ಕೋವಿಡ್‌ ಸಾವಿನ ಸಂಖ್ಯೆ ಮರೆಮಾಚುತ್ತಿರುವ ಜಿಲ್ಲಾಡಳಿತ : ಡಿಬಿ ಆರೋಪ

ದಾವಣಗೆರೆ, ಜೂ.22- ಕೊರೊ ನಾದಿಂದ ಮೃತಪಟ್ಟವರ ನಿಖರವಾದ ಸಂಖ್ಯೆ ಯನ್ನು ತಿಳಿಸದೇ ಜಿಲ್ಲಾಡಳಿತ ಮರೆಮಾಚಿ ಸುಳ್ಳು ಲೆಕ್ಕ ಕೊಡುತ್ತಿದೆ ಎಂದು ಕೆಪಿಸಿಸಿ ವಕ್ತಾರ ಡಿ. ಬಸವರಾಜ್‌ ಆರೋಪಿಸಿದ್ದಾರೆ.

ನಿನ್ನೆ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತ ನಾಡಿದ ಅವರು, ರಾಜ್ಯ ಮತ್ತು ಕೇಂದ್ರ ಸರ್ಕಾರದ ಆಡಳಿತ ವಿಫಲತೆ ಯಿಂದಾಗಿ ಆಸ್ಪತ್ರೆಗಳಲ್ಲಿ ಬೆಡ್‌ಗಳು, ಆಕ್ಸಿಜನ್‌, ವೆಂಟಿಲೇಟರ್‌ಗಳು ಹಾಗೂ ಸರಿಯಾದ ಔಷಧೋಪಚಾರಗಳು ಸಿಗದೇ ಬಡ ಜನರು ಲಕ್ಷಾಂತರ ಸಂಖ್ಯೆಯಲ್ಲಿ ಹಾದಿ ಬೀದಿಗಳಲ್ಲಿ ಸಾವನ್ನಪ್ಪುತ್ತಿದ್ದಾರೆ ಎಂದು ತಿಳಿಸಿದರು.

ಕೋವಿಡ್‌ ಸಾವಿನ ಬಗ್ಗೆ ನಿಖರ ಲೆಕ್ಕ ಸಿಗಬೇಕಾದರೆ ಹೈಕೋರ್ಟ್‌ ಹಾಲಿ ನ್ಯಾಯಾಧೀಶರಿಂದ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ ಅವರು, ಕೋವಿಡ್‌ ನಿಂದ ಮೃತಪಟ್ಟ ಪ್ರತಿಯೊಬ್ಬ ಕುಟುಂಬ ದವರಿಗೂ ತಲಾ 5 ಲಕ್ಷ ರೂ. ಪರಿಹಾರ ಕೊಡಬೇಕು ಎಂದು ಒತ್ತಾಯಿಸಿದರು.

ಈಗಾಗಲೇ ಸುಪ್ರೀಂ ಕೋರ್ಟ್‌ ಸಹ ಕೋವಿಡ್‌ನಿಂದ ಸಾವನ್ನಪ್ಪಿದ ಕುಟುಂಬದ ಸದಸ್ಯರಿಗೆ ವಿಪತ್ತು ನಿರ್ವಹಣೆ ಕಾಯ್ದೆ 2005 ರ ಅಡಿ ಪ್ರತಿ ವ್ಯಕ್ತಿಗೂ 4 ಲಕ್ಷಕ್ಕೂ ಹೆಚ್ಚು ಪರಿಹಾರ ನೀಡುವ ವಿಚಾರವಾಗಿ ಸಲ್ಲಿ ಕೆಯಾದ ಎರಡು ಅರ್ಜಿಗಳ ಕುರಿತು ಕೇಂದ್ರ ಸರ್ಕಾರಕ್ಕೆ ಪ್ರತಿಕ್ರಿಯೆ ಸಲ್ಲಿಸುವಂತೆ ಸೂಚನೆ ನೀಡಿದೆ. ಆದರೆ ಈ ಬಗ್ಗೆ ಕೋವಿಡ್‌ನಿಂದ ಮೃತರಾದವರಿಗೆ ಮರಣ ಪ್ರಮಾಣ ಪತ್ರ ನೀಡುವ ಪ್ರಕ್ರಿಯೆಗೆ ಏಕರೂಪ ನೀತಿಯನ್ನು ಪ್ರಕಟಿಸಲು ಸುಪ್ರೀಂ ಕೋರ್ಟ್‌ ಸೂಚಿಸಿದೆ ಎಂದು ಮಾಹಿತಿ ನೀಡಿದರು. ಕೋವಿಡ್‌ ಲಕ್ಷಣಗಳಿಂದ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದ ನಂತರ ಸಾವನ್ನಪ್ಪಿದ್ದರೆ ಅವರಿಗೂ ಪರಿಹಾರ ನೀಡುವಂತೆ ಆಗ್ರಹಿಸಿದರು.

ಲಸಿಕೆ ನೀಡುವಲ್ಲಿ ತಾರತಮ್ಯ ಬೇಡ : ಸರ್ಕಾರದ ವತಿಯಿಂದ ನೀಡುವ ಲಸಿಕೆಯಲ್ಲಿ ತಾರತಮ್ಯ ಮಾಡದೇ ಪ್ರತಿಯೊಬ್ಬರಿಗೂ ನೀಡಬೇಕು. ನಗರ ಸ್ವಚ್ಛತೆ ಕಡೆ ಪಾಲಿಕೆ ಗಮನಹರಿಸಬೇಕಾಗಿದೆ ಎಂದರು. ಇಂಡಸ್ಟ್ರಿ ಯಲ್‌ ಆಕ್ಸಿಜನ್‌ ನೀಡುವ ಬದಲು ಲಿಕ್ವಿಡ್‌ ಆಕ್ಸಿಜನ್‌ ನೀಡುವಂತೆ ಆಗ್ರಹಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ದಿನೇಶ್‌ ಕೆ. ಶೆಟ್ಟಿ, ಪಾಲಿಕೆ ವಿಪಕ್ಷ ನಾಯಕ ಎ. ನಾಗರಾಜ್‌, ಪಾಲಿಕೆ ಸದಸ್ಯರಾದ ಗಡಿಗುಡಾಳ್‌ ಮಂಜು ನಾಥ್‌, ಕೆ. ಚಮನ್‌ಸಾಬ್‌, ಅಬ್ದುಲ್‌ ಲತೀಫ್‌, ಕಾಂಗ್ರೆಸ್‌ ಮುಖಂಡರುಗಳಾದ ಗಣೇಶ್‌ ಹುಲ್ಮನಿ, ಹೆಚ್‌. ಸುಭಾನ್‌, ಕೆ.ಎಂ. ಮಂಜು ನಾಥ್‌, ಡಿ. ಶಿವಕುಮಾರ್‌ ಉಪಸ್ಥಿತರಿದ್ದರು.

error: Content is protected !!