ಪುನೀತ್ ಕಂಚಿನ ಪ್ರತಿಮೆ ಅನಾವರಣ

ಪುನೀತ್ ರಾಜ್ ಸೇವೆ ನೆನೆದ ಶಾಸಕ ಶಾಮನೂರು ಶಿವಶಂಕರಪ್ಪ

ದಾವಣಗೆರೆ, ಮಾ.17-  ನಗರದ 38ನೇ ವಾರ್ಡ್‌ ಎಂಸಿಸಿ `ಬಿ’ ಬ್ಲಾಕ್ ಈಜುಕೊಳದ ಪಕ್ಕದಲ್ಲಿನ ಉದ್ಯಾನವನದಲ್ಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಕಂಚಿನ ಪ್ರತಿಮೆಯನ್ನು ಶಾಸಕ ಶಾಮನೂರು ಶಿವಶಂಕರಪ್ಪ ಅನಾವರಣಗೊಳಿಸಿದರು.

ಪುನೀತ್ ರಾಜ್ ಕುಮಾರ್ ಮತ್ತು ಜಿ.ಎಸ್.ಮಂಜುನಾಥ್ ಅಭಿಮಾನಿಗಳ ಬಳಗದಿಂದ ಪ್ರತಿಮೆ ಅನಾವರಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಮಾತನಾಡಿದ ಎಸ್ಸೆಸ್, ಚಿಕ್ಕ ವಯಸ್ಸಿನಲ್ಲಿ ಮಹೋನ್ನತ ಸಾಧನೆ ಮಾಡಿದ ಪುನೀತ್ ರಾಜ್ ಕುಮಾರ್, ಕೇವಲ ಕರ್ನಾಟಕ ರಾಜ್ಯವಲ್ಲದೆ  ದೇಶ-ವಿದೇಶಗಳಲ್ಲೂ ಅಭಿಮಾನಿಗಳನ್ನು ಹೊಂದಿದ್ದಾರೆ ಎಂದರು.

ಪುನೀತ್ ನಿಧನ ರಾಜ್ಯಕ್ಕೆ ಆಘಾತಕರವಾದ ಸುದ್ದಿಯಾಗಿತ್ತು. ಈ  ವೇಳೆ ಅವರ ಅಭಿಮಾನಿಗುಳ ಯಾವುದೇ ಅಹಿತಕರ ಘಟನೆ ಆಗದಂತೆ ಅಭಿಮಾನ ತೋರ್ಪಡಿಸಿದ್ದಾರೆ. ಪುನೀತ್ ಅಭಿನಯದ ಜೇಮ್ಸ್ ಚಿತ್ರ ಇಂದು ಬಿಡುಗಡೆ ಆಗಿದ್ದು, ಅವರ ಅಭಿಮಾನಿಗಳು ಚಿತ್ರಮಂದಿರದ ಬಳಿ ಹಬ್ಬದಂತೆ ವಾತಾವರಣ ಸೃಷ್ಟಿಸಿರುವುದನ್ನು ಶ್ಲ್ಯಾಘಿಸಿದರು.

ಮಹಾನಗರ ಪಾಲಿಕೆ ವಿರೋಧ ಪಕ್ಷದ ನಾಯಕ ಗಡಿಗುಡಾಳ್ ಮಂಜುನಾಥ್ ಮಾತನಾಡುತ್ತಾ, ನಮ್ಮ ವಾರ್ಡ್‌ನಲ್ಲಿ ಪುನೀತ್ ರಾಜಕುಮಾರ್ ಅವರ ಅಭಿಮಾನಿಗಳ ಸಂಖ್ಯೆ ಹೆಚ್ಚಾಗಿದೆ. ಅವರ ಕಂಚಿನ ಪ್ರತಿಮೆ ಸ್ಥಾಪಿಸಲು ಇದೇ ಪ್ರಮುಖ ಕಾರಣ ಎಂದರು.

ಶಾಮನೂರು ಶಿವಶಂಕರಪ್ಪ ಹಾಗೂ ಡಾ. ರಾಜಕುಮಾರ್ ಅವರ ಕುಟುಂಬಕ್ಕೂ ಮೊದಲಿನಿಂದಲೂ ನಂಟಿದೆ ಎಂದರಲ್ಲದೆ, ಈ ಉದ್ಯಾನವನಕ್ಕೆ ಬರುವ ವಾಯುವಿಹಾರಿಗಳು, ಜನರು, ಪುಟ್ಟ ಮಕ್ಕಳು ಅಪ್ಪು ಅವರನ್ನು ನೋಡಿ ಕಣ್ತುಂಬಿಕೊಳ್ಳಬೇಕೆಂಬ ಸದುದ್ಧೇಶದಿಂದ ಪ್ರತಿಮೆಯನ್ನು ಇಲ್ಲಿ ಪ್ರತಿಷ್ಠಾಪಿಸಿದ್ದೇವೆ. ನಟನೆ, ಸಾಮಾಜಿಕ ಸೇವೆ, ಬಡವರಿಗೆ ನೆರವು ಸೇರಿದಂತೆ ಪುನೀತ್ ರವರು ಮಾಡಿರುವ ಸೇವೆ ಅನನ್ಯ ಎಂದರು.

