6 ರಸ್ತೆಗಳಲ್ಲಿ ಭಾರೀ ಸರಕು ವಾಹನ ಪ್ರವೇಶ ನಿಷೇಧಕ್ಕೆ ಚಿಂತನೆ: ಎಸ್ಪಿ

ದಾವಣಗೆರೆ, ಜು.27- ನಗರದ ಹಳೇ ಭಾಗದ ವಾಣಿಜ್ಯ ಸಂಕೀರ್ಣಗಳನ್ನು ಹೊಂದಿರುವ 6 ಪ್ರಮುಖ ರಸ್ತೆಗಳಲ್ಲಿ ಭಾರೀ ಸರಕು ವಾಹನಗಳ ಪ್ರವೇಶವನ್ನು ತಡೆ ಗಟ್ಟಲು ಹಾಗೂ ಸುಗಮ ಸಂಚಾರ ಕ್ಕಾಗಿ ಅನುಕೂಲವಾಗುವ ನಿಟ್ಟಿನಲ್ಲಿ ಪ್ರಾಯೋಗಿಕವಾಗಿ ಒಂದು ತಿಂಗಳ ಕಾಲ ಬೆಳಿಗ್ಗೆ 8 ರಿಂದ ಸಂಜೆ 8 ರವರೆಗೆ ಭಾರೀ ಸರಕು ವಾಹನಗಳ ಪ್ರವೇಶವನ್ನು ನಿಷೇಧಿ ಸಲು ಚಿಂತಿಸಲಾಗಿದ್ದು, ವಿವಿಧ ವಲಯಗಳ ಅಭಿಪ್ರಾಯಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್ ತಿಳಿಸಿದರು. 

ಪ್ರಮುಖ ರಸ್ತೆಗಳಲ್ಲಿ ಭಾರೀ ಸರಕು ವಾಹನಗಳ ಪ್ರವೇಶವನ್ನು ನಿಷೇಧಿತ ರಸ್ತೆಗಳನ್ನಾಗಿ ಮಾಡುವ ಕುರಿತಂತೆ ಮಂಗಳವಾರ ನಗರದ ಜಿಲ್ಲಾಡಳಿತ ಭವನದಲ್ಲಿ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಅವರ ಅಧ್ಯಕ್ಷತೆಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

ಹಳೆ ಭಾಗದ 6 ಪ್ರಮುಖ ರಸ್ತೆಗಳಾದ ಮಂಡಿಪೇಟೆ ರಸ್ತೆ, ಮಹಾವೀರ ರಸ್ತೆ, ಎಕ್ಸ್-ಮುನ್ಸಿಪಲ್ ರಸ್ತೆ, ಎನ್.ಆರ್ ರಸ್ತೆ, ಹಳೇ ಬೇತೂರು ರಸ್ತೆ ಹಾಗೂ ಬೂದಿಹಾಳ್ ರಸ್ತೆಗಳು ಬಹುತೇಕ ಕಿರಿದಾಗಿವೆ. ಈ ಭಾಗದ 30 ಅಡಿ ರಸ್ತೆಗಳನ್ನು 120 ಅಡಿ ರಸ್ತೆಯನ್ನಾಗಿ ವಿಸ್ತರಿಸಲು ಸಾಧ್ಯವಿಲ್ಲ. ಆದರೆ ಸುಗಮ ಸಂಚಾರಕ್ಕಾಗಿ ಟ್ರಾಫಿಕ್ ಕಡಿಮೆ ಮಾಡಬಹುದು ಹಾಗೂ ಈ ರಸ್ತೆಗಳು ರಾಜ್ಯ ಹೆದ್ದಾರಿ-65 ಪ್ರಾರಂಭದಿಂದ ಅರಳಿಮರ ವೃತ್ತದವರೆಗೆ ಹೊಂದಿಕೊಂಡಿರುವ ಕಾರಣ ಭಾರೀ ಸರಕು ವಾಹನಗಳ ನಿಷೇಧಿಸುವ ಕ್ರಮ ಕೈಗೊಳ್ಳುವುದು ಅನಿವಾರ್ಯವಾಗಿರುತ್ತದೆ ಎಂದು ಹೇಳಿದರು.

