ಗೌರವ ಡಾಕ್ಟರೇಟ್ ಜವಾಬ್ದಾರಿ ಹೆಚ್ಚಿಸಿದೆ

ದಾವಣಗೆರೆ ವಿಶ್ವವಿದ್ಯಾನಿಲಯದಲ್ಲಿ ಗುರುವಾರ ನಡೆದ ಎಂಟನೇ ಘಟಿಕೋತ್ಸವದಲ್ಲಿ ಸಂಸದ ಜಿ.ಎಂ. ಸಿದ್ದೇಶ್ವರ ಹಾಗೂ ರಾಜೀವ್ ಗಾಂಧಿ ವಿಶ್ವವಿದ್ಯಾನಿಲಯದ ಡಾ.ಎಂ.ಕೆ. ರಮೇಶ್ ಅವರು ಗೌರವ ಡಾಕ್ಟರೇಟ್ ಪಡೆದುಕೊಂಡರು.

ದಾವಣಗೆರೆ ವಿ.ವಿ.ಯ 8ನೇ ಘಟಿಕೋತ್ಸವದಲ್ಲಿ ಸಂಸದ ಜಿ.ಎಂ. ಸಿದ್ದೇಶ್ವರ

ದಾವಣಗೆರೆ, ಏ. 8 – ದಾವಣಗೆರೆ ವಿಶ್ವವಿದ್ಯಾನಿಲಯದಲ್ಲಿ ಗುರುವಾರ ನಡೆದ ಎಂಟನೇ ಘಟಿಕೋತ್ಸವದಲ್ಲಿ ಪದವಿ, ಪದಕ, ಎಂ.ಫಿಲ್ ಹಾಗೂ ಪಿಹೆಚ್.ಡಿ.ಗಳನ್ನು ಪ್ರದಾನ ಮಾಡಲಾಯಿತು. ಇದೇ ವೇಳೆ ಸಂಸದ ಜಿ.ಎಂ. ಸಿದ್ದೇಶ್ವರ ಹಾಗೂ ರಾಜೀವ್ ಗಾಂಧಿ ವಿಶ್ವವಿದ್ಯಾನಿಲಯದ ಡಾ.ಎಂ.ಕೆ. ರಮೇಶ್ ಅವರು ಗೌರವ ಡಾಕ್ಟರೇಟ್ ಪಡೆದುಕೊಂಡರು.

ಗೌರವ ಡಾಕ್ಟರೇಟ್ ಪಡೆದ ನಂತರ ಮಾತನಾಡಿದ ಸಂಸದ ಜಿ.ಎಂ. ಸಿದ್ದೇಶ್ವರ ಸಾಮಾಜಿಕ, ಶೈಕ್ಷಣಿಕ, ಔದ್ಯಮಿಕ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಮಾಡಿರುವ ಸಾಧನೆ ಪರಿಗಣಿಸಿ ದಾವಣಗೆರೆ ವಿಶ್ವವಿದ್ಯಾನಿಲಯ ಗೌರವ ಡಾಕ್ಟರೇಟ್ ನೀಡಿರುವುದು ಸಂತೋಷ ತಂದಿದೆ. ಇದರಿಂದ ಜವಾಬ್ದಾರಿ ಹೆಚ್ಚಾಗಿದೆ ಎಂದರು.

ಮುಂಬರುವ ದಿನಗಳಲ್ಲಿ ವಿಶ್ವವಿದ್ಯಾನಿಲಯಕ್ಕೆ ಕೇಂದ್ರದಿಂದ ಬರುವ ಅನುದಾನ ಹಾಗೂ ಯೋಜನೆ ತರುವುದೂ ಸೇರಿದಂತೆ ಜಿಲ್ಲೆಯ ಅಭಿವೃದ್ಧಿಗೆ ಹೆಚ್ಚಿನ ಕೆಲಸ ಮಾಡುತ್ತೇನೆ. ಜನಸೇವಕನಾಗಿ ಕೆಲಸ ಮಾಡಲು ಸದಾ ಸಿದ್ಧನಿದ್ದೇನೆ ಎಂದರು.

