ಅಗತ್ಯ ವಸ್ತು ಬೆಲೆ ಏರಿಕೆಯಿಂದ ಹೈರಾಣು

ಆಲ್ ಇಂಡಿಯಾ ಟ್ರೇಡ್ ಯೂನಿಯನ್ ಕಾಂಗ್ರೆಸ್‌ನ ದಾವಣಗೆರೆ ಜಿಲ್ಲಾ ಸಮಿತಿಯ ಅಧ್ಯಕ್ಷರಾಗಿ ಕೆ.ರಾಘವೇಂದ್ರ ನಾಯರಿ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಹೆಚ್.ಜಿ.ಉಮೇಶ್ ಅಧಿಕಾರ ಸ್ವೀಕಾರ

ದುಡಿಯುವ ವರ್ಗದ ಒಳಿತಿಗೆ ಡೋಂಗ್ರೆ ಒತ್ತಾಯ

ದಾವಣಗೆರೆ, ಜು.4- ಹಿರಿಯ ಕಾರ್ಮಿಕ ಮುಖಂಡರಾಗಿದ್ದ ಹೆಚ್.ಕೆ‌.ರಾಮಚಂದ್ರಪ್ಪ ಅವರ ನಿಧನದಿಂದಾಗಿ ಜಿಲ್ಲಾ ಸಮಿತಿಯಲ್ಲಿ ಕೆಲವೊಂದು ಬದಲಾವಣೆಗಳನ್ನು ಮಾಡಲಾಗಿದೆ. ಈ ಬದ ಲಾವಣೆಯು ಹೊಸ ನಾಯಕತ್ವ, ಹೊಸ ಚಿಂತನೆ ಹಾಗೂ ಹೊಸ ಹೋರಾಟಕ್ಕೆ ನಾಂದಿಯಾಗಲಿದೆ ಎಂದು ಎಐಟಿಯುಸಿ ರಾಜ್ಯ ಉಪಾಧ್ಯಕ್ಷ ಎಮ್.ಸಿ‌.ಡೋಂಗ್ರೆ ವಿಶ್ವಾಸ ವ್ಯಕ್ತಪಡಿಸಿದರು‌.

ನಗರದ ಕಾಂ. ಪಂಪಾಪತಿ ಭವನದಲ್ಲಿ ಭಾನುವಾರ ಏರ್ಪಾಡಾಗಿದ್ದ ಎಐಟಿಯುಸಿ ಜಿಲ್ಲಾ ಸಮಿತಿಯ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.

ಕೊರೊನಾ ಸಾಂಕ್ರಾಮಿಕ ಪಿಡುಗಿನಿಂದ ಕಾರ್ಮಿಕ ವರ್ಗ ಒಂದೆಡೆ ಅಸಂಖ್ಯಾತ ಸಂಖ್ಯೆಯಲ್ಲಿ ಉದ್ಯೋಗವನ್ನು ಕಳೆದುಕೊಂಡಿದ್ದರೆ ಇನ್ನೊಂದೆಡೆ ಅಗತ್ಯ ವಸ್ತುಗಳ ತೀವ್ರ ಬೆಲೆ ಏರಿಕೆಯಿಂದ ಹೈರಾಣಾಗಿದೆ‌. ರಾಷ್ಟ್ರೀಯ ವಿಪತ್ತಿನ ಈ ಸಂದರ್ಭದಲ್ಲಿ ಸರಕಾರವೇ ದುಡಿಯುವ ವರ್ಗದ ಯೋಗಕ್ಷೇಮವನ್ನು ನೋಡಿಕೊಳ್ಳಬೇಕು ಎಂದು  ಅವರು ಸರಕಾರವನ್ನು ಒತ್ತಾಯಿಸಿದರು. 

