ವೀರೇಶ್ವರ ಪುಣ್ಯಾಶ್ರಮದಿಂದ ದಾಸೋಹಕ್ಕೆ ಅಕ್ಕಿ ಕೊಡುಗೆ

ದಾವಣಗೆರೆ, ಮೇ 24- ಕೊರೊನಾ ಹಿನ್ನೆಲೆಯಲ್ಲಿ ಆಗಿರುವ ಲಾಕ್ ಡೌನ್ ಸಂದರ್ಭದಲ್ಲಿ ಸಂಕಷ್ಟ ಪರಿಸ್ಥಿತಿಯಲ್ಲಿರುವ ಸೋಂಕಿತರು ಮತ್ತು ಬಡವರಿಗೆ ಅನ್ನ ದಾಸೋಹ ಮಾಡುತ್ತಿರುವ ತರಳಬಾಳು ಸೇವಾ ಸಮಿತಿ ಹಾಗೂ ಶಿವಸೈನ್ಯ ಯುವಕರ ಸಂಘದ ಸತ್ಕಾರ್ಯಕ್ಕೆ ನಗರದ ಬಾಡಾ ಕ್ರಾಸ್ ನಲ್ಲಿರುವ ಶ್ರೀ ವೀರೇಶ್ವರ ಪುಣ್ಯಾಶ್ರಮದ ಸಮಿತಿಯಿಂದ ಹತ್ತು ಪ್ಯಾಕೆಟ್ ಅಕ್ಕಿಯನ್ನು ನೀಡಲಾಯಿತು.

ದಾಸೋಹ ವಿತರಣೆಗೆ ಸಿದ್ಧತೆ ನಡೆಸುತ್ತಿರುವ ಡಾ.ಶಾಮನೂರು ಶಿವಶಂಕರಪ್ಪ ಪಾರ್ವತಮ್ಮ ಸಮು ದಾಯ ಭವನದಲ್ಲಿ ಇಂದು ನಡೆದ ಸರಳ ಸಮಾರಂಭದಲ್ಲಿ ದಾಸೋಹದ ವ್ಯವಸ್ಥಾಪಕರಿಗೆ ಅಕ್ಕಿ ಪ್ಯಾಕೆಟ್ ಗಳನ್ನು ಸಮರ್ಪಿಸಲಾಯಿತು.

ಸಮಾರಂಭದ ಸಾನ್ನಿಧ್ಯ ವಹಿಸಿದ್ದ ಆವರಗೊಳ್ಳದ ಶ್ರೀ ಓಂಕಾರ ಶಿವಾಚಾರ್ಯ ಸ್ವಾಮೀಜಿ  ಆಶೀರ್ವಚನ ನೀಡಿ, ಕೊರೊನಾ ಮಹಾಮಾರಿಯನ್ನು ಹೊಡೆ ದೊಡಿಸಲು ಸರ್ಕಾರ, ಸಂಘ – ಸಂಸ್ಥೆಗಳು ಶ್ರಮಿಸುತ್ತಿದ್ದು, ಜನರೂ ಸಹಾ ಜಾಗೃತಿ ವಹಿಸಿ, ಕಟ್ಟುನಿಟ್ಟಾಗಿ ನಿಯಮಗಳನ್ನು ಪಾಲಿಸಬೇಕೆಂದು ಕಳಕಳಿ ವ್ಯಕ್ತಪಡಿಸಿದರು. 

 ಲಾಕ್ ಡೌನ್ ನಂತಹ ಸಂದಿಗ್ಧ ಸಂದರ್ಭದಲ್ಲಿ ತರಳಬಾಳು ಸೇವಾ ಸಮಿತಿ ಹಾಗೂ ಶಿವಸೈನ್ಯ ಯುವಕ ಸಂಘದಿಂದ ದಾನಿಗಳ ಸಹಕಾರದಿಂದ ಕಳೆದ 24 ದಿನಗಳಿಂದ ಪ್ರತಿನಿತ್ಯ 1200 – 1500 ರೋಗಿಗಳು ಮತ್ತು ಬಡವರಿಗೆ ಅನ್ನ ದಾಸೋಹ ನಡೆಸುತ್ತಿರುವುದು ಸ್ತುತ್ಯಾರ್ಹ ಕಾರ್ಯ ಎಂದು ಶ್ರೀಗಳು ಪ್ರಶಂಸಿಸಿದರು.

ಈ ಸತ್ಕಾರ್ಯಕ್ಕೆ ಇನ್ನೂ ಹೆಚ್ಚಿನ ದಾನಿಗಳು ಕೈ ಜೋಡಿಸಿ, ಅವರ ಸಮಾಜ ಮುಖಿ ಕಾರ್ಯ ನಿರಂತರ ವಾಗಿ ನಡೆಯಲು ಪ್ರೋತ್ಸಾಹ ನೀಡಬೇಕು ಎಂದು ಆಶಿಸಿದರು.

