲ್ಲೇ ದಾವಣಗೆರೆ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್ ಪ್ರಪ್ರಥಮವಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು. ಈ ಕ್ರಮ ಗ್ರಾಹಕರು ಮತ್ತು ಬ್ಯಾಂಕ್ ನಡುವಿನ ಸಂಬಂಧವನ್ನು ವೃದ್ಧಿಸುತ್ತದೆ ಎಂದು ಉದಾಹರಣೆಗಳೊಂದಿಗೆ ಪ್ರತಿಪಾದಿಸಿದರು.

ಬ್ಯಾಂಕಿನ ಉಪಾಧ್ಯಕ್ಷ ಅಂದನೂರು ಮುಪ್ಪಣ್ಣ,  ನಿರ್ದೇಶಕರುಗಳಾದ ಬಿ.ಸಿ.ಉಮಾಪತಿ, ಮತ್ತಿಹಳ್ಳಿ ವೀರಣ್ಣ, ಕಂಚಿಕೆರೆ ಮಹೇಶ್, ದೇವರಮನೆ ಶಿವಕುಮಾರ್, ಪಲ್ಲಾಗಟ್ಟೆ ಶಿವಾನಂದಪ್ಪ, ಅಜ್ಜಂಪುರ ಶೆಟ್ರು ವಿಜಯಕುಮಾರ್, ಎಂ. ಚಂದ್ರಶೇಖರ್, ಇ.ಎಂ.ಮಂಜುನಾಥ, ನಲ್ಲೂರು ಎಸ್. ರಾಘವೇಂದ್ರ, ವಿ. ವಿಕ್ರಂ,   ವೃತ್ತಿಪರ ನಿರ್ದೇಶಕರುಗಳಾದ ಮುಂಡಾಸ ವೀರೇಂದ್ರ, ಮಲ್ಲಿಕಾರ್ಜುನ ಕಣವಿ,   ವಿಶೇಷ ಆಹ್ವಾನಿತರಾದ ಎಂ. ದೊಡ್ಡಪ್ಪ, ಬೆಳ್ಳೂಡಿ ಮಂಜುನಾಥ್ ಸಭೆಯಲ್ಲಿ ಉಪಸ್ಥಿತರಿದ್ದರು.

ಬ್ಯಾಂಕಿನ ನಿರ್ವಹಣಾ ಮಂಡಳಿ ಅಧ್ಯಕ್ಷ ಟಿ.ಎಸ್. ಜಯರುದ್ರೇಶ್, ಸದಸ್ಯರುಗಳಾದ ಬೆಳಗಾವಿ ಬಸವರಾಜಪ್ಪ, ಜಂಬಗಿ ರಾಧೇಶ್, ಕೆ.ಕೊಟ್ರೇಶ್ ಅವರುಗಳು ಉಪಸ್ಥಿತರಿದ್ದರು.

ಪ್ರಧಾನ ವ್ಯವಸ್ಥಾಪಕ ಡಿ.ವಿ. ಆರಾಧ್ಯಮಠ ಮತ್ತು ಉಪ ಪ್ರಧಾನ ವ್ಯವಸ್ಥಾಪಕ ಬಿ.ಎಸ್. ಮಲ್ಲೇಶ್ ಅವರುಗಳು ವಿಷಯವನ್ನು ಸಭೆಗೆ ಮಂಡಿಸಿದರು.

error: Content is protected !!