ಬೆಲೆ ಏರಿಕೆ ಹಾಗೂ ಭ್ರಷ್ಟಾಚಾರದ ವಿಷಯಗಳನ್ನು ಜನರ ಮುಂದಿಟ್ಟು ಅಧಿಕಾರಕ್ಕೆ ಬಂದ ಪಕ್ಷದ ಸರಕಾರ ಇಂದು ಬೆಲೆ ಏರಿಕೆಯನ್ನು ಸಮರ್ಥಿಸುತ್ತಿದೆ. ಇಂತಹ ಲಜ್ಜೆಗೇಡಿ ಸರಕಾರವನ್ನು ದೇಶ ಹಿಂದೆಂದೂ ಕಂಡಿಲ್ಲ ಎಂದು ಕಿಡಿಕಾರಿದರು.

ಮತ್ತೋರ್ವ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಚಿಕ್ಕಮಗಳೂರಿನ ಟೀ ಕಾಫಿ ಪ್ಲಾಂಟೇಷನ್ ವರ್ಕರ್ಸ್ ಫೆಡರೇಶನ್‌ನ ಮುಖಂಡ ಬಿ‌.ಅಮ್ಜದ್ ಚಿಕ್ಕಮಗಳೂರು ಮಾತನಾಡಿ,  ಎಐಟಿಯುಸಿಯ ಹೋರಾಟದ ಪರಂಪರೆಯನ್ನು ಜಿಲ್ಲಾ ಸಮಿತಿಗಳು ಪರಿಣಾಮಕಾರಿಯಾಗಿ ಮುಂದುವರೆಸಬೇಕು. ದಾವಣಗೆರೆ ಜಿಲ್ಲೆಯು ಅನೇಕ ಹಿರಿಯ ಮತ್ತು ಅನುಭವಿ ಹೋರಾಟಗಾರರನ್ನು  ಹೊಂದಿರುವ ಜಿಲ್ಲೆ. ಅವರ ಮಾರ್ಗದರ್ಶನದಲ್ಲಿ ಹೊಸ ನಾಯಕತ್ವವು ಕಾರ್ಮಿಕರ ಹಕ್ಕಿಗಾಗಿ, ಸೌಲಭ್ಯಗಳಿಗಾಗಿ ದುಡಿಯಬೇಕು ಎಂದು ಆಶಯ ವ್ಯಕ್ತಪಡಿಸಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಎಐಟಿಯುಸಿ ಜಿಲ್ಲಾ ಖಜಾಂಚಿ ಆನಂದರಾಜ್, ಉದಾತ್ತವಾದ ಚಿಂತನೆಗಳು, ತತ್ವ ಸಿದ್ದಾಂತಗಳು, ಸಮರ್ಥ ನಾಯಕತ್ವವು ಯಾವುದೇ ಸಂಘಟನೆಯನ್ನು ಶಕ್ತಿಶಾಲಿಯಾಗಿ ಬೆಳೆಸಬಲ್ಲದು ಎಂದರು.

ಜಿಲ್ಲಾ ಸಮಿತಿಗೆ ಅಧ್ಯಕ್ಷರಾಗಿ ಆಯ್ಕೆಗೊಂಡ ಕೆ.ರಾಘವೇಂದ್ರ ನಾಯರಿ ಮತ್ತು ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಹೆಚ್.ಜಿ.ಉಮೇಶ್ ಅವರಗೆರೆ ಅವರುಗಳಿಗೆ ಎಐಟಿಯುಸಿ ಧ್ವಜವನ್ನು ಹಸ್ತಾಂತರಿಸುವ ಮೂಲಕ ಅಧಿಕಾರ ಹಸ್ತಾಂತರ ಮಾಡಲಾಯಿತು.

