ದೇವರ ಜಮೀನುಗಳು ದೇವರ ಹೆಸರಿನಲ್ಲೇ ಉಳಿಯಲಿ: ಭೂ ಕಬಳಿಕೆ ವಿರೋಧಿ ಹೋರಾಟ ಸಮಿತಿ ಒತ್ತಾಯ

ದಾವಣಗೆರೆ, ಸೆ.30- ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ ದೇವರ ಜಮೀನುಗಳನ್ನು ದೇವರ ಹೆಸರಿನಲ್ಲಿಯೇ ಉಳಿಸುವಂತೆ ಭೂ ಕಬಳಿಕೆ ವಿರೋಧಿ ಹೋರಾಟ ಸಮಿತಿ ಸರ್ಕಾರವನ್ನು ಒತ್ತಾಯಿಸಿದೆ.

ದೇಶದ ದೇವಸ್ಥಾನಗಳ ಹೆಸರಿನ ಜಮೀನುಗಳನ್ನು ಈಗಾಗಲೇ ಪೂಜಾರಿಗಳು ಮತ್ತು ಟ್ರಸ್ಟಿನವರು ಕಬಳಿಸುತ್ತಿರುವುದು ಗಮನಕ್ಕೆ ಬಂದ ಪ್ರಯುಕ್ತ ಸೆ.6, 2020ರಂದು ದೇವರ ಜಮೀನಿಗೆ ದೇವರೇ ಒಡೆಯನೆಂದು ಹಾಗೂ ಪೂಜಾರಿ ಅಥವಾ ಟ್ರಸ್ಟಿನವರಾಗಲೀ ಒಡೆಯರಾಗಿರುವುದಿಲ್ಲ ಎಂದು ನ್ಯಾಯಾಲಯ ಆದೇಶಿಸಿದೆ. 

ಕರ್ನಾಟಕ ರಾಜ್ಯ ಮತ್ತು ದಾವಣಗೆರೆ ಜಿಲ್ಲೆ ಹಾಗೂ ಇತರೆ ಜಿಲ್ಲೆಗಳ ದೇವಸ್ಥಾನದ ಆಸ್ತಿಗಳನ್ನು ಉಳಿಸುವ ಸಲುವಾಗಿ ಸಾರ್ವಜನಿಕರು ನ್ಯಾಯಾಲಯದಲ್ಲಿ ಸಾಕಷ್ಟು ದಾವೆಗಳನ್ನು ಹೂಡಿಕೊಂಡಿದ್ದು, ಕಂದಾಯ ಇಲಾಖೆಗೆ ಅಲೆದಾಡುವಂತಾಗಿದೆ. ದೇವರ ಹೆಸರಿಗೆ ಉಳಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ರಾಜ್ಯ ಸಮಿತಿ ಸಂಚಾಲಕ ಬಲ್ಲೂರು ರವಿಕುಮಾರ್ ತಿಳಿಸಿದ್ದಾರೆ.

ದೇವಸ್ಥಾನಗಳ ಪರವಾಗಿ ಆಸ್ತಿಯನ್ನು ಉಳಿಸಲು ಸಾರ್ವಜನಿಕರು ಹೋರಾಟ ಮಾಡುತ್ತಿದ್ದರೆ, ಕೂಡಲೇ ಒಂದು ಕಡೆ ಸೇರಿ ಚರ್ಚಿಸಿ, ಕಂದಾಯ ಇಲಾಖೆ ಮತ್ತು ಇತರೆ ಇಲಾಖೆಗಳಲ್ಲಿ ಹೋರಾಟದ ಮುಖಾಂತರ ದೇವರ ಹೆಸರಿಗೆ ಆಸ್ತಿ ಉಳಿಸುವುದು ಒಳ್ಳೆಯ ಬೆಳವಣಿಗೆ ಎಂದಿದ್ದಾರೆ.

error: Content is protected !!