ಸಿದ್ಧರಾಮೇಶ್ವರರು ಕಾಯಕ ವರ್ಗದವರ ಅಸ್ಮಿತೆ

ಸಿದ್ಧರಾಮೇಶ್ವರ ದೇವರ 59ನೇ ಸರಳ ರಥೋತ್ಸವದಲ್ಲಿ ಇಮ್ಮಡಿ ಸಿದ್ಧರಾಮೇಶ್ವರ ಶ್ರೀ

ದಾವಣಗೆರೆ, ಆ.9- ಕಾಯಕ‌ ಸಂಸ್ಕೃತಿಯೇ ಶ್ರಮ ಜೀವಿಗಳ ನಿಜವಾದ ಸಂಸ್ಕೃತಿ. ಶ್ರಮದಿಂದ ಕೂಡಿದ ಸತ್ಯ ಶುದ್ಧ ಕಾಯಕ ಜೀವಿಗಳಿಗೆ ವಚನ ಸಂಸ್ಕೃತಿಯಿಂದ ಮೌಢ್ಯಾಚರಣೆ ಮುಕ್ತ ಮತ್ತು ಮೌಲ್ಯಚಾರಣೆಯುಕ್ತ ಅಧ್ಯಾತ್ಮಿಕ, ಶೋಷಣೆ ಮುಕ್ತ ಧಾರ್ಮಿಕತೆ ದೊರೆಯಿತು. ಇದಕ್ಕೆ ಕರ್ಮಯೋಗಿ  ಸಿದ್ಧರಾಮೇಶ್ವರರು ಅದ್ಬುತ ಉದಾಹರಣೆ ಎಂದು ಭೋವಿ ಗುರುಪೀಠದ ಜಗದ್ಗುರು ಶ್ರೀ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ ಹೇಳಿದರು. 

ನಗರದ ಭೋವಿ ಕಾಲೋನಿಯಲ್ಲಿ ಕೋವಿಡ್ ನಿಯಮಾವಳಿಗಳ ಪ್ರಕಾರ ಸರಳವಾಗಿ ಇಂದು ಜರುಗಿದ ಶಿವಯೋಗಿ ಸಿದ್ಧರಾಮೇಶ್ವರ ದೇವರ 59ನೇ ರಥೋತ್ಸವ ಹಾಗೂ ಲಿಂ. ಶ್ರೀ ಸಿದ್ಧರಾಮೇಶ್ವರ ಮಹಾಸ್ವಾಮೀಜಿಯವರ 19ನೇ ಸಂಸ್ಮರಣೋತ್ಸವದ ಸಾನ್ನಿಧ್ಯ ವಹಿಸಿ ಶ್ರೀಗಳು ಆಶೀರ್ವಚನ ನೀಡಿದರು.

ಬಹಿರಂಗದ ಉತ್ಸವಗಳು ನಿಂತಿರಬಹುದು. ಆದರೆ ಅಂತರಂಗದ ಉತ್ಸಾಹ ನಿಲ್ಲಬಾರದು. ಶರಣರು ಕಾಯಕ ಜೀವಿಗಳು. ಉತ್ಸಾಹದಿಂದ ಕಾಯಕೋತ್ಸವ ಮಾಡಿದವರು. ಸಿದ್ಧರಾಮೇಶ್ವರರು ಕಾಯಕ ವರ್ಗದವರ ಅಸ್ಮಿತೆ. ಮೌಢ್ಯ ಸಂಪ್ರದಾಯಗಳಿಂದ ಮೌಲ್ಯ ಸಂಪ್ರದಾಯಗಳಿಗೆ ನಾಂದಿ ಹಾಡಿದವರು. ಜಲಕ್ರಾಂತಿ ಮೂಲಕ ಸಕಲ ಜೀವಾತ್ಮರಿಗೆ ಲೇಸನ್ನು ಬಯಸಿದವರು. ಮಾನವ ಸಮಾಜದ ಚಿಂತಕ ಸಿದ್ಧರಾಮೇಶ್ವರ. ಸಿದ್ಧರಾಮೇಶ್ವರರು ಜಲ ತಜ್ಞರು. ಸ್ತ್ರೀ ಸಮಾನತೆಗೆ ಧ್ವನಿ ಎತ್ತಿದವರು. ಮಹಿಳೆಯನ್ನು ದೈ ವಸ್ವರೂಪದಲ್ಲಿ ನೋಡಿದವರು. ವಚನ ಸಂರಕ್ಷಣೆಯಲ್ಲಿ ಅಗ್ರಜ. ಸಿದ್ದರಾಮರ ವಚನಗಳಲ್ಲಿ ಸಮಾಜ ವ್ಯವಸ್ಥೆಯ ಗೊಡ್ಡುತನ ವನ್ನು, ಹುಸಿ ನಂಬಿಕೆಗಳನ್ನು, ಹೇಯ ಆಚರಣೆ ಗಳನ್ನು, ಶತಮಾನಗಳ ಭಯ-ಭ್ರಮೆಗಳನ್ನು ಬಯಲು ಮಾಡಿವೆ ಎಂದು ತಿಳಿಸಿದರು.