ವಿಶ್ವವಿದ್ಯಾನಿಲಯದ ಪರೀಕ್ಷಾಂಗ ಕುಲಸಚಿವರಾದ ಪ್ರೊ. ಹೆಚ್.ಎಸ್. ಅನಿತ ಅವರು ತಮಗೆ ಡಾಕ್ಟರೇಟ್ ನೀಡುವುದಾಗಿ ಹೇಳಿದಾಗ ಆಶ್ಚರ್ಯ ಹಾಗೂ ಸ್ವಲ್ಪ ಸಂಕೋಚವೂ ಆಯಿತು. ಸಾಮಾಜಿಕ, ಶೈಕ್ಷಣಿಕ ಸಾಧನೆ ಹಾಗೂ ನಾಲ್ಕು ಬಾರಿ ಸಂಸದರಾಗಿ ಪ್ರತಿಯೊಬ್ಬರ ಜೊತೆ ಗೌರವಯುತವಾಗಿ ನಡೆದುಕೊಳ್ಳುತ್ತೀರಿ. ಎಲ್ಲ ಅಧಿಕಾರಿಗಳ ಜೊತೆ ವಿಶ್ವಾಸದಿಂದ ಇರುತ್ತೀರಿ. ಎಲ್ಲರ ಒಡನಾಡಿಯಾಗಿ ದಾವಣಗೆರೆಗೆ ಒಳ್ಳೆಯ ಕೆಲಸ ಮಾಡುತ್ತಿರುವುದನ್ನು ಗುರುತಿಸಿ ಡಾಕ್ಟರೇಟ್ ಪದವಿ ನೀಡುತ್ತಿರುವುದಾಗಿ ಅವರು ತಿಳಿಸಿದರು. ಆಗ ನಾನು ಒಂದಿಬ್ಬರು ಮಿತ್ರರ ಹತ್ತಿರ ಡಾಕ್ಟರೇಟ್ ತೆಗೆದುಕೊಳ್ಳಬೇಕೋ? ಬೇಡವೋ? ಎಂದು ವಿಚಾರಿಸಿದೆ. ಆಗ ಅವರು, ಯಾರಾರೋ ದುಡ್ಡು ಕೊಟ್ಟು, ಎಲ್ಲೆಲ್ಲೋ ಡಾಕ್ಟರೇಟ್ ಮಾಡಿಕೊಂಡು ಬರುತ್ತಾರೆ. ಇದು ರಾಜ್ಯಪಾಲರು ವಿಶ್ವವಿದ್ಯಾನಿಲಯದ ಮೂಲಕ ಕೊಡುವುದು. ದಯವಿಟ್ಟು ತೆಗೆದುಕೊಳ್ಳಿ ಎಂದರು ಎಂದು ಸಿದ್ದೇಶ್ವರ ಹೇಳಿದರು.

ಜಿಲ್ಲಾಧಿಕಾರಿ (ಮಹಾಂತೇಶ್ ಬೀಳಗಿ) ಹಾಗೂ ಪೊಲೀಸ್ ವರಿಷ್ಠಾಧಿಕಾರಿ (ಹನುಮಂತರಾಯ) ಅವರ ಬಳಿಯೂ ಈ ಬಗ್ಗೆ ಕೇಳಿದೆ. ಗೌರವಯುತವಾದ ಡಾಕ್ಟರೇಟ್ ತೆಗೆದುಕೊಳ್ಳಬೇಕು ಎಂದು ಅವರೂ ಸಲಹೆ ಕೊಟ್ಟರು. ಉಪಕುಲಪತಿಗಳ ಜೊತೆ ಚರ್ಚಿಸಿ, ಗೌರವ ಡಾಕ್ಟರೇಟ್ ಪಡೆಯಲು ನಿರ್ಧರಿಸಿದೆ ಎಂದವರು ಹೇಳಿದರು.

ಇವತ್ತು ನನ್ನ ಜೀವನದ ಸಂತೋಷದ ವಿಷಯ. ನಾಲ್ಕು ಬಾರಿ ಲೋಕಸಭಾ ಸದಸ್ಯನಾಗಿ ಜನಸೇವೆ ಮಾಡಿದ್ದೇನೆ. ಮೂರು ಸಾವಿರ ಜನರಿಗೆ ಉದ್ಯೋಗ ಕೊಟ್ಟಿದ್ದೇನೆ. ಕೈಗಾರಿಕೆ, ವ್ಯಾಪಾರ ಹಾಗೂ ಶಿಕ್ಷಣ ಕ್ಷೇತ್ರದಲ್ಲಿ ಪ್ರಗತಿ ತಂದಿದ್ದೇನೆ. ಈಗ ಡಾಕ್ಟರೇಟ್ ಮೂಲಕ ಇನ್ನೂ ಹೆಚ್ಚು ಜವಾಬ್ದಾರಿ ಬಂದಿದೆ ಎಂದರು.

