ಹರಿಹರ : ಆಸ್ಪತ್ರೆಯ ಹೊರಗುತ್ತಿಗೆ ಕಾರ್ಮಿಕರ ವೇತನ ಬಿಡುಗಡೆಗೆ ಮನವಿ

ಹರಿಹರ, ಮಾ 22-  ನಗರದ ಸರ್ಕಾರಿ ಆಸ್ಪತ್ರೆಯ ಹೊರಗುತ್ತಿಗೆ ಸಿಬ್ಬಂದಿಗಳಿಗೆ ಸೇವಾ ಭದ್ರತೆ, ಸಮಾನ ಕೆಲಸಕ್ಕೆ ಸಮಾನ ವೇತನ, ಆರೋಗ್ಯ ವಿಮೆ ಹಾಗೂ ಇನ್ನಿತರೆ ನೌಕರರ ಸಮಸ್ಯೆಗಳನ್ನು ಪರಿಹರಿಸುವಂತೆ ಶಾಸಕ ಎಸ್. ರಾಮಪ್ಪ  ಅವರಿಗೆ ಗುತ್ತಿಗೆ ಕಾರ್ಮಿಕರು ಮನವಿಯನ್ನು ಸಲ್ಲಿಸಿದರು.

ಈ ವೇಳೆ ಮಾತನಾಡಿದ ಕಾರ್ಮಿಕ ಮುಖಂಡರು ಕಳೆದ ಆರು ತಿಂಗಳಿಂದ ವೇತನ ಬಿಡುಗಡೆಗೊಂಡಿರುವುದಿಲ್ಲ. ಕಳೆದ ಹದಿನೈದು ವರ್ಷಗಳಿಂದ ಸಾರ್ವಜನಿಕ ಆಸ್ಪತ್ರೆಯಲ್ಲಿ ಇಪ್ಪತ್ತೈದು ಹೊರ ಗುತ್ತಿಗೆ ಆಧಾರಿತ ಕಾರ್ಮಿಕರು ಸ್ವಚ್ಛತಾ ಕಾರ್ಯವನ್ನು ಮಾಡುತ್ತಾ ಬಂದಿರುತ್ತಾರೆ. ಅವರಿಗೆ ಸಕಾಲಕ್ಕೆ ವೇತನ, ಪಿಎಫ್, ಆರೋಗ್ಯ ವಿಮೆ, ಇನ್ನಿತರೆ ಸೌಲಭ್ಯಗಳು ದೊರೆಯುತ್ತಿಲ್ಲ. ಕೊರೊನಾ ಸಂದರ್ಭದಲ್ಲೂ ಹಗಲಿರುಳು ಸ್ವಚ್ಛತಾ ಕಾರ್ಯದಲ್ಲಿ ತೊಡಗಿರುವ ಹೊರಗುತ್ತಿಗೆ ನೌಕರರಿಗೆ ಮಾತ್ರ ವೇತನ ಸಿಗದೇ ಇರುವುದು ನೋವಿನ ಸಂಗತಿಯಾಗಿದೆ ಎಂದರು.

ಪ್ರತಿ ಬಾರಿಯೂ ಶಾಸಕರಿಗೂ ಮತ್ತು ಸಂಬಂಧಿಸಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿಗಳಿಗೂ ಆಡಳಿತ ವೈದ್ಯಾಧಿಕಾರಿಗಳಿಗೆ ಮನವಿ ನೀಡುತ್ತೇವೆ. ಮನವಿ ಸ್ವೀಕರಿಸಿ ಅವರಿಗೆ ಕಾಲಾವಕಾಶ ಕೇಳಿ ಮುಂದಕ್ಕೆ ತಳ್ಳಿ ನೌಕರರಿಗೆ ಸಬೂಬನ್ನು ಹೇಳುತ್ತಾ ಕಾಲ ನೂಕುತ್ತಾರೆ. ಕಳೆದ 5 ತಿಂಗಳಿನಿಂದ ವೇತನ ಬಿಡುಗಡೆ ಆಗಿರುವುದಿಲ್ಲ.  5 ತಿಂಗಳ ವೇತನದಲ್ಲಿ 2ತಿಂಗಳ ವೇತನವನ್ನು ನೌಕರರ ಖಾತೆಗೆ ಜಮಾ ಮಾಡಿದ್ದಾರೆ. ಅದರಲ್ಲಿ 25 ಜನ ನೌಕರರಿಗೆ  5- 6 ಸಾವಿರ ರೂ.ಗಳನ್ನು ಕಡಿಮೆ  ಮಾಡಿ ಅವರ ಖಾತೆಗೆ ಹಾಕಿದ್ದಾರೆ. 