ಸಮಾಜದ ವಿಮರ್ಶೆಗೆ ಸಂಬಂಧಿಸಿದ ವಚನಗಳಲ್ಲಿ ಎರಡು ಸಿದ್ಧರಾಮ ವಿಡಂಬಿಸುವ ಜಾತಿ ವ್ಯವಸ್ಥೆ, ಕೈಲಾಸದ ಕಲ್ಪನೆ, ಧರ್ಮ ದೇವರುಗಳ ಹೆಸರಿನಲ್ಲಿ ನಡೆಯುವ ಅನೇಕ ಹೇಯಾಚರಣೆಗಳು ಇಂದಿಗೂ ನಡೆಯುತ್ತಲೇ ಇವೆ. ಹೀಗಾಗಿ ಈ ವಚನಗಳು ಹನ್ನೆರಡನೆ ಶತಮಾನದಲ್ಲಿ ರಚಿತವಾದರೂ ಕೂಡ ಇಂದಿನ ಸಮಾಜ ವ್ಯವಸ್ಥೆಯ ಬದುಕಿಗೂ ಪ್ರಸ್ತುತವಾಗಿವೆ. ಅಂತೆಯೇ ಸಿದ್ಧರಾಮರು ಇಂದಿಗೂ ಅನುಕರಣೆಗೆ ಯೋಗ್ಯರಾಗುತ್ತಾರೆ ಎಂದರು.

ಚಿತ್ರದುರ್ಗ ಯಾದವ ಗುರುಪೀಠದ ಶ್ರೀ ಕೃಷ್ಣ ಯಾದವಾನಂದ ಸ್ವಾಮೀಜಿ ಮಾತನಾಡಿ,  ಶಿವಯೋಗಿ ಸಿದ್ದರಾಮರನ್ನು ನೆನೆದರೆ ಮನ ಶುದ್ಧವಾಗುವುದು ಮತ್ತು ಬದುಕು ಸಾರ್ಥಕ ಎಂದರು.

ದಾವಣಗೆರೆ ವಿರಕ್ತಮಠದ ಶ್ರೀ ಬಸವ ಪ್ರಭು ಸ್ವಾಮೀಜಿ ಮಾತನಾಡಿ, ಸಿದ್ದರಾಮೇಶ್ವರರು ಶಿವಯೋಗಿ, ಕಾಯಕಯೋಗಿ, ಸಮಾಜಯೋಗಿ ಯಾಗಿದ್ದವರು. ಸಮಾಜದಲ್ಲಿರುವ ಜಾತೀಯತೆ, ಅಸಮಾನತೆ, ಮೌಢ್ಯತೆಗಳನ್ನು ಕಿತ್ತು ಹಾಕಿ ಸಮ ಸಮಾಜವನ್ನು ಕಟ್ಟಿದ ಮಹಾನ್ ಆದರ್ಶ ಚೇತನ. ನಾವು ನಮಗಾಗಿ ಜೀವನ ಮಾಡದೇ ಮತ್ತೊಬ್ಬರಿ ಗಾಗಿ ಬದುಕಬೇಕು. ಅವರ ಕಷ್ಟಗಳನ್ನು ನಿವಾರಿಸಬೇಕು ಆಗ ಬದುಕು ಸಾರ್ಥಕವೆಂದು ಸಾಧಿಸಿ ತೋರಿಸಿದ ಮಾನವತಾವಾದಿ ಸಿದ್ದರಾಮೇಶ್ವರರು ಎಂದು ಸ್ಮರಿಸಿದರು. 

