ಆರೋಪಕ್ಕೆ ಉತ್ತರ.. ಕಾನೂನು ಕ್ರಮದ ಎಚ್ಚರ..

ಸಿರಿಗೆರೆ ಮಠ ಹಾಗೂ ತಮ್ಮ ವಿರುದ್ಧ ದಾವಣಗೆರೆಯಲ್ಲಿ ಕೆಲವರು ಮಾಡಿದ್ದ ಆರೋಪಗಳಿಗೆ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಶುಕ್ರವಾರ ಸಿರಿಗೆರೆಯಲ್ಲಿ ಕರೆಯಲಾಗಿದ್ದ ಸಭೆಯಲ್ಲಿ ಸಾಕ್ಷಿ ಸಹಿತ ಉತ್ತರ ನೀಡಿದರು. 

ಸಭೆಯಲ್ಲಿ ಪಾಲ್ಗೊಂಡಿದ್ದ ಮುಖಂಡರು ಸಮಾಜದ ತೇಜೋವಧೆ ಮಾಡಿದವರಿಗೆ ಸಾಮಾಜಿಕವಾಗಿ ಉತ್ತರ ನೀಡುವುದಾಗಿ ಹೇಳಿಕೆ ನೀಡಿದರು.

ಆರೋಪ ಮಾಡಿದವರಿಂದಲೇ ಶ್ರೀಮಠದ ದುರ್ಬಳಕೆ

ಸಿರಿಗೆರೆ, ನ. 19 – ತರಳಬಾಳು ಶ್ರೀಮಠ ಹಾಗೂ ತಮ್ಮ ವಿರುದ್ಧ ಆರೋಪ ಮಾಡುತ್ತಿರುವವರೇ ಮಠದ ಆಸ್ತಿಗಳನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ತಿಳಿಸಿರುವ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ, ಆಧಾರ ರಹಿತ ಆರೋಪ ಮಾಡುತ್ತಿರುವವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದಿದ್ದಾರೆ.

ಸಿರಿಗೆರೆಯ ಶ್ರೀ ಗುರುಶಾಂತೇಶ್ವರ ದಾಸೋಹ ಮಂಟಪದಲ್ಲಿ ಸಾಧು ಸದ್ಧರ್ಮ ವೀರಶೈವ ಸಂಘದ ವತಿಯಿಂದ ಕರೆಯಲಾಗಿದ್ದ ಸಮಾಜದ ಸಭೆಯ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಮಠದಿಂದ ಅನುದಾನ ಪಡೆದವರು ಹಾಗೂ ತಿಂದು ತೇಗಿದವರು ಈಗ ಆರೋಪ ಮಾಡುತ್ತಿದ್ದಾರೆ. ಬೆಂಗಳೂರಿನ ತರಳಬಾಳು ಕೇಂದ್ರದಲ್ಲಿ ರಿಯಲ್ ಎಸ್ಟೇಟ್ ದಂಧೆ ಮಾಡದಂತೆ ತಾವು ನಿರ್ಬಂಧಿಸಿದ ಕಾರಣ ತಮ್ಮ ಹಾಗೂ ಮಠದ ವಿರುದ್ಧ ಆರೋಪ ಮಾಡುತ್ತಿದ್ದಾರೆ ಎಂದು ತಿಳಿಸಿದರು. 

ದಾವಣಗೆರೆಯಲ್ಲಿ ಇತ್ತೀಚೆಗೆ ಕೆಲವರು ಪತ್ರಿಕಾಗೋಷ್ಠಿಯಲ್ಲಿ ತರಳಬಾಳು ಶ್ರೀಗಳು ಹಾಗೂ ಮಠದ ಬಗ್ಗೆ ಮಾಡಿರುವ ಆರೋಪಗಳ ಹಿನ್ನೆಲೆಯಲ್ಲಿ ಈ ಸಭೆಯನ್ನು ಕರೆಯಲಾಗಿತ್ತು. ರಿಯಲ್‌ ಎಸ್ಟೇಟ್‌ಗಾಗಿ ಕೆಲವರು ನಮ್ಮ ಹೆಸರು ದುರ್ಬಳಕೆ ಮಾಡಿಕೊಂಡಿದ್ದಾರೆ. ಮಠದಿಂದ ರಿಯಲ್ ಎಸ್ಟೇಟ್ ನಡೆಯುತ್ತಿದೆ ಎಂದು ತಪ್ಪಾಗಿ ತಿಳಿದ ಜನರು, ಈ ವ್ಯವಹಾರಕ್ಕೆ ದುಡ್ಡು ಕೊಡುತ್ತಾ ಹೋದರು. ಈ ಬಗ್ಗೆ ಕಳೆದ ಜೂನ್ ತಿಂಗಳಲ್ಲಿಯೇ ವಿವರವಾಗಿ ಹೇಳಿದ್ದೇನೆ ಎಂದು ಶ್ರೀಗಳು ತಿಳಿಸಿದರು.