ರಕ್ತದಾನ ಶಿಬಿರ: ಭಾರತೀಯ ರೆಡ್ ಕ್ರಾಸ್ ಸಂಸ್ಥೆ ರಕ್ತನಿಧಿ ಕೇಂದ್ರ, ಲೈಫ್ ಲೈನ್ ಸ್ವಯಂಪ್ರೇರಿತ ರಕ್ತದಾನಿಗಳ ಸಮೂಹದ ಸಂಯುಕ್ತಾಶ್ರಯದಲ್ಲಿ ಸ್ವಿಮ್ಮಿಂಗ್ ಫೂಲ್ ಆವರಣದಲ್ಲಿ ಪುನೀತ್  ಜನ್ಮದಿನದ ಪ್ರಯುಕ್ತ 47ಮಂದಿ ರಕ್ತದಾನ ಮಾಡುವ ಮೂಲಕ ಅರ್ಥಪೂರ್ಣವಾಗಿ ಆಚರಿಸಲಾಯಿತು. 

ಇದೇ ವೇಳೆ ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ.ಶೆಟ್ಟಿ ಅವರ ಜನ್ಮದಿನವನ್ನು ಕೇಕ್ ಕತ್ತರಿಸುವ ಮೂಲಕ ಆಚರಿಸಲಾಯಿತು.

ಪಾಲಿಕೆ ವಿಪಕ್ಷ ನಾಯಕ ಜಿ.ಎಸ್.ಮಂಜುನಾಥ್ ಗಡಿಗುಡಾಳ್ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಪಾಲಿಕೆ ಸದಸ್ಯ ಎ. ನಾಗರಾಜ್, ಚಮನ್ ಸಾಬ್, ಮಾಜಿ ಸದಸ್ಯರಾದ ಕೆ.ಜಿ.ಶಿವಕುಮಾರ್, ಶೋಭ ಪಲ್ಲಾಗಟ್ಟೆ,ಜ್ಯೋತಿ ಸಿದ್ದೇಶ್, ಅಂದನೂರು ಮುಪ್ಪಣ್ಣ, ಎಸ್.ಟಿ.ಕುಸುಮಶೆಟ್ರು, ಬಿ.ಹೆಚ್. ಪರಶುರಾಮಪ್ಪ, ಗೌಡ್ರು ಚನ್ನಬಸಪ್ಪ, ಪ್ರಮೋದ್, ಅನಿಲ್ ಬಾರೆಂಗಳ್, ಪೃಥ್ವಿ ಬಾದಾಮಿ, ಗೋಪಾಲಕೃಷ್ಣ, ಗಾಯಕವಾಡ್ ಸಂತೋಷ್, ಶೇಷಾಚಲ, ಮಾಧವ ಪದಕಿ, ಮಧುಕೇಶವ, ಜಗನ್, ವಸಂತರಾಜ್, ಉಮೇಶ್ ಶೆಟ್ಟಿ, ಡಿ.ಎಸ್.ಸಾಗರ್, ಡಿ.ಎಸ್.ಸಿದ್ದಣ್ಣ, ಜಾವೆದ್ ಸಾಬ್, ಗುರುಮೂರ್ತಿ, ಅಂಗಡಿ ಸಾಬ್, ಸಿದ್ದೇಶ್, ಚಂದನ್ ಪಲ್ಲಾಗಟ್ಟೆ, ಆಲೂರು ಜ್ಯೋತಿರ್ಲಿಂಗ, ಸತೀಶ್, ಪ್ರಜ್ವಲ್, ಮುರುಗೇಶ್ ಮಂತ್ರಿ, ಮನು, ಭರತ್ ಮೈಲಾರ, ನಿಖಿಲ್ ಮಂತ್ರಿ, ಐನಳ್ಳಿ ಪುಟ್ಟಣ್ಣ, ಲೈಫ್ ಲೈನ್ ಸಮೂಹ ಸ್ವಯಂಪ್ರೇರಿತ ಕಾರ್ಯದರ್ಶಿ ಅನಿಲ್ ಬಾರೆಂಗಳ್, ಉಪಾಧ್ಯಕ್ಷ ಪೃಥ್ವಿ ಬಾದಾಮಿ, ನಿರ್ದೇಶಕರಾದ ಗೋಪಾಲಕೃಷ್ಣ, ಗಾಯಕವಾಡ ಸಂತೋಷ್, ಶೇಷಾಚಲ, ಜಗನ್, ವಸಂತರಾಜು, ಉಮೇಶ್ ಶೆಟ್ಟಿ, ಸಾಗರ್ ಡಿ. ಎಸ್., ಡಿ. ಎಸ್. ಸಿದ್ಧಣ್ಣ ಮತ್ತಿತರರು ಹಾಜರಿದ್ದರು.

error: Content is protected !!