ಮೈಸೂರಿನ ಶ್ರೀ ಬಸವಲಿಂಗಮೂರ್ತಿ ಸ್ವಾಮೀಜಿ ಮಾತನಾಡಿ, ವಚನ ಸಾಹಿತ್ಯವನ್ನು ಸಂರಕ್ಷಣೆ ಮಾಡುವಲ್ಲಿ ಸಿದ್ದರಾಮೇಶ್ವರರ ಪಾತ್ರ ಬಹಳ ದೊಡ್ಡದು ಕಲ್ಯಾಣ ಕ್ರಾಂತಿಯ ನಂತರ ಎಲ್ಲಾ ಶರಣರನ್ನು ರಕ್ಷಣೆ ಮಾಡುವ ಮೂಲಕ ಬಸವತತ್ವಗಳನ್ನು ಉಳಿಸಿದ ಕೀರ್ತಿ ಸಿದ್ದರಾಮೇಶ್ವರರಿಗೆ ಸಲ್ಲುತ್ತದೆ ಎಂದರು. 

ರಥೋತ್ಸವದಲ್ಲಿ ಚಳ್ಳಕೆರೆಯ ಬಸವ ಕಿರಣ ಸ್ವಾಮೀಜಿ ಗೌರವ ಉಪಸ್ಥಿತರಿದ್ದರು. 

ಸಮಾರಂಭದಲ್ಲಿ ಭೋವಿ ಸಮಾಜದ ರೇಷ್ಮೆ ನಿಗಮದ ಮಾಜಿ ಅಧ್ಯಕ್ಷ ಡಿ. ಬಸವರಾಜ್, ಮಾಯಕೊಂಡ ಬಿಜೆಪಿ ಮುಖಂಡ ಆನಂದಪ್ಪ ಜಿಲ್ಲಾ ಕಾರ್ಯಾಧ್ಯಕ್ಷ ಜಯಣ್ಣ, ನಗರ ಪಾಲಿಕೆಯ ಮಾಜಿ ಸದಸ್ಯ  ಶ್ರೀನಿವಾಸ್, ಹರಿಹರ ತಾಲ್ಲೂಕು ಅಧ್ಯಕ್ಷ ಬ್ಯಾಂಕ್ ರಾಮಣ್ಣ, ಜಗಳೂರು ಮುಖಂಡ ವಕೀಲ ಶ್ರೀನಿವಾಸ, ಜಿಲ್ಲಾ ಪಂಚಾಯತ್ ಸದಸ್ಯ ಚಟ್ನಹಳ್ಳಿ ರಾಜಣ್ಣ, ಇಂಜಿನಿಯರ್ ವೆಂಕಟೇಶ್, ಮುಖಂಡರಾದ ಚಂದ್ರಪ್ಪ, ಮೂರ್ತ್ಯಪ್ಪ, ಯುವ ಮುಖಂಡ ಶಶಿಕುಮಾರ್,  ನಾಗರಾಜು, ಕರಾಟೆ ತಿಮ್ಮೇಶ, ಕ್ರಿಕೆಟ್ ತಿಮ್ಮೇಶ, ಚಿಕ್ಕಮ್ಮಣ್ಣಿ ಬಡಾವಣೆ ಶ್ರೀನಿವಾಸ್, ಪೂಜಾರ ಹನುಮಂತಪ್ಪ, ಶಾಮಸುಂದರ, ಶೇಖರಪ್ಪ, ಮಹೇಶ್, ರುದ್ರೇಶ್, ಮೌನೇಶ್ ಸೇರಿದಂತೆ ಇತರರು ಇದ್ದರು.

error: Content is protected !!