ರಿಯಲ್ ಎಸ್ಟೇಟ್ ತಡೆದಿದ್ದಕ್ಕೆ ಆರೋಪ: ಮಠದಲ್ಲಿ ರಿಯಲ್ ಎಸ್ಟೇಟ್ ವ್ಯವಹಾರ ಮಾಡದಂತೆ ತಿಳಿಸಿದ ಕಾರಣ ಕೆಲವರು ತಮ್ಮ ವಿರುದ್ಧ ಸುಳ್ಳು ಆರೋಪ ಮಾಡುತ್ತಿದ್ದಾರೆ. ಮಠದ ಮಾಜಿ ಕಾರ್ಯದರ್ಶಿ ಸಿದ್ದಯ್ಯ ಮೈಸೂರಿನಲ್ಲಿರುವ ಮಠದ ಜಾಗವನ್ನು ತನ್ನ  ಹೆಸರಿಗೆ ಮಾಡಿಕೊಳ್ಳಲು ಪ್ರಯತ್ನ ನಡೆಿಿಸಿದ್ದನ್ನು ತಡೆಯಲಾಗಿತ್ತು. ಈ ಬಗ್ಗೆ ಕಾನೂನು ಕ್ರಮ ತೆಗೆದುಕೊಳ್ಳಲಾಗಿದೆ. ಸಿದ್ದಯ್ಯ ಬಳಿ ಇರುವ ಮಠಕ್ಕೆ ಸಂಬಂಧಿತ ಎಲ್ಲ ದಾಖಲೆಗಳನ್ನು ಕೊಡುವಂತೆ ತಿಳಿಸಲಾಗಿತ್ತು. ಇಷ್ಟಾದರೂ ಕೆಲ ದಾಖಲೆಗಳನ್ನು ಕೊಟ್ಟಿರಲಿಲ್ಲ ಎಂದು ಶ್ರೀಗಳು ಹೇಳಿದರು.

ನಾವು ರಿಯಲ್ ಎಸ್ಟೇಟ್ ಆರಂಭಿಸಿಲ್ಲ : ದಾವಣಗೆರೆಯಲ್ಲಿ ಕೆಲವರು ಆರೋಪಿಸಿರುವ ಹಾಗೆ ತಾವು ಯಾವುದೇ ರಿಯಲ್ ಎಸ್ಟೇಟ್ ಆರಂಭಿಸಿಲ್ಲ ಹಾಗೂ ಬಂಡವಾಳ ಕೊಟ್ಟಿಲ್ಲ. ಶಿಷ್ಯರು ಯಾವುದೇ ಯೋಜನೆ – ವೃತ್ತಿ ಆರಂಭಿಸಿದಾಗ ಒಳ್ಳೆಯದಾಗಲಿ ಎಂದು ಉದ್ಘಾಟಿಸುತ್ತೇವೆ. ಹಾಗೆಂದು ಇದರಲ್ಲಿ ತಾವೇ ಷಾಮೀಲಾಗಿದ್ದೇವೆ ಎಂದು ಹೇಳುವುದು ಸುಳ್ಳು ಎಂದು ತಿಳಿಸಿದರು.

ಆರೋಪಿಸಿದವರೇ 19 ಕೋಟಿ ರೂ. ಕೊಡಲಿ : ಮಠಕ್ಕೆ ಬಂದ 19 ಕೋಟಿ ರೂ. ದೇಣಿಗೆ ದುರ್ಬಳಕೆ ಮಾಡಿಕೊಂಡಿರುವುದಾಗಿ ಸಾಹಿತಿ ಶಾಂತ ಗಂಗಾಧರ ಆರೋಪಿಸಿರುವುದನ್ನು ಪ್ರಸ್ತಾಪಿಸಿದ ಶ್ರೀಗಳು, ತಾವು ಪೀಠಕ್ಕೆ ಬಂದ ನಂತರದಿಂದ ಇಲ್ಲಿಯವರೆಗೆ 5.67 ಕೋಟಿ ರೂ.ಗಳ ಕಾಣಿಕೆ ಬಂದಿದೆ. ಇದೆಲ್ಲದಕ್ಕೂ ಲೆಕ್ಕ ಇಡಲಾಗಿದೆ. ಶಾಂತ ಗಂಗಾಧರ ಹೇಳಿದ 19 ಕೋಟಿ ರೂ. ತಂದು ಕೊಡಬೇಕು. ಅದಕ್ಕೆ ಮಠದಿಂದ ರಸೀದಿ ಕೊಡಲಾಗುವುದು ಎಂದು ತರಾಟೆಗೆ ತೆಗೆದುಕೊಂಡರು.

