ಜಿಲ್ಲೆ ಪೂರ್ಣ ಲಾಕ್: ನಗರ ಸ್ತಬ್ಧ

ವಾಹನಗಳ ಓಡಾಟ ವಿರಳ

ದಾವಣಗೆರೆ, ಮೇ 23- ಜಿಲ್ಲೆಯಲ್ಲಿ ದಿನೇ ದಿನೇ ಕೊರೊನಾ ಉಲ್ಬಣವಾಗುತ್ತಿ ರುವ ಹಿನ್ನೆಲೆಯಲ್ಲಿ ಸೋಂಕಿನ ಕೊಂಡಿ ಕಳಚುವ ದೃಷ್ಟಿಯಿಂದ ಜಿಲ್ಲಾಡಳಿತವು ಜಿಲ್ಲೆಯಲ್ಲಿ ಆದೇಶಿಸಿರುವ ಸಂಪೂರ್ಣ ಕಠಿಣ ಲಾಕ್‌ಡೌನ್‍ ಎರಡನೇ ದಿನವಾದ ಇಂದು ಯಶಸ್ಸು ಕಂಡಿತು. ಇದಕ್ಕೆ ನಗರವೆಲ್ಲಾ ಸಂಪೂರ್ಣ ಸ್ತಬ್ದವಾಗಿದ್ದೇ ಸಾಕ್ಷಿ.

ಕೊರೊನಾ ಎರಡನೇ ಅಲೆಯು ಪ್ರಾರಂಭವಾದ ನಂತರ ಸರ್ಕಾರ ಜಾರಿಗೆ ತಂದ ಜನತಾ ಕರ್ಫ್ಯೂ ಬೆಳಗ್ಗೆ 10 ಗಂಟೆಯ ನಂತರ ಲಾಕ್‍ಡೌನ್ ಯಶಸ್ಸು ಕಂಡಿರಲಿಲ್ಲ. ಆದರೆ, ಜಿಲ್ಲಾಡಳಿತ ಜಾರಿಗೆ ತಂದ ಸಂಪೂರ್ಣ ಕಠಿಣ ಲಾಕ್‍ಡೌನ್‌ಗೆ ಪ್ರತಿನಿತ್ಯ ಬೆಳಿಗ್ಗೆ ಜನ ಜಂಗುಳಿಯಿಂದ ಇರುತ್ತಿದ್ದ ರಸ್ತೆಗಳು ಬಿಕೋ ಎನ್ನುತ್ತಿದ್ದವು. ವಾಹನಗಳ ಓಡಾಟವೂ ಕ್ಷೀಣಿಸಿತ್ತು.

ಮೊದಲು ಬೆಳಗ್ಗೆ 6 ರಿಂದ 10 ಗಂಟೆವರೆಗೆ ಜನರಿಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಿದ್ದರಿಂದ ಜನರು ವಿನಾಕಾರಣ ಹೊರಗಡೆಗೆ ಬಂದು ಓಡಾಡುತ್ತಿದ್ದರು. ಹೀಗೆ ಬರುವ ಜನರನ್ನು ನಿಯಂತ್ರಿಸುವುದೇ ಜಿಲ್ಲಾಡಳಿತಕ್ಕೆ ಕಷ್ಟವಾಗಿತ್ತು. ಆದರೆ, ಈಗ ಕಠಿಣ ಲಾಕ್‍ಡೌನ್ ಜಾರಿಗೊಳಿಸಲಾಗಿದೆ. ಬೆಳಗ್ಗೆಯ ಜನರ ಓಡಾಟಕ್ಕೆ ಕಡಿವಾಣ ಬಿದ್ದಂತೆ ಆಗಿದೆ. ಹೀಗಾಗಿ, ನಗರದ ರಸ್ತೆಗಳಲ್ಲಿ ಸ್ಮಶಾನ ಮೌನ ಆವರಿಸಿದೆ. ಆಗೊಂದು, ಈಗೊಂದು ವಾಹನ ಓಡಾಟ ಬಿಟ್ಟರೇ ಎಲ್ಲವೂ ನಿಶ್ಯಬ್ಧವಾಗಿತ್ತು. 

