ದೇಶವಾಳುವ ಮೂರು ‘ಸಿ’ಗಳ ಮುಕ್ತಿಗೆ ವೀರ ಯೋಧರು ನೀವಾಗಿ

ಪ್ರಾಮಾಣಿಕ ನಾಯಕರ ಆಯ್ಕೆ ಯುವ ಜನತೆಯ ಕೈಲಿದೆ

ಯುವ ಜನತೆ ಮನಸ್ಸು ಮಾಡಿದರೆ ಯಾವುದೂ ಅಸಾಧ್ಯ ಅಲ್ಲ, ಕಷ್ಟ ಸಾಧ್ಯವೂ ಅಲ್ಲ. ಸರಳ ಸಾಧ್ಯ. 18 ವರ್ಷಕ್ಕೇ ಮತದಾನದ ಹಕ್ಕು ಪಡೆಯುವ ಯುವ ಜನತೆ ಯಾವುದೇ ಚುನಾವಣೆಯಲ್ಲಿ ಯಾರೇ ಸ್ಪರ್ಧಿಸಿದ್ದರೂ ಆ ವ್ಯಕ್ತಿ ಎಷ್ಟು ಅರ್ಹರು, ಯೋಗ್ಯರು ಎಂಬುದರ ಮೇಲೆ ಆಯ್ಕೆ ಮಾಡಬೇಕು. ಏನಾದರೂ ಆಗು ಮೊದಲು ನೀ ರಾಷ್ಟ್ರದ ಉತ್ತಮ ಪ್ರಜೆಯಾಗು. ಆದರ್ಶ ನಾಗರಿಕರಾಗಬೇಕು.

– ವಿಶ್ರಾಂತ ನ್ಯಾಯಾಧೀಶ ಅರಳಿ ನಾಗರಾಜ್.

ದಾವಣಗೆರೆ, ಅ.31- ದೇಶವನ್ನು ಕಿತ್ತು ತಿನ್ನುತ್ತಿರುವ ರೋಗಗಳಾಗಿರುವ ಭ್ರಷ್ಟಾಚಾರ, ಜಾತೀಯತೆ ಹಾಗೂ ಅಪರಾಧ, ಅನೈತಿಕತೆ ಇವುಗಳಿಗೆ ಮುಕ್ತಿ ಹಾಡುವ ಶಕ್ತಿಯು ಇಡೀ ದೇಶವೇ ಎದುರು ನೋಡುತ್ತಿರುವ ಯುವ ಸಮೂಹ, ವಿದ್ಯಾರ್ಥಿಗಳ ಮೇಲಿದೆ ಎಂದು ಕರ್ನಾಟಕ ಉಚ್ಚ ನ್ಯಾಯಾಲಯದ ವಿಶ್ರಾಂತ ನ್ಯಾಯಾಧೀಶ ಅರಳಿ ನಾಗರಾಜ್ ಅಭಿಲಾಷೆ ವ್ಯಕ್ತಪಡಿಸಿದರು. 

ಅವರು, ಇಂದು ನಗರದ ಸಿದ್ಧಗಂಗಾ ಶಾಲೆಯ ಆವರಣದಲ್ಲಿ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆ, ಸರಸ್ವತಿ ದಾಸಪ್ಪ ಶೆಣೈ ಪ್ರತಿಷ್ಠಾನ ಸಾಲಿಗ್ರಾಮ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಕನ್ನಡ ಕುವರ-ಕುವರಿ ಜಿಲ್ಲಾ ಪ್ರಶಸ್ತಿ, ಸರಸ್ವತಿ ಪುರಸ್ಕಾರ ರಾಜ್ಯ ಪ್ರಶಸ್ತಿ ಪ್ರದಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು. 

ಮೂರು ಸಿ (corruption, castism, crime) ಗಳಿಂದ ದಯವಿಟ್ಟು ದೂರ ವಿರಿ. ದೇಶವನ್ನಾಳುತ್ತಿರುವ ಭ್ರಷ್ಟಾಚಾರ, ಜಾತೀಯತೆ ಹಾಗೂ ಅಪರಾಧ ಮನೋ ಭಾವನೆಯಿಂದ ಮುಕ್ತರಾಗಿರಿ. ಇಂದಿನ ರಾಜ ಕೀಯ, ಸಾಮಾಜಿಕ ವ್ಯವಸ್ಥೆಯಲ್ಲಿ ಅಪಮೌಲ್ಯ ಗಳೇ ವಿಜೃಂಭಿಸುತ್ತಿವೆ. ಭ್ರಷ್ಟಾಚಾರವೇ ಕಾನೂನು ಆಗಿಬಿಟ್ಟಿವೆ. ಚುನಾವಣೆಗಳಲ್ಲಿ ಜಾತಿ, ಹಣ ಹಾಗೂ ತೋಳ್ಬಲವೇ ಹೆಚ್ಚಿದೆ. ಇವು ತೊಲಗಬೇಕಿದೆ. ಇವುಗಳನ್ನು ನಮ್ಮ ರಾಷ್ಟ್ರದಿಂದ ಮುಕ್ತಗೊಳಿಸುವ ಸಾಮರ್ಥ್ಯ, ಅವಕಾಶ ನಿಮ್ಮಗಿದ್ದು ವೀರ ಯೋಧರು, ಸಾಮಾಜಿಕ ಯೋಧರಾಗಿ ಪಣ ತೊಡಿ. ಆಗ ಅಪ್ಪಟ್ಟ ಪ್ರಾಮಾಣಿಕ ನಾಯಕತ್ವ, ಆಡಳಿತ ನಡೆಸುವವರು ನೀವಾಗುವಿರಿ ಎಂದು ಕಳಕಳಿಯಿಂದ ವಿನಂತಿಸಿದರು.

