ವಿವಾಹದಲ್ಲಿ ವ್ಯವಹಾರ ಬಂದರೆ ವಿವಾದ

ಸಂಸಾರ ಸದ್ಗತಿಗೆ ಸೋಪಾನ : ಮುರುಘಾ ಶರಣರು ಹಿತನುಡಿ

ಚಿತ್ರದುರ್ಗ, ಏ. 5 – ಸಂಸಾರ ಸದ್ಗತಿಗೆ ಸೋಪಾನ. ವಿವಾಹದಲ್ಲಿ ವ್ಯವಹಾರ ಬಂದರೆ ವಿವಾದವಾಗುತ್ತದೆ ಎಂದು ಡಾ. ಶಿವಮೂರ್ತಿ ಮುರುಘಾ ಶರಣರು ನುಡಿದರು.

ನಗರದ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದಲ್ಲಿ ಎಸ್.ಜೆ.ಎಂ. ಶಾಂತಿ ಮತ್ತು ಪ್ರಗತಿ ಫೌಂಡೇಶನ್ ಸಹಯೋಗದಲ್ಲಿಂದು ನಡೆದ ಮೂವತ್ತೊಂದನೇ ವರ್ಷ ನಾಲ್ಕನೇ ತಿಂಗಳ ಸಾಮೂಹಿಕ ಕಲ್ಯಾಣ ಮಹೋತ್ಸವದ ಅಧ್ಯಕ್ಷತೆ ವಹಿಸಿ ಶ್ರೀಗಳು ಮಾತನಾಡಿದರು.

ಸಂಸಾರ ಸದಾ ಸಂಘರ್ಷದ ಕೇಂದ್ರವಾಗಬಾರದು. ಬದುಕನ್ನು ಮುತ್ತಾಗಿಸುವ ಮಾತುಗಳನ್ನು, ಬದುಕನ್ನು ಉದ್ಧರಿಸುವ ಮಾತುಗಳನ್ನು ಕೇಳಬೇಕು. ಹೃದಯವನ್ನು ಹಗುರವಾಗಿಸುವ ನುಡಿಗಳು ಬೇಕು. ಪ್ರೀತಿ ಪ್ರೇಮ ಹೆಚ್ಚಾಗುವ ಮಾತುಗಳು ಬೇಕು. ತನ್ಮೂಲಕ ಸಂಸಾರ ಅಭಿವೃದ್ಧಿಯತ್ತ ಸಾಗಬೇಕು. ಹೆಣ್ಣು-ಗಂಡು ಸಮ ಎಂಬ ಸಿದ್ಧಾಂತವನ್ನು ಬಸವಣ್ಣನವರು ಹೇಳಿದರು. ಬುದ್ಧ, ಬಸವ, ಪೈಗಂಬರ್, ಬಾಬಾಸಾಹೇಬ ಅಂಬೇಡ್ಕರ್ ಇವರುಗಳು ಸಮಾನತೆಗಾಗಿ ಹೋರಾಡಿದರು. ಸತಿಪತಿಗಳು ಸತ್ಕಾರ್ಯಗಳನ್ನು ಮಾಡಬೇಕೆಂದರು.

ಚನ್ನಗಿರಿ ಹಾಲಸ್ವಾಮಿ ವಿರಕ್ತಮಠದ ಡಾ. ಬಸವ ಜಯಚಂದ್ರ ಸ್ವಾಮಿಗಳು ಮಾತನಾಡುತ್ತಾ, ಇಂದಿನ ದಿನಮಾನಗಳಲ್ಲಿ ಒಂದು ಮದುವೆ ಮಾಡಲು ಸಾಕಷ್ಟು ಸಮಸ್ಯೆಗಳು ಎದುರಾಗುತ್ತವೆ. ಆದರೆ ಎಷ್ಟೇ ಜನ ಬಂದರೂ ಶ್ರೀಮಠದಲ್ಲಿ ವಿವಾಹ ನಡೆಯುತ್ತದೆ. ಇದು ನಮ್ಮೆಲ್ಲರ ಕಲ್ಯಾಣ. ಶ್ರೀಮಠದಲ್ಲಿ ಜ್ಞಾನ ದಾಸೋಹ, ಅನ್ನ ದಾಸೋಹ ನಿರಂತರವಾಗಿ ನಡೆಯುತ್ತಿದೆ. ಶ್ರೀಗಳು ಇಲ್ಲದವರಿಗೆ, ಅಳುವವರಿಗೆ ಕಣ್ಣೀರು ಒರೆಸಿದರು. ಭಕ್ತಿ ಇಲ್ಲ ಎಂದರೆ ಶ್ರದ್ಧೆ ಬರಲು ಸಾಧ್ಯವಿಲ್ಲ. ಹಾಗಾಗಿ ನಾವು ಸಮಾಜಮುಖಿ ಕಾರ್ಯಗಳತ್ತ ಮುಖ ಮಾಡಬೇಕೆಂದರು.

