ಇಡೀ ಜಗತ್ತು ತಿರುಗಿ ನೋಡುವಂತೆ ಸತ್ಕಾರ್ಯ ಮಾಡಿದವರು ಸಿದ್ಧಗಂಗಾ ಶ್ರೀಗಳು

ಶ್ರೀ ಸಿದ್ಧಗಂಗಾ ಶಿವಕುಮಾರ ಸ್ವಾಮಿಗಳ ಎರಡನೇ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ

ದಾವಣಗೆರೆ ಜ. 22- ತುಮಕೂರಿನ ಸಿದ್ಧಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿ ಇಡೀ ಜಗತ್ತು ತಿರುಗಿ ನೋಡುವಂತೆ ಸತ್ಕಾರ್ಯ ಗಳನ್ನು ಮಾಡಿದ್ದಾರೆ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಅವರು ಶ್ಲ್ಯಾಘಿಸಿದರು.

ನಗರದ ಶ್ರೀ ಸಿದ್ಧಗಂಗಾ ವಿದ್ಯಾಸಂಸ್ಥೆ ಆವರಣದಲ್ಲಿ ನಿನ್ನೆ ಏರ್ಪಾಡಾಗಿದ್ದ ಶ್ರೀ ಸಿದ್ಧಗಂಗಾ ಶಿವಕುಮಾರ ಸ್ವಾಮಿಗಳ ಎರಡನೇ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮ ಮತ್ತು ದಾಸೋಹದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.

ವಿನಮ್ರತೆ ಇದ್ದಲ್ಲಿ ಜ್ಞಾನ ಇರುತ್ತದೆ ಎಂದ ಅವರು, ಮಕ್ಕಳಿಗೆ ಸುಜ್ಞಾನವಂತರಾಗುವ ಶಿಕ್ಷಣ ಪಡೆಯಬೇಕು.  ಪಿಯುಸಿ ಹಂತದ ವಿದ್ಯಾರ್ಥಿಗಳು ಮುಂದೆ ನಾನು ಏನಾಗಬೇಕೆಂದು ಕನಸು ಕಟ್ಟುವ ಸಮಯ. ಈ ಸಮಯದಲ್ಲಿ ನೀವು ಉನ್ನತ ಮಟ್ಟದ ಕನಸನ್ನೇ ಕಟ್ಟಿ ಭವಿಷ್ಯದಲ್ಲಿ ನಿಮಗೆ ಒಳ್ಳೆಯದಾಗುತ್ತೆ ಎಂದು ಪ್ರತಿಪಾದಿಸಿದರು.

ಜಾತಿ, ವರ್ಣಗಳನ್ನು ಮೀರಿ ಸಮಾಜದ ಆಸ್ತಿಯಾಗಿ ನಿಮ್ಮ ಬಳಿ ಬರುವ ಎಲ್ಲರಿಗೂ ಒಳಿತನ್ನು ಬಯಸಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದ ಅವರು, ದೊಡ್ಡ ಮರದ ನೆರಳಿನಲ್ಲಿ ಬೆಳೆಯುವವರು ವಿಭೂತಿ  ಸಂಸ್ಕೃತಿ ಯನ್ನು ಉಳಿಸಿ, ಬೆಳೆಸಬೇಕು ಎಂದು ಕರೆ ನೀಡಿದರು.

ವಿರಕ್ತಮಠದ ಶ್ರೀ ಬಸವಪ್ರಭು ಸ್ವಾಮೀಜಿ ದಿವ್ಯಸಾನಿಧ್ಯ ವಹಿಸಿ ಲಿಂಗೈಕ್ಯ ಶ್ರೀ ಶಿವಕುಮಾರ ಸ್ವಾಮಿಗಳು ನಮ್ಮ ನಾಡಿನ ಸಹಸ್ರಾರು ನಿರ್ಗತಿಕರ ದಾರಿದೀಪವಾಗಿದ್ದರು. ಅವರು ಇಂದು ನಮ್ಮ ಜೊತೆಗಿಲ್ಲ. ಆದರೆ ಅವರ ಆದರ್ಶ ನಮ್ಮ ಜೊತೆ ಗಿದೆ. ಅವುಗಳನ್ನು ನಾವು ಪಾಲಿಸೋಣ ಎಂದರು.

ಮಹಾನಗರ ಪಾಲಿಕೆ ಸದಸ್ಯರಾದ ಶ್ರೀಮತಿ ಶ್ವೇತಾ ಶ್ರೀನಿವಾಸ್ ಉಪಸ್ಥಿತರಿದ್ದರು. ಸಿದ್ಧಗಂಗಾ ಪಿ.ಯು. ಕಾಲೇಜು ಪ್ರಾಂಶುಪಾಲ ಜಿ. ಸಿ. ನಿರಂಜನ ಸ್ವಾಗತಿಸಿದರು. ಪಿ. ಯು. ಕಾಲೇಜು ನಿರ್ದೇಶಕ ಡಿ. ಎಸ್. ಜಯಂತ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. 

ಸಿದ್ಧಗಂಗೆ ಶ್ರೀಗಳವರ ತ್ರಿವಿಧ ದಾಸೋಹ  ಸೇವೆಯನ್ನು ಮತ್ತು ಅವರ ಮಾರ್ಗದಲ್ಲೇ ಮುನ್ನಡೆದ ಎಂ. ಎಸ್. ಶಿವಣ್ಣನವರ ಕಾಯಕವನ್ನು ನಿರೂಪಿಸುತ್ತಾ, ನಡೆದಾಡುವ ದೇವರು ಪಾದಸ್ಪರ್ಶ ಮಾಡಿದ ಪುಣ್ಯಭೂಮಿ ಈ ಸಿದ್ಧಗಂಗಾ ವಿದ್ಯಾಸಂಸ್ಥೆ ಎಂದರು. 

ಕನ್ನಡ ಉಪನ್ಯಾಸಕ ಸದಾಶಿವ ಹೊಳ್ಳ ಅವರು ಕಾರ್ಯಕ್ರಮ ನಿರೂಪಿಸಿದರು. ದರ್ಶನ್, ರುದ್ರಾಕ್ಷಿಬಾಯಿ ಮತ್ತು ತಂಡದವರು ಸುಶ್ರಾವ್ಯವಾಗಿ ಹಾಡಿ ಭಕ್ತಿ ಸೇವೆ ಸಮರ್ಪಿಸಿದರು.  ಮಕ್ಕಳಿಗೆ ಮತ್ತು ಭಕ್ತರಿಗೆ ದಾಸೋಹ ವ್ಯವಸ್ಥೆಯನ್ನು ಸಂಸ್ಥೆಯ ಕಾರ್ಯದರ್ಶಿ ಡಿ. ಎಸ್. ಹೇಮಂತ್ ಮತ್ತು ಪ್ರಶಾಂತ್‌ ನಿರ್ವಹಿಸಿದರು.

ಸಂಸ್ಥಾಪಕ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಜಸ್ಟಿನ್ ಡಿ’ಸೌಜ ವಂದಿಸಿದರು.

error: Content is protected !!