ಈ ಸಂದರ್ಭದಲ್ಲಿ ಘಟಿಕೋತ್ಸವ ಭಾಷಣ ಮಾಡಿದ ಬೆಂಗಳೂರಿನ ಅಕಾಡೆಮಿ ಫಾರ್ ಕ್ರಿಯೇಟಿವ್ ಟೀಚಿಂಗ್ ಅಧ್ಯಕ್ಷ ಡಾ. ಗುರುರಾಜ ಕರ್ಜಗಿ, ಹಣ, ಆಸ್ತಿ, ದೇಹ ಬಲ ಇತ್ಯಾದಿಗಳನ್ನು ಗಳಿಸುವುದು ಯಶಸ್ಸಲ್ಲ. ಇನ್ನೊಬ್ಬರ ಹೃದಯದಲ್ಲಿ ನೆಲೆಗೊಳ್ಳುವುದು ದೊಡ್ಡ ಸಾಧನೆ ಎಂದರು.

ನಾವು ಪಡೆಯುವುದಕ್ಕಿಂತ ಬೇರೆಯವರಿಗೆ ಕೊಡುವುದು ಹೆಚ್ಚು ಸಂತೋಷ ತರುತ್ತದೆ. ದುಃಖದಲ್ಲಿರುವವರಿಗೆ ಸಾಂತ್ವನ ಹೇಳುವುದು, ಅನ್ಯರ ಸಾಧನೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುವುದು ಹಾಗೂ ತನ್ನ ಕೆಳಗೆ ಕೆಲಸ ಮಾಡುವವರಿಗೆ ಉತ್ತೇಜನ ನೀಡುವ ಗುಣಗಳನ್ನು ಬೆಳೆಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಕುಲಪತಿ ಪ್ರೊ. ಎಸ್. ವಿ. ಹಲಸೆ ಮಾತನಾಡಿ, ಕೊರೊನಾ ಸಂಕಷ್ಟದ ಸಮಯದಲ್ಲೇ ದಾವಣಗೆರೆ ವಿ.ವಿ. ಸುರಕ್ಷಾ ಮಾರ್ಗಸೂಚಿ ಪಾಲಿಸಿ ಮೊದಲು ಆನ್‌ಲೈನ್‌ ತರಗತಿಗಳನ್ನು ನಡೆಸಿ ನಂತರ ನಿಯಮಿತ ತರಗತಿ ನಡೆಸಿದೆ. ಪರೀಕ್ಷೆಯ ಎರಡೇ ಗಂಟೆಗಳಲ್ಲಿ ಫಲಿತಾಂಶ ನೀಡಿರುವುದು ಉನ್ನತ ಶಿಕ್ಷಣ ಇಲಾಖೆಯಿಂದ ವಿಶೇಷ ಪ್ರಶಂಸೆಗೆ ಪಾತ್ರವಾಗಿದೆ ಎಂದರು.

ಈ ಸಂದರ್ಭದಲ್ಲಿ ರಾಜೀವ್ ಗಾಂಧಿ ಆರೋಗ್ಯ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ಡಾ.ಎಂ.ಕೆ. ರಮೇಶ್ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಯಿತು.

ಪರೀಕ್ಷಾಂಗ ಕುಲಸಚಿವೆ ಪ್ರೊ. ಹೆಚ್.ಎಸ್. ಅನಿತ, ಕುಲಸಚಿವೆ ಪ್ರೊ. ಗಾಯತ್ರಿ ದೇವರಾಜ, ಸಿಂಡಿಕೇಟ್ ಸದಸ್ಯರು, ಅಕಾಡೆಮಿಕ್ ಕೌನ್ಸಿಲ್ ಸದಸ್ಯರು, ಪದಕದ ದಾನಿಗಳು ಉಪಸ್ಥಿತರಿದ್ದರು. 

ಭೂಮಿಕ ಎಸ್. ಹರಿಜನ್ ಪ್ರಾರ್ಥಿಸಿದರು. ಸಹಾಯಕ ಪ್ರಾಧ್ಯಾಪಕರಾದ ಸ್ವಾಮಿ ಮತ್ತು ಅಶ್ವನಿ ಯಳ್ನಾಯಕ್ ನಿರೂಪಿಸಿದರು.

error: Content is protected !!