ತಾಂಡಾಗಳ ಅಭಿವೃದ್ಧಿಗೆ ಕ್ರಮ

ಬಂಜಾರ ಸಮುದಾಯ ಕಸೂತಿ ಕಲೆಯಲ್ಲಿ ವಿಶಿಷ್ಟ ಪರಿಣಿತಿ ಹೊಂದಿದ್ದು ಬಂಜಾರ ಸಿದ್ಧ ಉಡುಪು ಘಟಕಗಳ ಸ್ಥಾಪನೆಗೆ ಪ್ರತಿ ಜಿಲ್ಲೆಗೆ 5 ಕೋಟಿ ರೂ. ವೆಚ್ಚದಲ್ಲಿ ಉದ್ಯಮ ಸ್ಥಾಪನೆಗೆ ಅನುವು ಮಾಡಿಕೊಟ್ಟರೆ ಈ ಸಮಾಜ ಗುಳೇಯಿಂದ ಹೊರಗುಳಿದು ಒಂದೆಡೆ ನೆಲೆ ನಿಲ್ಲಲಿದೆ. 

– ಪ್ರಭು ಚೌವ್ಹಾಣ್, ಪಶು ಸಂಗೋಪನಾ ಸಚಿವ

ನ್ಯಾಮತಿ, ಫೆ. 14 – ಮುಂದಿನ ಒಂದು ವರ್ಷದಲ್ಲಿ ರಾಜ್ಯದಲ್ಲಿರುವ ಎಲ್ಲಾ ಲಂಬಾಣಿ ತಾಂಡಾಗಳನ್ನು ಕಂದಾಯ ಗ್ರಾಮಗಳನ್ನಾಗಿಸುವ ಕಾರ್ಯ ಪೂರ್ಣಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು. 

ನ್ಯಾಮತಿ ತಾಲ್ಲೂಕಿನ ಸೂರಗೊಂಡನ ಕೊಪ್ಪ ಭಾಯಾಗಢ್ ನ ಶ್ರೀ ಸಂತ ಸೇವಾಲಾಲ್ ಕ್ಷೇತ್ರದಲ್ಲಿ ಸಮಾಜ ಕಲ್ಯಾಣ ಇಲಾಖೆ, ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮ ನಿಯಮಿತ, ಸಂತ ಸೇವಾಲಾಲ್ ಕ್ಷೇತ್ರ ಅಭಿವೃದ್ಧಿ ಮತ್ತು ನಿರ್ವಹಣಾ ಪ್ರತಿಷ್ಠಾನ ಹಾಗೂ ಸಂತ ಸೇವಾಲಾಲ್ ಜನ್ಮಸ್ಥಳ ಮಹಾಮಠ ಸಮಿತಿ ಸಹಯೋಗದಲ್ಲಿ ಸಂತ ಸೇವಾಲಾಲ್ ಅವರ 282ನೇ ಜಯಂತ್ಯೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು.