25 ಲಕ್ಷ ರೂ. ನೀಡಿದರೆ ಸಾಕು, ಎಫ್‌ಡಿಎ ಪರೀಕ್ಷೆಯನ್ನೇ ಸರಿಯಾಗಿ ಬರೆಯ ದವರಿಗೆ ಅಂಕ ಬರುವಂತೆ ಮಾಡಿ ಹುದ್ದೆ ಮನೆ ಬಾಗಿಲಿಗೆ ಬರುವಂತಹ ವ್ಯವಸ್ಥೆ ಇಂದಿದೆ. ಇದರಿಂದಾಗಿ ಪ್ರಾಮಾಣಿಕವಾಗಿ ಕಷ್ಟಪಟ್ಟು ಓದಿದ ಪ್ರತಿಭಾವಂತರು ಉದ್ಯೋಗ ಪಡೆಯು ವಲ್ಲಿ ವಂಚಿತರಾಗುತ್ತಾರೆ. ನಮ್ಮಲ್ಲಿ ಶ್ರೇಷ್ಠ ಸಂವಿಧಾನವಿದ್ದರೂ ಸಮಾನ ರಕ್ಷಣೆ, ಸಮಾನ ಅವಕಾಶ ಇಲ್ಲವಾಗಿದೆ ಎಂದು ಬೇಸರಿಸಿದರು.

ಸ್ಪರ್ಧೆ ಇಲ್ಲದ ಏಕೈಕ ಕ್ಷೇತ್ರವೇ ರಾಜ ಕೀಯ. ಒಬ್ಬ ಶಾಸಕ ತೀರಿಕೊಂಡರೆ ಆತನ ಅನಕ್ಷರಸ್ಥ ಪತ್ನಿಗೆ ಟಿಕೆಟ್ ನೀಡಲಾಗುತ್ತಿದೆ. ಅವರನ್ನೇ ಮಂತ್ರಿ ಮಾಡುವ ವ್ಯವಸ್ಥೆ ಇದೆ. ಸಿಂಧಗಿ, ಹಾನಗಲ್ ಕ್ಷೇತ್ರಗಳ ಉಪಚುನಾವಣೆ ಗಳಲ್ಲಿ ರಾಜಕಾರಣಿಗಳು ಬಳಸಿದ ಪದ ಬಳಕೆ ಗಮನಿಸಿದರೆ ಬೇಸರ ಎನಿಸುತ್ತದೆ ಎಂದರು.

ವಿದ್ಯಾರ್ಥಿಗಳು ಜೀವನದಲ್ಲಿ ದಕ್ಷತೆ, ಸಚ್ಚಾರಿತ್ರ್ಯ, ಬದ್ಧತೆ, ಧೈರ್ಯ ಹಾಗೂ ಕರುಣಾ ಮನೋಭಾವಗಳನ್ನು ರೂಢಿಸಿಕೊಳ್ಳಬೇಕು. ಅಂಕಗಳಿಂದ ಹಿನ್ನಡೆಯಾದರೆ ಆತ್ಮಹತ್ಯೆ ಮಾಡಿಕೊಳ್ಳುವಂತಹ ಅಧೀರರಾಗಬಾರದು ಎಂದು ಕಿವಿಮಾತು ಹೇಳಿದರು. 

