ಪರಿಸರ ವ್ಯವಸ್ಥೆ ಮರುಸ್ಥಾಪನೆ ಈ ವರ್ಷದ ಘೋಷ ವಾಕ್ಯ

ಆವರಗೆರೆಯ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಹಿರಿಯ ವಕೀಲ ಎಲ್‌.ಎಚ್‌. ಅರುಣ್‌ಕುಮಾರ್‌

ದಾವಣಗೆರೆ, ಜೂ.8- ವಿಶ್ವಸಂಸ್ಥೆಯು 2021 ರಿಂದ 2030 ರ ಅವಧಿಯನ್ನು ವಿಶ್ವ ಪರಿಸರ ವ್ಯವಸ್ಥೆ ಮರುಸ್ಥಾಪನೆ ದಶಕ ಎಂದು ಘೋಷಿಸಿದ್ದು, ಈ ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳಬೇಕಿದೆ ಎಂದು ಹಿರಿಯ ನ್ಯಾಯವಾದಿ ಎಲ್‌.ಎಚ್‌. ಅರುಣ್‌ಕುಮಾರ್‌ ಸಲಹೆ ನೀಡಿದರು.

ಆವರಗೆರೆ ಗ್ರಾಮದ ಶ್ರೀ ಕಾಯಕ ಯೋಗಿ ಬಸವ ಪರಿಸರ ವೇದಿಕೆ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್‌ ಇವರ ಜಂಟಿ ಆಶ್ರಯದಲ್ಲಿ ನಿನ್ನೆ ಏರ್ಪಾಡಾಗಿದ್ದ ವಿಶ್ವ ಪರಿಸರ ದಿನಾಚರಣೆ 2021 – ಕೋವಿಡ್‌ 19 ಜಾಗೃತಿ ಜಾಥಾವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ವಿಶ್ವಸಂಸ್ಥೆ ಕರೆಯ ಮೇರೆಗೆ ಜಗತ್ತಿನಾದ್ಯಂತ ವಿಶ್ವ ಪರಿಸರ ದಿನಾಚರಣೆ ಆಚರಿಸಲಾಗುತ್ತಿದೆ. `ಪರಿಸರ ವ್ಯವಸ್ಥೆ ಮರುಸ್ಥಾಪನೆ’ ಈ ವರ್ಷದ ಘೋಷ ವಾಕ್ಯವಾಗಿದೆ. ದಿನಾಚರಣೆಯ ಮೂಲ ಉದ್ದೇಶ, ಒಟ್ಟಾರೆ ನೈಸರ್ಗಿಕ ಪರಿಸರವನ್ನು ಅದರ ಮೂಲ ಸ್ಥಿತಿಗೆ ಕೊಂಡೊಯ್ಯುವುದು, ಮರುಸ್ಥಾಪಿಸುವುದು. ಕರ್ನಾಟಕದ ಪಶ್ಚಿಮ ಘಟ್ಟಗಳಿಂದ ಹಿಡಿದು ಬ್ರೆಜಿಲ್‌ನ ಅಮೆಜಾನ್‌ನಂತಹ ಜೀವ ವೈವಿಧ್ಯದ ಆಧಾರಗಳು ಇಂದು ನಾಶವಾಗುತ್ತಿವೆ. ಜಗತ್ತಿನ 160 ಕೋಟಿ ಜನರ ಜೀವನ ಅರಣ್ಯಗಳ ಮೇಲೆ ಅವಲಂಬಿತವಾಗಿದೆ. ಪರಿಸರದ ಅಮೂಲ್ಯ ಸಂಪನ್ಮೂಲ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ. ಜೀವ ಜಗತ್ತು ಮತ್ತು ಮನುಷ್ಯ ಬದುಕಿ ಬಾಳಲು ನೈಸರ್ಗಿಕ ಸಂಪನ್ಮೂಲ ಮೂಲಾಧಾರವಾಗಿದೆ. ನಿಸರ್ಗ ನೀಡುವ ಗಾಳಿ, ನೀರು, ಅನ್ನ ಬಿಟ್ಟು ಬದುಕಲು ಸಾಧ್ಯವಿಲ್ಲ ಎಂದು ಅವರು ಪ್ರತಿಪಾದಿಸಿದರು.

ಪರಿಸರ ಸಂರಕ್ಷಣೆ ವೇದಿಕೆ ಅಧ್ಯಕ್ಷ ಗಿರೀಶ್‌ ದೇವರಮನೆ ಮಾತನಾಡಿ, ಪರಿಸರ ದಿನಾಚರಣೆ ಅರ್ಥಪೂರ್ಣ ಆಚರಣೆಯಾಗಿದ್ದು, ನದಿ ಮೂಲ ಗಳನ್ನು, ಅರಣ್ಯಗಳನ್ನು ಹಾಗೂ ಜಲಚರಗಳನ್ನು ಸಂರಕ್ಷಿಸುವ ಹೊಣೆಗಾರಿಕೆ ನಮ್ಮದಾಗಿದೆ. ಪ್ಲಾಸ್ಟಿಕ್‌ ಬಳಕೆಯಂತಹ ಅಪಾಯಕಾರಿ ವಸ್ತು ಗಳ ಬಳಕೆ ನಿಲ್ಲಿಸಬೇಕು. ಮರ, ಗಿಡ ನೆಡುವುದರ ಮೂಲಕ ಅವುಗಳನ್ನು ಸಂರಕ್ಷಿಸಿ, ಪರಿಸರ ಸಮತೋಲನ ಕಾಪಾಡಬೇಕು ಎಂದರು.

ಪಾಲಿಕೆ ಮಾಜಿ ಸದಸ್ಯ ಹೆಚ್‌.ಜಿ. ಉಮೇಶ್‌ ಮಾತನಾಡಿ, ಪರಿಸರ ಸಂರಕ್ಷಣೆಯ ಕಾರ್ಯದಲ್ಲಿ ಬಸವ ಪರಿಸರ ವೇದಿಕೆ ಹಮ್ಮಿಕೊಂಡ ಕಾರ್ಯಗಳನ್ನು ವಿವರಿಸಿದರು.

ಶ್ರೀ ಕಾಯಕ ಯೋಗಿ ಬಸವ ಪರಿಸರ ವೇದಿಕೆ ನಾಯಕನಹಟ್ಟಿ ರುದ್ರಪ್ಪ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್‌ ಗುರುಸಿದ್ದಸ್ವಾಮಿ, ಪರಿಸರ ವೇದಿಕೆ ಕಾರ್ಯದರ್ಶಿ ಬಾನಪ್ಪ ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

error: Content is protected !!