ಯುವಜನತೆಯಲ್ಲಿ ಸ್ವಾತಂತ್ರ್ಯದ ಕಿಚ್ಚು ಹೆಚ್ಚಲಿ

ದಾವಣಗೆರೆ, ಏ.2- ಯುವಜನತೆಯಲ್ಲಿ ಸ್ವಾತಂತ್ರ್ಯೋತ್ಸವದ ಹುರುಪು, ಹುಮ್ಮಸ್ಸು ಚೈತನ್ಯ ಕಡಿಮೆಯಾಗುತ್ತಿದೆ. ನಮಗೆ ಸ್ವಾತಂತ್ರ್ಯ ಹೇಗೆ ಬಂತು ಎಂದು ತಿಳಿಯುವ ವ್ಯವಧಾನವೂ ಅವರಿಗಿಲ್ಲವಾಗಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಆತಂಕ ವ್ಯಕ್ತಪಡಿಸಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಮಹಾನಗರ ಪಾಲಿಕೆ ಆವರಣದಲ್ಲಿ ಆಯೋಜಿಸಲಾಗಿದ್ದ `ಸ್ವಾತಂತ್ರ್ಯದ ಅಮೃತ ಮಹೋತ್ಸವ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. 

ಪರೀಕ್ಷೆಯಲ್ಲಿ ಅಂಕಗಳಿಗಾಗಿ ಮಾತ್ರ ಸ್ವಾತಂತ್ರ್ಯೋತ್ಸವದ ಪ್ರಬಂಧ ಬರೆಯುವ ಮಕ್ಕಳಲ್ಲಿ ಅದರ ಇತಿಹಾಸ ತಿಳಿಯುವ ಕಿಚ್ಚು ರೊಚ್ಚು ಕಡಿಮೆಯಾಗಿರುವುದನ್ನು ಗಮನಿಸಿ, 75 ವಾರಗಳ ಕಾಲ ಇಂತಹ ಕಾರ್ಯಕ್ರಮ ನಡೆಸಿದರೆ ಮತ್ತೆ ದೇಶಪ್ರೇಮ ಪುಟಿದೆದ್ದು, ದೇಶವನ್ನು ಸಾರ್ವಭೌಮ ರಾಷ್ಟ್ರವನ್ನಾಗಿ ಹೊರ ಹೊಮ್ಮಿಸಬೇಕೆಂಬ ಕನಸಿನಿಂದ ಪ್ರಧಾನಿ ನರೇಂದ್ರ ಮೋದಿಯವರು ಇಂತಹ ಕಾರ್ಯಕ್ರಮಕ್ಕೆ ಮುಂದಾಗಿದ್ದಾರೆ ಎಂದು ಹೇಳಿದರು.

ನಾವು ಚಿಕ್ಕವರಿದ್ದಾಗ ಸ್ವಾತಂತ್ರ್ಯೋತ್ಸವದಲ್ಲಿ ಪಾಲ್ಗೊಂಡವರ ಮಾತುಗಳನ್ನು ಕೇಳುವ ಭಾಗ್ಯ ನಮಗಿತ್ತು. ಆದರೆ ಇಂದಿನ ಮಕ್ಕಳಿಗೆ ಆ ಭಾಗ್ಯ ದೊರೆತಿಲ್ಲ. ನಮಗೆ ಸ್ವಾತಂತ್ರ್ಯ ಸುಲಭವಾಗಿ ಸಿಕ್ಕಿಲ್ಲ. ಬಹಳ ಬೆಲೆ ತೆತ್ತು ಪಡೆದಿದ್ದೇವೆ. ಇದನ್ನು ಮಕ್ಕಳು ಅರಿಯಬೇಕು. ಇಂತಹ ಸ್ವಾತಂತ್ರ್ಯವನ್ನು ಹೇಗೆ ಬಳಸಿಕೊಳ್ಳಬೇಕೆಂಬ ಬಗ್ಗೆ ಚಿಂತಿಸಬೇಕು ಎಂದರು.

ಅನೇಕರು ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ್ದಾರೆ. ಅಂತಹವರ ಸ್ಮರಣೆ ಮಾಡುತ್ತಾ, ಇಂದಿನ ಯುವ ಜನತೆಗೆ ಸ್ವಾತಂತ್ರ್ಯದ ಕಿಮ್ಮತ್ತು ತಿಳಿಸುವುದು ಇಂತಹ ಕಾರ್ಯಕ್ರಮಗಳಿಂದಾಗಬೇಕು.  75 ವಾರಗಳ ಈ ಕಾರ್ಯಕ್ರಮದ ಆರಂಭ ಸರಳವಾಗಿ ನಡೆದರೂ, ಮುಂದಿನ ದಿನಗಳಲ್ಲಿ ಎಲ್ಲಾ ಸಂಘ-ಸಂಸ್ಥೆಗಳು, ಸಾರ್ವಜನಿಕರು ಕೈ ಜೋಡಿಸಿ ಕಾರ್ಯಕ್ರಮಕ್ಕೆ ಅಭೂತಪೂರ್ವ ಯಶಸ್ಸು ತಂದುಕೊಡುವ ಆಶಯ ವ್ಯಕ್ತಪಡಿಸಿದರು.

