ತೆರವಾಗಿರುವ ಎಪಿಎಂಸಿ ಒಂದು ಸ್ಥಾನಕ್ಕೆ ಚುನಾವಣೆ

ಎಸ್.ಕೆ. ಪವಿತ್ರ ಆಯ್ಕೆ ಸಂಭವ

ದಾವಣಗೆರೆ,ಮಾ.4- ದಾವಣಗೆರೆ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಆಡಳಿತ ಮಂಡಳಿಯಲ್ಲಿ ತೆರವಾಗಿರುವ ಒಂದು ಸ್ಥಾನಕ್ಕೆ ಇದೇ ದಿನಾಂಕ 18ರಂದು ಉಪ ಚುನಾವಣೆ ನಡೆಯಲಿದ್ದು, ಎಸ್.ಕೆ. ಪವಿತ್ರ ಅವರು ಅವಿರೋಧವಾಗಿ ಆಯ್ಕೆಯಾಗುವ ಸಂಭವವಿದೆ.

ಕೃಷಿ ಸಹಕಾರ ಸಂಸ್ಕರಣಾ ಸಂಘದ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದ ಹಿರಿಯ ಸಹಕಾರಿ ಧುರೀಣರಾಗಿದ್ದ ಶಾಮನೂರು ಕಲ್ಲೇಶಪ್ಪ ಅವರ ನಿಧನದಿಂದಾಗಿ ಈ ಸ್ಥಾನ ತೆರವಾಗಿತ್ತು. 

ಇದೀಗ ತೆರವಾಗಿರುವ ಸ್ಥಾನಕ್ಕೆ ನಡೆಯಲಿರುವ ಚುನಾವಣೆಗೆ ಉಮೇದುವಾರಿಕೆ ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದ್ದ ಇಂದು ಕಲ್ಲೇಶಪ್ಪ ಅವರ ಪುತ್ರ ಎಸ್.ಕೆ. ಪವಿತ್ರ ಅವರು ನಾಮಪತ್ರ ಸಲ್ಲಿಸಿದ್ದಾರೆ. ಕಣದಲ್ಲಿ ಅವರೊಬ್ಬರೇ ಇದ್ದು, ಈ ಕಾರಣದಿಂದಾಗಿ ಅವರು ಅವಿರೋಧವಾಗಿ ಆಯ್ಕೆಯಾಗುವ ಸಾಧ್ಯತೆಗಳಿವೆ.

ಚುನಾವಣಾಧಿಕಾರಿಯಾಗಿರುವ ತಹಶೀ ಲ್ದಾರ್ ಗಿರೀಶ್ ಅವರಿಗೆ ಪವಿತ್ರ ಅವರು ನಾಮಪತ್ರ ಸಲ್ಲಿಸಿದ್ದಾರೆ. ಈ ಸಂದರ್ಭದಲ್ಲಿ ಜಿ.ಎಸ್. ಪರಮೇಶ್ವರಗೌಡ್ರು, ಮುದೇಗೌಡ್ರ ಗಿರೀಶ್, ಗಡಿಗುಡಾಳ್ ಮಂಜುನಾಥ್, ಎಸ್.ಎಸ್. ಶಿವಸಂಗಪ್ಪ, ಎಸ್.ಎಸ್. ಬಸವಲಿಂಗಪ್ಪ, ಎಸ್.ವಿ. ಸಂದೇಶ್, ಪಿ.ಎಸ್. ಸತೀಶ್, ಯುವ ರಾಜ್, ಹಳ್ಳಿಕೇರಿ ಸಂತೋಷ್, ಷಣ್ಮುಖಪ್ಪ, ಜಿ.ಆರ್. ರಾಘವೇಂದ್ರ ಗೌಡ, ರೈತರ ಫಸಲುಗಳ ಪರಿವರ್ತನಾ ಮತ್ತು ವ್ಯಾಪಾರೋದ್ಯಮ ಸಹಕಾರ ಸಂಘದ ಮಾಜಿ ಕಾರ್ಯದರ್ಶಿ ಆರ್. ಗಂಗಾಧರಪ್ಪ ಮತ್ತಿತರರು ಉಪಸ್ಥಿತರಿದ್ದರು.

error: Content is protected !!