ನೂತನ ಅಧ್ಯಕ್ಷ ಕೆ.ರಾಘವೇಂದ್ರ ನಾಯರಿ ಮಾತನಾಡಿ, ಕಾರ್ಮಿಕರ ಹೋರಾಟದ ಇತಿಹಾಸ ದಲ್ಲಿ ದಾವಣಗೆರೆಗೆ ವಿಶೇಷವಾದ ಸ್ಥಾನವಿದೆ‌. ಕಾರ್ಮಿಕ ಮುಖಂಡರ ನಡುವೆ ಸಮನ್ವಯತೆ ಮೂಡಿಸುವುದರ ಮೂಲಕ  ಜಿಲ್ಲಾ ಮತ್ತು ತಾಲ್ಲೂಕು ಸಮಿತಿಗಳ ಪುನರ್ ರಚನೆ ಮಾಡಿ ಎಐಟಿಯುಸಿ ಸಂಘಟನೆಯನ್ನು ಬಲಿಷ್ಟವಾಗಿ ಕಟ್ಟುತ್ತೇವೆ ಎಂದು ಭರವಸೆ ನೀಡಿದರು.

ನೂತನ ಪ್ರಧಾನ ಕಾರ್ಯದರ್ಶಿ ಹೆಚ್.ಜಿ‌.ಉಮೇಶ್ ಮಾತನಾಡಿ,  ಕಾರ್ಮಿಕರಲ್ಲಿ ರಾಜಕೀಯ ಅರಿವು ಮೂಡಿಸಿ ಅವರನ್ನು ರಾಜಕೀಯ ಶಕ್ತಿಯಾಗಿ ಸಜ್ಜುಗೊಳಿಸುವ ಕೆಲಸವನ್ನು ಸವಾಲಾಗಿ ಸ್ವೀಕರಿಸಿ ದುಡಿಯುತ್ತೇನೆ ಎಂದು ತಿಳಿಸಿದರು.

ಆವರಗೆರೆ ಚಂದ್ರು, ಬಿ.ಆನಂದ ಮೂರ್ತಿ, ಎಮ್.ಬಿ.ಶಾರದಮ್ಮ, ವಿ‌.ಲಕ್ಷ್ಮಣ್, ಪಿ.ಕೆ.ಲಿಂಗರಾಜ್‌, ಪಾಲವ್ವನಹಳ್ಳಿ ಪ್ರಸನ್ನಕುಮಾರ್, ಧರ್ಮರಾಜ್, ಐರಣಿ ಚಂದ್ರು, ರಾಮಣ್ಣ, ಎಸ್.ಎಸ್‌.ಮಲ್ಲಮ್ಮ, ಸರೋಜಾ, ಕಾಳಮ್ಮ,  ರುದ್ರಮ್ಮ, ನೇತ್ರಾವತಿ, ಪಿ‌.ಷಣ್ಮುಖ ಸ್ವಾಮಿ, ರಂಗನಾಥ್, ರಮೇಶ್‌, ರಾಜೇಂದ್ರ ಬಂಗೇರ, ಶಿವಕುಮಾರ್ ಶೆಟ್ಟರ್, ಗೌಸ್ ಪೀರ್, ಮೊಹಮದ್ ರಫೀಕ್, ಕೆ.ವಿಶ್ವನಾಥ ಬಿಲ್ಲವ, ಆರ್.ಆಂಜನೇಯ, ಕಾಡಜ್ಜಿ ವೀರಪ್ಪ,  ಹೆಚ್.ಎಸ್.ತಿಪ್ಪೇಸ್ವಾಮಿ, ಎಂ.ಎಂ.ಸಿದ್ದಲಿಂಗಯ್ಯ, ಸಿ.ಪರಶುರಾಮ್, ಕೆ.ರವಿಶಂಕರ್, ಮಿರ್ಜಾ ಇಸ್ಮಾಯಿಲ್, ಪ್ರಕಾಶ್, ಕೃಷ್ಣಪ್ಪ, ಶೇಖರ್ ನಾಯ್ಕ್, ಸಾಮಿಲ್ ದಾದಾಪೀರ್, ಹೊನ್ನಾಳಿ ಪಯಾಜ್, ಈರಣ್ಣ, ಮಂಜುನಾಥ್ ಮತ್ತಿತರರು ಭಾಗವಹಿಸಿದ್ದರು.

error: Content is protected !!