1978ರಿಂದ ಇಲ್ಲಿಯವರೆಗೆ ಮಠ ಹಾಗೂ ಸಾಧು ವೀರಶೈವ ಸಮಾಜ ಹೊಂದಿರುವ ಆಸ್ತಿಗಳ ವಿವರಗಳನ್ನು ನೀಡಿದ ಶ್ರೀಗಳು, ಮಠ ಹಾಗೂ ಸಮಾಜದ ಒಟ್ಟು ಆಸ್ತಿ ಮೌಲ್ಯ ತಾವು ಮಠಕ್ಕೆ ಬಂದ ಸಮಯದಲ್ಲಿ 50 ಲಕ್ಷ ರೂ. ಆಗಿತ್ತು. ಈಗ ಅದು 500 ಕೋಟಿ ರೂ.ಗಳಿಗೆ ತಲುಪಿದೆ ಎಂದು ಹೇಳಿದರು.

ಏಕಪಕ್ಷೀಯ ಬೈಲಾ ತಿದ್ದುಪಡಿಯಾಗಿಲ್ಲ :  ಮಠದ ಬೈಲಾ ಏಕಪಕ್ಷೀಯವಾಗಿ ತಾವೇ ತಿದ್ದುಪಡಿ ಮಾಡಿರುವುದಾಗಿ ಆರೋಪಿಸಿರುವುದನ್ನೂ ತಳ್ಳಿ ಹಾಕಿದ ಶ್ರೀಗಳು, ಶ್ರೀಮದ್ ಸಾಧು ಸದ್ಧರ್ಮ ವೀರಶೈವ ಸಂಘ ಹಾಗೂ ಮಠ ಎರಡೂ ಬೇರೆ ಬೇರೆ ಎಂದು ಸರ್ಕಾರದ ನಿಯಮಗಳು ಹೇಳುತ್ತವೆ. ಹೀಗಾಗಿ ಹಿರಿಯ ಜಗದ್ಗುರು ಲಿಂ. ಶಿವಕುಮಾರ ಶಿವಾಚಾರ್ಯ ಸ್ವಾಮೀಜಿಗಳ ಗಮನಕ್ಕೆ ತಂದೇ ಬೈಲಾದಲ್ಲಿ ತಿದ್ದುಪಡಿ ಮಾಡಲಾಗಿತ್ತು. ಆಗ ಬೈಲಾ ತಿದ್ದುಪಡಿ ದಾಖಲೆಗೆ ನೂರಾರು ಶಿಷ್ಯರು ಬಂದು ಸಹಿ ಹಾಕಿದ್ದರು ಎಂದು ತಿಳಿಸಿದರು.

ವೇದಿಕೆಯ ಮೇಲೆ ಸಾಧು ಸದ್ಧರ್ಮ ಸಮಾಜದ ಉಪಾಧ್ಯಕ್ಷ ಬಿ.ಎಲ್. ಶಿವಳ್ಳಿ, ದಾವಣಗೆರೆ ಪಾಲಿಕೆ ಮೇಯರ್ ಎಸ್.ಟಿ. ವೀರೇಶ್, ಬಿಜೆಪಿ ಜಿಲ್ಲಾಧ್ಯಕ್ಷ ಹನಗವಾಡಿ ವೀರೇಶ್, ಸಮಾಜದ ಮುಖಂಡರಾದ ಮಾಗನೂರು ಸಂಗಮೇಶ್ವರ ಗೌಡ್ರು, ಅಣಬೇರು ರಾಜಣ್ಣ, ಬಿ. ವಾಮದೇವಪ್ಪ, ಶಿವಗಂಗಾ ಬಸವರಾಜ, ಅಣಬೇರು ಜೀವನಮೂರ್ತಿ ಮತ್ತಿತರರು ಉಪಸ್ಥಿತರಿದ್ದರು. ಬಿಟ್ಟೂ ಬಿಡದ ಮಳೆಯ ನಡುವೆಯೂ ರಾಜ್ಯದ ನಾನಾ ಭಾಗಗಳಿಂದ ಸಾವಿರಾರು ಭಕ್ತರು ಮಠದ ಸಭೆಯಲ್ಲಿ ಪಾಲ್ಗೊಂಡಿದ್ದರು.


– ಎಸ್.ಎ.ಶ್ರೀನಿವಾಸ್
[email protected]

error: Content is protected !!