ಹಣಕ್ಕೆ ಕೊರತೆ ಇಲ್ಲ, ಕೋವಿಡ್ ಹಿಮ್ಮೆಟ್ಟಿಸಲು ಸಹಕರಿಸಲು ಮನವಿ

ಹರಪನಹಳ್ಳಿ, ಮೇ 9- ನಾವು ರಾಜ್ಯ ಸರ್ಕಾರದ ಹಣ ಕಾಯಬೇಕಿಲ್ಲ, ಜಿಲ್ಲಾ ಖನಿಜ ಅನುದಾನ ಇದೆ, ಹಣಕ್ಕೇನು ಕೊರತೆ ಇಲ್ಲ. ಔಷಧ, ಸಲಕರಣೆಗಳ ಸಮರ್ಪಕ ವ್ಯವಸ್ಥೆ ಮಾಡಲಾಗುವುದು, ಕೋವಿಡ್ ಹಿಮ್ಮೆಟ್ಟಿಸಲು ಸಹಕಾರ ಕೊಡಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಆನಂದ್‌ಸಿಂಗ್ ಮನವಿ ಮಾಡಿದ್ದಾರೆ.

ಅವರು ಪಟ್ಟಣದ ಮಿನಿ ವಿಧಾನ ಸೌಧದ ಆವರಣದಲ್ಲಿ  ಭಾನುವಾರ ಕೋವಿಡ್ ನಿಯಂತ್ರಣ ಪರಿಶೀಲನಾ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.

ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆ ಗಳ ಪ್ರತಿ ತಾಲ್ಲೂಕಿನಲ್ಲೂ 100 ಕೋವಿಡ್ ಬೆಡ್, 10 ವೆಂಟಿಲೇಟರ್‌ಗಳ ವ್ಯವಸ್ಥೆ ಮಾಡ ಲಾಗುವುದು ಜಿಂದಾಲ್‌ಗೆ ಆಕ್ಸಿಜನ್ ಉತ್ಪಾ ದನೆ ಹೆಚ್ಚಳಕ್ಕೆ ಸೂಚಿಸಲಾಗಿದೆ ಎಂದರು.

ಕೋವಿಡ್ ಮೊದಲನೇ ಅಲೆ ಬಂದಾಗ ಮುನ್ನಚ್ಚರಿಕೆ ಕ್ರಮ ಕೈಗೊಂಡಿದ್ದರೆ, ಎರಡನೇ ಅಲೆ ಬರುತ್ತಿರಲಿಲ್ಲ, ಎಲ್ಲೋ ಒಂದು ಕಡೆ ಎಡವಿದೆವು, ಈಗ ಬಂದಿರುವ ಕೋವಿಡನ್ನು ತಡೆಗಟ್ಟಲು, ಮುಂದೆ ಮೂರನೇ ಅಲೆ ಬರುತ್ತದೆ ಎಂದು ಹೇಳುತ್ತಾರೆ. ಆ ರೀತಿ ಬಂದರೂ ಎದುರಿಸಲು ವ್ಯವಸ್ಥಿತವಾಗಿ ಸಿದ್ದತೆ ಮಾಡಿಕೊಳ್ಳಲಾಗುವುದು ಎಂದರು. ವೈದ್ಯರು ಸೇರಿದಂತೆ ಕೊರೊನಾ ವಾರಿಯರ್ಸ್ ಸೇವಾ ಮನೋಭಾವನೆಯಿಂದ ಕೆಲಸ ಮಾಡಬೇಕು, ನಿರ್ಲಕ್ಷ್ಯ ಮಾಡಬೇಡಿ, ಏನಾದರೂ ಕೊರತೆ ಇದ್ದರೆ ತಿಳಿಸಿ ಎಂದು ಅವರು ಹೇಳಿದರು.