ತಮ್ಮದೇ ಆದ ವಿಶಿಷ್ಟ ಸಂಸ್ಕೃತಿ, ಆಚಾರ-ವಿಚಾರ ಹೊಂದಿರುವ ಈ ಸಮಾಜ ತನ್ನ ಕಾಯಕ ನಿಷ್ಠೆಯಿಂದ ಶ್ರಮಿಕ ವರ್ಗವಾಗಿದ್ದು, ಬೇಡದೆ ದುಡಿದು ತಿನ್ನುವ ಒಂದು ಸಮಾಜವಾಗಿದೆ. ತನ್ನ ಪಾರಂಪರಿಕ ಗುಳೇ ಸಂಸ್ಕೃತಿಯಂತೆ ಈ ಸಮಾಜ ಪ್ರತಿ ವರ್ಷ ಉದ್ಯೋಗ ಅರಸಿ ವಲಸೆಯನ್ನು ಅವಲಂಬಿಸಿತ್ತು. ಆದರೆ ಈ ವರ್ಷ ಸಂಭವಿಸಿದ ಕೊರೋನ ಪರಿಸ್ಥಿತಿಯಿಂದ ಗುಳೇ ಹೋದ ಸಂದರ್ಭದಲ್ಲಿ ಅವರ ಮಕ್ಕಳ ಶಿಕ್ಷಣಕ್ಕೆ ತೊಂದರೆಯಾಯಿತು. ಹಾಗಾಗಿ ಈ ಗುಳೇ ಸಂಸ್ಕೃತಿ ತಪ್ಪಿಸಲು ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ ತಾಂಡಾ ರೋಜ್‍ಗಾರ್ ಯೋಜನೆಯ ಮೂಲಕ  ಅವರು ವಾಸಿಸುವ ಗ್ರಾಮಗಳಲ್ಲಿ ಉದ್ಯೋಗ ನೀಡಲು ಅವಕಾಶ ಕಲ್ಪಿಸಲಾಗಿದೆ ಎಂದರು.

ತಾಂಡಾಗಳನ್ನು ಕಂದಾಯ ಗ್ರಾಮಗಳನ್ನಾಗಿ ಮಾಡುವುದರೊಂದಿಗೆ ಮೂಲಭೂತ ಸೌಲಭ್ಯಗಳನ್ನು ನೀಡಲಾಗುತ್ತಿದ್ದು, ಗುಡ್ಡಗಾಡು ಪ್ರದೇಶಗಳಲ್ಲಿ ವಾಸಿಸುವ ಇವರ ಗ್ರಾಮಗಳಿಗೆ ವ್ಯವಸ್ಥಿತ ರಸ್ತೆ ಅಭಿವೃದ್ಧಿ  ಹಾಗೂ ಮೂಲಭೂತ ಸೌಕರ್ಯ ಒದಗಿಸಲಾಗುತ್ತಿದೆ ಎಂದರು. 

ಬಂಜಾರ ಭಾಷೆಯನ್ನು ಉಳಿಸಲು ಹಾಗೂ ಬಂಜಾರ ಭಾಷಾ ಸಂಸ್ಕೃತಿ ಅಭಿವೃದ್ಧಿ ಪಡಿಸಲು ಡಾ. ಹಂ.ಪ ನಾಗರಾಜಯ್ಯ ನೇತೃತ್ವದ ತಜ್ಞರ ಸಮಿತಿ ವರದಿಯಂತೆ `ಬಂಜಾರ ಭಾಷಾ ಅಕಾಡೆಮಿ’ ಸ್ಥಾಪನೆಗೆ ಕ್ರಮ ಕೈಗೊಳ್ಳಲಾಗಿದೆ. ಹಾಗೂ ಅಕಾಡೆಮಿ ಸ್ಥಾಪನೆಗೆ ಆದೇಶಿಸಲಾಗಿದೆ. ಹುಮ್ನಾಬಾದ್ ಬಳಿಯ ಲಾಲ್‍ಗರಿಯಲ್ಲಿ 34 ಎಕರೆ ಪ್ರದೇಶದಲ್ಲಿ ಸಿದ್ಧ ಉಡುಪು ಘಟಕ, ಕೊಪ್ಪಳದ ಬಹದ್ದೂರು ಬಂಡಿ ಅಭಿವೃದ್ಧಿಗೆ 50 ಕೋಟಿ ರೂ. ಅನುದಾನ ಒದಗಿಸಲಾಗಿದೆ. ಸೂರಗೊಂಡನಕೊಪ್ಪದ ಸಂತ ಸೇವಾಲಾಲ್ ಪ್ರತಿಷ್ಠಾನದ ಅಭಿವೃದ್ಧಿಗೆ 10 ಕೋಟಿ, ಚಿನ್ನಿಕಟ್ಟೆಯಿಂದ ಸೂರಗೊಂಡನಕೊಪ್ಪ ರಸ್ತೆ ಅಭಿವೃದ್ಧಿಗೆ 10 ಕೋಟಿ ರೂ. ಒದಗಿಸಲು ಕ್ರಮ ಕೈಗೊಳ್ಳಲಾಗಿದೆ ಎಂದರು.

