ರಜತ ಮಹೋತ್ಸವ ಸಂಭ್ರಮದಲ್ಲಿ `ವಿಕಾಸ ತರಂಗಿಣಿ’

ದಾವಣಗೆರೆ ನಗರದಲ್ಲಿ ಸಾಮಾಜಿಕ ಕಾರ್ಯಗಳ ಮೂಲಕ ಜನ ಮೆಚ್ಚುಗೆ ಗಳಿಸಿದ ವಿಕಾಸ ತರಂಗಿಣಿ ರಜತ ಮಹೋತ್ಸವದ ಸಂಭ್ರಮದಲ್ಲಿದೆ.

1995ರಲ್ಲಿ ಆರಂಭವಾದ ವಿಕಾಸ ತರಂಗಿಣಿ, ಕಳೆದ 25 ವರ್ಷಗಳಿಂದ ಪ್ರತಿ ವರ್ಷ ಏಪ್ರಿಲ್ 1 ರಿಂದ ಮೇ 15ರವರೆಗೆ ಮಹಾನಗರ ಪಾಲಿಕೆ ಮುಂಭಾಗ ಉಚಿತ ಮಜ್ಜಿಗೆ ಶಿಬಿರ ಏರ್ಪಡಿಸಿ ಜನತೆಗೆ ಬಿಸಿಲಿನ ದಾಹವನ್ನು ತೀರಿಸುತ್ತಿದೆ.

ಇಂದಿಗೂ ಸಹ ನಗರದ ಜನತೆ ಬೇಸಿಗೆ ಬಂತೆಂದರೆ ವಿಕಾಸ ತರಂಗಿಣಿಯ ಉಚಿತ ಮಜ್ಜಿಗೆಯನ್ನು ನೆನಪಿಸಿಕೊಳ್ಳುತ್ತಾರೆ. ಅಷ್ಟೇ ಅಲ್ಲ. ನಗರದ ವಿವಿಧ ಸಂಘ, ಸಂಸ್ಥೆಗಳೂ ಸಹ ಮಜ್ಜಿಗೆ ವಿತರಣೆ ಮಾಡುವಂತೆ ಪ್ರೇರಣೆ ನೀಡಿದೆ ಈ ವಿಕಾಸ ತರಂಗಿಣಿ.

ಸಾಮಾಜಿಕ ಸೇವಾ ಕಾರ್ಯಗಳ ಜೊತೆಗೆ ಜನತೆಯಲ್ಲಿ ಅಧ್ಯಾತ್ಮದ ಅರಿವನ್ನೂ ಮೂಡಿಸುತ್ತಿದೆ. ಮಹಾತ್ಮರಿಂದ ಪ್ರವಚನಗಳು, ಸಂಜೆ ಸಾಮೂಹಿಕ ಶ್ರೀ ವಿಷ್ಣು ಸಹಸ್ರನಾಮ ಪಾರಾಯಣ ಕಾರ್ಯಕ್ರಮಗಳನ್ನು ಏರ್ಪಡಿಸುತ್ತಿದೆ.

ಪ್ರತಿವರ್ಷ ಶ್ರೀ ಜಿಯ್ಯರ್‌ಸ್ವಾಮಿಗಳ ಹುಟ್ಟು ಹಬ್ಬವನ್ನು ಆಚರಿಸಿ,  ದಾವಣಗೆರೆ ಉಪಕಾರಾಗೃಹದಲ್ಲಿ ಇರುವ ಖೈದಿಗಳ ಜೊತೆಯಲ್ಲಿ   ದೀಪಾವಳಿ  ಆಚರಿಸಿ, ಸಿಹಿ ಊಟ ಬಡಿಸಿ,  ಅವರ ಪರಿವರ್ತನೆಗಾಗಿ ಪ್ರಮುಖರಿಂದ ಉಪನ್ಯಾಸಗಳನ್ನು ನಡೆಸುತ್ತಿದೆ.

ಖೈದಿಗಳಿಗೆ ಬೇಕಾಗುವ ಬಳಕೆ ಸಾಮಗ್ರಿಗಳು, ಮನೋರಂಜನೆಗಾಗಿ ಕೇರಂ ಬೋರ್ಡ್‌ ನೀಡಿದೆ. ಖೈದಿಗಳಲ್ಲಿನ  ಪ್ರತಿಭೆ ಗುರುತಿಸಿ ಬಹುಮಾನ ನೀಡುತ್ತಿದೆ.

12 ವರ್ಷಗಳಿಗೊಮ್ಮೆ ಬರುವ ಕಾವೇರಿ ಕುಂಭಮೇಳ ಪುಷ್ಕರ ಸಂದರ್ಭದಲ್ಲಿ ಮೈಸೂರು, ಶ್ರೀರಂಗಪಟ್ಟಣದಲ್ಲಿ 12 ದಿನಗಳ ಕಾಲ ಬೇರೆ ಬೇರೆ ರಾಜ್ಯ ಮತ್ತು ದೂರ ಪ್ರಾಂತ್ಯಗಳಿಂದ ಬರುವ ಭಕ್ತಾದಿಗಳಿಗೆ ವಸತಿ ಮತ್ತು ಪ್ರಸಾದ ವ್ಯವಸ್ಥೆ ಮಾಡಿದೆ.