ಜನರಿಗೆ ಮನೆಯಿಂದ ಹೊರಗೆ ಬಂದು ಸುಖಾಸುಮ್ಮನೆ ವಾಹನಗಳಲ್ಲಿ ಓಡಾಡಿದರೆ ಕೇಸು ಬೀಳಬಹುದೆಂಬ ಭೀತಿ, ಅಲ್ಲದೇ ತಮಗೆ ಬೀಳಬಹುದಾದ ದಂಡ ಇತ್ಯಾದಿ ಕಾರಣಗಳಿಂದ ಬೆದರಿದ ಸಾರ್ವಜನಿಕರು, ನಗರದ ಬಹುತೇಕ ಕಡೆ ಮನೆಯಿಂದ ಹೊರ ಬಾರದೇ ತಮಗೆ ತಾವೇ ಸ್ವಯಂ ನಿರ್ಬಂಧ ಹಾಕಿಕೊಂಡಿದ್ದು ವಿಶೇಷವಾಗಿತ್ತು.

ಲಾಕ್‍ಡೌನ್ ಜಾರಿಯಲ್ಲಿದ್ದರೂ ಅಷ್ಟಿಷ್ಟು ಜನರಿಂದ ಇರುತ್ತಿದ್ದ ನಗರದ ಪ್ರಮುಖ ವಾಣಿಜ್ಯ ರಸ್ತೆಗಳಾದ ಕೆ.ಆರ್.ಮಾರುಕಟ್ಟೆ, ಎಪಿಎಂಸಿ, ಹಳೇ ದಾವಣಗೆರೆಯ ಕೆಲವು ರಸ್ತೆಗಳು ಬಿಕೋ ಎನ್ನುತ್ತಿದ್ದವು. 

ವಾಹನ ಮತ್ತು ಜನರ ಸಂಚಾರ ವಿರಳವಾಗಿತ್ತು. ಇದಲ್ಲದೇ ನಗರದ ಎಲ್ಲಾ ಪ್ರಮುಖ ವೃತ್ತಗಳಲ್ಲಿ, ರಸ್ತೆಗಳಲ್ಲಿ ಪೊಲೀಸರು ಅನಗತ್ಯವಾಗಿ ಓಡಾಟ ನಡೆಸುತ್ತಿದ್ದವರಿಗೆ ಎಚ್ಚರಿಕೆ ನೀಡಿ ಕಳುಹಿಸುತ್ತಿದ್ದರು.

ನಗರದ ಎಲ್ಲಾ ವೃತ್ತಗಳಲ್ಲಿ, ಮುಖ್ಯ ರಸ್ತೆಗಳಲ್ಲಿ ಬ್ಯಾರಿಕೇಡ್‍ಗಳನ್ನು ಹಾಕಲಾಗಿತ್ತು. ದ್ವಿಪಥ ರಸ್ತೆಗಳನ್ನು ಬಂದ್ ಮಾಡಿ, ಕೇವಲ ಏಕಮುಖವಾಗಿ ಸಂಚರಿಸುವಂತೆ ವಾಹನ ಸವಾರರಿಗೆ ಸೂಚಿಸಲಾಗುತ್ತಿತ್ತು. ಯಾವುದೇ ವೃತ್ತಗಳಲ್ಲಿ ಪೊಲೀಸರು ಕಂಡು ಬರಲಿಲ್ಲ.

ನಗರದ ಕೆಎಸ್‍ಆರ್‍ಟಿಸಿ ಬಸ್‍ನಿಲ್ದಾಣ, ಖಾಸಗಿ ಬಸ್‍ನಿಲ್ದಾಣ, ಮಾರುಕಟ್ಟೆ ಪ್ರದೇಶಗಳು, ಆಟೋ ನಿಲ್ದಾಣಗಳು ಸೇರಿದಂತೆ ಜನ ನಿಬಿಡ ಪ್ರದೇಶಗಳಲ್ಲಿ ಅಘೋಷಿತ ಬಂದ್ ವಾತಾವರಣ ನಿರ್ಮಾಣವಾಗಿತ್ತು. ದಾವಣಗೆರೆ ನಗರವನ್ನು ಪ್ರವೇಶಿಸುವ ಪ್ರಮುಖ ರಸ್ತೆಗಳಲ್ಲಿ ನಾಕಾಬಂದಿ ಹಾಕಲಾಗಿತ್ತು. ಸಾರ್ವಜನಿಕರು ಹೊರಗೆ ಬಾರದೇ ಲಾಕ್‍ಡೌನ್‍ಗೆ ಸಹಕರಿಸಿದರು.

error: Content is protected !!