ಇದರಿಂದ ಸ್ವಚ್ಛತಾ ಕಾರ್ಮಿಕರಿಗೆ ಅನ್ಯಾಯವಾಗಿದೆ. ಕೂಡಲೇ ಸಂಬಂಧಿಸಿದ ಅಧಿಕಾರಿಗಳಿಗೆ ಗುತ್ತಿಗೆದಾರರಿಗೆ ಸೂಚನೆ ನೀಡಿ ಕೂಡಲೇ ವೇತನವನ್ನು ಬಿಡುಗಡೆಗೊಳಿಸಬೇಕು ಎಂದು ಆಸ್ಪತ್ರೆಯ ಗುತ್ತಿಗೆ ಆಧಾರಿತ ದಿನಗೂಲಿ ಕಾರ್ಮಿಕರ ಸಂಘದ ಅಧ್ಯಕ್ಷ ಪಂಚಾಕ್ಷರಿ, ಕಾರ್ಯದರ್ಶಿ ಎನ್.ಎಂ.  ಸುರೇಶ್ ಸ್ವಾಮಿ ಶಾಸಕರಿಗೆ ಮನವಿ ಸಲ್ಲಿಸಿದರು.

ನೌಕರರ ಸಮಸ್ಯೆಯನ್ನು ಆಲಿಸಿದ ಶಾಸಕ ಎಸ್. ರಾಮಪ್ಪ ಮನವಿ ಸ್ವೀಕರಿಸಿ ಸ್ಥಳದಲ್ಲೇ ದೂರವಾಣಿ ಮುಖಾಂತರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿ ನಾಗರಾಜ್ ಅವರನ್ನು ಸಂಪರ್ಕಿಸಿ, ಸಾರ್ವಜನಿಕ ಆಸ್ಪತ್ರೆಯ ಹೊರಗುತ್ತಿಗೆ ನೌಕರರ ವೇತನ ಕುರಿತು ಸಮಸ್ಯೆಗಳಾಗುತ್ತಿವೆ. ನೀವು ಏನು ಕೆಲಸ ಮಾಡುತ್ತಿದ್ದೀರಾ? ಯಾವ ಗುತ್ತಿಗೆದಾರನಿಗೆ ಟೆಂಡರ್ ನೀಡಿದ್ದೀರಾ? ನಿರ್ಲಕ್ಷ್ಯ ವಹಿಸಿದರೆ ಇದನ್ನು ನಾನು ಸದನದಲ್ಲಿ ಚರ್ಚೆ ಮಾಡಬೇಕಾಗುತ್ತದೆ. ಅದಕ್ಕೆ ಅವಕಾಶ ಮಾಡಿಕೊಡದೆ, ಕೂಡಲೇ ಅವರ ವೇತನ ಬಿಡುಗಡೆ ಗೊಳಿಸಬೇಕೆಂದು ಸೂಚನೆ ನೀಡಿದರು. 

ಈ ಸಂದರ್ಭದಲ್ಲಿ ನಗರಸಭೆ ಸದಸ್ಯರುಗಳಾದ ಶಂಕರ್ ಖಟಾವ್ಕರ್,
ಎಂ.ಎಸ್. ಬಾಬುಲಾಲ್, ಮಹಬೂಬ್ ಬಾಷಾ, ಆಸ್ಪತ್ರೆಯ ಆಡಳಿತ ಮುಖ್ಯ ವೈದ್ಯಾಧಿಕಾರಿ
ಎಲ್. ಹನುಮಾ ನಾಯಕ್, ಆಸ್ಪತ್ರೆ ವೈದ್ಯರು,  ಹೊರಗುತ್ತಿಗೆ ನೌಕರು ಹಾಗೂ ಸಿಬ್ಬಂದಿ ವರ್ಗದವರು ಇದ್ದರು.

error: Content is protected !!