2020ರ ನವೆಂಬರ್‌ನಲ್ಲಿ ನಡೆದ  ತುಂಗಭದ್ರಾ ಪುಷ್ಕರ ಕುಂಭಮೇಳದಲ್ಲಿ ಕೊರೊನಾ ನಿವಾರಣೆ ಮತ್ತು ಲೋಕ ಕಲ್ಯಾಣಕ್ಕಾಗಿ 12 ದಿನಗಳ ಕಾಲ ಬ್ರಹ್ಮ ಯಜ್ಞವನ್ನು ಆಚರಿಸಿ, ಅತಿಥಿಗಳಿಗೆ ವಸತಿ ಮತ್ತು ಪ್ರಸಾದ ವ್ಯವಸ್ಥೆ ಮಾಡಲಾಗಿದೆ.

ಕಳೆದ 4 ವರ್ಷಗಳ ಹಿಂದೆ ಅನಾವೃಷ್ಟಿ ಸಂಭವಿಸಿದ ಸಂದರ್ಭದಲ್ಲಿ ಮಳೆರಾಯನ ಪ್ರಾರ್ಥನೆಗಾಗಿ ವರುಣ ಯಾಗವನ್ನು ಮತ್ತು ಶ್ರೀರಾಮ ತಾರಕ ಯಜ್ಞವನ್ನು ಸಹ ದಾವಣಗೆರೆ ಆರ್‌.ಹೆಚ್‌. ಛತ್ರದಲ್ಲಿ ನೆರವೇರಿಸಲಾಗಿತ್ತು.

ಶ್ರಾವಣ ಮಾಸದಲ್ಲಿ ಆರ್‌.ಹೆಚ್‌. ಛತ್ರದಲ್ಲಿ ವರಮಹಾಲಕ್ಷ್ಮಿ ಪೂಜೆಯನ್ನು ಸಾಮೂಹಿಕವಾಗಿ ನಡೆಸಲಾಗಿತ್ತು. `ಮರ ಬೆಳೆಸಿ, ನಾಡು ಉಳಿಸಿ’ ಈ ಕಾರ್ಯಕ್ರಮದಲ್ಲಿ ಪ್ರಕೃತಿ ಪ್ರೇಮಿಗಳಿಗೆ ಸನ್ಮಾನಿಸಿ, ಆರ್ಥಿಕವಾಗಿ ಸಹಾಯ ಮಾಡಲಾಗಿತ್ತು.

65 ವರ್ಷಗಳ ಕಾಲ ದಿನಪತ್ರಿಕೆ ಮಾರುವ ಇಳಿ ವಯಸ್ಸಿನ ಕಾಯಕ ಪುರುಷರನ್ನು  ಗುರುತಿಸಿ, ಸನ್ಮಾನಿಸಿ, ಆರ್ಥಿಕ ಸಹಾಯ ನೀಡಲಾಗಿತ್ತು.

ಅನಾಥ ಆಶ್ರಮಗಳಲ್ಲಿದ್ದವರಿಗೆ ಮನರಂಜನೆಗಾಗಿ ಟಿ.ವಿ. ಮತ್ತು ಆಸ್ಪತ್ರೆಯಲ್ಲಿ ಇರುವ ರೋಗಿಗಳಿಗೆ ಹಣ್ಣು ಇತ್ಯಾದಿ ವಿತರಿಸಲಾಗಿದೆ. ಹಲವೆಡೆ ಉಚಿತ ವೈದ್ಯಕೀಯ ಶಿಬಿರಗಳನ್ನು ಏರ್ಪಡಿಸಲಾಗಿದೆ.

2017 ರಲ್ಲಿ ರಾಮಾನುಜ `ಸಹಸ್ರಾಬ್ದಿ’ (1000 ವರ್ಷ) ಕಾರ್ಯಕ್ರಮವನ್ನು ತೊಗಟವೀರ ಕಲ್ಯಾಣ ಮಂಟಪದಲ್ಲಿ ನೆರವೇರಿಸಲಾಗಿತ್ತು. ಹೀಗೆ ಅನೇಕ ಬಗೆಯ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ವಿಕಾಸ ತರಂಗಿಣಿಗೆ ನಗರದ ಅನೇಕ ದಾನಿಗಳು ಸಹಾಯ ಹಸ್ತ ಚಾಚಿದ್ದಾರೆ. 25ರ ಹರೆಯದ ಈ ಸಂಸ್ಥೆ ಮತ್ತಷ್ಟು ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡು ಇತರರಿಗೆ ಮಾದರಿಯಾಗಲಿ.

error: Content is protected !!