ಕಲಾವಿದರ ಉಳಿಸುವ ಪ್ರಯತ್ನಕ್ಕೆ ಸರ್ಕಾರ ಮುಂದಾಗಲಿ

ವಿಜ್ಞಾನ ಸಂವಹನ ಕಾರ್ಯಾಗಾರದ ಸಮಾರೋಪದಲ್ಲಿ ಡಾ. ಹೆಚ್. ವಿಶ್ವನಾಥ್‌ ಆಶಯ

ದಾವಣಗೆರೆ, ಏ.4- ಕಾರ್ಯಾಗಾರಗಳ ಮುಖೇನ ಕಲೆ ಮತ್ತು ಕಲಾವಿದರ ಉಳಿಸುವ ಪ್ರಯತ್ನಕ್ಕೆ ಸರ್ಕಾರ ಮುಂದಾಗಬೇಕು ಎಂದು ದಾವಣಗೆರೆ ವಿವಿಯ ಕನ್ನಡ ಅಧ್ಯಯನ ವಿಭಾಗದ ಸಹ ಪ್ರಾಧ್ಯಾಪಕ ಡಾ. ಹೆಚ್. ವಿಶ್ವನಾಥ್‌ ಆಶಿಸಿದರು.

ಅವರು, ಇಂದು ಮಧ್ಯಾಹ್ನ ನಗರದ ಬಿಇಎ ಶಿಕ್ಷಣ ಮಹಾವಿದ್ಯಾನಿಲಯದಲ್ಲಿ ವಿಜಾನ ಮತ್ತು ತಂತ್ರಜಾನ ಇಲಾಖೆ, ರಾಷ್ಟ್ರೀಯ ವಿಜ್ಞಾನ ಮತ್ತು ತಂತ್ರಜಾನ ಸಂವಹನ ಮಂಡಳಿ ಪ್ರಾಯೋಜಕತ್ವದಲ್ಲಿ ಬೆಳಗಾವಿ ವಿಕಸನ ಕೇಂದ್ರ, ದಾವಣಗೆರೆ ವಿಜಾನ ಕೇಂದ್ರದ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ಮೂರು ದಿನಗಳ ಗೀ ಗೀ ಪದ ಮತ್ತು ಜಾನಪದ ಮಾಧ್ಯ ಮದ ಮೂಲಕ ವಿಜ್ಞಾನ ಸಂವಹನ ಕಾರ್ಯಾ ಗಾರದ ಸಮಾರೋಪದಲ್ಲಿ ಮಾತನಾಡಿದರು. 

ಪ್ರಸ್ತುತ ಚರ್ಮ ವಾದ್ಯ, ದೊಡ್ಡಾಟ, ಸಣ್ಣಾಟ, ಬಯಲಾಟ, ಕಂಸಾಳೆ, ತೊಗಲು ಗೊಂಬೆ ಯಾಟ, ಕೋಲಾಟ ಸೇರಿದಂತೆ ವಿವಿಧ ಜಾನಪದ ಕಲಾ ಪ್ರಕಾರಣಗಳು ಅಳಿವಿನಂಚಿಗೆ ಸಾಗುತ್ತಿವೆ. ಜೊತೆಯಲ್ಲೇ ಇವುಗಳನ್ನು ನಂಬಿ ಬದುಕು ಕಟ್ಟಿಕೊಳ್ಳುತ್ತಿರುವ ಕಲಾವಿದರ ಬದುಕು ಸಂಕ ಷ್ಟಕ್ಕೆ ಸಿಲುಕಿದ್ದು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಇದ್ದರೂ ಸಹ ಜಾನಪದ ಕಲೆ, ರಂಗ ಭೂಮಿ ಮತ್ತು ಕಲಾವಿದರ ಬದುಕು ನೋವಿ ನಿಂದಲೇ ಸಾಗುತ್ತಿದೆ ಎಂದು ವಿಷಾಧಿಸಿದರು. 

ಕಲೆಗಳ ಪ್ರದರ್ಶನಕ್ಕೆ ಸೂಕ್ತ ವೇದಿಕೆ ಸಿಗದೇ ಬಹಳಷ್ಟು ಕಲಾವಿದರು ಒಂದು ಹೊತ್ತಿನ ಊಟಕ್ಕೂ ಪರದಾಡುವಂತಹ ಸ್ಥಿತಿ ನಮ್ಮೆದುರಿಗೆ ಇದೆ. ಸನ್ಮಾನಿಸಲು ವ್ಯಯಿಸುವ ಸಾವಿರಾರು ರೂ.ಗಳ ಖರ್ಚನ್ನು ತಮಗೆ ಆರ್ಥಿಕ ನೆರವಾಗಿ ನೀಡಿದರೆ ಬದುಕಿಗೆ ಆಸರೆಯಾದೀತು ಎಂದು ಕೆಲ ಕಲಾವಿದರು ಬಯಸುತ್ತಾರೆ. ಹಾಗಾಗಿ ಗೌರವ ಧನವಾಗಿ ನೀಡುವ ಮುಖೇನ ಗೌರವಿಸಬೇಕು ಎಂದು ಅಭಿಪ್ರಾಯಪಟ್ಟರು.