ಜಿಲ್ಲಾಧಿಕಾರಿ ಪವನ್ ಕುಮಾರ್‌ ಮಲಪಾಟಿ ಮಾತನಾಡಿ, ಹರಪನಹಳ್ಳಿ ಸಾರ್ವಜನಿಕ ಆಸ್ಪತ್ರೆಯನ್ನು ಸಂಪೂರ್ಣ ಕೋವಿಡ್ ಆಸ್ಪತ್ರೆಯನ್ನಾಗಿ ಶೀಘ್ರ ಮಾರ್ಪಾ ಡಿಸಲಾಗುವುದು, ಇತರೆ ರೋಗಿಗಳನ್ನು ಫೀವರ್ ಕ್ಲಿನಿಕ್‌ನಲ್ಲಿ  ಚಿಕಿತ್ಸೆ ಕೊಡುವ ವ್ಯವಸ್ಥೆ ಮಾಡಲಾಗುವುದು ಎಂದರು.

ಹೋಂ ಐಸೋಲೇಷನ್‌ನಲ್ಲಿ ಇರುವ ವರ ಬಗ್ಗೆ ಪ್ರತಿದಿನ ಆಶಾ ಕಾರ್ಯಕರ್ತರು 2 ಬಾರಿ ಭೇಟಿ ನೀಡಿ, ಆರೋಗ್ಯ ವಿಚಾರಿಸಬೇಕು ಎಂದು ಸೂಚಿಸಿದರು.

ಸ್ಥಳೀಯ ಶಾಸಕ ಜಿ.ಕರುಣಾಕರ ರೆಡ್ಡಿ ಅವರು, ಹರಪನಹಳ್ಳಿ ತಾಲ್ಲೂಕಿಗೆ ಅಗತ್ಯ ಔಷಧ, ಸಲಕರಣೆಗಳನ್ನು ಒದಗಿಸಿ ಹಾಗೂ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಅಗತ್ಯ ಅನುದಾನ ಬಿಡುಗಡೆ ಮಾಡಿ ಎಂದು ಜಿಲ್ಲಾಧಿಕಾರಿಯವರನ್ನು ಕೋರಿದರು.

ಬಳ್ಳಾರಿ ಸಂಸದ ವೈ.ದೇವೇಂದ್ರ, ದಾವಣಗೆರೆ ಸಂಸದ ಜಿ.ಎಂ.ಸಿದ್ದೇಶ್ವರ,  ಪೊಲೀಸ್ ವರಿಷ್ಠಾಧಿಕಾರಿ ಸೈದುಲ್ಲಾ ಅಡಾವತ್‌ರವರು ಕೋವಿಡ್ ನಿಯಂತ್ರಣ ಕುರಿತು ಅನೇಕ ಸಲಹೆಗಳನ್ನು ನೀಡಿದರು.

ಜಿಲ್ಲಾ ಆರೋಗ್ಯಾಧಿಕಾರಿ ಜನಾರ್ದನ, ಉಪವಿಭಾಗಾಧಿಕಾರಿ ಚಂದ್ರಶೇಖರಯ್ಯ, ತಹಶೀಲ್ದಾರ್‌ ಎಲ್.ಎಂ.ನಂದೀಶ್‌, ಡಿವೈಎಸ್ಪಿ  ಹಾಲಮೂರ್ತಿ ರಾವ್ , ಟಿಹೆಚ್ಓ ಪಿ.ಕೆ.ವೆಂಕಟೇಶ್‌, ಡಾ.ಶಿವಕುಮಾರ್‌, ಬಿಇಒ ವೀರಭದ್ರಯ್ಯ, ಜಿ.ಪಂ ಸದಸ್ಯರುಗಳಾದ ಸುವರ್ಣ ಆರುಂಡಿ ನಾಗರಾಜ್‌, ಹೆಚ್.ಬಿ.ಪರಶುರಾಮಪ್ಪ, ಡಾ.ಮಂಜುನಾಥ್‌ ಉತ್ತಂಗಿ, ತಾ.ಪಂ ಅಧ್ಯಕ್ಷೆ ಅನ್ನಪೂರ್ಣಮ್ಮ, ಸದಸ್ಯೆ ಪ್ರೇಮ ಹಾಗೂ ಇತರರು ಪಾಲ್ಗೊಂಡಿದ್ದರು.

error: Content is protected !!