ಸಭೆಯಲ್ಲಿ ಭಾಗವಹಿಸಿದ್ದ ವಾಣಿಜ್ಯ ಮಂಡಳಿಯ ಅಧ್ಯಕ್ಷರು, ಹಮಾಲಿಗಳು, ವರ್ತಕರು, ಅಂಗಡಿ ಮಾಲೀಕರು, ನಗರದಲ್ಲಿ ಬೆಳಿಗ್ಗೆ 10 ಗಂಟೆಗೆ ಹಾಗೂ ಸಂಜೆ 5 ಕ್ಕೆ ಅತೀ ಹೆಚ್ಚು ಟ್ರಾಫಿಕ್ ಇರುವುದರಿಂದ ಈ ಸಮಯವನ್ನು ಹೊರತುಪಡಿಸಿ ಭಾರಿ ವಾಹನಗಳ ಪ್ರವೇಶಕ್ಕೆ ಸಮಯಾವಕಾಶ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.

ಎಸ್ಪಿ ರಿಷ್ಯಂತ್ ಅವರು ಪ್ರತಿಕ್ರಿಯಿಸಿ, ಇಂದಿನ ಜನಸಂಖ್ಯೆ ಹಾಗೂ ವಾಹನ ದಟ್ಟಣೆಗೆ ಅನುಗುಣವಾಗಿ ಈ ರಸ್ತೆಗಳು ಕಿರಿದಾಗಿರುತ್ತವೆ. ಈ ರಸ್ತೆಗಳಲ್ಲಿ ಪ್ರತಿಷ್ಠಿತ ವಾಣಿಜ್ಯ ಮಳಿಗೆಗಳು, ಜನ ವಸತಿ ಪ್ರದೇಶಗಳು ಹಾಗೂ ಶಾಲಾ-ಕಾಲೇಜು ಇತ್ಯಾದಿ ಇರುವುದರಿಂದ ಕೆಲವು ರಸ್ತೆಗಳಲ್ಲಿ ಎರಡೂ ಕಡೆ ಮತ್ತು ರಸ್ತೆಯ ಒಂದು ಭಾಗದಲ್ಲಿ ವಾಹನ ನಿಲುಗಡೆ ಮಾಡುವುದರಿಂದ ಹಾಗೂ ಭಾರೀ ಸರಕು ವಾಹನಗಳ ಸಂಚಾರ ಮಾಡುವುದರಿಂದ ಲಘು ವಾಹನಗಳ ಸುಗಮ ಸಂಚಾರಕ್ಕೆ ಅಡಚಣೆಯಾಗುತ್ತದೆ. ಪಾದಚಾರಿಗಳು ರಸ್ತೆ ಮಧ್ಯೆ ಓಡಾಡುವುದರಿಂದ ಹಾಗೂ ರಸ್ತೆ ದಾಟುವುದರಿಂದ ಸಂಚಾರ ನಿರ್ವಹಣೆ ಮಾಡುವುದು ದುಸ್ತರವಾಗಿದೆ.  ಬೆಳಿಗ್ಗೆ, ಸಂಜೆ 2 ತಾಸು ಮಾಡಿ ಉಳಿದ ಸಮಯದಲ್ಲಿ ಅವಕಾಶ ಮಾಡಿ ಎಂದರೆ ಅದು ಸಾಧ್ಯವಿಲ್ಲ. ನಿರಂತರವಾಗಿ ಒಂದೇ ಸಮಯದಲ್ಲಿ ಅವಕಾಶ ಮಾಡಿದರೆ ವಿವಿಧ ಜನರಿಗೆ ಅನುಕೂಲವಾಗುತ್ತದೆ.   ಭಾರೀ ಸರಕು ವಾಹನಗಳು ರಾತ್ರಿ 8 ಗಂಟೆಯ ನಂತರ ಪ್ರವೇಶ ಮಾಡಬೇಕು. ಅದೇ ರೀತಿ ಮರುದಿನ ಬೆಳಿಗ್ಗೆ 8 ಗಂಟೆಯ ಒಳಗಾಗಿ ಅವರ ಸರಕು, ಸರಂಜಾಮುಗಳನ್ನು ವಿಲೇವಾರಿ ಮಾಡು ವುದು ಅಥವಾ ತುಂಬಿಕೊಂಡು ಈ ಭಾಗದಿಂದ ಹೊರಹೋಗು ವುದರಿಂದ ಪಾದಚಾರಿಗಳ, ಲಘು ಹಾಗೂ ದ್ವಿಚಕ್ರ ವಾಹನ ಸವಾರರ ಸುರಕ್ಷತೆಗೆ ಮತ್ತು ಸಂಚಾರ ನಿರ್ವಹಣೆಗೆ ಹೆಚ್ಚಿನ ಆದ್ಯತೆಯನ್ನು ನೀಡಿದಂತಾಗುತ್ತದೆ ಎಂದು ಅಭಿಪ್ರಾಯಿಸಿದರು.

ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಮಾತನಾಡಿ, ಸ್ಮಾರ್ಟ್ ಸಿಟಿ ಯೋಜನೆಯಡಿ ವಾಸಯೋಗ್ಯ ನಗರದಡಿ ದಾವಣಗೆರೆ ರಾಜ್ಯಕ್ಕೆ ಮೊದಲ ಸ್ಥಾನದಲ್ಲಿದ್ದು, ದೇಶದಲ್ಲಿ 19ನೇ ಸ್ಥಾನದಲ್ಲಿದೆ. ಅದರಂತೆ ಟ್ರಾಫಿಕ್ ವಿಚಾರದಲ್ಲೂ ಸ್ಮಾರ್ಟ್ ಆಗಿರಬೇಕಾದರೆ, ಹಳೆ ಭಾಗದಲ್ಲಿರುವ ಟ್ರಾಫಿಕ್ ಸಮಸ್ಯೆ ಕುರಿತಾದ ಕಿರಿಕಿರಿಯನ್ನು ಮೊದಲು ತಪ್ಪಿಸಬೇಕಿದೆ ಎಂದರು.

ಪ್ರತಿಯೊಬ್ಬರಿಗೂ ಅನುಕೂಲವಾಗುವ ದೃಷ್ಟಿಯಿಂದ ಭಾರಿ ವಾಹನ ಸಂಚಾರದ ಸಮಯ ಬದಲಾವಣೆ ಮಾಡಲು ಉದ್ದೇಶಿಸಿದ್ದೇವೆ. ಯಾವುದೇ ಹೊಸ ಯೋಜನೆ ಅಥವಾ ಹೊಸ ವ್ಯವಸ್ಥೆಗೆ ಮೊದಮೊದಲು ವಿರೋಧ ವ್ಯಕ್ತವಾಗುವುದು ಸಾಮಾನ್ಯ.   ಅದರಂತೆ ಈ ಯೋಜನೆಯನ್ನು ಅನುಷ್ಠಾನ ಮಾಡುತ್ತಿದ್ದೇವೆ. ಸಮಯ ಕಳೆದಂತೆ ಹೊಂದಾಣಿಕೆಯಾಗುತ್ತದೆ ಎಂದರು.

ಕೊರೊನಾ ಹಾವಳಿ ಇನ್ನೂ ಮುಗಿದಿಲ್ಲ. ಮುಂಬೈ, ಮಹಾರಾಷ್ಟ್ರ ಸೇರಿದಂತೆ ಬೇರೆ ಬೇರೆ ರಾಜ್ಯಗಳಲ್ಲಿ, ದಾವಣಗೆರೆ ಗಡಿಯಲ್ಲಿರುವ ಜಿಲ್ಲೆಗಳಲ್ಲಿ ಕೊರೊನಾ ಸೋಂಕು ವ್ಯಾಪಿಸುತ್ತಿದೆ. ಹೊರ ರಾಜ್ಯದಿಂದ ಹಳೆ ಭಾಗದ ಮಾರುಕಟ್ಟೆಗೆ ಅನ್‍ಲೋಡ್ ಮಾಡಲು ಬರುವವರ ಬಗ್ಗೆ ಎಚ್ಚರದಿಂದಿರಬೇಕು. ಮೊದಲ ಮತ್ತು ಎರಡನೇ ಅಲೆ ಎಲ್ಲಿಂದ ಬಂತು ಎಂಬುದನ್ನು ನೆನಪಿಸಿಕೊಳ್ಳಿ. ನಿರ್ಲಕ್ಷ್ಯವಹಿಸದೇ ನಿಮ್ಮನ್ನು ನೀವು ರಕ್ಷಣೆ ಮಾಡಿಕೊಳ್ಳಬೇಕು ಎಂದರು.

