ತ್ಯಾಜ್ಯ ವಿಲೇವಾರಿ, ಪರಿಸರ ರಕ್ಷಣೆಗೆ ಹೆಚ್ಚಿನ ಆದ್ಯತೆ

ಮೇಯರ್ ಎಸ್.ಟಿ.ವೀರೇಶ್

ದಾವಣಗೆರೆ, ಏ. 16- ಸ್ವಚ್ಛ ನಗರ, ಸಮೃದ್ಧ ಪರಿಸರ ರಕ್ಷಣೆಗೆ ನನ್ನ ಮೊದಲ ಆದ್ಯತೆ. ತಾಜ್ಯ ವಿಲೇವಾರಿ ಸೇರಿದಂತೆ ಕುಡಿಯುವ ನೀರು, ಪ್ರತಿ ಬಡಾವಣೆಗಳಲ್ಲಿ ಗಿಡಮರಗಳನ್ನು ಬೆಳೆಸಿ ಈ ನಗರವನ್ನು ಉದ್ಯಾನ ನಗರಿಯಾಗಿ ಪರಿವರ್ತಿಸಲು ನನ್ನ ಅವಧಿಯಲ್ಲಿ ಶತಪ್ರಯತ್ನ. ಅದಕ್ಕೆ ಪೌರ ಕಾರ್ಮಿಕರು, ಸಾರ್ವಜನಿಕರು ಸಹಕಾರ, ಸಹಯೋಗ ನೀಡಬೇಕಾಗಿದೆ ಎಂದು ಮಹಾ ಪೌರ ಎಸ್.ಟಿ.ವೀರೇಶ್ ತಮ್ಮ ಅಭಿಪ್ರಾಯ ವನ್ನು ಮುಕ್ತವಾಗಿ ಹಂಚಿಕೊಂಡರು.

ದಾವಣಗೆರೆಯ ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ಎಸ್.ಎಸ್.ಬಡಾವಣೆ ಶಾಖೆ ವತಿಯಿಂದ ಹಮ್ಮಿಕೊಳ್ಳಲಾದ ಅಭಿನಂದನಾ ಸಮಾರಂಭದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿ, ವಾಣಿಜ್ಯ ನಗರಿ ದಾವಣಗೆರೆಯನ್ನು ಸಾಂಸ್ಕೃತಿಕ ನಗರಿಯಾಗಿ ಪರಿವರ್ತಿಸುವ ನಿಟ್ಟಿನಲ್ಲಿ ಕಲಾಕುಂಚ ಸಂಸ್ಥೆಯ ಮೂರು ದಶಕಗಳ ನಿರಂತರ ಕ್ರಿಯಾಶೀಲ ಸಾಧನೆ ನಿಜಕ್ಕೂ ಪ್ರಶಂಸನೀಯ ಮತ್ತು ಇತರೆ ಸಂಘಟನೆಗಳಿಗೆ ಮಾದರಿ ಎಂದರು.

ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ಎಸ್.ಎಸ್.ಬಡಾವಣೆ ಶಾಖೆಯ ಅಧ್ಯಕ್ಷರಾದ ಶ್ರೀಮತಿ ಸುಜಾತ ಬಸವರಾಜ್‍ ಅಧ್ಯಕ್ಷತೆಯಲ್ಲಿ ನಗರದ ಎಸ್.ನಿಜಲಿಂಗಪ್ಪ ಬಡಾವಣೆಯ ರಿಂಗ್ ರಸ್ತೆಯಲ್ಲಿರುವ ಶ್ರೀ ಸದ್ಗುರು ಬ್ರಹ್ಮಚೈತನ್ಯ ಮಂದಿರದ ಸಭಾಂಗಣದಲ್ಲಿ ನಡೆದ ಈ ಸಮಾರಂಭದಲ್ಲಿ ಹಿರಿಯ ಪರಿಸರವಾದಿ, ಸ್ತ್ರೀರೋಗ ತಜ್ಞೆ ಡಾ. ಶಾಂತಾ ಭಟ್, ದಾವಣಗೆರೆ ನಗರಸಭೆಯ ಮಾಜೀ ಸದಸ್ಯರು, ಶ್ರೀ ಸದ್ಗುರು ಬ್ರಹ್ಮಚೈತನ್ಯ ಮಂದಿರದ ಅಧ್ಯಕ್ಷರಾದ ಪಿ.ಸಿ.ಮಹಾ ಭಲೇಶ್ವರ,  ಎಸ್.ನಿಜಲಿಂಗಪ್ಪ ಬಡಾವಣೆಯ ಪಾಲಿಕೆ ಸದಸ್ಯರಾದ ಶ್ರೀಮತಿ ರೇಖಾ ಸುರೇಶ್ ಮುಖ್ಯ ಅತಿಥಿಗಳಾಗಿ ವೇದಿಕೆಯಲ್ಲಿ ಉಪಸ್ಥಿತರಿದ್ದು ಮಾತನಾಡಿದರು.