ಜಿ.ಪಂ. ಸಿಇಒ ಡಾ. ವಿಜಯ ಮಹಾಂತೇಶ ದಾನಮ್ಮನವರ್ ಮಾತನಾಡುತ್ತಾ, ಇತಿಹಾಸ ಅರಿಯದವ ಇತಿಹಾಸ ಸೃಷ್ಟಿಸಲಾರ ಎಂಬ ಮಾತಿನಂತೆ ನಾವು ಏನಾದರು ಸಾಧನೆ ಮಾಡಬೇಕಾದರೆ ಮೊದಲು ಇತಿಹಾಸ ತಿಳಿಯುವುದು ಅಗತ್ಯ ಎಂದರು.

ಭಾರತ ಇಂದು ವಿಶ್ವವೇ ತನ್ನತ್ತ ತಿರುಗಿ ನೋಡುವ ಸಾಧನೆ ಮಾಡಿದ್ದರೂ ಸಹ, ಬಡತನ, ಅನಕ್ಷರತೆ, ನಿರುದ್ಯೋಗದಂತಹ ಪಿಡುಗುಗಳು ಇಂದಿಗೂ ದೇಶವನ್ನು ಕಾಡುತ್ತಿವೆ. ತಮ್ಮ ಪ್ರಾಣವನ್ನೇ ತ್ಯಾಗ ಮಾಡಿ ತಂದು ಕೊಟ್ಟ ಸ್ವಾತಂತ್ರ್ಯವನ್ನು ಉಳಿಸಿಕೊಂಡು ದೇಶವನ್ನು ಮತ್ತಷ್ಟು ಪ್ರಗತಿಯತ್ತ ಕೊಂಡೊಯ್ಯಲು ಪ್ರತಿಯೊಬ್ಬರೂ ಶ್ರಮಿಸಬೇಕಿದೆ ಎಂದರು.

ರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ಪಾಲಿಕೆ ಮೇಯರ್ ಎಸ್.ಟಿ. ವೀರೇಶ್ ಅಧ್ಯಕ್ಷತೆ ವಹಿಸಿದ್ದರು. ಪಾಲಿಕೆ ಆಯುಕ್ತ ವಿಶ್ವನಾಥ್ ಮುದಜ್ಜಿ ಸ್ವಾಗತಿಸಿದರು. ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಎಲ್.ಡಿ.ಗೋಣಪ್ಪ, ನಗರ ಯೋಜನೆ ಸ್ಥಾಯಿ ಸಮಿತಿ ಅಧ್ಯಕ್ಷೆ ಉಮಾ ಪ್ರಕಾಶ್, ಸೋಗಿ ಶಾಂತಕುಮಾರ್, ಉಪವಿಭಾಗಾಧಿಕಾರಿ ಮಮತ ಹೊಸಗೌಡರ್, ತಹಶೀಲ್ದಾರ್ ಗಿರೀಶ್, ಯೋಜನಾ ನಿರ್ದೇಶಕಿ ನಜ್ಮಾ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಬಿ.ಪಾಲಾಕ್ಷಿ,  ಡಿ.ಡಿ.ಪಿ.ಐ ಸಿ.ಆರ್. ಪರಮೇಶ್ವರಪ್ಪ, ಅಧಿಕಾರಿಗಳಾದ ಗಂಗಪ್ಪ, ರವಿಚಂದ್ರ ಇತರರು ಉಪಸ್ಥಿತರಿದ್ದರು.

ಕಲಾವಿದರಾದ ಐರಣಿ ಚಂದ್ರು, ಹೆಗ್ಗೆರೆ ರಂಗಪ್ಪ, ಕೆ.ಪರಶುರಾಮ ಹೊನ್ನಾಳಿ, ಕೊಂಡಯ್ಯ ನ್ಯಾಮತಿ, ಚಂದ್ರಪ್ಪ , ವಂಶತ್ ದೇಶಭಕ್ತಿ ಗೀತೆ ಹಾಡಿದರು.

error: Content is protected !!