ಈ ಸಂದರ್ಭದಲ್ಲಿ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಜೀವ್.ಎಂ., ಡಿವೈಎಸ್‍ಪಿ ನಾಗೇಶ್ ಐತಾಳ್, ಆರ್.ಟಿ.ಒ ಶ್ರೀಧರ್ ಮಲ್ಲಾಡ್, ಸಿಪಿಐ ಗಜೇಂದ್ರಪ್ಪ, ತಿಮ್ಮಣ್ಣ, ಪಿಎಸ್‌ಐ ಇಮ್ರಾನ್, ಶ್ರೀಧರ್ ಸೇರಿದಂತೆ ಮಹಾನಗರ ಪಾಲಿಕೆ ಸದಸ್ಯರು, ವಾಣಿಜ್ಯ ಘಟಕ, ವರ್ತಕರ ಸಂಘ, ಲಾರೀ ಮಾಲೀಕರ ಮತ್ತು ಚಾಲಕರ ಅಸೋಸಿಯೇಷನ್, ಹಮಾಲರ ಸಂಘ, ಗೂಡ್ಸ್ ಮತ್ತು ಆಟೋ ಚಾಲಕರ ಸಂಘಗಳ ಪದಾಧಿಕಾರಿಗಳು, ಅಧ್ಯಕ್ಷರು, ಸದಸ್ಯರು ಪಾಲ್ಗೊಂಡಿದ್ದರು.

ಭಾರೀ ಸರಕು ವಾಹನಗಳ ಪ್ರವೇಶ ನಿಷೇಧಿಸಲು ಉದ್ದೇಶಿಸಲಾಗಿರುವ ರಸ್ತೆಗಳು (ಬ್ಯಾರಿಕೇಡ್ ಹಾಕುವ ಸ್ಥಳ) : ಮಂಡಿಪೇಟೆ ರಸ್ತೆಯ ಎಸ್.ಬಿ.ಎಂ ಬ್ಯಾಂಕ್ ಎದುರು, ತರಳಬಾಳು ಜ್ಯೂವೆಲರ್ಸ್ ಅಂಗಡಿ ಸ್ಥಳದ ಹತ್ತಿರ, ಮಹಾವೀರ ರಸ್ತೆಯ ಕೆ.ಆರ್.ರಸ್ತೆ ಪ್ರವೇಶ ಪ್ರಾರಂಭ ಸ್ಥಳ, ಎಕ್ಸ್-ಮುನ್ಸಿಪಲ್ ರಸ್ತೆ ಕೆ.ಆರ್.ರಸ್ತೆ ಪ್ರವೇಶ ಪ್ರಾರಂಭ ಸ್ಥಳ, ಎನ್.ಆರ್ ರಸ್ತೆಯ ಕೆ.ಆರ್ ರಸ್ತೆ ಜಗಳೂರು ಬಸ್ ನಿಲ್ದಾಣದ ಸಮೀಪ ಪ್ರಾರಂಭ ಸ್ಥಳ, ಹಳೇ ಬೇತೂರು ರಸ್ತೆಯ ಕೆ.ಆರ್ ರಸ್ತೆ ಕೋಹಿನೂರು ಹೋಟೆಲ್ ಬಳಿ, ಬೂದಿಹಾಳ್ ರಸ್ತೆಯ ಮದಕರಿ ವೃತ್ತ ಇಂದಿರಾ ಕ್ಯಾಂಟಿನ್ ಬಳಿ ಭಾರೀ ಸರಕು ವಾಹನ ಪ್ರವೇಶ ನಿಷೇಧಿತ ರಸ್ತೆಗಳೆಂದು ಗುರುತಿಸಿ, ಬ್ಯಾರಿಕೇಡ್ ಅಳವಡಿಸಲು ಉದ್ದೇಶಿಸಲಾಗಿದೆ.

error: Content is protected !!