ಅನಗತ್ಯ ಓಡಾಟಕ್ಕೆ ಬ್ರೇಕ್‌

ಅನಾವಶ್ಯಕವಾಗಿ ರಸ್ತೆಗಿಳಿಯುವವರ ಮೇಲೆ ಹದ್ದಿನ ಕಣ್ಣು

ದಾವಣಗೆರೆ, ಮೇ 10- ಕೊರೊನಾ ಪ್ರಕರಣಗಳು ಹೆಚ್ಚಾದ ಕಾರಣ ರಾಜ್ಯ ಸರ್ಕಾರ ಸೋಮವಾರದಿಂದ ಕಠಿಣ ಲಾಕ್‍ಡೌನ್ ಜಾರಿಗೊಳಿಸಿದ್ದು, ಹಳೆಯ ಮೆಡಿಕಲ್ ರಸೀದಿ ಹಿಡ್ಕೊಂಡು, ಕುಂಟು ನೆಪ ಹೇಳ್ಕೊಂಡು ಅನಗತ್ಯವಾಗಿ ರಸ್ತೆಗೆ ಇಳಿದರೆ ಕರ್ನಾಟಕ ಸಾಂಕ್ರಾಮಿಕ ರೋಗಗಳ ಕಾಯ್ದೆಯಡಿಯಲ್ಲಿ ಬಂಧಿಸಿ, ಜಾಮೀನು ರಹಿತ ಬಂಧನದ ಪ್ರಕರಣ ದಾಖಲಿಸಿ ಜೈಲಿಗೆ ಹಾಕಲಾಗುತ್ತದೆ.

ರಾಜ್ಯ ಸರ್ಕಾರ 14 ದಿನ ಲಾಕ್ ಡೌನ್ ಘೋಷಣೆ ಮಾಡಿದ ಹಿನ್ನೆಲೆಯಲ್ಲಿ ಇಂದು ದಾವಣಗೆರೆ ತಹಶೀಲ್ದಾರ್ ನೇತೃತ್ವದಲ್ಲಿ ಕಂದಾಯ ಇಲಾಖೆ, ನಗರ ಪಾಲಿಕೆ ಹಾಗೂ ಪೊಲೀಸ್ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಸೇರಿ ಎಲ್ಲರೂ ನಗರದ ಜಯದೇವ ವೃತ್ತದಲ್ಲಿ ಬೆಳಗಿನಿಂದ ಕಾರ್ಯಾಚರಣೆ ನಡೆಸಿ ವಾಹನಗಳ ತಪಾಸಣೆ ನಡೆಸಿ, ಅನಾವಶ್ಯಕವಾಗಿ ರಸ್ತೆಗಿಳಿದ ವಾಹನಗಳನ್ನು ಜಫ್ತಿ ಮಾಡಲಾಯಿತು. ಅನಗತ್ಯವಾಗಿ ಸಂಚರಿಸುವವರ ಮೇಲೆ ದಂಡ ವಿಧಿಸಿದರು. ಕೆಲವರಿಗೆ ಎಚ್ಚರಿಕೆ ನೀಡಿ ಕಳುಹಿಸಿದರು.

ಅಗತ್ಯ ಸೇವೆಗಳ ಹೆಸರಲ್ಲಿ ಜನರು ಅನಗತ್ಯವಾಗಿ ರಸ್ತೆಗೆ ಬರುತ್ತಿದ್ದಾರೆ. ಈ ಹಿಂದೆ ನೀಡಲಾಗಿದ್ದ ಪಾಸುಗಳನ್ನೇ ಹಿಡಿದು ಅಡ್ಡಾಡುತ್ತಿದ್ದಾರೆ. ಇಂತಹವರ ವಿರುದ್ದ ಕಠಿಣ ಕ್ರಮ ಕೈಗೊಳ್ಳಲಾಗುವುದು. ನಿಯಮ ಉಲ್ಲಂಘಿಸಿದರೆ 5ರಿಂದ 10 ವರ್ಷಗಳ ಕಾಲ ಕಾರಾಗೃಹ ಶಿಕ್ಷೆ ಆಗಲೂಬಹುದು. ಈ ನಿಟ್ಟಿನಲ್ಲಿ ಸಾರ್ವಜನಿಕರು ಅನಗತ್ಯವಾಗಿ ರಸ್ತೆಗೆ ಇಳಿಯದೆ ಸರ್ಕಾರದ ನಿಯಮಗಳನ್ನು ಪಾಲಿಸಬೇಕು. ಸೋಮವಾರ ಕೆಲ ಕಾಲ ಸಡಿಲ ಕೊಡಲಾಗಿದೆ. ಮಂಗಳವಾರದಿಂದ ಯಾವುದೇ ಸಡಿಲತೆ ಇಲ್ಲ. ಕಠಿಣ ಕ್ರಮಕೈಗೊಳ್ಳಲಾಗುವುದು ಎಂದು ತಹಶೀಲ್ದಾರ್ ಬಿ.ಎನ್. ಗಿರೀಶ್ ಎಚ್ಚರಿಕೆ ನೀಡಿದರು.

