ದುಡ್ಡು ಕೊಟ್ಟವರಿಗೆ ಮಾತ್ರ ಆಸ್ಪತ್ರೆ ಬೆಡ್

ದುಡ್ಡು ಕೊಟ್ಟವರಿಗೆ ಮಾತ್ರ ಆಸ್ಪತ್ರೆ ಬೆಡ್ - Janathavaniಬೆಂಗಳೂರು, ಮೇ 4  – ಕೊರೊನಾ ಎರಡನೇ ಅಲೆ ತಾರಕಕ್ಕೇರಿ ಸ್ಮಶಾನಗಳಲ್ಲಿ ಹೆಣ ಸುಡಲು ಜಾಗ ಕಷ್ಟವಾಗಿರುವ ಸಂದರ್ಭದಲ್ಲಿ, ಆಸ್ಪತ್ರೆಯ ಬೆಡ್‌ ಮಾರಿಕೊಳ್ಳುವ ದೊಡ್ಡ ದಂಧೆಯನ್ನು ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಬಯಲಿಗೆಳೆದಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಆರೋಪಗಳ ಕುರಿತು ದಾಖಲೆ ಬಿಡುಗಡೆ ಮಾಡಿ ಮಾತನಾಡಿರುವ ಅವರು, ಬಿಬಿಎಂಪಿಯ ಕೋವಿಡ್ ವಾರ್‌ ರೂಂನಲ್ಲಿ ಸೋಂಕಿತ ಲಕ್ಷಣ ರಹಿತರ ಹೆಸರಿನಲ್ಲಿ ಬೆಡ್ ಬುಕ್ ಮಾಡಿ ಅದನ್ನು ಬೇರೆಯವರಿಗೆ ಕೊಡುವ ದಂಧೆ ನಡೆಯುತ್ತಿದೆ. ಈ ರೀತಿ 4 ಸಾವಿರಕ್ಕೂ ಹೆಚ್ಚು ಬೆಡ್‌ಗಳ ಮಾರಾಟದ ದಂಧೆ ನಡೆದಿರುವುದು ಕಂಡು ಬಂದಿದೆ ಎಂದಿದ್ದಾರೆ.

ಒಬ್ಬ ವ್ಯಕ್ತಿಯ ಹೆಸರಿನಲ್ಲೇ 12ಕ್ಕೂ ಹೆಚ್ಚು ಆಸ್ಪತ್ರೆಗಳಲ್ಲಿ ಬೇರೆ ಬೇರೆ ದಿನ ಬೆಡ್ ಬುಕ್ ಮಾಡಲಾಗಿದೆ. ಈ ರೀತಿ ಬುಕ್ ಮಾಡಿದ ಬೆಡ್‌ಗಳನ್ನು ರಾತ್ರೋರಾತ್ರಿ ಬೇರೆಯ ವರಿಗೆ ಕೊಡಲಾಗುತ್ತಿದೆ. ಈ ರೀತಿಯ ದಂಧೆ ನಡೆಸಿದ ಅಧಿಕಾರಿಗಳು, ಏಜೆಂಟರು, ಆರೋಗ್ಯ ಮಿತ್ರರು ಹಾಗೂ ಖಾಸಗಿ ಆಸ್ಪತ್ರೆಯವರು ಯಾರೇ ಇದ್ದರೂ ಜೈಲಿಗೆ ಅಟ್ಟಬೇಕು ಎಂದವರು ಕಿಡಿ ಕಾರಿದ್ದಾರೆ.

ಈ ಅಕ್ರಮ ದಂಧೆ ನಡೆಸಿದವರನ್ನು ರಣಹದ್ದುಗಳು ಎಂದು ತರಾಟೆಗೆ ತೆಗೆದುಕೊಂಡ ಸೂರ್ಯ, ಇದು ಭ್ರಷ್ಟಾಚಾರ ಅಲ್ಲ ಕೊಲೆ ಎಂದು ಬಣ್ಣಿಸಿದರು.

