ಲಿಂ.ಮಲ್ಲಿಕಾರ್ಜುನ ಶ್ರೀಗಳಲ್ಲಿತ್ತು ಸಾಂಸ್ಕೃತಿಕ ಶ್ರೀಮಂತಿಕೆ

ಚಿತ್ರದುರ್ಗ, ಆ.8- ಲಿಂಗೈಕ್ಯ ಶ್ರೀ ಮಲ್ಲಿಕಾರ್ಜುನ ಸ್ವಾಮಿಗಳು ಬಡತನದಿಂದ ಬಂದವರು. ಆದರೆ ಸಾಂಸ್ಕೃತಿಕ ಶ್ರೀಮಂತಿಕೆ ಅವರಲ್ಲಿತ್ತು. ಬಂದುಹೋಗುವ ಶ್ರೀಮಂತಿಕೆ ಗಳು ಕ್ಷಣಿಕ. ಆದರೆ ಶಾಶ್ವತವಾದದ್ದು ಸಾಂಸ್ಕೃತಿಕ ಶ್ರೀಮಂತಿಕೆ ಎಂದು ಡಾ. ಶಿವ ಮೂರ್ತಿ ಮುರುಘಾ ಶರಣರು ಹೇಳಿದರು.

ಹೊಳಲ್ಕೆರೆಯ ಒಂಟಿಕಂಬದ ಮುರುಘಾ ಮಠದಲ್ಲಿ ಶ್ರೀ ಜಗದ್ಗುರು ಮಲ್ಲಿಕಾ ರ್ಜುನ ಮುರುಘರಾಜೇಂದ್ರ ಮಹಾಸ್ವಾಮಿ ಗಳವರ ಲಿಂಗೈಕ್ಯ ದಿನದ ಅಂಗವಾಗಿ ಏರ್ಪಡಿಸಲಾಗಿದ್ದ ಸ್ಮರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಶ್ರೀಗಳು ಮಾತನಾಡಿದರು.

ಅಥಣಿಯ ಶ್ರೀ ಮುರುಘೇಂದ್ರ ಶಿವಯೋಗಿಗಳು, ಜಯದೇವ ಮುರುಘ ರಾಜೇಂದ್ರ ಶ್ರೀಗಳು ಮತ್ತು ಜಯವಿಭವ ಶ್ರೀಗಳು ಈ ಮೂವರ ಆಶೀರ್ವಾದ ಮಲ್ಲಿಕಾರ್ಜುನ ಶ್ರೀಗಳಿಗೆ ಸಿಕ್ಕಿತ್ತು. ನಾವೆಲ್ಲ ಅವರ ಚರಿತ್ರೆಯನ್ನು ಕೇಳುತ್ತಲೆ ದೊಡ್ಡವರಾಗಬೇಕು. ಇದ್ದುದನ್ನು ಇದ್ದಂತೆ ನೇರ ಮಾತನಾಡುತ್ತಿದ್ದರು. 1964ರಲ್ಲಿ ಶ್ರೀ ಮಠಕ್ಕೆ ಜಗದ್ಗುರುಗಳಾಗಿ ಬರುತ್ತಾರೆ. ಅವರಲ್ಲಿ ಅಧ್ಯಾತ್ಮ ಮತ್ತು ಅಭಿವೃದ್ಧಿಯ ದೂರದೃಷ್ಟಿ ಮತ್ತು ದಿವ್ಯದೃಷ್ಟಿ ಇತ್ತು. ಶಿಕ್ಷಣ ಸಂಸ್ಥೆಗಳ ಮೂಲಕ ಮುರುಘಾ ಮಠಕ್ಕೆ ಆರ್ಥಿಕವಾಗಿ ಭದ್ರತೆಯನ್ನು ತಂದುಕೊಟ್ಟರು. ಸಮಾಜದ ಒಳತಿಗಾಗಿ ಮಠಾಧೀಶರು ಇರುತ್ತಾರೆ ಎಂಬುದಕ್ಕೆ ಉತ್ತಮ ಉದಾಹರಣೆಯಾಗಿದ್ದಾರೆ ಎಂದು ಸ್ಮರಿಸಿದರು.

ಶ್ರೀ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮಿಗಳು ಮಾತನಾಡಿ, ಬುದ್ಧಿಜೀವಿಗಳಾದ ನಾವು ಬಸವಣ್ಣನವರ ತತ್ವಾದರ್ಶಗಳನ್ನು ಬೆಳೆಸಿಕೊಳ್ಳಬೇಕು. ಆದರೆ ಇಂದು ಅವರ ತತ್ವಗಳನ್ನು ಆಚರಿಸದೆ ಇರುವುದು ದುರಂತ. ಬಸವಾದಿ ಶರಣರ ತತ್ವಗಳು ಇಂದಿನ ದಿನಕ್ಕೆ ಅತಿಮುಖ್ಯ. ಅವು ದೂರವಾದರೆ ನಾವು ದಾರಿ ತಪ್ಪಬಹುದು. ಮಲ್ಲಿಕಾರ್ಜುನ ಜಗದ್ಗುರುಗಳು ದಲಿತರನ್ನು, ಶೋಷಿತರನ್ನು ಜೊತೆಗೆ ಕೊಂಡೊಯ್ಯುತ್ತಿದ್ದರು ಎಂದು ಸ್ಮರಿಸಿದರು.

