ಕೊರೊನಾ ನಿಯಂತ್ರಣಕ್ಕೆ ಹೊಸ ಮಾರ್ಗಸೂಚಿ : ನಿಷೇಧಾಜ್ಞೆ ಜಾರಿ

ಕೊರೊನಾ ನಿಯಂತ್ರಣಕ್ಕೆ ಹೊಸ ಮಾರ್ಗಸೂಚಿ : ನಿಷೇಧಾಜ್ಞೆ ಜಾರಿ - Janathavaniದಾವಣಗೆರೆ, ಮೇ 9- ಕೊರೊನಾ ಎರಡನೇ ಅಲೆಯನ್ನು ನಿಯಂತ್ರಿಸಲು ರಾಜ್ಯ ಸರ್ಕಾರ ನಾಳೆ ದಿನಾಂಕ 10 ರಿಂದ ಅನ್ವಯವಾಗುವಂತೆ ಹೊರಡಿಸಿರುವ ಹೊಸ ಮಾರ್ಗಸೂಚಿಗಳ ಕಟ್ಟುನಿಟ್ಟಿನ ಜಾರಿ ಹಿನ್ನೆಲೆಯಲ್ಲಿ ನಾಳೆ ದಿನಾಂಕ 10 ರ ಬೆಳಿಗ್ಗೆ 6 ರಿಂದ ಇದೇ ದಿನಾಂಕ 24 ರ ಬೆಳಿಗ್ಗೆ 6 ಗಂಟೆವರೆಗೆ ಸಿಆರ್‍ಪಿಸಿ ಸೆಕ್ಷನ್ 144 ರನ್ವಯ ಜಿಲ್ಲೆಯಾದ್ಯಂತ ನಾಲ್ಕಕ್ಕಿಂತ ಹೆಚ್ಚು ಜನರು ಗುಂಪು ಸೇರುವುದನ್ನು ನಿಷೇಧಿಸಿ ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ.

ರೈಲ್ವೇ ನಿಲ್ದಾಣ ಮತ್ತು ಕೋವಿಡ್ ಶಿಷ್ಟಾಚಾರ ಪಾಲನೆ ಹೊರತುಪಡಿಸಿ ಉಳಿದೆಲ್ಲೆಡೆ ಈ ನಿಷೇಧಾಜ್ಞೆ ಜಾರಿಯಲ್ಲಿರುತ್ತದೆ. ಈ ನಿಷೇಧಾಜ್ಞೆಯನ್ನು ಉಲ್ಲಂಘಿಸಿದಲ್ಲಿ ವಿಪತ್ತು ನಿರ್ವಹಣಾ ಕಾಯ್ದೆ 2005 ರ 51 ರಿಂದ 60 ಹಾಗೂ ಐಪಿಸಿ ಸೆಕ್ಷನ್ 188 ಮತ್ತು ಕರ್ನಾಟಕ ಎಪಿಡೆಮಿಕ್ ಡಿಸೀಸಸ್ ಆಕ್ಟ್ 2020 ರ ಸೆಕ್ಷನ್ 4, 5 ಮತ್ತು 10 ರಡಿ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ತಿಳಿಸಿದ್ದಾರೆ.

ಮಾರ್ಗಸೂಚಿಗಳ ಕಟ್ಟುನಿಟ್ಟಿನ ಜಾರಿಗೆ ಆದೇಶ 

ದಾವಣಗೆರೆ, ಮೇ 9- ಕೋವಿಡ್ 19 ಸೋಂಕು ಹರಡುವ ಸರಪಳಿಯನ್ನು ತಡೆಗಟ್ಟಲು ಹೆಚ್ಚುವರಿ ನಿಯಂತ್ರಣ ಕ್ರಮಗಳನ್ನು ತೆಗೆದು ಕೊಳ್ಳಲು ರಾಜ್ಯ ಸರ್ಕಾರ ನಾಳೆ ದಿನಾಂಕ 10 ರಿಂದ 24 ರವರೆಗೆ ಪರಿಷ್ಕೃತ ಮಾರ್ಗಸೂಚಿಗಳ ಆದೇಶವನ್ನು ಹೊರಡಿಸಿದ್ದು, ವಿಪತ್ತು ನಿರ್ವಹಣಾ ಕಾಯ್ದೆಯಲ್ಲಿ ಪ್ರದತ್ತವಾದ ಅಧಿಕಾರ ಚಲಾಯಿಸಿ, ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರಾಗಿರುವ ಜಿಲ್ಲಾಧಿಕಾರಿಗಳು ಜಿಲ್ಲೆಯಾದ್ಯಂತ ಮೇ 10 ರ ಬೆಳಿಗ್ಗೆ 6 ರಿಂದ ಮೇ 24 ರ ಬೆಳಿಗ್ಗೆ 6 ಗಂಟೆವರೆಗೆ ಈ ಪರಿಷ್ಕೃತ ಮಾರ್ಗಸೂಚಿಗಳನ್ನು ಯಥಾವತ್ತಾಗಿ ಜಾರಿಗೊಳಿಸಿ ಆದೇಶಿಸಿರುತ್ತಾರೆ.

ಕೋವಿಡ್ 19 ಪರಿಷ್ಕೃತ ಮಾರ್ಗಸೂಚಿಗಳನ್ನು ಮತ್ತು ಕ್ರಮಗಳನ್ನು ಜಿಲ್ಲಾ ಮಟ್ಟ, ತಾಲ್ಲೂಕು ಮಟ್ಟದ ಪ್ರಾಧಿಕಾರಗಳು ಹಾಗೂ ಮಹಾನಗರ ಪಾಲಿಕೆ/ನಗರಸಭೆ/ಪುರಸಭೆ ಹಾಗೂ ಸ್ಥಳೀಯ ಸಂಸ್ಥೆಗಳು ಮತ್ತು ಎಲ್ಲಾ ಇಲಾಖಾ ಮುಖ್ಯಸ್ಥರುಗಳು ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಆದೇಶಿಸಿದ್ದಾರೆ.

error: Content is protected !!