ಆಕ್ಸಿಜನ್ ಬೆಡ್‌ಗಳ ಸಂಖ್ಯೆಯನ್ನು ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಸಾಕಷ್ಟು ಹೆಚ್ಚಿಸಲಾಗಿದೆ. ಆದರೆ, ಅಧಿಕಾರಿಗಳು ಹಾಗೂ ಏಜೆಂಟರ ಕಾರಣದಿಂದಾಗಿ ಜನರಿಗೆ ಈ ಸೌಲಭ್ಯ ತಲುಪುತ್ತಿಲ್ಲ ಎಂದು ಆರೋಪಿಸಿದರು.

ಬೊಮ್ಮನಹಳ್ಳಿ ಶಾಸಕ ಸತೀಶ್ ರೆಡ್ಡಿ ಮಾತನಾಡಿ, ಕೊರೊನಾಗೆ ಸಿಲುಕಿದವರಿಂದ ಅಮಿತ್ ಎಂಬ ವ್ಯಕ್ತಿ 25 ಸಾವಿರ ರೂ.ಗಳನ್ನು ಗೂಗಲ್ ಪೇ ಮೂಲಕ ಪಡೆದು ಬೆಡ್ ನೀಡಿರುವುದು ದಾಖಲೆ ಸಮೇತ ಬೆಳಕಿಗೆ ಬಂದಿದೆ. ಈ ವ್ಯಕ್ತಿಯನ್ನು ಪೊಲೀಸರು ಈಗಾಗಲೇ ಬಂಧಿಸಿದ್ದಾರೆ ಎಂದು ಹೇಳಿದರು.

ಕೇಂದ್ರ ಸರ್ಕಾರದಿಂದ 780 ಬೆಡ್‌ಗಳು ಬಂದರೂ ಅವುಗಳು ಬಳಕೆಯಾಗುತ್ತಿಲ್ಲ. ಆಕ್ಸಿಜನ್ ಘಟಕಗಳಿಗೆ  ಹಣ ಬಂದರೂ, ಘಟಕಗಳನ್ನು ಸ್ಥಾಪಿಸಿಲ್ಲ. ಅಧಿಕಾರಿಗಳ ನಿರ್ಲಕ್ಷದಿಂದ ಈ ರೀತಿ ಆಗುತ್ತಿದೆ. ಅವರನ್ನು ಮನೆಗೆ ಕಳಿಸದೇ ಇದ್ದರೆ ಅವರ ಶಾಪ ತಟ್ಟುತ್ತದೆ ಎಂದರು.

ವಾರ್ ರೂಂಗಳಲ್ಲಿ ಕೆಲಸ ಮಾಡುತ್ತಿರುವವರು ಅಧಿಕಾರಿಗಳಲ್ಲ. ಇದರ ಹೊಣೆಯನ್ನು ಖಾಸಗಿ ಸಂಸ್ಥೆಗೆ ವಹಿಸಲಾಗಿದೆ. ಇದಕ್ಕೆ ಕಣ್ಣು ಮುಚ್ಚಿ ನೇಮಕ ಮಾಡುತ್ತಿರುವುದರಿಂದ ಬೆಂಗಳೂರು ಜನರ ಪ್ರಾಣ ಹೋಗುತ್ತಿದೆ. ಈ ಹುದ್ದೆಗಳಿಗೆ ಅಧಿಕಾರಿಗಳ ಸಂಬಂಧಿಗಳನ್ನೇ ನೇಮಿಸಲಾಗಿದೆ ಎಂದು ಆರೋಪಿಸಿದರು.

ಬೆಡ್ ಬ್ಲಾಕ್ ಅಷ್ಟೇ ಅಲ್ಲದೇ ರೆಮ್ಡಿಸಿವಿರ್ ಔಷಧಿಗಳನ್ನು ಕಾಳಸಂತೆಯಲ್ಲಿ ಮಾರಾಟ ಮಾಡಲಾಗುತ್ತಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದ ಇನ್ನೋರ್ವ ಶಾಸಕ ಉದಯ ಗರುಡಾಚಾರ್ ಹೇಳಿದರು.

error: Content is protected !!