ವಿಜ್ಞಾನ ಮತ್ತು ಜಾನಪದ ಪರಿಷತ್ ಕಲಾವಿದರನ್ನು ಗುರುತಿಸಿ, ಅವರಲ್ಲಿನ ಪ್ರತಿಭೆ ಅನಾವರಣಕ್ಕೆ ವೇದಿಕೆ ಕಲ್ಪಿಸಿಕೊಡಬೇಕು. ಜಾನಪದ ಕಲಾ ಪ್ರಕಾರಗಳು ಮತ್ತು ಕಲಾವಿದರ ಕುರಿತಾದ ಕಾರ್ಯಾಗಾರಗಳನ್ನು ಆಯೋಜಿಸುವ ಮೂಲಕ ಕಲೆ ಉಳಿಸಿ, ಕಲಾವಿದರ ಬದುಕನ್ನು ಹಸನು ಮಾಡುವ ಪ್ರಯತ್ನ ಮಾಡಬೇಕು ಎಂದು ತಿಳಿಸಿದರು.

ಎಷ್ಟೇ ಬುದ್ಧಿವಂತರಾದರೂ ಮಾನವೀಯ ಮೌಲ್ಯಗಳಿದ್ದಲ್ಲಿ ಮಾತ್ರ ಮನುಷ್ಯನಾಗಿರಲು ಸಾಧ್ಯ. ಕೇವಲ ಪುಸ್ತಕದ ಹುಳುಗಳಾಗಿಸದೇ ಭವಿಷ್ಯವನ್ನು ರೂಪಿಸಿಕೊಳ್ಳುವ ಸಾಮರ್ಥ್ಯ ಬೆಳೆಸಬೇಕು. ಪರಿಪೂರ್ಣ ವಿದ್ಯಾರ್ಥಿಯನ್ನಾಗಿ ರೂಪಿಸಬೇಕು ಎಂದು ಪ್ರಶಿಕ್ಷಣಾರ್ಥಿಗಳಿಗೆ ಕಿವಿಮಾತು ಹೇಳಿದರು.

ವಿದ್ಯೆ ಸಾಧಕನ ಸ್ವತ್ತು. ನಮ್ಮ ಸುತ್ತಮುತ್ತಲಿನಲ್ಲಿರುವ ಸಾಧಕರನ್ನು ಗುರುತಿಸಬೇಕು. ಬಾಲ ವಿಜ್ಞಾನಿ ಯೋಗಪ್ರಿಯ ವಿಜ್ಞಾನ ಕ್ಷೇತ್ರದಲ್ಲಿ ದೊಡ್ಡ ಸಾಧನೆ ಮಾಡಿದ್ದಾರೆ. ಇಂತಹ ಸ್ಥಳೀಯ ಪ್ರತಿಭೆಗಳಿಗೆ ಪ್ರೋತ್ಸಾಹಿಸುವ ಕೆಲಸ ಮಾಡಬೇಕು ಎಂದರು.

ಐರಣಿ ಚಂದ್ರು ಮತ್ತು ತಂಡ ಜಾನಪದ, ಪರಿಸರ, ವಿಜಾನ ಗೀತೆಗಳು ಮತ್ತು ಗೀ ಗೀ ಪದಗಳನ್ನು ಹಾಡಿದರು. ಬಿಇಎ ಶಿಕ್ಷಣ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಕೆ. ಮುರುಗೇಶ್ ಅಧ್ಯಕ್ಷತೆ ವಹಿಸಿದ್ದರು. ಹಿರೇಕೆರೂರು ಕ್ಷೇತ್ರ ಸಮನ್ವಯ ಅಧಿಕಾರಿ ಜಗದೀಶ್ ಬಳೆಗಾರ್, ಜಾನಪದ ಸಾಹಿತಿ ವೀರಣ್ಣ ಅಂಗಡಿ, ಸಂಜಯ್ ಮಗದುಮ್, ಬಾಲ ವಿಜ್ಞಾನಿ ಯೋಗಪ್ರಿಯ, ಟಿ.ಎಂ. ನಿಶಾಂತ್ ಸೇರಿದಂತೆ ಇತರರು ಇದ್ದರು. ಕೆ. ಬಾನಪ್ಪ ಸ್ವಾಗತಿಸಿದರು. ದಾವಣಗೆರೆ ವಿಜ್ಞಾನ ಕೇಂದ್ರದ ಕಾರ್ಯಕ್ರಮ ಸಂಯೋಜಕ ಎಂ. ಗುರುಸಿದ್ಧಸ್ವಾಮಿ ವಂದಿಸಿದರು.

error: Content is protected !!