ದಾವಣಗೆರೆ, ಮೇ 16- ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಒಂದೇ ದಿನದಲ್ಲಿ ಕಂಡು ಬರುವ ಕೊರೊನಾ ಸೋಂಕಿತರ ಸಂಖ್ಯೆ ಸಹಸ್ರದ ಗಡಿ ದಾಟಿದೆ.
ಭಾನುವಾರ 1155 ಜನರಲ್ಲಿ ಸೋಂಕು ದೃಢಪಟ್ಟ ಬಗ್ಗೆ ವರದಿಯಾಗಿದ್ದು, ಜಿಲ್ಲೆಯಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 3656 ಕ್ಕೆ ಏರಿಕೆಯಾಗಿದೆ. 312 ಜನ ಇಲ್ಲಿವರೆಗೆ ಮೃತಪಟ್ಟಿದ್ದಾರೆ.
ಜಿಲ್ಲಾ ಚಿಗಟೇರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವಿನೋಬನಗರದ 61 ವರ್ಷದ ಮಹಿಳೆ ಸೋಂಕಿನಿಂದಾಗಿ ಮೃತಪಟ್ಟಿದ್ದಾರೆ.
ದಾವಣಗೆರೆ ತಾಲ್ಲೂಕಿನಲ್ಲಿ 631, ಹರಿಹರ 150, ಜಗಳೂರು 45, ಚನ್ನಗಿರಿ 173, ಹೊನ್ನಾಳಿ 113 ಹಾಗೂ ಹೊರ ಜಿಲ್ಲೆಯ 43 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ.
ಕಳೆದ ಮೇ 13ನೇ ತಾರೀಖು ಅತಿ ಹೆಚ್ಚು ಅಂದರೆ 753 ಜನರಲ್ಲಿ ಸೋಂಕು ಕಾಣಿಸಿಕೊಂಡ ಬಗ್ಗೆ ವರದಿಯಾಗಿತ್ತು. ನಿನ್ನೆಯವರೆಗೂ ಕಳೆದೊಂದು ವಾರದಲ್ಲಿ ಸರಾಸರಿ 370 ಜನರು ಸೋಂಕಿತರು ಕಂಡು ಬರುತ್ತಿದ್ದಾರೆ.
ಕಳೆದ ವಾರ ಚೇತರಿಕೆ ಪ್ರಮಾಣವೂ ಸರಾಸರಿ 400ರಷ್ಟಿತ್ತು. ಮೇ 13 ರಂದು 753 ಜನ ಚೇತರಿಸಿಕೊಂಡಿದ್ದರು. ಆದರೆ ಕಳೆದ ಹಲವಾರು ದಿನಗಳಿಂದ ಸಾವಿನ ಸಂಖ್ಯೆ ಇಳಿಮುಖವಾಗಿದೆ.
ಹಳ್ಳಿಗರು ರೋಗ ಮುಚ್ಚಿಟ್ಟುಕೊಳ್ಳದೆ ಪರೀಕ್ಷಿಸಿಕೊಂಡು ಚಿಕಿತ್ಸೆ ಪಡೆಯಲು ಜಿಲ್ಲಾಧಿಕಾರಿ ಮನವಿ
ಶೇ.60ರಷ್ಟು ಗ್ರಾಮೀಣ ಸೋಂಕು
ದಾವಣಗೆರೆ, ಮೇ 16- ಜಿಲ್ಲೆಯಲ್ಲಿ ಕಂಡು ಬರುತ್ತಿರುವ ಕೊರೊನಾ ಸೋಂಕು ಪ್ರಕರಣಗಳಲ್ಲಿ ಗ್ರಾಮೀಣ ಭಾಗದವರೇ ಶೇ.60ರಷ್ಟಿದ್ದಾರೆ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಹೇಳಿದ್ದಾರೆ.