ವೇದಿಕೆಯಲ್ಲಿ ಗೌರವ ಉಪಸ್ಥಿತರಾಗಿ ಕಲಾಕುಂಚದ ಸಂಸ್ಥಾಪಕರಾದ ಸಾಲಿಗ್ರಾಮ ಗಣೇಶ್ ಶೆಣೈ ಪ್ರಾಸ್ತಾವಿಕವಾಗಿ ಮಾತನಾಡಿ, ಚುನಾವಣೆಯಲ್ಲಿ ಗೆದ್ದ ಜನಪ್ರತಿನಿಧಿಗಳು ಜನರ ಅಪಾರ ಸೇವಾ ನಿರೀಕ್ಷೆಯಲ್ಲಿ ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಜನರ ನೋವು, ಕಷ್ಟ – ನಷ್ಟಗಳಿಗೆ ಸ್ಪಂದಿಸಿ ಜನಸೇವೆ ಮಾಡಿ ದಾಗ ಚುನಾವಣೆಯಲ್ಲಿ ಗೆದ್ದು ಸ್ಥಾನಮಾನ ಗಳಿಸಿದ ಜನಪ್ರತಿನಿಧಿಗಳ ಜೀವನ ಸಾರ್ಥಕತೆ ಪಡೆಯುತ್ತದೆ. ಈ ನಿಟ್ಟಿನಲ್ಲಿ ಇಚ್ಚಾಶಕ್ತಿಯಿಂದ, ಬದ್ಧತೆಯಿಂದ, ವಿಶಾಲ ಸೇವಾ ಮನೋಭಾವನೆಯಿಂದ ಕರ್ತವ್ಯ ನಿಷ್ಠೆಯಿಂದ ಕಾಯಕ ಮಾಡಿದಾಗ ಉಸಿರು ನಿಂತ ಮೇಲೂ ಹೆಸರು ಉಳಿಯುತ್ತದೆ ಎಂದರು.

ದಾವಣಗೆರೆಯ ಮಹಾನಗರ ಪಾಲಿಕೆಯ ನೂತನ ಮಹಾಪೌರರಾಗಿ ಆಯ್ಕೆಯಾದ ಎಸ್.ಟಿ.ವೀರೇಶ್, ಪಾಲಿಕೆಯ ನೂತನ ಸದಸ್ಯರಾದ ಶ್ರೀಮತಿ ರೇಖಾ ಸುರೇಶ್, ಕಲಾಕುಂಚ ಮಹಿಳಾ ವಿಭಾಗದಿಂದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಹಮ್ಮಿಕೊಳ್ಳಲಾದ `ದಾವಣಗೆರೆ ಗೃಹಿಣಿ ಸ್ಪರ್ಧೆ’ಯಲ್ಲಿ ಪ್ರಥಮ, ತೃತೀಯ ಸ್ಥಾನದಲ್ಲಿ ವಿಜೇತರಾದ ಶ್ರೀಮತಿ ಸುನಂದ ಜಂಬನಗೌಡ, ಶ್ರೀಮತಿ ವೀಣಾ ರವಿಕುಮಾರ್ ಇವರುಗಳಿಗೆ ಅಭಿನಂದಿಸಿ ಗೌರವಿಸಲಾಯಿತು.

ಕಲಾಕುಂಚ ಡಿ.ಸಿ.ಎಂ. ಶಾಖೆಯ ಅಧ್ಯಕ್ಷರಾದ ಶಾರದಮ್ಮ ಶಿವನಪ್ಪ, ಎಂ.ಸಿ.ಕಾಲೋನಿಯ ಕಲಾಕುಂಚ ಶಾಖೆಯ ಅಧ್ಯಕ್ಷರಾದ ಪ್ರಭಾ ರವೀಂದ್ರ, ಕಲಾಕಂಚ ಮಹಿಳಾ ವಿಭಾಗದ ಪ್ರಥಮ ಅಧ್ಯಕ್ಷೆ ಶ್ರೀಮತಿ ಶ್ರೀಮತಿ ಚಂದ್ರಶೇಖರ ಅಡಿಗ, ಕಲಾಕುಂಚ ಮಹಿಳಾ ವಿಭಾಗದ ಸಂಸ್ಥಾಪಕರಾದ ಶ್ರೀಮತಿ ಜ್ಯೋತಿ ಗಣೇಶ್ ಶೆಣೈ, ಖಜಾಂಚಿ ಶ್ರೀಮತಿ ದೀಪಾ ಕಿರಣ್, ಉಪಾಧ್ಯಕ್ಷರಾದ ಶೈಲಾ ವಿಜಯಕುಮಾರ್ ಮುಂತಾದವರು ಉಪಸ್ಥಿತರಿದ್ದರು. 

ಶ್ರೀಮತಿ ಸಾವಿತ್ರಿ ಜಗದೀಶ್ ಮತ್ತು ಉಮಾ ಶಿವರಾಜ್‍ ಪ್ರಾರ್ಥಿಸಿದರು.  ಶ್ರೀಮತಿ ರೂಪಾ ಮಂಜುನಾಥ್ ಸ್ವಾಗತಿಸಿದರು. ಶ್ರೀಮತಿ ರೇಣುಕಾ ವೀರಮಲ್ಲಪ್ಪ ಪೂಜಾರ್ ನಿರೂಪಿಸಿದರು. ಸುರೇಖಾ ಪಾಟೀಲ್ ವಂದಿಸಿದರು.

error: Content is protected !!