ಪಶು ಸಂಗೋಪನಾ ಸಚಿವ ಪ್ರಭು ಚೌವ್ಹಾಣ್ ಮಾತನಾಡಿ, ಪ್ರತಿ ತಾಂಡಾಾಗಳಲ್ಲಿ  ಸರ್ಕಾರಿ ನ್ಯಾಯಬೆಲೆ ಅಂಗಡಿಗಳನ್ನು ಸರ್ಕಾರ ತೆರೆಯಬೇಕು ಹಾಗು ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ಹೆಚ್ಚು ಅನುದಾನ ಒದಗಿಸಬೇಕೆಂದರು.

ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಹಾಗೂ ಹೊನ್ನಾಳಿ ಶಾಸಕ ಎಂ.ಪಿ ರೇಣುಕಾಚಾರ್ಯ ಮಾತನಾಡಿ, ಈ ಕ್ಷೇತ್ರದ ಅಭಿವೃದ್ದಿಗೆ ಯಡಿಯೂರಪ್ಪನವರ ಕೊಡುಗೆ ಅಪಾರವಾಗಿದ್ದು  ಈ ಭಾಗದ ಕೆರೆಗಳನ್ನು ತುಂಬಿಸಲು 435 ಕೋಟಿ ಬಿಡುಗಡೆ ಮಾಡಿದ್ದು, ಕ್ಷೇತ್ರದಲ್ಲಿ ತುಂಗಭದ್ರಾ ನದಿಯಿಂದ ಕುಡಿಯುವ ನೀರಿಗಾಗಿ 72 ಕೋಟಿ ಅನುದಾನ ಬಿಡುಗಡೆಯಾಗಲಿದೆ. ಭಕ್ತರು ಹಾಗೂ ಪ್ರಯಾಣಿಕರ ಅನುಕೂಲಕ್ಕಾಗಿ ಭಾಯಗಢ್‌ ರೈಲ್ವೆ ಯೋಜನೆ ಸರ್ವೇ ಆಗಿದ್ದು, ರೂ. 46 ಕೋಟಿಗೆ ಡಿಪಿಆರ್ ಆಗಿದೆ. ಹಾಗೂ ತಾಂಡಾ ಅಭಿವೃದ್ಧಿ ನಿಗಮದಿಂದ ಈ ಪುಣ್ಯ ಕ್ಷೇತ್ರ ಒಂದು ರೀತಿ ಎರಡನೇ ಧರ್ಮಸ್ಥಳದಂತೆ ಅಭಿವೃದ್ಧಿ ಹೊಂದುತ್ತಿದೆ ಎಂದರು.  