ಗ್ರಾಮೀಣ ಭಾಗದಲ್ಲಿ ಬೆಳಕಿಗೆ ಬಾರದ ಪ್ರಕರಣಗಳು ಹೆಚ್ಚಾಗುತ್ತಿವೆ. ಜನತೆ ಅನಾರೋಗ್ಯ ವಿದ್ದರೂ ಪರೀಕ್ಷೆಗೆ ಮುಂದಾಗುತ್ತಿಲ್ಲ. ರೋಗವನ್ನು ಮುಚ್ಚಿಟ್ಟು ಅಥವಾ ಸ್ಥಳೀಯ ವೈದ್ಯರ ಸಲಹೆಯಂತೆ ಮೆಡಿಕಲ್ ಶಾಪ್ಗಳಲ್ಲಿ ಔಷಧಿ ಪಡೆಯುತ್ತಿದ್ದಾರೆ ಎಂದು ಭಾನುವಾರ ವಿಡಿಯೋ ಸಂದೇಶದ ಮೂಲಕ ಅವರು ಬೇಸರ ವ್ಯಕ್ತಪಡಿಸಿದರು.
ಗ್ರಾಮಗಳಲ್ಲಿ ಮೃತಪಟ್ಟ ಬಗ್ಗೆ ವರದಿಗಳು ಬರುತ್ತಿವೆ. ಆದರೆ ಅವರು ಯಾವುದೇ ಟೆಸ್ಟ್ ಮಾಡಿಸಿಕೊಂಡು ಚಿಕಿತ್ಸೆ ಪಡೆದಿರುವುದಿಲ್ಲ. ಕಳೆದ ಬಾರಿಗಿಂತಲೂ ಈ ಬಾರಿ ಕೊರೊನಾ ಅಲೆ ಅತಿ ಗಂಡಾಂತರಕಾರಿಯಾಗಿದ್ದು ಜನರು ಯಾವುದೇ ರೋಗಗಳನ್ನು ಮುಚ್ಚಿಟ್ಟುಕೊಳ್ಳಬಾರದು ಎಂದರು.
ಕಳೆದ ವರ್ಷ ಒಂದು ಕೇಸ್ ಬಂದರೂ ಇಡೀ ಹಳ್ಳಿಗೆ ಬೇಲಿ ಹಾಕಿ, ಪ್ರವೇಶಕ್ಕೆ ನಿರ್ಬಂಧ ವಿಧಿಸಿ ಹಳ್ಳಿ ರಕ್ಷಿಸಿಕೊಳ್ಳುತ್ತಿದ್ದರು. ಆದರೆ ಪ್ರಸ್ತುತ ಹಳ್ಳಿಗಳಲ್ಲಿ ಸೋಂಕಿತರಿದ್ದು, ಅವರು ಓಣಿಯಲ್ಲಿ ಓಡಾಡುತ್ತಿದ್ದರೂ ಸುಮ್ಮನಿದ್ದರೆ ಇಡೀ ಗ್ರಾಮ ಸೋಂಕಿಗೆ ಬಲಿಯಾಗ ಬೇಕಾಗುತ್ತದೆ ಎಂದು ಜಿಲ್ಲಾಧಿಕಾರಿ ಎಚ್ಚರಿಸಿದರು. ಗ್ರಾಮದ ಹಿರಿಯರು, ಗ್ರಾ.ಪಂ. ಅಧ್ಯಕ್ಷರು ಮುತುವರ್ಜಿ ವಹಿಸಿ ಸೋಂಕಿತರು ಮನೆಯೊಳಗೆ ಇರುವಂತೆ ನೋಡಿಕೊಳ್ಳಬೇಕು. ಹೊರಗಡೆ ತಿರುಗಾಡುತ್ತಿದ್ದರೆ ಪೊಲೀಸರಿಗೆ ಹಾಗೂ ಆರೋಗ್ಯ ಇಲಾಖೆಗೆ ತಿಳಿಸಬೇಕು. ಪರೀಕ್ಷೆ ಮಾಡಲು ಗ್ರಾಮಗಳಿಗೆ ತಂಡ ಬಂದರೆ ಸಹಕರಿಸಬೇಕು ಎಂದು ಮನವಿ ಮಾಡಿದರು.