ರೋಗಿಗಳ ಪರವಾಗಿ ಕೇವಲ ಒಬ್ಬರು ಮಾತ್ರ ಅಟೆಂಡರ್ ಓಡಾಡಬೇಕು. ಆಸ್ಪತ್ರೆ ಹೆಸರು ಹೇಳಿಕೊಂಡು ಅನಗತ್ಯವಾಗಿ ಓಡಾಡುವ ವ್ಯಕ್ತಿಗಳ ವಿರುದ್ದ ಯಾವುದೇ ಮುಲಾಜಿಲ್ಲದೇ ಕ್ರಮಕೈಗೊಳ್ಳಲಾಗುವುದು. ಅಗತ್ಯ ಸೇವೆಗಳು ಎಂದು ಸುಮ್ಮನೆ ದ್ವಿಚಕ್ರವಾಹನ, ವಿವಿಧ ವಾಹನಗಳ ಮೇಲೆ ನಾಮಫಲಕ ಹಾಕಿಕೊಂಡು ಓಡಾಡುತ್ತಿದ್ದಾರೆ. ಇಂತಹವರ ವಿರುದ್ದ ಮಾತ್ರವಲ್ಲದೇ ಆಸ್ಪತ್ರೆ ಹಳೇ ಚೀಟಿಗಳು, ಮೆಡಿಕಲ್ ಸ್ಲಿಪ್ ಇಟ್ಟುಕೊಂಡು, ವಿಮಾ ಪಾಲಿಸಿ ಕಟ್ಟಲು, ತರಕಾರಿ, ದಿನಸಿ ತರುವುದಾಗಿ ಸುಮ್ಮನೇ ಓಡಾಡುತ್ತಿದ್ದಾರೆ. ಇದು ಸರಿಯಲ್ಲ. ಸಾರ್ವಜನಿಕರು ವಿನಾಕಾರಣ ಹೊರಗೆ ಬಂದು, ಸೋಂಕು ಹಚ್ಚಿಕೊಂಡು ಕುಟುಂಬಕ್ಕೆ ಹಚ್ಚದೆ ಮನೆಯಲ್ಲೇ ಇರಬೇಕು. ಮೊದಲನೇ ದಿನವಾದ್ದರಿಂದ ಸ್ವಲ್ಪ ಸಡಿಲಗೊಳಿಸಿದ್ದೇವೆ. ಮಂಗಳವಾರದಿಂದ ಕಠಿಣವಾಗಿ ನಿಯಮಗಳು ಜಾರಿಗೆ ಬರುತ್ತವೆ ಎಂದು ತಿಳಿಸಿದರು.

ಅನಾವಶ್ಯಕವಾಗಿ ಜನರು ಆನ್‍ಕೋವಿಡ್ ಡ್ಯೂಟಿ ಎಂದು ಹಾಕಿಕೊಂಡರೆ ಕೇಸು ಶತಸಿದ್ದ. ಆಸ್ಪತ್ರೆಗೆ ತೆರಳುವ ರೋಗಿಗಳ ಯೋಗಕ್ಷೇಮ ವಿಚಾರಿಸಲು ಒಬ್ಬ ವ್ಯಕ್ತಿಗೆ ಪಾಸ್ ನೀಡಲಾಗುತ್ತದೆ. ಲಸಿಕೆ ಹಾಕಿಸಿಕೊಳ್ಳುವವರಿಗೆ, ವೈದ್ಯಕೀಯ ತುರ್ತು ಇರುವವರಿಗೆ, ಕೃಷಿಗಾಗಿ ಹೋಗುವುದಾದರೆ ಯಾವುದೇ ತಪ್ಪಿಲ್ಲ. ಅಂತಹವರನ್ನು ತಡೆಯದೇ ಇರಲು ಪೊಲೀಸರಿಗೆ ಸೂಚಿಸಲಾಗಿದೆ ಎಂದರು.