ದಾವಣಗೆರೆ ತಹಶೀಲ್ದಾರ್ ಬಿ.ಎನ್. ಗಿರೀಶ್ ಮಾತನಾಡಿ, ಶ್ರೀಗಳ ಮಾರ್ಗದರ್ಶನದಲ್ಲಿ ಕಲ್ಯಾಣ ಮಹೋತ್ಸವವಾದರೆ ಯಾವುದೇ ತೊಂದರೆಯಾಗು ವುದಿಲ್ಲ. ಅದ್ಧೂರಿಯಾಗಿ ಮದುವೆಯಾದ ಅನೇಕರು ಇಂದು ವಿಚ್ಛೇದನಕ್ಕೆ ಒಳಗಾಗುತ್ತಿದ್ದಾರೆ. ನಾನು ಹೆಚ್ಚು ಎನ್ನುವ ಪರಿಕಲ್ಪನೆಯಿಂದ ಅನೇಕ ಸಂಸಾರಗಳು ಹಾಳಾಗುತ್ತಿವೆ. ಹಾಗಾಗಿ ಬಾಂಧವ್ಯ ಬೆಸುಗೆಯಾಗಬೇಕು. ಪ್ರತಿಯೊಬ್ಬರಿಗೂ ಸಂತೋಷವಾಗಿರಬೇಕೆಂದು ಇರುತ್ತದೆ. ಹಾಗಿದ್ದರೆ ನಾವು ಬೇರೆಯವರ ಬಗ್ಗೆ ಮಾತನಾಡುವುದನ್ನು ಬಿಡಬೇಕು. ನಾವು ಆರೋಗ್ಯವಾಗಿದ್ದೇವೆ ಎನ್ನುವುದೇ ನಮ್ಮ ಶ್ರೀಮಂತಿಕೆ. ಬಡವರಾಗಿ ಹುಟ್ಟಿದರೆ ತಪ್ಪಿಲ್ಲ. ಬಡವರಾಗಿ ಸತ್ತರೆ ತಪ್ಪು. ಇಲ್ಲಿ ಬಹಳಷ್ಟು ಜನ ರೈತಾಪಿ ವರ್ಗದವರಿದ್ದೀರಿ. ರೈತ ಎಂದರೆ ದುಡಿಮೆ. ನೀವುಗಳು ದುಡಿದರೆ ನಾವು ತಿನ್ನುವುದು. ಒಂದು ಕುಟುಂಬ ಎಂದರೆ ಗಂಡ-ಹೆಂಡತಿ ಮಾತ್ರವಲ್ಲ. ಅಜ್ಜ-ಅಜ್ಜಿ, ಅಪ್ಪ-ಅಮ್ಮ-ಮಕ್ಕಳು ಎಲ್ಲರೂ ಸೇರಿ ಕುಟುಂಬವಾಗಿದೆ ಎಂದು ತಿಳಿಸಿದರು.

ಚಿತ್ರದುರ್ಗ ನಗರಸಭೆ ಅಧ್ಯಕ್ಷೆ ಶ್ರೀಮತಿ ತಿಪ್ಪಮ್ಮ ಬಿ.ವೆಂಕಟೇಶ್ ವೇದಿಕೆಯಲ್ಲಿದ್ದರು. ಇದೇ ಸಂದರ್ಭದಲ್ಲಿ 19 ಜೋಡಿಗಳ ವಿವಾಹ ನೆರವೇರಿತು.

ಛಲವಾದಿ ಗುರುಪೀಠದ ಶ್ರೀ ಬಸವ ನಾಗಿದೇವ ಸ್ವಾಮಿಗಳು, ಎಸ್.ಜೆ.ಎಂ. ವಿದ್ಯಾಪೀಠದ ಕಾರ್ಯದರ್ಶಿ ಎ.ಜೆ.ಪರಮಶಿವಯ್ಯ, ಕಾರ್ಯಕಾರಿ ಮಂಡಳಿ ಸದಸ್ಯ ಎಂ.ಟಿ. ಮಲ್ಲಿಕಾರ್ಜುನ ಸ್ವಾಮಿ, ಗುತ್ತಿನಾಡು ಪ್ರಕಾಶ್, ದಾಸೋಹಿಗಳಾದ ಶ್ರೀಮತಿ ಯಂಗಮ್ಮ, ಎಂ.ಆರ್. ಗೋವಿಂದರೆಡ್ಡಿ ದೊಡ್ಡಸಿದ್ದವ್ವನಹಳ್ಖಿ ಮೊದಲಾದವರಿದ್ದರು.

ಜಮುರಾ ಕಲಾವಿದರು ವಚನ ಪ್ರಾರ್ಥನೆ ನಡೆಸಿಕೊಟ್ಟರು. ವೀರಭದ್ರಪ್ಪ ಸ್ವಾಗತಿಸಿದರು. ಜ್ಞಾನಮೂರ್ತಿ ನಿರೂಪಿಸಿದರು.

error: Content is protected !!