ಎರಡನೇ ಅಲೆ ಆರಂಭವಾದ ನಂತರ ಏಪ್ರಿಲ್ನಲ್ಲಿ 3,549 ಕೊರೊನಾ ಸೋಂಕುಗಳು ಕಂಡು ಬಂದಿದ್ದವು. ಇದರಲ್ಲಿ ಶೇ.75-80ರಷ್ಟು ನಗರ ಪ್ರದೇಶದವುಗಳಾಗಿದ್ದವು. ಆದರೆ, ಮೇ ತಿಂಗಳಲ್ಲಿ 4,381 ಸೋಂಕುಗಳು ಕಂಡು ಬಂದಿದ್ದು, ಇದರಲ್ಲಿ ಅರ್ಧದಷ್ಟು ಗ್ರಾಮೀಣ ಭಾಗದವು ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ರಾಘವನ್ ಇತ್ತೀಚೆಗೆ ಜಿಲ್ಲಾಡಳಿತದ ಸಭೆಯಲ್ಲಿ ಮಾಹಿತಿ ನೀಡಿದ್ದರು.
ಸೋಂಕು ನಿಯಂತ್ರಣಕ್ಕೆ ಜಿಲ್ಲಾಡಳಿತ, ಪೊಲೀಸ್ ಇಲಾಖೆ ಸಾಕಷ್ಟು ಕಠಿಣ ಕ್ರಮಗಳನ್ನು ತೆಗೆದುಕೊಂಡಿದ್ದರೂ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವುದು ಜನರಲ್ಲಿ ಆತಂಕ ಮೂಡಿಸಿದೆ.
ಬೆಳಿಗ್ಗೆ 6 ರಿಂದ 10ರವರೆಗೆ ಅಗತ್ಯ ವಸ್ತುಗಳ ಖರೀದಿಗೆ ಅನುಕೂಲ ಮಾಡಿಕೊಟ್ಟಿರುವುದರಿಂದ ಜನ ಕೊರೊನಾ ಇರುವುದನ್ನೇ ಮರೆತು ಅವೈಜ್ಞಾನಿಕವಾಗಿ ಮಾಸ್ಕ್ ಧರಿಸಿ, ಅಂತರ ಕಾಯ್ದುಕೊಳ್ಳದೇ ಖರೀದಿಗಳಲ್ಲಿ ತೊಡಗಿಸಿಕೊಳ್ಳುತ್ತಿರುವುದು ಸಾಮಾನ್ಯವಾಗಿದೆ.
ಸಂಚಾರ ನಿಯಂತ್ರಣಕ್ಕೆ ಪ್ರಮುಖ ರಸ್ತೆಗಳಲ್ಲಿ ಬ್ಯಾರಿಕೇಡ್ ಅಳವಡಿಸಿದ್ದರೂ, ಸಂಜೆಯಾಗುತ್ತಲೇ ವಾಹನಗಳ ಸಂಚಾರ ಸಂಖ್ಯೆ ಹೆಚ್ಚಾಗುತ್ತಿದೆ. ಸಂಜೆ ಪೊಲೀಸರು ವಾಹನ ತಪಾಸಣೆ ಮಾಡುವುದಿಲ್ಲವೆಂಬ ವಿಶ್ವಾಸದಿಂದ ಜನತೆ ಅನಗತ್ಯವಾಗಿ ಓಡಾಡುವುದು ಕಂಡು ಬರುತ್ತಿದೆ.
ಇನ್ನು ಹಲವು ಕಡೆ ಕೋವಿಡ್ ಪಾಸಿಟಿವ್ ಬಂದು ಹೋಮ್ ಐಸೋಲೇಷನ್ ಇದ್ದವರ ಮನೆಗೆ ಸ್ಟಿಕ್ಕರ್ ಹಚ್ಚದ ಕಾರಣ ಅಕ್ಕ-ಪಕ್ಕದ ಮನೆಯಲ್ಲಿ ಸೋಂಕಿತ ವ್ಯಕ್ತಿ ಇದ್ದರೂ ಗೊತ್ತಾಗದ ಪರಿಸ್ಥಿತಿ ನಿರ್ಮಾಣವಾಗಿದೆ.