ಕೊರೊನಾದಿಂದ ಎಷ್ಟು ಜನ ಸಾಯುತ್ತಿದ್ದಾರೆ ಎನ್ನುವ ಬಗ್ಗೆ ಚಿಂತಿಸಿ, ರೋಗ ಬಂದರೆ ನೀವೂ ಸಾಯುತ್ತೀರಿ, ನಿಮ್ಮ ಕುಟುಂಬ, ಮಕ್ಕಳ ಬಗ್ಗೆ ಯೋಚಿಸಿ. ಮಾಡಿ ಹೊರಗಡೆ ಬರುವ ಮುನ್ನ ನೂರು ಬಾರಿ ಯೋಚನೆ ಮಾಡಿ ಹೊರಗೆ ಬನ್ನಿ. ರೋಗದ ಗಂಭೀರತೆ ಅರಿತು ಹೊರಗೆ ಬರಬೇಕೋ, ಬೇಡವೋ ಎನ್ನುವುದನ್ನು ಅರಿತು ಹೊರಗೆ ಬನ್ನಿ ಎಂದು ಕಿವಿಮಾತು ಹೇಳಿದರು.

ಮೇಯರ್ ಎಸ್.ಟಿ. ವೀರೇಶ್ ಮಾತನಾಡಿ, ವಿನಾಕಾರಣ ಜನರು ನಗರದಲ್ಲಿ ಓಡಾಟ ನಡೆಸುತ್ತಿದ್ದು, ಆಸ್ಪತ್ರೆಗಳಿಗೆ ಹೋಗುತ್ತಿದ್ದೇವೆ. ಲಸಿಕೆ ಹಾಕಿಸಿಕೊಳ್ಳಲು ಓಡಾಡುತ್ತಿದ್ದೇವೆ ಎಂದು ಹೇಳುತ್ತಿದ್ದಾರೆ. ಇನ್ನು ಸಾಕಷ್ಟು ಜನಕ್ಕೆ ಲಾಕ್‍ಡೌನ್ ಬಗ್ಗೆ ಗಂಭೀರತೆ ಬಂದಿಲ್ಲ. ಮಂಗಳವಾರದಿಂದ ಈ ನಿಯಮ ಮತ್ತಷ್ಟು ಬಿಗಿಯಾಗಲಿದೆ. ನಗರದಿಂದ ಹೊರಗೆ ಇರುವ ಕೆಲವು ಬಡಾವಣೆಗಳಲ್ಲಿ ಜನರ ಓಡಾಟ ಕಂಡು ಬರುತ್ತಿದೆ. ಮಂಗಳವಾರದಿಂದ ನಗರ ಪಾಲಿಕೆಯಿಂದ ಗಸ್ತು ಮಾಡುವ ಮೂಲಕ ಧ್ವನಿವರ್ಧಕದ ಮೂಲಕ ಸಾರ್ವಜನಿಕರು ಮನೆಯಿಂದ ಹೊರಗೆ ಬಾರದಂತೆ ತಿಳುವಳಿಕೆ ನೀಡಲಾಗುವುದು ಎಂದು ಹೇಳಿದರು.

ಈ ವೇಳೆ ಪಾಲಿಕೆ ಆಯುಕ್ತ ವಿಶ್ವನಾಥ್ ಪಿ. ಮುದಜ್ಜಿ, ಬಡಾವಣೆ ಠಾಣೆಯ ಪಿಎಸ್‍ಐ ಅರವಿಂದ್, ಸಿಬ್ಬಂದಿಗಳಾದ ಹರೀಶ್ ರೆಡ್ಡಿ, ಸಿದ್ದೇಶ್, ಕಂದಾಯ ಇಲಾಖೆಯ ಶಿವಕುಮಾರ್, ಅಂಜಿನಪ್ಪ, ಅರುಣ್‍ಕುಮಾರ್ ಇತರರು ಕಾರ್ಯಾಚರಣೆಯಲ್ಲಿ ಇದ್ದರು.

error: Content is protected !!