ಮಲ್ಲಿಕಾರ್ಜುನ ಜಗದ್ಗುರುಗಳು ಎತ್ತರದಲ್ಲಿದ್ದರು. ಆದರೆ ಮುರುಘಾ ಶರಣರು ಜನರಿಗೆ ಹತ್ತಿರದಲ್ಲಿದ್ದಾರೆ. ಅವರು ಗಂಭೀರ ವ್ಯಕ್ತಿತ್ವದವರು. ಅವರು ದೂರದೃಷ್ಟಿಯುಳ್ಳ ವರು. ನಮ್ಮ ನಾಡು, ಸಮಾಜ ಇಂದು ಗಟ್ಟಿಯಾಗಿದೆ ಎಂದರೆ ನಮ್ಮಲ್ಲಿ ಬಂದುಹೋಗಿರುವ ಜಗದ್ಗುರುಗಳೇ ಮುಖ್ಯ ಕಾರಣ ಎಂದು ಶ್ರೀ ದಿಂಗಾಲೇಶ್ವರ ಸ್ವಾಮಿಗಳು ಅಭಿಪ್ರಾಯಿಸಿದರು.

ತಿಪಟೂರಿನ ಷಡಕ್ಷರ ಮಠದ ಶ್ರೀ ರುದ್ರಮುನಿ ಸ್ವಾಮಿಗಳು ಮಾತನಾಡಿ, ಮಲ್ಲಿಕಾರ್ಜುನ ಸ್ವಾಮಿಗಳು ಶ್ರೇಷ್ಠರಲ್ಲಿ ಶ್ರೇಷ್ಠರು. ಅವರನ್ನು ಮೀರಿಸುವ ಜಗದ್ಗುರುಗಳು ರಾಜ್ಯದಲ್ಲಿ ಯಾರೂ ಇರಲಿಲ್ಲ. ಸುತ್ತೂರು ಶ್ರೀಗಳಿಗೆ ಮಲ್ಲಿಕಾರ್ಜುನ ಶ್ರೀಗಳಿಂದ ಕಿರೀಟಧಾರಣೆ ಮಾಡಿಸುತ್ತಾರೆ. ಅಂತಹ ವಿದ್ವತ್ತು ಶ್ರೀಗಳದಾಗಿತ್ತು ಎಂದು ನುಡಿದರು.

ಶ್ರೀ ಜ. ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮಿಗಳು ಮಾತನಾಡಿ, ಒಬ್ಬರ ಕಾಲಮಾನ ಇನ್ನೊಬ್ಬರ ಕಾಲಮಾನಕ್ಕೆ ಬರಬೇಕೆಂದರೆ ಪ್ರಸ್ತುತ ಇರುವವರು ಸಮರ್ಥರಾಗಿರಬೇಕು. ಹಿರಿಯ ಜಗದ್ಗುರುಗಳು ಸಂಸ್ಕೃತದಲ್ಲಿ ಪಂಡಿತರು. ಸಂಸ್ಕೃತ ಪಾಂಡಿತ್ಯವಿರುವ ಮಲ್ಲಿಕಾರ್ಜುನ ಜಗದ್ಗುರುಗಳು ಸಂಸ್ಕಾರ ಇರುವ ಮುರುಘಾ ಶರಣರನ್ನು ಉತ್ತರಾಧಿಕಾರಿಯನ್ನಾಗಿ ಮಾಡಿದರು. ಕ್ರಾಂತಿಕಾರಿ ಸಂತರನ್ನು ಸಮಾಜಕ್ಕೆ ಕೊಡುಗೆಯಾಗಿ ತಂದರು ಎಂದು ತಿಳಿಸಿದರು.

ಶ್ರೀ ಬಸವ ಮಾಚಿದೇವ ಸ್ವಾಮೀಜಿ, ಶ್ರೀ ಬಸವ ಕುಂಬಾರ ತಿಪ್ಪೇಸ್ವಾಮಿ ಸ್ವಾಮೀಜಿ, ಮಠದ ಕುರುಬರಹಟ್ಟಿ ಆನಂದಪ್ಪ, ಎಸ್.ಜೆ.ಎಂ. ವಿದ್ಯಾಪೀಠದ ಕಾರ್ಯದರ್ಶಿ ಎ.ಜೆ. ಪರಮಶಿವಯ್ಯ, ಸದಸ್ಯರಾದ ಎಂ.ಟಿ. ಮಲ್ಲಿಕಾರ್ಜುನ ಸ್ವಾಮಿ, ಎಸ್. ಷಣ್ಮುಖಪ್ಪ, ಮುರುಗೇಶ್, ಮೋಹನ್ ಮೊದಲಾದವರಿದ್ದರು.

ಇದಕ್ಕು ಮುನ್ನ ಹೊಳಲ್ಕೆರೆ ತಾಲ್ಲೂಕು ಗಿಲಿಕೇನಹಳ್ಳಿಯ ಎನ್.ಟಿ. ನಾಗಪ್ಪ ಮತ್ತು ತಂಡದವರು ಭಜನೆ ನಡೆಸಿಕೊಟ್ಟರು.

ಶ್ರೀ ಶಿವಬಸವ ಸ್ವಾಮೀಜಿ ಸ್ವಾಗತಿಸಿದರು. ಡಾ. ಬಸವಕುಮಾರ ಸ್ವಾಮೀಜಿ ನಿರೂಪಿಸಿದರು. ಎಲ್.ಬಿ. ರಾಜಶೇಖರ್ ವಂದಿಸಿದರು.

error: Content is protected !!