ಭ್ರಷ್ಟಾಚಾರ ಆರೋಪ ಹೊತ್ತು ಜೈಲಿಗೆ ಹೋಗಿ ಬಂದವರಿಗೂ ಮೆರವಣಿಗೆ, ಆರತಿ ಮಾಡಿ ಗೌರವಿಸಲಾಗುತ್ತಿದೆ. ಪ್ರಾಮಾಣಿಕರಿಗೂ ಆರತಿ ಮಾಡಿ ಗೌರವಿಸುವ ಪರಿಸ್ಥಿತಿ ಇದ್ದು, ಇಂದು ಭ್ರಷ್ಟರಿಗೂ – ಪ್ರಾಮಾಣಿಕರಿಗೂ ಯಾವುದೇ ವ್ಯತ್ಯಾಸವೇ ಇಲ್ಲವೆಂಬಂತಾಗಿದೆ. ಇದು ಮುಂದಿನ ಪೀಳಿಗೆಯ ಭವಿಷ್ಯದ ಮೇಲೆ ದುಷ್ಪರಿಣಾಮ ಬೀರಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಪ್ರಸ್ತುತ ಜಗತ್ತಿನಲ್ಲಿ ಅತ್ಯಂತ ಪ್ರಾಮಾಣಿಕತೆಯಿಂದ ಜಾನವನ್ನು ಧಾರೆ ಎರೆಯುವ, ಮಕ್ಕಳಲ್ಲಿ ಹುದುಗಿರುವ ಸುಪ್ತ ಪ್ರತಿಭೆ ಹೊರ ತರುವ ಶಿಕ್ಷಕರ ಕೊರತೆ ಕಾಡುತ್ತಿದೆ. ಗುರುಗಳ ಸಂಖ್ಯೆ ಬಹಳ ಕಡಿಮೆಯಾಗಿದೆ. ಶಿಕ್ಷಣವೆಂದರೆ ಕೇವಲ ಶಾಲೆಗೆ ಹೋಗುವುದು, ಪಠ್ಯ ಪುಸ್ತಕ ಓದುವುದು, ಪಠ್ಯ ಕ್ರಮ ಮುಗಿಸುವುದು, ಅಂಕ ಪಡೆಯುವುದು, ಐಎಎಸ್, ಐಪಿಎಸ್ ಹೀಗೆ ಉನ್ನತ ಹುದ್ದೆ ಅಲಂಕರಿಸುವುದಷ್ಟೇ ಉದ್ದೇಶವಾಗಿದೆ. ಶಿಕ್ಷಣ ಲಾಭದಾಯಕ ಉದ್ಯಮವಾಗಿದೆ. 

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಹಿರಿಯ ಯಕ್ಷಗಾನ ಸಾಹಿತಿ ಜಯಲಕ್ಷ್ಮಿ ಕಾರಂತ, ಯುವ ಸಮೂಹ ಯಾವುದೇ ಹುದ್ದೆ ಅಲಂಕರಿಸಿದರೂ ಕನ್ನಡಮ್ಮನ ಕೈಂಕರ್ಯ ಬಿಡಬಾರದು. ಸುಂದರ ಕನ್ನಡವನ್ನು ಉಳಿಸಿ, ಬೆಳೆಸಬೇಕು ಎಂದು ಆಶಿಸಿದರು.

ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಘಟಕದ ಮಾಜಿ ಅಧ್ಯಕ್ಷ ಬಿ. ವಾಮದೇವಪ್ಪ ಮಾತನಾಡಿ ಇಂಜಿನಿಯರಿಂಗ್, ಉನ್ನತ ಪದವಿ, ಬ್ಯಾಂಕಿಂಗ್ ಸೇರಿ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳನ್ನೂ ಇಂದು ಕನ್ನಡದಲ್ಲಿ ಮಾಡುವ ಅವಕಾಶಗಳಿವೆ. ಹೀಗಾಗಿ ಇಂದಿನ ವಿದ್ಯಾರ್ಥಿಗಳಲ್ಲಿ ಮಾತೃ ಭಾಷೆ ಬಗ್ಗೆ ಕೀಳರಿಮೆ ಬೇಡ ಎಂದರು. 

ಹಿರಿಯ ಯಕ್ಷಗಾನ ಸಾಹಿತಿ ಜಯಲಕ್ಷ್ಮಿ ಕಾರಂತ ಕಾರ್ಯಕ್ರಮ ಉದ್ಘಾಟಿಸಿದರು. ಎಸ್ಸೆಸ್ಸೆಲ್ಸಿಯಲ್ಲಿ 600ಕ್ಕೂ ಹೆಚ್ಚು ಅಂಕ ಪಡೆದವರಿಗೆ ಸರಸ್ವತಿ ಪುರಸ್ಕಾರ ಹಾಗೂ ಕನ್ನಡ ಭಾಷೆಯಲ್ಲಿ 120ಕ್ಕೂ ಹೆಚ್ಚು ಅಂಕ ಗಳಿಸಿದವರಿಗೆ ಕನ್ನಡ ಕುವರ-ಕುವರಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. 

ಕಾರ್ಯಕ್ರಮದಲ್ಲಿ ಸಿದ್ಧಗಂಗಾ ಶಾಲೆಯ ಮುಖ್ಯಸ್ಥೆ ಜಸ್ಟಿನ್ ಡಿಸೌಜ, ಸಿದ್ಧಗಂಗಾ ಪಪೂ ಕಾಲೇಜಿನ ನಿರ್ದೇಶಕ ಡಾ. ಡಿ.ಎಸ್. ಜಯಂತ್, ಕಲಾಕುಂಚ ಸಂಸ್ಥಾಪಕ ಸಾಲಿಗ್ರಾಮ ಗಣೇಶ ಶೆಣೈ, ಅಧ್ಯಕ್ಷ ಕೆ.ಹೆಚ್. ಮಂಜುನಾಥ್, ಪ್ರಧಾನ ಕಾರ್ಯದರ್ಶಿ ಜಿ.ಬಿ. ಲೋಕೇಶ್, ಹೇಮಾ ಶಾಂತಪ್ಪ ಪೂಜಾರಿ, ಜ್ಯೋತಿ ಗಣೇಶ ಶೆಣೈ ಸೇರಿದಂತೆ ಇತರರು ಇದ್ದರು.

error: Content is protected !!