ಉಳ್ಳವರು ಬಡವರಿಗೆ ಸಹಾಯ ಮಾಡಲಿ

ಹರಿಹರ, ಜೂ.10- ನಿಗದಿತ ಸಮಾಜದವರು ಆಯಾ ಸಮಾಜಗಳ ಬಡವರಿಗೆ ಸಹಾಯ ಹಸ್ತ ಚಾಚಿದರೆ ಸಂಕಷ್ಟದ ನೋವು ತಕ್ಕ ಮಟ್ಟಿಗೆ ನಿವಾರಣೆಯಾಗುತ್ತದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಎಸ್.ಎಂ. ವೀರೇಶ್ ಹನಗವಾಡಿ ಅಭಿಪ್ರಾಯಪಟ್ಟರು.

ನಗರದ ವಾಸವಿ ಕಲ್ಯಾಣ ಮಂಟಪದಲ್ಲಿ ಬುಧವಾರ ವಾಸವಿ ಯುವಜನ ಸಂಘದ ಅಧ್ಯಕ್ಷ ಹಾಗೂ ನಗರಸಭಾ ಸದಸ್ಯ ಹಮ್ಮಿಗಿ ಮಾರುತಿ ಶ್ರೇಷ್ಠಿ (ಸಂತೋಷ್) ಯವರು ಆಹಾರ ಕಿಟ್ ವಿತರಣೆಗೆ ಚಾಲನೆ ನೀಡಿದ ನಂತರ  ಅವರು ಮಾತನಾಡಿದರು.

ಸಂಕಷ್ಟಗಳ ನಡುವೆಯೂ ರಾಜ್ಯ ಮತ್ತು ಕೇಂದ್ರ ಸರಕಾರಗಳು ಆರ್ಥಿಕವಾಗಿ ಹಿಂದುಳಿದವರ ಕನಿಷ್ಟ ಬದುಕಿಗೆ ಬೇಕಾದ ಹಾಗೂ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸಲು ಶಕ್ತಿ ಮೀರಿ ಪ್ರಯತ್ನಿಸುತ್ತಿದೆ. 

ಇದರ ನಡುವೆ ಉಳ್ಳವರು ಕನಿಷ್ಟ ಆಯಾ ಸಮಾಜ, ಜಾತಿ, ಜನಾಂಗಗಳ ಬಡವರಿಗೆ ಸಹಾಯ ಹಸ್ತ ಚಾಚುವ ಅಗತ್ಯವಿದೆ ಎಂದರು.

ಸಾಮಾಜಿಕ ಕಾರ್ಯಕರ್ತ ಎನ್.ಎಚ್. ಶ್ರೀನಿವಾಸ್ ಮಾತನಾಡಿ, ಹಣವನ್ನು ಮುಂದೆಯೂ ಗಳಿಸಬಹುದು. 

ಆದರೆ ಸಂಕಷ್ಟದ ಸಮಯದಲ್ಲಿ ಸಹಾಯ ಮಾಡುವ ಅವಕಾಶ ಮತ್ತೆ ಮತ್ತೆ ಬಾರದು ಎಂದು ಹೇಳಿದರು.

ಆರ್ಯ ವೈಶ್ಯ ಮಂಡಳಿ ಮಾಜಿ ಕಾರ್ಯದರ್ಶಿ ಎಸ್. ಕೃಷ್ಣಮೂರ್ತಿ ಶ್ರೇಷ್ಠಿ ಮಾತನಾಡಿ, ವಾಸವಿ ಸಮಾಜದ ಜನಸಂಖ್ಯೆ ಸೀಮಿತವಾಗಿದೆ. 

ಇದರಲ್ಲಿ ಕೆಲವು ವ್ಯಾಪಾರಿಗಳನ್ನು ಬಿಟ್ಟರೆ ಉಳಿದವರು ಕೆಳ ಮಧ್ಯಮ ವರ್ಗದವರೇ ಆಗಿದ್ದಾರೆ ಎಂದು ತಿಳಿಸಿದರು.

ಮಾರುತಿ ಶ್ರೇಷ್ಠಿ ಅಧ್ಯಕ್ಷತೆ ವಹಿಸಿದ್ದರು. ಬಿಜೆಪಿ ಮುಖಂಡ ಅಜಿತ್ ಸಾವಂತ್, ಆರ್ಯ ಸಮಾಜದ ಮುಖಂಡರಾದ ಆರ್.ಎಲ್. ರವೀಂದ್ರ, ಆರ್.ವಿ. ಬಲರಾಮ ಶ್ರೇಷ್ಠಿ,
ಎಚ್.ಎಸ್. ಶ್ರೀಧರ ಮೂರ್ತಿ, ಪದ್ಮಜಾ ರಾಮನಾಥ್, ವೀಣಾ ಪ್ರಕಾಶ್, ಆರ್.ಎಲ್. ಶಂಕರ್,   ಈ. ಪ್ರಕಾಶ್, ರತ್ನ, ದೀಪ ಇನ್ನಿತರರಿದ್ದರು.

error: Content is protected !!