ರಾಜ್ಯ ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷರು ಹಾಗೂ ಕುಡಚಿ ಶಾಸಕ  ಪಿ. ರಾಜೀವ್ ಪ್ರಾಸ್ತಾವಿಕವಾಗಿ ಮಾತನಾಡಿ, ಭಾರತ ದೇಶದ ಸಂಸ್ಕೃತಿಗೆ ಬಂಜಾರ ಸಮುದಾಯದ ಕೊಡುಗೆ ಬಹಳ ದೊಡ್ಡದಿದೆ. ವಿಶಿಷ್ಟ ಸಂಸ್ಕೃತಿ ಹೊಂದಿರುವ ಜನಾಂಗದ ಪರಂಪರೆಯನ್ನು ಉಳಿಸಲು ಸರ್ಕಾರ ಸಾಕಷ್ಟು ಶ್ರಮಿಸುತ್ತಿದೆ. ಈ ಸಮುದಾಯದವರು ವಾಸಿಸುವ 3,300 ತಾಂಡಾಗಳಲ್ಲಿ 1,700 ತಾಂಡಾಗಳು ಕಂದಾಯ ಗ್ರಾಮಗಳಾಗುವುದು ಬಾಕಿ ಇದೆ.  ಮುಖ್ಯಮಂತ್ರಿಗಳು ಇನ್ನೊಂದು ವರ್ಷದೊಳಗಾಗಿ ಎಲ್ಲಾ ತಾಂಡಾಗಳನ್ನು ಸರ್ವೇ ಮಾಡಲು ಭೂಮಾಪನ ಇಲಾಖೆ ಕಮೀಷನರ್‍ಗಳಿಗೆ ಸೂಚಿಸಿದ್ದಾರೆ. ಹಾಗೂ ಈ ಸಮಾಜದವರು ಗುಳೇ ಹೋದಾಗ ಅವರ ಮಕ್ಕಳಿಗೆ ಶಿಕ್ಷಣಕ್ಕೆ ತೊಂದರೆಯಾಗದಂತೆ ಋತುಮಾನದ ಮಾದರಿಯ ಶಾಲೆಗಳನ್ನು ಆರಂಭಿಸಬೇಕೆಂದರು. ಸಮಾಜದ ವಿಶಿಷ್ಟ ಬಂಜಾರ ಉಡುಗೆ ಆಧುನಿಕ ಸ್ಪರ್ಶದೊಂದಿಗೆ ವಿದೇಶಗಳಲ್ಲೂ ಬೇಡಿಕೆ ಪಡೆದುಕೊಂಡಿದೆ. ಈ ಉಡುಗೆ ಉದ್ಯಮಕ್ಕೆ ಹೆಚ್ಚು ಒತ್ತು ನೀಡಬೇಕೆಂದು ಒತ್ತಾಯಿಸಿದರು. 

ಇದೇ ಸಂದರ್ಭದಲ್ಲಿ ಬಂಜಾರ ಮಾದರಿಯ ಆಧುನಿಕ ಶೈಲಿಯ ವಿವಿಧ ಉಡುಪುಗಳನ್ನು ಮುಖ್ಯಮಂತ್ರಿ ಲೋಕಾರ್ಪಣೆ ಮಾಡಿದರು. ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣ ಸಚಿವ ಬಿ.ಶ್ರೀರಾಮುಲು, ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಬಿ.ಎ.ಬಸವರಾಜ, ತೋಟಗಾರಿಕೆ ಸಚಿವ ಆರ್.ಶಂಕರ್, ಸಂಸದರುಗಳಾದ ಜಿ.ಎಂ.ಸಿದ್ದೇಶ್ವರ, ಬಿ.ವೈ.ರಾಘವೇಂದ್ರ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಕೆ.ವಿ.ಶಾಂತಕುಮಾರಿ, ಶಿವಮೊಗ್ಗ ಗ್ರಾಮೀಣ ಶಾಸಕ ಅಶೋಕ್ ನಾಯಕ, ಪ್ರತಿಷ್ಠಾನದ ಅಧ್ಯಕ್ಷ ರುದ್ರಪ್ಪ ಲಮಾಣಿ, ಮಲೆನಾಡು ಅಭಿವೃದ್ಧಿ ಮಂಡಳಿ ಅಧ್ಯಕ್ಷ ಗುರುಮೂರ್ತಿ, ಜಿ.ಪಂ. ಉಪಾಧ್ಯಕ್ಷೆ ಸಾಕಮ್ಮ ಗಂಗಾಧರ ನಾಯ್ಕ, ಜಿ.ಪಂ. ಸದಸ್ಯರಾದ ಉಮಾ ರಮೇಶ್, ಸುರೇಂದ್ರನಾಯಕ, ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಜಿಪಂ ಸಿಇಒ ಪದ್ಮ ಬಸವಂತಪ್ಪ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಹಾಗೂ ಇತರರು ಉಪಸ್ಥಿತರಿದ್ದರು.

error: Content is protected !!