ಶ್ರೀ ವೀರೇಶ್ವರ ಪುಣ್ಯಾಶ್ರಮದ ಅಧ್ಯಕ್ಷರೂ, ಹಿರಿಯ ಲೆಕ್ಕ ಪರಿಶೋಧಕರೂ ಆದ ಅಥಣಿ ವೀರಣ್ಣ ಅವರು ಮಾತನಾಡಿ, ಕೊರೊನಾದಿಂದ ಸಾವು ಹೆಚ್ಚುತ್ತಿರುವುದು ಆತಂಕವಾಗಿದ್ದು, ಈ ಬಗ್ಗೆ ಜನರು ಮುಂಜಾಗ್ರತಾ ಕ್ರಮಗಳನ್ನು ಅನುಸರಿಸ ಬೇಕು ಎಂದು ಮನವಿ ಮಾಡಿದರು.

ಆದರ್ಶ ಕಾರ್ಯ ಕೈಗೊಂಡಿ ರುವ ಈ ಸಮಿತಿಯವರಿಗೆ ಅಥಣಿ ವೀರಣ್ಣ ಅವರು ವೈಯಕ್ತಿಕವಾಗಿ 20,000 ರೂ.ಗಳನ್ನು ನೀಡಿದರು. 

ಶಿವಸೈನ್ಯ ಯುವಕರ ಸಂಘದ ಗೌರವಾಧ್ಯಕ್ಷ ಶಶಿಧರ ಹೆಮ್ಮನಬೇತೂರು ಅವರು ತಮ್ಮ ಪ್ರಾಸ್ತಾವಿಕ ಭಾಷಣದಲ್ಲಿ, ತರಳ ಬಾಳು ಹಿರಿಯ ಜಗದ್ಗುರುಗಳನ್ನು ಸ್ಮರಿಸುತ್ತಾ, ಮುಂದೆ ಗುರಿ ಇರಬೇಕು, ಹಿಂದೆ ಗುರು ಇರಬೇಕು ಎಂಬಂತೆ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾ ಸ್ವಾಮಿಗಳವರ ಮಾರ್ಗದರ್ಶನದಲ್ಲಿ ದಾಸೋಹ ಕಾರ್ಯಕ್ರಮವನ್ನು ನಡೆಸಲಾಗುತ್ತಿದೆ ಎಂದು ತಿಳಿಸಿ ದರಲ್ಲದೇ, ಈ ಪುಣ್ಯದ ಕಾರ್ಯಕ್ಕೆ ಕೈ ಜೋಡಿಸಿ ಸಹಕಾರ ನೀಡುತ್ತಿರುವ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.

ಈ ಸಂದರ್ಭದಲ್ಲಿ ಆಶ್ರಮದ ಕಾರ್ಯದರ್ಶಿ ಎ.ಹೆಚ್.ಶಿವಮೂರ್ತಿಸ್ವಾಮಿ, ಸಹ ಕಾರ್ಯದರ್ಶಿ ಜೆ.ಎನ್.ಕರಿಬಸಪ್ಪ, ನಿರ್ದೇಶಕರಾದ ಬಸವನಗೌಡ, ಹಿರಿಯ ಪತ್ರಕರ್ತ ಬಕ್ಕೇಶ್‌ ನಾಗ ನೂರು, ಬಿಎಸ್ಸೆನ್ನೆಲ್ ಮಂಜಣ್ಣ, ಶಿವಸೈನ್ಯ ಯುವಕರ ಸಂಘದ ಮಾಗ ನೂರು ಉಮೇಶ್ ಗೌಡ್ರು, ಶ್ರೀನಿವಾಸ್‌ ಮೆಳ್ಳೇಕಟ್ಟೆ, ಪ್ರಭು ಕಾವಲಳ್ಳಿ, ಕೊರಟಿಕೆರೆ ಶಿವಕುಮಾರ್, ಸತೀಶ್ ಸಿರಿಗೆರೆ, ಕಲ್ಯಾಣ ಮಂಟಪದ ಮುಖ್ಯಸ್ಥ ವೈ.ಬಸವಂತಪ್ಪ ಮತ್ತಿತರರು ಉಪಸ್ಥಿತರಿದ್ದರು.

50,000 ರೂ. ದೇಣಿಗೆ : ಹಳೇ ಬಿಸಲೇರಿಯ ಇಂಜಿನಿಯರ್ ನಾಗ ರಾಜ್ ಅವರು ಅನ್ನದಾಸೋಹ ಕಾ ರ್ಯಕ್ಕೆ 50,000 ರೂ. ನೀಡಿದರು.

error: Content is protected !!